ಕೆಪಿ ನಂಜುಂಡಿ ಒಡೆತನದ ಟಿವಿ1 ಸುದ್ದಿ ವಾಹಿನಿ ಬಾಗಿಲು ಬಂದ್!
ಬೆಂಗಳೂರು, ಜನವರಿ 11: ಕನ್ನಡ ಟಿವಿ ಮಾಧ್ಯಮ ಲೋಕದಲ್ಲಿ ಏಳಿಗೆಗಿಂತ ಕುಸಿತವೇ ಹೆಚ್ಚಾಗಿ ಕಂಡು ಬರುತ್ತಿದೆ. ಸುದ್ದಿ ವಿಭಾಗದಲ್ಲಿ ಆರೋಗ್ಯಕರ ಪೈಪೋಟಿ ಇದ್ದರೂ ಅನೇಕ ಟಿವಿ ವಾಹಿನಿಗಳು ಬಾಗಿಲು ಮುಚ್ಚುವ ಸುದ್ದಿ ಇತ್ತೀಚೆಗೆ ಸಾಮಾನ್ಯವೆನಿಸಿಬಿಟ್ಟಿದೆ. ಮನರಂಜನಾ ವಿಭಾಗದಲ್ಲಿ ಜೀ ಕನ್ನಡ, ಕಲರ್ಸ್ ಕನ್ನಡ ವಾಹಿನಿಗಳ ಪೈಪೋಟಿಯಿದೆ.
ಕೆಲವು ತಿಂಗಳ ಹಿಂದೆ ಹಿರಿಯ ಪತ್ರಕರ್ತ ಶಶಿಧರ್ ಭಟ್ ನೇತೃತ್ವದ ಸುದ್ದಿ ಟಿವಿ ಬಂದ್ ಆಗಿತ್ತು. ಉದಯ ನ್ಯೂಸ್ ಮುಚ್ಚಿ ಸುಮಾರು ಸಮಯ ಆಯಿತು, ಉದ್ಯಮಿ ನೌಹೀರಾ ಶೇಖ್ ಒಡೆತನದ ಟಿಟಿಸಿ ವಾಹಿನಿ ಸ್ವರಾಜ್ ಇಂಡಿಯಾ ಕೂಡಾ ಬಾಗಿಲು ಬಂದ್ ಆಗಿದ್ದಲ್ಲದೆ ಉದ್ಯೋಗಿಗಳ ಆಕ್ರೋಶವನ್ನು ಎದುರಿಸಿದೆ.
ಹೀಗೆ ಸಾಲು ಸಾಲು ಟಿವಿ ಚಾನೆಲ್ ಗಳು ಬಂದ್ ಆಗುವುದರಿಂದ ಅಲ್ಲಿನ ಸಿಬ್ಬಂದಿಗಳ ಪಾಡೇನು? ಪತ್ರಕರ್ತರ ರಕ್ಷಣೆಗೆ ಪ್ರೆಸ್ ಕ್ಲಬ್, ಪತ್ರಕರ್ತರ ಸಂಘ, ಸರ್ಕಾರವಾಗಲಿ ನಿಲ್ಲುವುದಿಲ್ಲ ಎಂಬುದು ಸರ್ವವಿದಿತ.
ಕರ್ನಾಟಕದ ಸುದ್ದಿ ವಾಹಿನಿ ಮಾರುಕಟ್ಟೆಯಲ್ಲಿ ಸುದ್ದಿ ವಾಹಿನಿಗಳ ಟಿಆರ್ ಪಿಯಲ್ಲೂ ಯಾವುದೇ ಬೆಳವಣಿಗೆ ಕಂಡು ಬಂದಿಲ್ಲ. ಗುರುವಾರ ರಾತ್ರಿ ವೇಳೆಯಲ್ಲಿ ಬೆಳವಣಿಗೆಯಂತೆ ಟಿವಿ1 ಬಂದ್ ಮಾಡಲಾಗಿದೆ ಎಂದು ಉದ್ಯಮಿ ಕೆಪಿ ನಂಜುಂಡಿ ಘೋಷಿಸಿದ್ದಾರೆ. ಸುಮಾರು 120 ಪತ್ರಕರ್ತರು, ಸಿಬ್ಬಂದಿಗಳು ಯಾವುದೇ ಮುನ್ಸೂಚನೆ ಇಲ್ಲದೆ ಕೆಲಸ ಕಳೆದುಕೊಂಡಿದ್ದಾರೆ
ಸ್ವರಾಜ್ ಸುದ್ದಿವಾಹಿನಿ ಬಂದ್
ಹೈದರಾಬಾದ್ ಮೂಲದ ಹೀರಾ ಗ್ರೂಪ್ಸ್ ಸಂಸ್ಥೆಯ ಸಂಸ್ಥಾಪಕಿ ಹಾಗೂ ಎಂ.ಇ.ಪಿ ರಾಷ್ಟ್ರೀಯ ಅಧ್ಯಕ್ಷೆ ಡಾ. ನೌಹೀರಾ ಶೇಖ್ ಒಡೆತನದ ಟಿಟಿಸಿ ನ್ಯೂಸ್ ಅಧೀನದಲ್ಲಿ ಆರಂಭಗೊಂಡಿದ್ದ ಸ್ವರಾಜ್ ನ್ಯೂಸ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ತತ್ತರಿಸಿ, ಬಂದ್ ಆಗಿದೆ.
ಬಾಗಿಲು ಮುಚ್ಚಿದ ಸ್ವರಾಜ್ ಸುದ್ದಿ ವಾಹಿನಿ, ಪೊಲೀಸರಿಗೆ ದೂರು
ಸುದ್ದಿ ಟಿವಿ ಬಂದ್ ಆಯ್ತು ಮುಂದೆ?
'ನಾನು ವಾಹಿನಿಯನ್ನು ನಿಲ್ಲಿಸದಿರುವ ತೀರ್ಮಾನ ತೆಗೆದುಕೊಂಡೆ. ಹೊಸ ಹೂಡಿಕೆದಾರರನ್ನು ಕರೆ ತರಲು ಯತ್ನ ನಡೆಸಿದೆ. ಸುಮಾರು ನಾಲ್ವರು ಹೂಡಿಕೆದಾರರ ನಡುವೆ ಒಪ್ಪಂದವಾಗುವ ಸಂದರ್ಭದಲ್ಲಿ ಅದು ತಪ್ಪಿ ಹೋಯಿತು. ಕೆಲವರು ಕುತಂತ್ರ ನಡೆಸಿ ಹೊಸ ಹೂಡಿಕೆದಾರರು ಬರದಂತೆ ನೋಡಿಕೊಂಡರು' ಎಂದು ಶಶಿಧರ್ ಭಟ್ಟರು ನೋವು ತೋಡಿಕೊಂಡಿದ್ದರು. ಹೊಸ ಟಿವಿ ಆರಂಭಿಸುವ ಮಾತನಾಡಿದ್ದರು.
ಹೊಸ ಸುದ್ದಿ ವಾಹಿನಿ ಪವರ್ ಟಿವಿ
ಪತ್ರಕರ್ತ ಚಂದನ್ ಶರ್ಮ ಸಾರಥ್ಯದ ಪವರ್ ನ್ಯೂಸ್ ಚಾನೆಲ್ ಕನ್ನಡ ನಾಡಿಗೆ ಸಮರ್ಪಣೆಯಾಗಿ ಕೆಲವು ತಿಂಗಳುಗಳು ಕಳೆದಿವೆ. ಮೊಟ್ಟಮೊದಲ ಬಾರಿಗೆ ಹುತಾತ್ಮ ಯೋಧರಿಗೆ ಸುದ್ದಿವಾಹಿನಿಯೊಂದನ್ನು ಅರ್ಪಣೆಯಾದ ಚಾನೆಲ್ ಎನಿಸಿಕೊಂಡಿದೆ. ಟಿವಿ9, ಸುವರ್ಣ, ಪಬ್ಲಿಕ್ ಟಿವಿಗಳ ಟಿಆರ್ ಪಿ ರೇಸಿನಲ್ಲಿ ಹೊಸ ಸುದ್ದಿ ವಾಹಿನಿಗಳು ಯಾವ ರೀತಿ ಬೆಳೆಯುತ್ತವೇ ಕಾದು ನೋಡಬೇಕಿದೆ.
ಕನ್ನಡದ 'ಅರ್ನಬ್' ಚಂದನ್ ಶರ್ಮ ಬ್ಯಾಕ್ ವಿತ್ 'ಪವರ್'
ಸಮಯ ನ್ಯೂಸ್ ಲೈಸನ್ಸ್ ಕ್ಯಾನ್ಸಲ್ ಆಗಿತ್ತು
ಸತೀಶ್ ಶುಗರ್ಸ್ ಲಿಮಿಟೆಡ್ ಸ್ವಾಮ್ಯದ ಸಮಯ ಸುದ್ದಿವಾಹಿನಿಯ ಲೈಸನ್ಸ್ ರದ್ದುಗೊಳಿಸಿ ವಾರ್ತಾ ಹಾಗೂ ಪ್ರಸಾರ ಇಲಾಖೆ ಆದೇಶ ಹೊರಡಿಸಿತ್ತು. ಫಸ್ಟ್ ನ್ಯೂಸ್ ಕೂಡಾ ಇದರಿಂದ ಹೊರತಾಗಿರಲಿಲ್ಲ. ಆದರೆ, ಟಿವಿ1 ನಲ್ಲಿದ್ದ ಶಿವಪ್ರಸಾದ್ ಅವರು ಈಗ ಸಮಯ ಸುದ್ದಿ ವಾಹಿನಿಯ ಸಾರಥ್ಯ ವಹಿಸಿಕೊಂಡಿದ್ದು, ಸಮಯ ಸುದ್ದಿವಾಹಿನಿಗೆ ಮತ್ತೆ ಶುಭ ಸಮಯ ಆರಂಭವಾಗಿದೆ.