ದೇಶದ ಗಮನ ಸೆಳೆದ ಕೊಪ್ಪಳದ ಕಡಿಮೆ ವೆಚ್ಚದ ಮೂತ್ರಾಲಯ ಮಾದರಿ
ಕೊಪ್ಪಳ, ಸೆಪ್ಟೆಂಬರ್ 12 : ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಶೌಚಾಲಯ ನಿರ್ಮಾಣದಲ್ಲಿ ಕೊಪ್ಪಳ ಜಿಲ್ಲೆ ದೇಶದ ಗಮನ ಸೆಳೆದಿತ್ತು. ಈಗ ಅತಿ ಕಡಿಮೆ ವೆಚ್ಚದಲ್ಲಿ ಮೂತ್ರಾಲಯವನ್ನು ನಿರ್ಮಿಸುವ ಮಾದರಿಯನ್ನು ಸಿದ್ಧಪಡಿಸಿ ಕೊಪ್ಪಳ ಮತ್ತೊಮ್ಮೆ ದೇಶದ ಗಮನ ಸೆಳೆದಿದೆ.
ಮೋದಿ ಹೊಗಳಿದ ಕೊಪ್ಪಳದ ಮಲ್ಲಮ್ಮ ಯಾರು?
ದೆಹಲಿಯಲ್ಲಿ ಸೆಪ್ಟಂಬರ್ 7 ಮತ್ತು 8ರಂದು ನಡೆದ 'ಸ್ವಚ್ಛತಾ ಆಂದೋಲನ'ದ ಸ್ಪರ್ಧೆಯಲ್ಲಿ ಕೊಪ್ಪಳ ಜಿಲ್ಲಾ ಪಂಚಾಯತ್ ವತಿಯಿಂದ ಸಿದ್ಧಪಡಿಸಲಾದ ಅತಿ ಕಡಿಮೆ ವೆಚ್ಚದ ಮೂತ್ರಾಲಯದ ಮಾದರಿ ಗಮನ ಸೆಳೆದಿದೆ. ಜಿಲ್ಲೆಯ ಸುಮಾರು 1000 ಶಾಲೆಗಳಲ್ಲಿ ಈ ಮಾದರಿಯ ಶೌಚಾಲಯ ಅಳವಡಿಸಲಾಗಿದೆ.
ಕಡಿಮೆ ವೆಚ್ಚದ ಮೂತ್ರಾಲಯ ಮಾದರಿಯನ್ನು ಪ್ರದರ್ಶಿಸಿದ ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಹಾಗೂ ಜಿಲ್ಲೆಯ ವಿದ್ಯಾರ್ಥಿಗಳಾದ ಮುಜಾಮಿಲ್ ಹಾಗೂ ಸಂತೋಷ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಕೊಪ್ಪಳದಲ್ಲಿ 12 ಸಾವಿರ ಜನರಿಂದ ಮಾನವ ಸರಪಳಿ
ಇದು ಕೊಪ್ಪಳ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರ ಕನಸಿನ ಯೋಜನೆ. ಮರುಬಳಕೆ ಮಾಡಬಹುದಾದ ನೀರಿನ ಪ್ಲಾಸ್ಟಿಕ್ ಕ್ಯಾನ್ಗಳನ್ನು ಬಳಸಿ ಕಡಿಮೆ ವೆಚ್ಚದಲ್ಲಿ ಮೂತ್ರಾಲಯಗಳನ್ನು ನಿರ್ಮಾಣ ಮಾಡುವುದೇ ಇದರ ಗುರಿ.
3,500 ರೂ. ವೆಚ್ಚ
ಮೂತ್ರಾಲಯಗಳ ತಯಾರಿಕೆಯಲ್ಲಿ ಒಟ್ಟು 3 ವಿಧಗಳಿದ್ದು, 2 ಫಿಟ್, 4 ಫಿಟ್ ಮತ್ತು 6 ಫಿಟ್ಗಳಿರುತ್ತವೆ. ಕೊಪ್ಪಳ ಜಿಲ್ಲೆಯಲ್ಲಿರುವ 1017 ಸರ್ಕಾರಿ ಶಾಲೆಗಳಲ್ಲಿ ಈ ಕಡಿಮೆ ವೆಚ್ಚದ ಮೂತ್ರಾಲಯಗಳನ್ನು ಅಳವಡಿಸಲಾಗಿದೆ. ಎರಡು ಸೆಟ್ ಯೂರಿನಲ್ಗೆ 3,500 ರೂ., ನಾಲ್ಕರ ಸೆಟ್ಗೆ 5 ಸಾವಿರ, ಆರು ಯೂರಿನಲ್ಗಳ ಸೆಟ್ಗೆ 6 ಸಾವಿರ ರೂ. ವೆಚ್ಚವಾಗುತ್ತದೆ.
ಶಾಲೆಯಲ್ಲಿ ಅಳವಡಿಸಲು ಸೂಚನೆ
ಪ್ರತಿ ಶಾಲೆಗಳಲ್ಲಿ ಕಡಿಮೆ ವೆಚ್ಚದ ಮೂತ್ರಾಲಯಗಳನ್ನು ಅಳವಡಿಸಲು ಶಿಕ್ಷಣ ಇಲಾಖೆಯ ಅಧಿಕಾರಿಗಳೊಡನೆ ಸಭೆ ನಡೆಸಿ ಸೂಚನೆ ನೀಡಲಾಗಿತ್ತು. ಜಿಲ್ಲೆಯ 1017 ಶಾಲೆಗಳಲ್ಲಿ ಕಡಿಮೆ ವೆಚ್ಚದ ಮಾದರಿಯ ಮೂತ್ರಾಲಯ ಅಳವಡಿಸುವ ಪ್ರಯತ್ನ ಯಶಸ್ವಿಯಾಗಿದೆ.
ಸ್ವಚ್ಛತಾ ಆಂದೋಲನ
ಈ ಮೂತ್ರಾಲಯ ಮಾದರಿ ಅಳವಡಿಕೆಯನ್ನು ರಾಷ್ಟ್ರ ಮಟ್ಟದ ಸ್ವಚ್ಛತಾ ಆಂದೋಲನಕ್ಕೆ ಸಲ್ಲಿಕೆ ಮಾಡಲಾಗಿತ್ತು. ಇದೊಂದು ವಿಶೇಷ ಸಾಧನೆ ಎಂದು ಗುರುತಿಸಿ ಕೇಂದ್ರ ಸರ್ಕಾರ ದೆಹಲಿಯಲ್ಲಿ ನಡೆದ 'ಸ್ವಚ್ಛತಾ ಆಂದೋಲನ'ದಲ್ಲಿ ಕೊಪ್ಪಳ ಜಿಲ್ಲೆಯನ್ನು ಆಯ್ಕೆ ಮಾಡಿತ್ತು. ಈ ಕಾರ್ಯಕ್ರಮದ ಮೂಲಕ ಕಡಿಮೆ ವೆಚ್ಚದ ಮೂತ್ರಾಲಯ ಯೋಜನೆಯನ್ನು ಇಡೀ ದೇಶಕ್ಕೆ ಪರಿಚಯಿಸಲಾಯಿತು.
ಮಾದರಿಗೆ ಮೆಚ್ಚುಗೆ
ದೇಶಾದ್ಯಂತ ಸುಮಾರು 3000 ದಷ್ಟು ಹೊಸ ಯೋಜನಾ ಮಾದರಿಗಳ ನೋಂದಣಿ ಆಗಿದ್ದವು. ಕೊನೆಯ 57ರ ಪಟ್ಟಿಯಲ್ಲಿಯೂ 'ಕಡಿಮೆ ವೆಚ್ಚದ ಮೂತ್ರಾಲಯ' ಮಾದರಿ 4ನೇ ಸ್ಥಾನ ಪಡೆದುಕೊಂಡಿದ್ದು ಕರ್ನಾಟಕಕ್ಕೆ ಹೆಮ್ಮೆ. ದೆಹಲಿಯಲ್ಲಿ ನಡೆದ ಸ್ವಚ್ಛತಾ ಆಂದೋಲನ ಕಾರ್ಯಕ್ರಮದಲ್ಲಿ ವೆಂಕಟರಾಜಾ, ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಹಾಗೂ ಜಿಲ್ಲೆಯ ಇಬ್ಬರು ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ದೇಶದ ಗಮನ ಸೆಳೆದಿದ್ದ ಮಲ್ಲಮ್ಮ
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕನ ಡಣಾಪುರ ಗ್ರಾಮದ ವಿದ್ಯಾರ್ಥಿನಿ ಮಲ್ಲಮ್ಮ, ಶೌಚಾಲಯಕ್ಕಾಗಿ ಉಪವಾಸ ಕೈಗೊಂಡು, ಶೌಚಾಲಯ ನಿರ್ಮಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಳು. ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಲ್ಲಮ್ಮ ಸಾಧನೆಯನ್ನು ಶ್ಲಾಘಿಸಿದ್ದರು.