ಕೊಪ್ಪಳ : ಶೌಚಾಲಯಕ್ಕಾಗಿ ದೇವರ ಮೇಲೆ ಆಣೆ, ಉಪವಾಸ!
ಕೊಪ್ಪಳ, ಸೆಪ್ಟೆಂಬರ್ 14 : ಕೊಪ್ಪಳ ಜಿಲ್ಲೆ ಶೌಚಾಲಯ ನಿರ್ಮಾಣದ ವಿಚಾರದಲ್ಲಿ ಮತ್ತೊಮ್ಮೆ ಸುದ್ದಿ ಮಾಡಿದೆ. ದೇವರ ಮೇಲೆ ಆಣೆ ಮಾಡಿ ಹಾಗೂ ಉಪವಾಸ ಮಾಡುವ ಮೂಲಕ ಕೊಪ್ಪಳ ತಾಲೂಕು ಕಾಮನೂರು ಗ್ರಾಮದ ಮೂವರು ವಿದ್ಯಾರ್ಥಿನಿಯರು ಮನೆಯಲ್ಲಿ ಶೌಚಾಲಯ ಕಟ್ಟಿಸುವ ಹಠ ಸಾಧಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಕಾಮನೂರು ಗ್ರಾಮದ ಸರ್ಕಾರಿ ಶಾಲೆಯ 6 ನೇ ತರಗತಿ ವಿದ್ಯಾರ್ಥಿನಿ ವಿದ್ಯಾ ಹನುಮಪ್ಪ, ಸಂಗೀತ ಸಿದ್ದಪ್ಪ ಸಂಗಟಿ ಮತ್ತು 8ನೇ ತರಗತಿ ವಿದ್ಯಾರ್ಥಿನಿ ಅಕ್ಷತಾ ಭರಮಪ್ಪ ಹುಳ್ಳಿ ಮನೆಯಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಈ ಮೂಲಕ ಬಯಲು ಶೌಚಾಲಯ ಮುಕ್ತ ಜಿಲ್ಲೆಯನ್ನಾಗಿ ಮಾಡುವ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.
ಮೋದಿ ಹೊಗಳಿದ ಕೊಪ್ಪಳದ ಮಲ್ಲಮ್ಮ ಯಾರು?
ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಕೊಪ್ಪಳ ಜಿಲ್ಲೆಯನ್ನು ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಜಿಲ್ಲಾ ಪಂಚಾಯತಿ ವತಿಯಿಂದ ಹಲವು ಕಾರ್ಯಕ್ರಮ ರೂಪಿಸಲಾಗಿದೆ. ಜಿಲ್ಲೆಯಲ್ಲಿ ಮಿಷನ್ 200 ಅಭಿಯಾನ ಹಮ್ಮಿಕೊಂಡಿದ್ದು, ಅಭಿಯಾನದ ಪ್ರಗತಿ ವರದಿಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ತಾಲೂಕಿನ ಕಾಮನೂರ ಗ್ರಾಮಕ್ಕೆ ವಿಶೇಷ ಮಾಧ್ಯಮ ಪ್ರವಾಸ ಆಯೋಜಿಸಿದ ಸಂದರ್ಭದಲ್ಲಿ ವಿದ್ಯಾರ್ಥಿನಿಯರ ಸಾಧನೆ ಬೆಳಕಿಗೆ ಬಂದಿದೆ.
ದೇಶದ ಗಮನ ಸೆಳೆದ ಕೊಪ್ಪಳದ ಕಡಿಮೆ ವೆಚ್ಚದ ಮೂತ್ರಾಲಯ ಮಾದರಿ
ಶೌಚಾಲಯಕ್ಕಾಗಿ ಹಠ ಹಿಡಿದ ವಿದ್ಯಾರ್ಥಿನಿಯರು
ಕಾಮನೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪ್ರಾರ್ಥನೆ ವೇಳೆ ಶಿಕ್ಷಕರು ಶೌಚಾಲಯ ಹೊಂದದೇ ಇರುವವರು ತಪ್ಪದೆ ಶೌಚಾಲಯ ನಿರ್ಮಾಣ ಮಾಡಿಸಿಕೊಳ್ಳುವಂತೆ ಅರಿವು ಮೂಡಿಸುವ ಕಾರ್ಯ ನಡೆದಿದ್ದು, ಇದಕ್ಕಾಗಿ ವಿದ್ಯಾರ್ಥಿಗಳಿಂದ ಪ್ರತಿಜ್ಞಾ ವಿಧಿ ಸ್ವೀಕಾರವೂ ನಡೆದಿದೆ.
ದುರ್ಗಾದೇವಿ ಮೇಲೆ ಆಣೆ
ಈ ಪ್ರತಿಜ್ಞಾ ವಿಧಿ ಸ್ವೀಕಾರ ವೇಳೆಯಲ್ಲಿ ಶೌಚಾಲಯ ನಿರ್ಮಿಸಿಕೊಳ್ಳುವುದಾಗಿ ದುರ್ಗಾದೇವಿ ದೇವರ ಮೇಲೆ ಆಣೆ ಮಾಡಿದ್ದ 6 ನೇ ತರಗತಿ ವಿದ್ಯಾರ್ಥಿನಿ ಸಂಗೀತ ಸಿದ್ದಪ್ಪ ಸಂಗಟಿ, ಆಣೆ ತಪ್ಪುವುದು ಸರಿಯಲ್ಲ, ಶೌಚಾಲಯವನ್ನು ನಿರ್ಮಿಸಲೇ ಬೇಕು ಎಂದು ಪಾಲಕರಿಗೆ ಒತ್ತಾಯಿಸಿದ್ದಾಳೆ. ಶೌಚಾಲಯಕ್ಕೆ ಜಾಗವಿಲ್ಲ ಎಂದು ಸಬೂಬು ಹೇಳುತ್ತಿದ್ದ ಪಾಲಕರು, ಕೊನೆಗೆ ಮನೆಯ ಮುಂಭಾಗದ ಕಟ್ಟೆಯನ್ನು ತೆರವುಗೊಳಿಸಿ, ಅಲ್ಲಿಯೇ ಶೌಚಾಲಯ ನಿರ್ಮಿಸಲು ಗುಂಡಿಯನ್ನು ತೋಡಿಸಿದ್ದಾರೆ.
ಪ್ರತಿಜ್ಞೆ ಉಲ್ಲಂಘನೆ
6 ನೇ ತರಗತಿಯ ವಿದ್ಯಾ ಹನುಮಪ್ಪ ಮತ್ತು 8 ನೇ ತರಗತಿಯ ಅಕ್ಷತಾ ಭರಮಪ್ಪ ಹುಳ್ಳಿ ಶೌಚಾಲಯಕ್ಕಾಗಿ ನಿತ್ಯ ನಾವು ಶಾಲೆಯಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸುತ್ತಿದ್ದೇವೆ. ದೇವರ ಮೇಲೆ ಪ್ರಮಾಣ ಮಾಡುತ್ತಿದ್ದೇವೆ. ಹೀಗಾಗಿ ಶೌಚಾಲಯ ಕಟ್ಟಿಸಿಕೊಳ್ಳದಿದ್ದರೆ, ಪ್ರತಿಜ್ಞೆಯನ್ನು ಉಲ್ಲಂಘಿಸಿದಂತಾಗಲಿದೆ ಎಂದು ಪಾಲಕರ ಮೇಲೆ ಒತ್ತಡ ಹೇರಿದ್ದಾರೆ. ಇದಕ್ಕೆ ಪಾಲಕರು ಒಪ್ಪಲಿಲ್ಲ, ಕೊನೆಗೆ ಶೌಚಾಲಯಕ್ಕಾಗಿ ವಿದ್ಯಾರ್ಥಿನಿಯರು ಎರಡು ದಿನ ಉಪವಾಸ ಕೈಗೊಂಡ ಬಳಿಕ ಶೌಚಾಲಯ ನಿರ್ಮಿಸಿಕೊಳ್ಳಲು ಮುಂದಾಗಿದ್ದಾರೆ.
ಮಲ್ಲಮ್ಮ ರಾಷ್ಟ್ರದ ಗಮನ ಸೆಳೆದಿದ್ದಳು
ಶೌಚಾಲಯಕ್ಕಾಗಿ ಉಪವಾಸ ಕುಳಿತು, ಶೌಚಾಲಯ ಕಟ್ಟಿಸಿಕೊಳ್ಳುವ ಮೂಲಕ ಜಿಲ್ಲೆಯ ಡಣಾಪುರದ ಮಲ್ಲಮ್ಮ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದಳು. ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಲ್ಲಮ್ಮನ ಸಾಧನೆಯನ್ನು ಹೊಗಳಿದ್ದರು.
ವಿವಿಧ ಕಾರ್ಯಕ್ರಮ
ಕೊಪ್ಪಳ ಜಿಲ್ಲೆ ಶೌಚಾಲಯ ಜಾಗೃತಿಗಾಗಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹಲವು ಪ್ರಕರಣಗಳಿಂದ ಗಮನ ಸೆಳೆದಿದೆ. ಶೌಚಾಲಯ ಕಟ್ಟಿಸಿಕೊಳ್ಳುವಂತೆ ಜಿಲ್ಲಾ ಪಂಚಾಯತಿ ಅಧ್ಯಕ್ಷರು, ವಿವಿಧ ಜನಪ್ರತಿನಿಧಿಗಳು ಬಯಲು ಬಹಿರ್ದೆಸೆಗೆ ತೆರಳುವವರ ಕಾಲಿಗೆ ಬಿದ್ದು, ಮನವಿ ಮಾಡಿಕೊಂಡ ಪ್ರಕರಣಗಳು, ಶೌಚಾಲಯಕ್ಕಾಗಿ ಮಲ್ಲಮ್ಮ ಎಂಬ ವಿದ್ಯಾರ್ಥಿನಿ ಉಪವಾಸ ಕುಳಿತು ಹಠ ಸಾಧಿಸಿದ್ದು, ಸುಮಾರು 10 ಸಾವಿರ ವಿದ್ಯಾರ್ಥಿಗಳಿಂದ ಬೃಹತ್ ಮಾನವ ಸರಪಳಿ ಹೀಗೆ ವಿವಿಧ ಬಗೆಯ ಜಾಗೃತಿಗಳಿಗೆ ಕೊಪ್ಪಳ ಜಿಲ್ಲೆ ರಾಜ್ಯವಷ್ಟೇ ಅಲ್ಲ ಇಡೀ ದೇಶದ ಗಮನ ಸೆಳೆದಿತ್ತು.