ಯಶ್ ಹೂಳೆತ್ತಿದ್ದ ಕೊಪ್ಪಳದ ತಲ್ಲೂರು ಕೆರೆಯಲ್ಲೀಗ ನೀರೋ ನೀರು
ಕೊಪ್ಪಳ, ಅಕ್ಟೋಬರ್ 13: ಸ್ಯಾಂಡಲ್ ವುಡ್ ಸ್ಟಾರ್ ದಂಪತಿ ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಯಶೋಮಾರ್ಗದ ಮೂಲಕ ಕಾಯಕಲ್ಪ ನೀಡಿದ್ದ ಕೊಪ್ಪಳದ ಕೆರೆಯೀಗ ಭರ್ತಿಯಾಗಿದೆ.
ಯಶ್ ಮತ್ತು ರಾಧಿಕಾ ಪಂಡಿತ್ ಉತ್ತರ ಕರ್ನಾಟಕದ ಕೆರೆಗಳ ಹೂಳೆತ್ತಿಸಿದ್ದರು. ಇವುಗಳಲ್ಲಿ ಕೊಪ್ಪಳದ ತಲ್ಲೂರು ಕೆರೆ ಭರ್ತಿಯಾಗಿದೆ. ಇತ್ತೀಚೆಗೆ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ತಲ್ಲೂರ ಕೆರೆ ಸಂಪೂರ್ಣ ಭರ್ತಿಯಾಗಿದೆ.
ತಲ್ಲೂರು ಕೆರೆ ಭರ್ತಿಯಾಗಿರುವುದರಿಂದ ಈ ಭಾಗದ ರೈತರು ಸಂತಸಗೊಂಡಿದ್ದಾರೆ. ಹಿಂದೆಂದೂ ಇಷ್ಟೊಂದು ಪ್ರಮಾಣದಲ್ಲಿ ತಲ್ಲೂರು ಕೆರೆ ತುಂಬಿರಿರಲಿಲ್ಲ. ಅಲ್ಲದೆ ಹೂಳು ಬೇರೆ ತೆಗೆದಿರುವುದರಿಂದ ತಲ್ಲೂರು ಕೆರೆ ತುಂಬಾ ನೀರು ನಿಂತಿದೆ.
ಸುಮಾರು 90 ಎಕ್ರೆ ವಿಸ್ತೀರ್ಣವನ್ನು ಈ ಕೆರೆ ಹೊಂದಿದೆ. 'ಯಶೋಮಾರ್ಗ'ದ ಅಡಿಯಲ್ಲಿ 4 ಕೋಟಿ ವೆಚ್ಚದಲ್ಲಿ ಎರಡು ಮೂರು ತಿಂಗಳ ಕಾಲ ಈ ಕೆರೆಯ ಹೂಳೆತ್ತಲಾಗಿತ್ತು. ಇದರಿಂದ ಕೆರೆಯಲ್ಲಿ ಹೆಚ್ಚು ನೀರು ಸಂಗ್ರಹವಾಗಲು ಅನುಕೂಲವಾಗಿದೆ.
ತಲ್ಲೂರು ಕೆರೆ ತುಂಬಿರೋದ್ದರಿಂದ ಈ ಭಾಗದ ಹತ್ತಕ್ಕೂ ಹೆಚ್ಚು ಗ್ರಾಮದ ರೈತರಿಗೆ ಅನುಕೂಲವಾಗಿದೆ. ಕೆರೆ ಕಾಯಕಲ್ಪ ಕಲ್ಪಿಸಿದ ನಟ ಯಶ್ ಕಾರ್ಯವನ್ನು ರೈತರು ಸ್ಮರಿಸ್ತಿದ್ದಾರೆ.