ಬಿಜೆಪಿ 30 ಕೋಟಿ ರೂ. ಆಮಿಷವೊಡ್ಡಿದ್ದ ಆರೋಪ ಸುಳ್ಳೆಂದು ಒಪ್ಪಿಕೊಂಡ ಜೆಡಿಎಸ್ ಶಾಸಕ
ಬೆಂಗಳೂರು, ಮಾರ್ಚ್ 22: ಆಪರೇಷನ್ ಕಮಲಕ್ಕಾಗಿ ಬಿಜೆಪಿ ಮುಖಂಡರು ತಮಗೆ 30 ಕೋಟಿ ರೂ. ಆಮಿಷವೊಡ್ಡಿದ್ದರು ಎಂದು ನೀಡಿದ್ದ ಹೇಳಿಕೆ ಸುಳ್ಳು ಎಂಬುದಾಗಿ ಕೊಲಾರದ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳ ಎದುರು ಗುರುವಾರ ಒಪ್ಪಿಕೊಂಡಿದ್ದಾರೆ.
ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ
ಆಪರೇಷನ್ ಕಮಲದಿಂದ ರಾಜ್ಯ ಸರ್ಕಾರವನ್ನು ಉಳಿಸಲು ಬಿಜೆಪಿ ಮುಖಂಡರು 30 ಕೋಟಿ ರೂಪಾಯಿ ಆಮಿಷವೊಡ್ಡಿದ್ದರು ಎಂದು ಮಾಧ್ಯಮಗಳ ಮುಂದೆ ಸುಳ್ಳು ಹೇಳಿಕೆ ನೀಡಿದ್ದೆ ಎಂದು ತಿಳಿಸಿದ್ದಾರೆ.
ಕಳೆದ ಸೋಮವಾರ (ಮಾರ್ಚ್ 18) ಎಸಿಬಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದ ಶ್ರೀನಿವಾಸಗೌಡ, 'ನಾನು ಬಾತ್ರೂಂಗೆ ಹೋಗಿದ್ದಾಗ ಬಿಜೆಪಿ ಮುಖಂಡರು ನನ್ನ ಮನೆಯಲ್ಲಿ 5 ಕೋಟಿ ರೂ. ಇಟ್ಟು ಹೋಗಿದ್ದರು' ಎಂದು ಹೇಳಿಕೆ ನೀಡಿದ್ದರು. ಆದರೆ ಗುರುವಾರ ವಿಚಾರಣೆ ವೇಳೆ ಉಲ್ಟಾ ಹೊಡೆದ ಅವರು, 'ಅಂದು ನಾನು ಸುಳ್ಳು ಹೇಳಿದ್ದೆ. ಈಗ ನೀಡುತ್ತಿರುವುದು ನನ್ನ ಅಧಿಕೃತ ಹೇಳಿಕೆ' ಎಂದು ಹೇಳಿದ್ದಾರೆ.
ಕೋಲಾರ ಜೆಡಿಎಸ್ ಶಾಸಕರಿಗೆ 30 ಕೋಟಿ ಆಫರ್, 5 ಕೋಟಿ ಅಡ್ವಾನ್ಸ್
'ಜೆಡಿಎಸ್ ತೊರೆದು ಬಿಜೆಪಿಗೆ ಸೇರುವಂತೆ ಮುಖಂಡರಾದ ಸಿ.ಪಿ. ಯೋಗೀಶ್ವರ್, ಶಾಸಕರಾದ ಎಸ್.ಆರ್. ವಿಶ್ವನಾಥ್ ಮತ್ತು ಅಶ್ವತ್ಥ್ ನಾರಾಯಣ ನನ್ನನ್ನು ಆಹ್ವಾನಿಸಿ ಹಣದ ಆಮಿಷವೊಡ್ಡಿದ್ದರು' ಎಂದು ಶ್ರೀನಿವಾಸಗೌಡ ಕಳೆದ ತಿಂಗಳು ಆರೋಪಿಸಿದ್ದರು.
ಸಮ್ಮಿಶ್ರ ಸರ್ಕಾರ ಉಳಿಯಿತು
'ಆಪರೇಷನ್ ಕಮಲದಿಂದ ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಉಳಿಸಬೇಕಾಗಿತ್ತು. ಅದಕ್ಕಾಗಿ ಬಿಜೆಪಿ ಮುಖಂಡರಿಬ್ಬರು ನನಗೆ 30 ಕೋಟಿ ರೂಪಾಯಿ ಆಮಿಷ ಒಡ್ಡಿದ್ದರು. ನನ್ನ ಮನೆಗೆ ಬಂದು 5 ಕೋಟಿ ರೂ. ಇರಿಸಿ, ಉಳಿದ 25 ಕೋಟಿ ರೂ ಬಾಕಿ ಹಣವನ್ನು ಬಳಿಕ ಕೊಡುವುದಾಗಿ ಹೇಳಿದ್ದರು ಎಂಬುದಾಗಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದೆ. ನಾನು ನೀಡಿದ್ದ ಹೇಳಿಕೆಯಿಂದಾಗಿ ಆಪರೇಷನ್ ಕಮಲ ನಿಂತು ಹೋಯಿತು. ಸಮ್ಮಿಶ್ರ ಸರ್ಕಾರ ಕೂಡ ಉರುಳುವ ಅಪಾಯದಿಂದ ತಪ್ಪಿಹೋಯಿತು' ಎಂದು ಅವರು ಸಮರ್ಥನೆ ನೀಡಿದ್ದಾರೆ.
ಹಲವು ಶಾಸಕರಿಂದ ರಾಜೀನಾಮೆ: ಶ್ರೀರಾಮುಲು ಬಾಂಬ್
ದೂರು ದಾಖಲಿಸಿದ್ದ ಕಾರ್ಯಕರ್ತರು
ಶ್ರೀನಿವಾಸಗೌಡ ಅವರು ಮಾಧ್ಯಮದ ಮುಂದೆ ನೀಡಿದ್ದ ಹೇಳಿಕೆ ಆಧರಿಸಿ ಸಾಮಾಜಿಕ ಕಾರ್ಯಕರ್ತರಾದ ಟಿ.ಜಿ. ಅಬ್ರಹಾಂ, ಹನುಮೇಗೌಡ, ಪ್ರಶಾಂತ್, ಭ್ರಷ್ಟಾಚಾರ ಮುಕ್ತ ಕರ್ನಾಟಕ ವೇದಿಕೆ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಎಸಿಬಿಗೆ ದೂರು ನೀಡಿದ್ದರು.
ಹಣದ ಆಮಿಷದ ಆರೋಪದ ಕುರಿತು ವಿಚಾರಣೆ ನಡೆಸಲಾಗಿದೆ. ತಾವು ನೀಡಿದ್ದ ಹೇಳಿಕೆ ಸುಳ್ಳು ಎಂದು ಶಾಸಕರು ತಿಳಿಸಿದ್ದಾರೆ. ಹೀಗಾಗಿ ದೂರಿನಲ್ಲಿ ಆರೋಪಿಗಳಾಗಿರುವವರನ್ನು ಕಚೇರಿಗೆ ಕರೆಯಿಸಿ ಹೇಳಿಕೆ ದಾಖಲಿಸಲಾಗುತ್ತದೆ ಎಂದು ಎಸಿಬಿ ಮೂಲಗಳು ಹೇಳಿವೆ.
ಆಪರೇಷನ್ ಕಮಲದ ಆಡಿಯೋ ವಿಚಾರ ಮರೆತ ರಾಜಕೀಯ ಪಕ್ಷಗಳು!
ಪುತ್ರನೂ ಹಾಜರು
ಸಾಮಾಜಿಕ ಕಾರ್ಯಕರ್ತರು ಸಲ್ಲಿಸಿದ್ದ ದೂರುಗಳನ್ನು ಆಧಾರವಾಗಿಟ್ಟುಕೊಂಡು ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ಶ್ರೀನಿವಾಸಗೌಡ ಅವರಿಗೆ ನೋಟಿಸ್ ನೀಡಿದ್ದರು. ಆದರೆ, ವಿಚಾರಣೆಗೆ ಹಾಜರಾಗುವಂತೆ ಶ್ರೀನಿವಾಸಗೌಡ 30 ದಿನಗಳ ಕಾಲಾವಕಾಶ ಕೋರಿದ್ದರು. ಇದಕ್ಕೆ ನಿರಾಕರಿಸಿದ್ದ ಎಸಿಬಿ ಅಧಿಕಾರಿಗಳು ಶೀಘ್ರವೇ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದರು. ಗುರುವಾರದ ವಿಚಾರಣೆ ವೇಳೆ ಶ್ರೀನಿವಾಸಗೌಡ ಅವರ ಮಗ ಕೂಡ ಹಾಜರಿದ್ದರು.
ಕರ್ನಾಟಕ ಲೋಕಸಭಾ ಕ್ಷೇತ್ರಗಳ 'ಎ ಟು ಜೆಡ್' ಮಾಹಿತಿ
|
ನೈತಿಕ ದಿವಾಳಿತನ
ಇದು ನೈತಿಕ ದಿವಾಳಿತನದ ಪರಮಾವಧಿ. ಈ ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತ ಸ್ವತಃ ಒಪ್ಪಿಕೊಂಡಂತೆ ಓರ್ವ ಸುಳ್ಳುಗಾರ ಎಂದು ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಕಿಡಿಕಾರಿದ್ದಾರೆ.