ಅಬ್ಬಾ! ಕೊನೆಗೂ ಕೋಲಾರ -ಸಿಬಿ ಪುರ ರೈಲು ಬಿಡ್ತಾರಂತೆ
ಶಿಡ್ಲಘಟ್ಟ, ನ.5: ಕೋಲಾರದ ಸಂಸದ ಕೆಎಚ್ ಮುನಿಯಪ್ಪ ಅವರು ರೈಲ್ವೆ ಸಚಿವರಾಗಿದ್ದ ಕಾಲದಲ್ಲೂ ಜಾರಿಯಾಗದ ಕೋಲಾರ -ಚಿಕ್ಕಬಳ್ಳಾಪುರ ರೈಲು ಯಾನಕ್ಕೆ ಹಾಲಿ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಇದೇ ಶುಕ್ರವಾರ ಹಸಿರು ಬಾವುಟ ತೋರಲಿದ್ದಾರೆ. ತನ್ಮೂಲಕ ಅಖಂಡ ಕೋಲಾರದ ಜನತೆ ಮೂರ್ನಾಲ್ಕು ದಶಕಗಳಿಂದ ಕಾಣುತ್ತಿದ್ದ ಕನಸು ನನಸಾಗುತ್ತಿದೆ. ಬಹುಶಃ ಈ ಎರಡೂ ವಾಕ್ಯಗಳೇ ಸಾಕಾದೀತು ಕೋಲಾರ -ಸಿಬಿ ಪುರ ರೈಲು ಕಥೆಯನ್ನು ಹೇಳಲು.
ನವೀಕೃತ ಬ್ರಾಡ್ ಗೇಜ್ ರೈಲು ಮಾರ್ಗ ಕಾಮಗಾರಿ ಮುಗಿದಿದ್ದು ಪ್ರಯೋಗಾರ್ಥ ಸಂಚಾರ ಇದೇ ನವೆಂಬರ್ 8ರಂದು ನಡೆಯಲಿದೆ. ಕೋಲಾರ- ಶ್ರೀನಿವಾಸಪುರ- ಚಿಂತಾಮಣಿ- ಶಿಡ್ಲಘಟ್ಟ ಮಾರ್ಗವಾಗಿ ಚಿಕ್ಕಬಳ್ಳಾಪುರವನ್ನು ಸಂಪರ್ಕಿಸುವ ರೈಲು ಮಾರ್ಗ ಇದಾಗಿದೆ. South-Western Railway ಈ ಬ್ರಾಡ್ ಗೇಜ್ ರೈಲು ಮಾರ್ಗವನ್ನು ಪೂರ್ಣಗೊಳಿಸಿದೆ.
ರಾಜ್ಯೋತ್ಸವದ ಕೊಡುಗೆಯಾಗಿ ನ. 8ರಂದು ಕೇಂದ್ರ ರೈಲ್ವೆ ಸಚಿವ ಖರ್ಗೆ ಅವರು ಶುಕ್ರವಾರ ಬೆಳಗ್ಗೆ 10 ಗಂಟೆಗೆ ಚಿಕ್ಕಬಳ್ಳಾಪುರದಲ್ಲಿ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್ ತೋರಿಸಿ, ಅದೇ ರೈಲಿನಲ್ಲಿ ಕೋಲಾರಕ್ಕೆ ಪ್ರಯಾಣ ಮಾಡಿ, ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಸಭೆ ನಡೆಸಲಿದ್ದಾರೆ.
ಕೋಲಾರ -ಸಿಬಿ ಪುರ ನಡುವಣ 87 ಕಿಮೀ ದೂರದ ನ್ಯಾರೋಗೇಜ್ ರೈಲು ಮಾರ್ಗವನ್ನು 99 ಕೋಟಿ ರೂ ವೆಚ್ಚದಲ್ಲಿ ಬ್ರಾಡ್ ಗೇಜ್ ಗೆ ಪರಿವರ್ತಿಸಲು 2006-07ರಲ್ಲಿ ರೈಲ್ವೆ ಮಂಡಳಿ ಒಪ್ಪಿಗೆ ಸೂಚಿಸಿತ್ತು. 2 ಬಾರಿ ಯೋಜನಾ ವೆಚ್ಚ ಪರಿಷ್ಕೃತಗೊಂಡು ಈಗ 440 ಕೋಟಿ ರೂ. ಗೆ ವೆಚ್ಚವಾಗಿದೆ. ಮಾರ್ಗಮಧ್ಯೆ ಇನ್ನೂ ಕೆಲವೆಡೆ ಸ್ಟೇಷನ್ ನಿರ್ಮಾಣ, ಸೌಲಭ್ಯಗಳ ಬೇಡಿಕೆ ಈಡೇರಿಕೆಗೆ ಇನ್ನೂ 50 ಕೋಟಿ ರೂ. ವೆಚ್ಚ ಮಾಡಬೇಕಾದ ಅಗತ್ಯವಿದೆ.