ಅದು ಏನೂಂತ ಭವಿಷ್ಯ ಹೇಳ್ಬಿಟ್ರಿ ಕೋಡಿ ಶ್ರೀಗಳೇ..
ಚುನಾವಣೆಗೆ 48 ಗಂಟೆಗಳ ಮುನ್ನ ಅರಸೀಕೆರೆಯ ಹಾರನಹಳ್ಳಿ ಕೋಡಿಮಠದ ಶ್ರೀಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಚುನಾವಣಾ ಫಲಿತಾಂಶದ ಬಗ್ಗೆ ಭವಿಷ್ಯ ನುಡಿದಿದ್ದರು. ಕೇಂದ್ರದಲ್ಲಿ ಯಾರು ಚುಕ್ಕಾಣಿ ಹಿಡಿಯಲಿದ್ದಾರೆ ಎನ್ನುವ ಶ್ರೀಗಳು ನುಡಿದಿದ್ದ ಭವಿಷ್ಯದ ಸತ್ಯಾಸತ್ಯತೆ ಈಗ ಚರ್ಚೆಯ ವಿಷಯವಾಗಿದೆ.
ನೈಸರ್ಗಿಕ ವಿಕೋಪ, ರಾಜಕೀಯ ಸ್ಥಿರತೆ, ಅಸ್ಥಿರತೆ ಬಗ್ಗೆ ಭವಿಷ್ಯ ನುಡಿಯುತ್ತಲೇ ಬರುತ್ತಿರುವ ಕೋಡಿಶ್ರೀಗಳ ಭವಿಷ್ಯ ಸುಳ್ಳಾಗಿದ್ದೂ ಉಂಟು, ನಿಜವಾಗಿದ್ದಕ್ಕೂ ಸಾಕಷ್ಟು ಉದಾಹರಣೆಗಳಿವೆ. ಹಾಗಾಗಿ, ಕೋಡಿಶ್ರೀಗಳ ಭವಿಷ್ಯಕ್ಕೆ fan followers ಸ್ವಲ್ಪ ಜಾಸ್ತಿಯೇ..
ಆದರೆ ಲೋಕಸಭೆ ಚುನಾವಣೆಯ ಫಲಿತಾಂಶದ ಬಗ್ಗೆ ಈ ಬಾರಿ ಕೋಡಿಶ್ರೀಗಳು ನುಡಿದ ಭವಿಷ್ಯ ಸುಳ್ಳಾಗಿದೆ ಎಂದರೆ ಕೋಡಿಶ್ರೀಗಳ ಅಸಂಖ್ಯಾತ ಅಭಿಮಾನಿಗಳು ಮತ್ತು ಭವಿಷ್ಯವನ್ನು ನಂಬುವವರು ಬೇಸರಿಸಿಕೊಳ್ಳಬಾರದು. (ಫಲಿತಾಂಶಕ್ಕೆ 24 ಗಂಟೆ ಮುನ್ನ ಕೋಡಿಶ್ರೀಗಳ ಭವಿಷ್ಯ)
ಕೋಡಿಶ್ರೀಗಳ ಭವಿಷ್ಯದ ಲೇಖನದ ಜೊತೆ ಹುಬ್ಬಳ್ಳಿ ಅಖಿಲ ಕರ್ನಾಟಕ ಜ್ಯೋತಿರ್ವಿಜ್ಞಾನ ಸಂಸ್ಥೆಯ ಅಧ್ಯಕ್ಷ ವಿ ಗಣೇಶ ಹೆಗಡೆ ಹೇಳಿದ್ದ ಭವಿಷ್ಯವನ್ನೂ ಪ್ರಕಟಿಸಿದ್ದೆವು. ಕೋಡಿಶ್ರೀಗಳು 48 ಗಂಟೆಗಳ ಮುನ್ನ ಹೇಳಿದ್ದೇನು? ಹುಬ್ಬಳ್ಳಿಯ ಗಣೇಶ ಹೆಗಡೆ ನುಡಿದಿದ್ದ ಭವಿಷ್ಯವೇನು? ಕೋಡಿಶ್ರೀಗಳು ಈ ಹಿಂದೆ ನುಡಿದಿದ್ದ ಭವಿಷ್ಯ ನಿಜವಾಗಿದ್ದು ಯಾವುದು? ಸ್ಲೈಡಿನಲ್ಲಿ...
ಕೋಡಿಶ್ರೀ ಭವಿಷ್ಯ
ನಡೆವ ಹಾದಿ ಮೂರು ಭಾಗವಾದೀತು. ಮುದುಕನ ಕೋಲ ಮೇಲೆ ಕಾಗೆ ಕುಂತೀತು, ಮುತ್ತಿನ ಗಿಣಿ ಮುದುಕಾಗಿ ಮುತ್ತಾದೀತು. ಹಂತಕನ ಸುದ್ದಿ ಹರಡೀತು. ಅಂತರದಲ್ಲಿಯೇ ಹಾರೀತು, ಅಸ್ಥಿರ ಸರಕಾರ ಖಾಯಂ ಆದೀತು ಎಂದು ಒಗಟಿನ ಮೂಲಕ ಕೋಡಿಶ್ರೀಗಳು ಫಲಿತಾಂಶಕ್ಕೆ ಎರಡು ದಿನದ ಮುನ್ನ ಭವಿಷ್ಯ ನುಡಿದಿದ್ದರು.
ಕೇಂದ್ರದಲ್ಲಿ ಯಾರಿಗೂ ಬಹುಮತವಿಲ್ಲ
ಕೇಂದ್ರದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಲಿದೆ. ಯಾವ ಪಕ್ಷಕ್ಕೂ ಬಹುಮತ ಸಿಗುವುದಿಲ್ಲ. ಮತದಾನ ತನ್ನ ನೈತಿಕತೆಯನ್ನು ಕಳೆದುಕೊಂಡಿದೆ, ಮತ ಎನ್ನುವುದು ವ್ಯಾಪಾರದ ವಸ್ತುವಾಗಿದೆ ಎಂದು ಶ್ರೀಗಳು ಭವಿಷ್ಯ ನುಡಿದಿದ್ದರು.
ಗಣೇಶ ಹೆಗಡೆ
ಇತರ ಪಕ್ಷಗಳ ಸಹಕಾರ ಪಡೆದು ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೆ ಬರುವುದು ಖಂಡಿತ. 250ಕ್ಕೂ ಹೆಚ್ಚು ಸ್ಥಾನವನ್ನು ಪಡೆದು ಇತರ ಪಕ್ಷಗಳ ಸಹಕಾರದೊಂದಿಗೆ ಸರಕಾರ ರಚಿಸಿ ನರೇಂದ್ರ ಮೋದಿ ಪ್ರಧಾನಿಯಾಗಲಿದ್ದಾರೆಂದು ಹುಬ್ಬಳ್ಳಿ ಅಖಿಲ ಕರ್ನಾಟಕ ಜ್ಯೋತಿರ್ವಿಜ್ಞಾನ ಸಂಸ್ಥೆಯ ಅಧ್ಯಕ್ಷ ವಿ ಗಣೇಶ ಹೆಗಡೆ ಭವಿಷ್ಯ ನುಡಿದಿದ್ದರು.
ಕೋಡಿಶ್ರೀಗಳ ಭವಿಷ್ಯ ಸತ್ಯವಾಗಲಿಲ್ಲ
ಕೋಡಿಶ್ರೀಗಳು ನುಡಿದ ಭವಿಷ್ಯ ಈ ಬಾರಿ ಸತ್ಯವಾಗಲಿಲ್ಲ. ಬಿಜೆಪಿ ಭರ್ಜರಿ ಪ್ರದರ್ಶನದೊಂದಿಗೆ ಕೇಂದ್ರದಲ್ಲಿ ಸರಕಾರ ರಚಿಸುವತ್ತ ಸಾಗಿದೆ. ಮತ್ತು ನರೇಂದ್ರ ಮೋದಿ ಪ್ರಧಾನಿ ಹುದ್ದೆಗೇರುವ ದಿನಗಣನೆ ಆರಂಭವಾಗಿದೆ. ಬಿಜೆಪಿ ಸ್ವಯಂಶಕ್ತಿಯಿಂದಲೇ ಬಹುಮತಕ್ಕೆ ಬೇಕಾದ ಸೀಟನ್ನು ಪಡೆದುಕೊಂಡಿದೆ.
ಈ ಹಿಂದೆ ಕೋಡಿಶ್ರೀಗಳು ಹೇಳಿದ್ದ ಭವಿಷ್ಯ
ಸಿದ್ದರಾಮಯ್ಯ ಅವರಿಗೆ ಸಿಎಂ ಆಗೋ ಯೋಗ ಇದೆಯೆಂದು ಕೋಡಿಶ್ರೀಗಳು ಏಪ್ರಿಲ್ 2014ರಲ್ಲಿ ಹೇಳಿದ್ದರು. ಮಾರ್ಚ್ 2011ರಲ್ಲಿ ಧಾರ್ಮಿಕ ಮುಖಂಡರೊಬ್ಬರು ಅಸ್ತಂಗತರಾಗಲಿದ್ದಾರೆಂದು ಭವಿಷ್ಯ ನುಡಿದಿದ್ದರು, ಅದರಂತೇ ಅದೇ ವರ್ಷ ಏಪ್ರಿಲ್ ನಲ್ಲಿ ಪುಟ್ಟಪರ್ತಿ ಸತ್ಯಸಾಯಿ ಬಾಬ ನಿಧನರಾಗಿದ್ದರು.
ರಾಜ್ಯದ ರಾಜಕೀಯದ ಬಗ್ಗೆ ಕೋಡಿಶ್ರೀ
ಡಿಸೆಂಬರ್ 2011ರಲ್ಲಿ ಮುಖ್ಯಮಂತ್ರಿ ಸದಾನಂದ ಗೌಡ ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಿಸ ಬೇಕಾಗುತ್ತದೆ ಎಂದಿದ್ದರು, ಅದರಂತೆ ಜುಲೈ 2012ರಂದು ಸದಾನಂದ ಗೌಡ್ರು ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದರು. ಮಾರ್ಚ್ 2012ರಂದು ಬಿಜೆಪಿ ಮೂರು ಹೋಳಾಗಲಿದೆ ಎಂದಿದ್ದರು, ಅದರಂತೆ ಬಿಜೆಪಿ, ಕೆಜೆಪಿ, BSR ಕಾಂಗ್ರೆಸ್ ಎಂದು ಪಕ್ಷ ಮೂರು ಹೋಳಾಗಿತ್ತು.