'ಕೋಡಿಶ್ರೀಗಳು ನುಡಿದಿದ್ದ ಭವಿಷ್ಯ ನನಗೆ ಸುಳ್ಳಾಯಿತು'
ಕೊಪ್ಪಳ, ನ 11: ನಂಬಿಕೆ ಅವರವರ ವೈಯಕ್ತಿಕ ವಿಚಾರ. ಸರಕಾರ ಮೂಢನಂಬಿಕೆ ನಿಷೇಧ ಮಸೂದೆ ಮಂಡಿಸಲು ಮುಂದಾಗಿರುವುದಕ್ಕೆ ನನ್ನ ಸಮ್ಮತವಿಲ್ಲ. ಹುಬ್ಬಳ್ಳಿಗೆ ಈ ಹಿಂದೆ ಬಂದಿದ್ದ ಕೋಡಿಮಠದ ಶ್ರೀಗಳು ನನ್ನ ಬಗ್ಗೆ ನುಡಿದಿದ್ದ ಭವಿಷ್ಯ ನಿಜವಾಗಲಿಲ್ಲ ಎಂದು ನಾಡೋಜ ಪಾಟೀಲ ಪುಟ್ಟಪ್ಪ ಹೇಳಿದ್ದಾರೆ.
ನಗರದಲ್ಲಿ ಭಾನುವಾರ (ನ 10) ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಪಾಪು, ಅರಸೀಕೆರೆ ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು ನಿಮ್ಮ ಆಯುಸ್ಸು 79 ವರ್ಷ ಮಾತ್ರ ಎಂದಿದ್ದರು. ಆದರೆ ನನಗೀಗ 94 ವರ್ಷ, ದೇವರ ದಯೆಯಿಂದ ಆರೋಗ್ಯವಾಗಿದ್ದೇನೆ ಎಂದಿದ್ದಾರೆ.
ಮೂಢನಂಬಿಕೆ ನಿಷೇಧ ಹೆಸರಿನಲ್ಲಿ ಜನರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವುದು ತರವಲ್ಲ. ಮಾಡಬೇಕಾಗಿರುವ ಅಭಿವೃದ್ದಿ ಕೆಲಸಗಳು ಬೆಟ್ಟದಷ್ಟಿವೆ. ಸರಕಾರ ಮೊದಲು ಅದರ ಬಗ್ಗೆ ಗಮನ ಕೊಡಲಿ ಎಂದು ಪಾಟೀಲ ಪುಟ್ಟಪ್ಪ ಹೇಳಿದ್ದಾರೆ.
ದೇವರ ಅಸ್ತಿತ್ವದ ಬಗ್ಗೆ ನಾಸ್ತಿಕರು ಮತ್ತು ಆಸ್ತಿಕರ ನಡುವೆ ವ್ಯತ್ಯಾಸಗಳಿವೆ. ನ್ಯಾಯಾಲಯದ ಕಟಕಟೆಯಲ್ಲಿ ಭಗವದ್ಗೀತೆಯ ಮೇಲೆ ಪ್ರಮಾಣ ಮಾಡಿಸುತ್ತಾರೆ. ಇದೂ ಒಂದು ನಂಬಿಕೆಯಲ್ಲವೇ ಎಂದು ಪಾಪು ಪ್ರಶ್ನಿಸಿದ್ದಾರೆ.
ಪ್ರಶಸ್ತಿ ತಾನಗಿಯೇ ಒಲಿದು ಬರಬೇಕು. ಅದಕ್ಕಾಗಿ ಲಾಬಿ ನಡೆಸಬಾರದು. ಪ್ರಶಸ್ತಿ ಗಿಟ್ಟಿಸಿಕೊಂಡು ಜನಪ್ರಿಯತೆಗಳಿಸಲು ಕೆಲವು ಬುದ್ದಿಜೀವಿಗಳು ಮುಖ್ಯಮಂತ್ರಿಗಳ ಹಿಂದೆ ಸುತ್ತುತ್ತಿದ್ದಾರೆ. ಇಂತಹ ಪ್ರಶಸ್ತಿ ಬಂದರೆಷ್ಟು ಬಿಟ್ಟರೆಷ್ಟು ಎಂದು ಪಾಟೀಲ ಪುಟ್ಟಪ್ಪ ಖಾರವಾಗಿ ನುಡಿದಿದ್ದಾರೆ.
ಇದುವರೆಗೆ ಕನ್ನಡಕ್ಕೆ ಬಂದ ಜ್ಞಾನಪೀಠ ಪ್ರಶಸ್ತಿಗಳಲ್ಲಿ ಐವರಿಗೆ ಮಾತ್ರ ದಕ್ಕಿದ ಪ್ರಶಸ್ತಿ ಕ್ರಮಬದ್ದವಾಗಿದೆ. ಮಿಕ್ಕವರೆಲ್ಲಾ ಲಾಬಿ ನಡೆಸಿಯೇ ಪ್ರಶಸ್ತಿ ತನ್ನದಾಗಿಸಿ ಕೊಂಡಿದ್ದಾರೆಂದು ಪಾಟೀಲ ಪುಟ್ಟಪ್ಪ ಗಂಭೀರ ಆರೋಪ ಮಾಡಿದ್ದಾರೆ.
ಪಾಪು ಪ್ರಕಾರ ಕ್ರಮಬದ್ದವಾಗಿ ಪ್ರಶಸ್ತಿ ಸ್ವೀಕರಿಸಿದ ಐವರು ಸಾಹಿತಿಗಳು ಯಾರು? ಸ್ಲೈಡಿನಲ್ಲಿ ನೋಡಿ...
ಕುವೆಂಪು
ಕುಪ್ಪಳ್ಳಿ ವೆಂಕಟಪ್ಪ ಗೌಡ ಪುಟ್ಟಪ್ಪ ಯಾನೆ ಕುವೆಂಪು. ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕಾಣಿಕೆ ನೀಡಿದ ಕುವೆಂಪು ಅವರಿಗೆ ಶ್ರೀರಾಮಾಯಣ ದರ್ಶನಂ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿತ್ತು.
ದ.ರಾ.ಬೇಂದ್ರೆ
ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಯಾನೆ ದ.ರಾ.ಬೇಂದ್ರೆ. ಅಂಬಿಕಾತನಯದತ್ತ ಕಾವ್ಯನಾಮದ ಮೂಲಕ ಪ್ರಸಿದ್ದ ಪಡೆದಿದ್ದ ಬೇಂದ್ರೆ ತನ್ನ ನಾಕುತಂತಿ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಪಡೆದುಕೊಂಡಿದ್ದರು.
ಶಿವರಾಮ ಕಾರಂತ
ಕಡಲತೀರದ ಭಾರ್ಗವ, ನಡೆದಾಡುವ ವಿಶ್ವಕೋಶವೆಂದೇ ಖ್ಯಾತರಾಗಿದ್ದ ಶಿವರಾಮ ಕಾರಂತರು ಬರಿದಿದ್ದ ಮೂಕಜ್ಜಿಯ ಕನಸುಗಳು ಕೃತಿಗೆ 1977ರಲ್ಲಿ ಜ್ಞಾನಪೀಠ ಪ್ರಶಸ್ತಿ ವಲಿದಿತ್ತು.
ಮಾಸ್ತಿ ವೆಂಕಟೇಶ ಐಯ್ಯಂಗಾರ್
ಮಾಸ್ತಿ ಎಂದೇ ಹೆಸರು ಪಡೆದಿದ್ದ ಇವರು ಶ್ರೀನಿವಾಸ ಎನ್ನುವ ಕಾವ್ಯನಾಮದ ಮೂಲಕ ಹೆಸರುವಾಸಿಯಾಗಿದ್ದರು. ಇವರು ಬರೆದ ಚಿಕವೀರ ರಾಜೇಂದ್ರ ಕೃತಿಗೆ 1983ರಲ್ಲಿ ಜ್ಞಾನಪೀಠ ಪ್ರಶಸ್ತಿ ಬಂದಿತ್ತು.
ಗೋಕಾಕ್
ವಿನಾಯಕ ಕೃಷ್ಣ ಗೋಕಾಕ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಸಮಾನ ಪ್ರಭುತ್ವವನ್ನು ಪಡೆದಿದ್ದರು. ಇವರ ಭಾರತದ ಸಿಂಧು ರಶ್ಮಿ ಕೃತಿಗೆ 1990ರಲ್ಲಿ ಜ್ಞಾನಪೀಠ ಪ್ರಶಸ್ತಿ ಬಂದಿತ್ತು. ಈ ಐವರ ಹೊರತಾಗಿ ಜ್ಞಾನಪೀಠ ಪ್ರಶಸ್ತಿ ಪಡೆದ ಇತರ ಮೂವರು ಕನ್ನಡದ ಸಾಹಿತಿಗಳೆಂದರೆ ಯು ಆರ್ ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಮತ್ತು ಡಾ.ಚಂದ್ರಶೇಖರ ಕಂಬಾರ.