2014ರಲ್ಲಿ ಕೋಡಿಶ್ರೀಗಳು ಭವಿಷ್ಯ ನುಡಿದಿದ್ದೇನು, ಆಗಿದ್ದೇನು?
ಭವಿಷ್ಯ, ಜ್ಯೋತಿಷ್ಯದ ಬಗ್ಗೆ ಎಷ್ಟೇ ಸಾಮಾಜಿಕ ಅರಿವು ಮೂಡಿಸುವ ಕಾರ್ಯಕ್ರಮಗಳು, ಚರ್ಚೆಗಳು, ಪ್ರತಿಭಟನೆಗಳು ನಡೆದರೂ ಸಾರ್ವಜನಿಕರಿಗೆ ಅದರ ಮೇಲಿನ ನಂಬಿಕೆ ಅಥವಾ ಮೂಢನಂಬಿಕೆ ಯಥಾವತ್ತಾಗಿ ಮುಂದುವರಿಯುತ್ತಲೇ ಇದೆ.
ಜ್ಯೋತಿಷ್ಯ ಎಲ್ಲಾ ಸುಳ್ಳು ಎಂದು ಮಾಧ್ಯಮಗಳ ಮುಂದೆ ಪ್ರಚಾರಗಿಟ್ಟಿಸಿ ಕೊಳ್ಳುವವರು ಹಿಂಬಾಗಿಲಿನಿಂದ ಜ್ಯೋತಿಷ್ಯದ ಮೊರೆಹೋದ ಉದಾಹರಣೆ ನಮ್ಮ ಮುಂದೆ ಇಲ್ಲದಿಲ್ಲ. ಅದರಂತೆಯೇ, ಇದೆಲ್ಲಾ ಮೂಢನಂಬಿಕೆ ಎಂದು ತಮ್ಮ ಹೇಳಿಕೆಯ ಪರವಾಗಿ ನಿಂತವರ ಉದಾಹರಣೆಗಳೂ ಸಾಕಷ್ಟು.
ರಾಜಕೀಯ ಏರುಪೇರು, ನೈಸರ್ಗಿಕ ವಿಕೋಪದ ಬಗೆಗಿನ ಭವಿಷ್ಯವಾಣಿಯ ವಿಚಾರಕ್ಕೆ ಬಂದಾಗ ನಾಡಿನ ಹಿರಿಯ, ಅರಸೀಕೆರೆ ಹಾರನಹಳ್ಳಿ ಕೋಡಿಮಠದ ಶ್ರೀಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ನುಡಿಯುವ ಭವಿಷ್ಯದ ಬಗ್ಗೆ ಎಲ್ಲರಲ್ಲೂ ತುಸು ಆಸಕ್ತಿ ಜಾಸ್ತಿ. (ಗಡಿ ಸಮಸ್ಯೆ ಗಂಭೀರ)
2014ರ ವರ್ಷದಲ್ಲಿ ಕೂಡಾ ಕೋಡಿಶ್ರೀಗಳು, ದೇಶ ಮತ್ತು ರಾಜ್ಯದ ಬಗ್ಗೆ ಹಲವು ಭವಿಷ್ಯಗಳನ್ನು ನುಡಿದಿದ್ದಾರೆ. ಇವರ ಒಗಟಿನ ರೂಪದಲ್ಲಿ ನುಡಿಯುವ ಭವಿಷ್ಯವನ್ನು ಸಾರ್ವಜನಿಕರು ಮತ್ತು ರಾಜಕಾರಣಿಗಳು ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಅರ್ಥೈಸಿಕೊಳ್ಳುತ್ತಿರುವುದು ನಡೆದು ಕೊಂಡು ಬರುತ್ತಲೇ ಇದೆ.
ಘಟನೆ ಅಥವಾ ವಿದ್ಯಮಾನದ ನಡೆದ ನಂತರ, ನಾನು ಅಂದೇ ಇದರ ಬಗ್ಗೆ ಮುನ್ಸೂಚನೆ ನುಡಿದಿದ್ದೆ ಎಂದು ಕೋಡಿಶ್ರೀಗಳು ವಿವರಣೆ ನೀಡಿದ್ದೂ ಇದೆ.
ಪ್ರಸಕ್ತ ವರ್ಷದಲ್ಲಿ ಕೋಡಿ ಶ್ರೀಗಳು ನುಡಿದಿದ್ದ ಭವಿಷ್ಯವನ್ನು ಮತ್ತೊಮ್ಮೆ ಓದುಗರ ಮುಂದಿಡುತ್ತಿದ್ದೇವೆ. ಇದು ಓದುಗರ ನಂಬಿಕೆ, ಭಕುತಿ, ವಿವೇಚನೆಗೆ ಬಿಟ್ಟ ವಿಚಾರ. (ಮೂಢನಂಬಿಕೆ ಮತ್ತು ಮಡೆಸ್ನಾನದ ಬಗ್ಗೆ ಸಿಎಂ)
ಸಿದ್ದು ಸರಕಾರಕ್ಕೆ ಅಸ್ಥಿರತೆ ಕಾಡಲಿದೆ, ಆದರೂ ಓಕೆ
ಬಾಗಲಕೋಟೆಯಲ್ಲಿ ಮಾತನಾಡುತ್ತಿದ್ದ ಶ್ರೀಗಳು, ಸಿದ್ದು ಸರಕಾರಕ್ಕೆ ಅಸ್ಥಿರತೆ ಕಾಡಲಿದೆ. ಭಿನ್ನಮತ, ಸಂಕಟ ಎದುರಿಸಬೇಕಾಗುತ್ತದೆ, ಬಹುಮತವಿದ್ದರೂ ಸಿದ್ದು ಜಾಗರೂಕತೆಯಿಂದ ಇರಬೇಕು ಎಂದು ಭವಿಷ್ಯ ನುಡಿದಿದ್ದರು. ಸಿದ್ದು ಸರಕಾರಕ್ಕೆ ಅಸ್ಥಿರತೆ ಇದ್ದರೂ, ರಾಜ್ಯಭಾರ ನಡೆಸಿಕೊಂಡು ಹೋಗುತ್ತಾರೆಂದು ಶ್ರೀಗಳು ಭವಿಷ್ಯ ನುಡಿದಿದ್ದರು.
ವಯೋವೃದ್ದ ನಾಯಕ ಪಿಎಂ
'ಮುತ್ತಿನಗಿಳಿ ಮುಪ್ಪಾಗಿ ಮುತ್ತಾಯಿತು' ಎಂದು ಒಗಟು ಭಾಷೆಯಲ್ಲಿ ಹೇಳುವ ಮೂಲಕ ವಯೋವೃದ್ದ ನಾಯಕರೊಬ್ಬರು ದೇಶದ ಚುಕ್ಕಾಣಿ ಹಿಡಿಯಲಿದ್ದಾರೆನ್ನುವ ಸುಳಿವನ್ನು ವರ್ಷಾರಂಭದಲ್ಲಿ ಶ್ರೀಗಳು ನೀಡಿದ್ದರು. ವಯೋವೃದ್ದ ರಾಜಕೀಯ ಮುತ್ಸದ್ದಿ ಆಡ್ವಾಣಿ ಪ್ರಧಾನಿ ಆದರೂ ಆಗಬಹುದೆಂದು ಜನ ಭಾವಿಸಿದ್ದರು.
ಗಡಿ ಸಮಸ್ಯೆ ವಿಪರೀತ
ಹುಬ್ಬಳ್ಳಿಯಲ್ಲಿ ಮಾತನಾಡುತ್ತಾ, ಭಾರತ ಮತ್ತು ಪಾಕಿಸ್ತಾನದ ನಡುವೆ ಗಡಿಸಮಸ್ಯೆ ವಿಪರೀತವಾಗಲಿದೆ. 2015ರ ಯುಗಾದಿಯೊಳಗೆ ಎರಡು ರಾಷ್ಟ್ರಗಳ ನಡುವೆ ಯುದ್ದ ನಡೆಯುವ ಸಾಧ್ಯತೆ ಇಲ್ಲದಿಲ್ಲ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದರು.
ನೆಲಕಚ್ಚಲಿರುವ ಕಾಂಗ್ರೆಸ್
ನಡೆಯುವ ಹಾದಿ ಮೂರು ಕವಲಾಯಿತು, ಮುತ್ತಿನಗಿಣಿ ಮುಪ್ಪಾಯಿತು, ನಡೆಯುವ ಹಾದಿ ಮೂರು ಕವಲಾಯಿತು, ಮುದುಕನ ಕೋಲ ಮೇಲೆ ಕಾಗಿ ಕುಳಿತಿತೋ' ಎಂದು ನುಡಿದಿದ್ದ ಶ್ರೀಗಳು, ಶತಮಾನಗಳ ಇತಿಹಾಸವಿರುವ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಲಿದೆ, ಯಾವ ಪಕ್ಷಕ್ಕೂ ಬಹುಮತ ಸಿಗುವುದಿಲ್ಲ ಎಂದಿದ್ದರು.
ಮಳೆ, ಮಳೆಯ ಸಮಸ್ಯೆ
'ಮುತ್ತು ಉದರ್ಯಾವ, ಮೂಗುತಿ ಭಾರವಾದೀತಯ್ಯ' ಎಂದು ಒಗಟಿನ ಮೂಲಕ ಶ್ರೀಗಳು ಮತ್ತೊಂದು ಭವಿಷ್ಯವನ್ನು ನುಡಿದಿದ್ದರು. ಒಗಟಿನ ಅರ್ಥವನ್ನು ವಿವರಿಸಿದ್ದ ಶ್ರೀಗಳು, ಈ ವರ್ಷ ಮಳೆ ಹೆಚ್ಚಾಗಲಿದೆ, ಮಳೆಯಿಂದ ಸಮಸ್ಯೆಯೂ ಹೆಚ್ಚಾಗಲಿದೆ ಎಂದಿದ್ದರು ಎನ್ನುವುದನ್ನು ಇಲ್ಲಿ ಸ್ಮರಿಸಿಕೊಳ್ಳೋಣ.
ಮುತ್ತಿನ ಗಿಣಿ ಮುಪ್ಪಾಗದೇ ಮುತ್ತಾಯಿತೋ
ಮುತ್ತಿನ ಗಿಣಿ ಮುಪ್ಪಾಗಿ ಮುತ್ತಾಯಿತೋ. ಇದರರ್ಥ ಸರಳ ಸುಂದರವಾಗಿದೆ. ಕೇಂದ್ರದಲ್ಲಿ ಯಾವುದೇ ಅಧಿಕಾರ ಹೊಂದಿರದ ಮೋದಿ ಎಂಬ ಮುತ್ತಿನ ಗಿಣಿ ನೇರವಾಗಿ ದೇಶದಲ್ಲಿ ಹೊಳೆಯುವ ಮುತ್ತಾಯಿತೋ ತಮ್ಮಾ ಎಂದು ಕೋಡಿಮಠ ಶ್ರೀಗಳು ಮೋದಿ ಪ್ರಧಾನಿಯಾದ ನಂತರ ನಾನು ಹೇಳಿದ್ದ ಭವಿಷ್ಯ ನಿಜವಾಯಿತೆಂದು ಹಿಂದೆ ತಾನು ಹೇಳಿದ್ದ ಭವಿಷ್ಯವನ್ನು ಮಾರ್ಪಾಡು ಮಾಡಿದ್ದರು.
ಶ್ರೀಮಂತರು- ಮಧ್ಯ ವಯಸ್ಕರು ಭಾರಿ ಸಂಖ್ಯೆಯಲ್ಲಿ ಸಾವು
ದೇಶದಲ್ಲಿ ದೊಡ್ಡ ಘಟನೆಯೊಂದು ಸಂಭವಿಸಲಿದ್ದು ಶ್ರೀಮಂತರು ಮತ್ತು ಮಧ್ಯ ವಯಸ್ಕರು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಲಿದ್ದಾರೆ. ಅಲ್ಲದೇ ಬೆಂಕಿಯ ಅವಘಡಗಳೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ನಡೆಯಲಿವೆ ಎಂದು ಶ್ರೀಗಳು ಮೇ ತಿಂಗಳಲ್ಲಿ ಭವಿಷ್ಯ ನುಡಿದಿದ್ದರು.
ಜೀವ ಜಂತುಗಳಿಂದ ಮಾನವರಿಗೆ ಅಪಾಯವಿದೆ
ಈ ಬಾರಿ ಚುನಾವಣೆ ಮುಗಿಯುತ್ತಿದ್ದಂತೆ ಅಚ್ಚರಿಯ ಘಟನೆಯೊಂದು ಸಂಭವಿಸಲಿದೆ. ಅಲ್ಲದೇ ಜೀವ ಜಂತುಗಳಿಂದ ಮಾನವರಿಗೆ ಅಪಾಯವಿದೆ ಎಂದು ಸ್ವಾಮೀಜಿಗಳು ಆತಂಕ ಮಿಶ್ರಿತ ಎಚ್ಚರಿಕೆಯ ಭವಿಷ್ಯ ನುಡಿದಿದ್ದರು.