2015ರಲ್ಲಿ ಕೋಡಿಮಠದ ಶ್ರೀಗಳು ನುಡಿದ ಭವಿಷ್ಯದ ಹಿನ್ನೋಟ
ಸಿದ್ದರಾಮಯ್ಯ ಸರಕಾರ ಮಂಡಿಸಲು ಮುಂದಾಗಿರುವ ಮೂಢನಂಬಿಕೆ ನಿಷೇಧ ಮಸೂದೆಯಲ್ಲಿ ಯಾವಯಾವ ಅಂಶಗಳು ಬ್ಯಾನ್ ಆಗಲಿವೆ ಅನ್ನೋದು ಇನ್ನೂ ಖಚಿತವಾಗದಿದ್ದರೂ, ಮುಂಬರುವ ದಿನಗಳಲ್ಲಿ ಭವಿಷ್ಯ, ಕಾರ್ಣಿಕ ನುಡಿ ಬ್ಯಾನ್ ಆಗುವ ಸಾಧ್ಯತೆಯಿದೆಯೇ?
ಗೊತ್ತಿಲ್ಲ..ಆದರೂ, ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆಂದರೆ ಆಸ್ತಿಕರ ಕಿವಿ ನೆಟ್ಟಗಾಗುವುದು ಹೆಚ್ಚುಕಮ್ಮಿ ಖಚಿತ, ಜೊತೆಗೆ ನಮ್ಮ ಓದುಗರಿಗೂ ಶ್ರೀಗಳು ನುಡಿಯುವ ಭವಿಷ್ಯದ ಬಗ್ಗೆ ಕುತೂಹಲ ಕೂಡಾ ಜಾಸ್ತಿ. (ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ಬದಲಾವಣೆ)
ತಾಳೇಗರಿ ಮೂಲಕ ಅರಸೀಕೆರೆ ಕೋಡಿಮಠದ ಶ್ರೀಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು 2015ರಲ್ಲೂ ಅಲ್ಲಲ್ಲಿ ಭವಿಷ್ಯ ನುಡಿದಿದ್ದಾರೆ. ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿಯಲ್ಲಿ ಶುರುವಾದ ಶ್ರೀಗಳ ಈ ವರ್ಷದ ಭವಿಷ್ಯ ನುಡಿಯುವ ಪಯಣ ನಿರಾಂತಕವಾಗಿ ಸಾಗುತ್ತಿದೆ.
ಸಮಾಜ ಇಂದು ಹಣದ ಅಹಂಕಾರದಿಂದ ಕೂಡಿದೆ. ಯುದ್ದ, ಕಲಹ, ಕಾಯಿಲೆಗಳು ಹೆಚ್ಚಾಗಿ ಕಂಡುಬರಲಿವೆ. ಅತ್ಯಾಚಾರ ಮತ್ತು ಸುಲಿಗೆಗಳು ಸಮಾಜವನ್ನು ಇನ್ನಿಲ್ಲದಂತೆ ಕಾಡಲಿದೆ ಎಂದು ಕಾಲಜ್ಞಾನಿ ಕೋಡಿಶ್ರೀಗಳು ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಸಮಾಜವನ್ನು ಎಚ್ಚರಿಸಿದ್ದರು.
ಸತ್ಯ ಎಂದಿಗೂ ಅಪ್ರಿಯ, ಕಹಿಯಿಂದ ಕೂಡಿರುತ್ತದೆ. ಹೀಗಾಗಿ ಸತ್ಯವನ್ನು ನುಡಿದರೆ ತೊಂದರೆಯಾಗುತ್ತದೆ, ನಾನು ಇನ್ನು ಮುಂದೆ ಭವಿಷ್ಯವನ್ನು ನುಡಿಯುವುದಿಲ್ಲ ಎಂದು ಈ ಹಿಂದೆ ಶ್ರೀಗಳು ಹೇಳಿದ್ದರೂ ಭವಿಷ್ಯ ನುಡಿಯುವುದನ್ನು ನಿಲ್ಲಿಸಲಿಲ್ಲ. (ಕೋಡಿಶ್ರೀಗಳ ಬಿಬಿಎಂಪಿ ಭವಿಷ್ಯ)
2015ರಲ್ಲಿ ಶ್ರೀಗಳು ನುಡಿದ ಭವಿಷ್ಯ ಮತ್ತು ಮೈಲಾರಲಿಂಗೇಶ್ವರನ ಜಾತ್ರೆಯಲ್ಲಿ ಗೊರವಯ್ಯ ಹೇಳಿದ್ದ ಭವಿಷ್ಯದ ದ ಬಗ್ಗೆ ಒಂದು ಹಿನ್ನೋಟವನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ. ಭವಿಷ್ಯದ ಸತ್ಯಾಸತ್ಯತೆಯನ್ನು ಓದುಗರು ಅವರವರ ಭಾವಕ್ಕೆ ತಕ್ಕಂತೆ ಅರ್ಥೈಸಿಕೊಳ್ಳಬಹುದು...
ದೇವರ ಸ್ಮರಣೆ ಮುಖ್ಯ
ಹಿರೇಬಾಗೆವಾಡಿಯ ಗಣಿಕೊಪ್ಪ ಗ್ರಾಮದ ಸಿದ್ದೇಶ್ವರ ದೇವಸ್ಥಾನದಲ್ಲಿ ಏಕದಶ ಕೋಟಿ ಶಿವ ಷಡಾಕ್ಷರ ಜಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೋಡಿಶ್ರೀಗಳು, ಸಮಾಜದಲ್ಲಿ ಶಾಂತಿ ನೆಲೆಸ ಬೇಕಾದರೆ ದೇವರ ಸ್ಮರಣೆ ಮುಖ್ಯ. ಅತ್ಯಾಚಾರ ಮತ್ತು ಸುಲಿಗೆಗಳು ಸಮಾಜವನ್ನು ಇನ್ನಿಲ್ಲದಂತೆ ಕಾಡಲಿದೆ ಎಂದು ಭವಿಷ್ಯ ನುಡಿದಿದ್ದರು.
ಗೊರವಯ್ಯನ ಕಾರ್ಣಿಕ
''ಮುತ್ತಿನ ಗಂಟು ಮೂರಾದಿತಲೆ ಪರಾಕ್'' ಎಂದು ಫೆಬ್ರವರಿಯಲ್ಲಿ ಮೈಲಾರ ಲಿಂಗೇಶ್ವರ ಜಾತ್ರೆಯಲ್ಲಿ ಗೊರವಯ್ಯ ಕಾರ್ಣಿಕ ನುಡಿದಿದ್ದರು. ಭವಿಷ್ಯವಾಣಿಯನ್ನು ಭಕ್ತಾದಿಗಳು ಅರ್ಥ/ಚರ್ಚೆ ಮಾಡಿಕೊಂಡ ಪ್ರಕಾರ, ಈ ಬಾರಿ ಅಶುಭವಾಗಲಿದೆ. ರಾಜಕೀಯ, ಸಾಮಾಜಿಕ ಹಾಗೂ ಇತರ ಕ್ಷೇತ್ರಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ವ್ಯಾಪಾರದಲ್ಲಿ ಲಾಭ ನಷ್ಟ ಏರುಪೇರು, ರೈತರು ಈ ಬಾರಿ ಸಾಧಾರಣ ಮಳೆ, ರಾಜಕೀಯವಾಗಿ ಪಕ್ಷ ಒಡೆಯುವ ಸಂಭವ ಹೀಗೆ ಗೊರವಯ್ಯನ ಕಾರ್ಣಿಕ ನುಡಿಯನ್ನು ಭಕ್ತಾದಿಗಳು ಅರ್ಥೈಸಿಕೊಂಡಿದ್ದರು.
ಅಫ್ಘಾನಿಸ್ತಾನ ವಿಶ್ವಕಪ್ ಗೆಲ್ಲಲಿದೆ
ವಿಶ್ವಕಪ್ 2015 ಟೂರ್ನಿಯನ್ನು ಅಫ್ಘಾನಿಸ್ತಾನ ಗೆಲ್ಲಲಿದೆಯೆಂದು ಯಂತ್ರಮಾನವ ರೋಬೋ ಫೆಬ್ರವರಿ ತಿಂಗಳಲ್ಲಿ ಭವಿಷ್ಯ ನುಡಿದಿತ್ತು. ಜೊತೆಗೆ ಚೆನ್ನೈನ ಮೀನೊಂದು ಭಾರತ ವಿಶ್ವಕಪ್ ಗೆಲ್ಲಲಿದೆಯೆಂದು ಭವಿಷ್ಯ ನುಡಿದಿತ್ತು.
ಮೋದಿಗೆ ಅಭಿಮಾನಿಗಳಿಗೆ ಮಂಡೆಬಿಸಿ ಮಾಡಿದ್ದ ಭವಿಷ್ಯ
ಒಂದು ವರ್ಷ ಪೂರೈಸಿರುವ ಕೇಂದ್ರದ ನರೇಂದ್ರ ಮೋದಿ ಸರಕಾರಕ್ಕೆ ಹಲವು ಕಂಟಕಗಳು ಎದುರಾಗಲಿವೆ. 'ನಡೆಯುವ ಹಾದಿ ಮೂರು ಭಾಗವಾದೀತು' ಎಂದು ಕೋಡಿ ಮಠದ ಶ್ರೀಗಳು ಮೋದಿ ಸರಕಾರಕ್ಕೆ ಎಚ್ಚರಿಕೆಯ ಭವಿಷ್ಯ ನುಡಿದಿದ್ದರು.
ದೀಪಾವಳಿ ನಂತರ ಪ್ರಾಕೃತಿಕ ವಿಕೋಪ
ಕಾರ್ತಿಕ ಮಾಸದ ನಂತರ ದೇಶದ ದಕ್ಷಿಣ ಭಾಗದಲ್ಲಿ ದೊಡ್ಡ ಅನಾಹುತ ಸಂಭವಿಸಲಿದೆ. ಪ್ರಮುಖವಾಗಿ ಪ್ರಾಕೃತಿಕ ವಿಕೋಪ, ವರುಣನಿಂದ ಹಾನಿ ಸಂಭವಿಸಲಿದೆ ಎಂದು ಶ್ರೀಗಳು ಬಾಗಲಕೋಟೆಯಲ್ಲಿ ಭವಿಷ್ಯ ನುಡಿದಿದ್ದರು.
ಸಿದ್ದುಗೆ ನೋ ಪ್ರಾಬ್ಲಂ
ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರಕ್ಕೆ ಸದ್ಯಕ್ಕೆ ಯಾವುದೇ ತೊಂದರೆಯಿಲ್ಲ. ಸಿಎಂ ಸಿದ್ದರಾಮಯ್ಯ ಸದ್ಯದ ಮಟ್ಟಿಗೆ ನಿರಾಂತಕವಾಗಿ ಆಡಳಿತ ನಡೆಸಬಹುದು ಎಂದು ಶ್ರೀಗಳು ಭವಿಷ್ಯ ನುಡಿದಿದ್ದರು.
ಬಿಬಿಎಂಪಿ ಚುನಾವಣೆ
ಯಾವ ಪಕ್ಷಕ್ಕೂ ಬಹುಮತ ಸಿಗುವ ಸಾಧ್ಯತೆಯಿಲ್ಲ. ಬಿಜೆಪಿ, ಕಾಂಗ್ರೆಸ್ ಅಥವಾ ಜೆಡಿಎಸ್ ಪಕ್ಷಗಳು ಏಕಾಂಗಿಯಾಗಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ, ಒಟ್ಟಿನಲ್ಲಿ ಈ ಬಾರಿಯ ಬಿಬಿಎಂಪಿ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗದೇ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಶ್ರೀಗಳು, ಹಾಸನದಲ್ಲಿ ಆಗಸ್ಟ್ ಮಾಸದಲ್ಲಿ ಭವಿಷ್ಯ ನುಡಿದಿದ್ದರು.
ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ಬದಲಾವಣೆ
ಬಾಳೆಹೊನ್ನೂರಿನಲ್ಲಿ ಅಕ್ಟೋಬರ್ 26ರಂದು ಮಾತನಾಡುತ್ತಿದ್ದ ಕೋಡಿಮಠದ ಶ್ರೀಗಳು, ರಾಜ್ಯ ರಾಜಕಾರಣದಲ್ಲಿ ಕೆಲವೊಂದು ಕ್ಷಿಪ್ರ ಬದಲಾವಣೆಯಾಗಲಿದೆ. ಧರೆಯಿಂದ ಹಸಿರು ಪಚ್ಚೆಯನ್ನುಟ್ಟು ನಲಿದಾಳು. ಅರಸೊತ್ತಿಗೆ ಸಿರಿವಂತರ ಮನೆಗಳಿಗೆ ಬರಸಿಡಿಲು ಬಡಿದೀತು' ಎಂದು ಒಗಟಿನ ರೂಪದಲ್ಲಿ ಭವಿಷ್ಯ ನುಡಿದು, ರಾಜ್ಯ ರಾಜಕೀಯದಲ್ಲಿ ಸ್ಥಾನಪಲ್ಲಟವಾಗುತ್ತದೆ ಎಂದು ಹೇಳಿದ್ದರು.