ನೇಪಾಳ ಭೂಕಂಪ: ಕೋಡಿಶ್ರೀಗಳು ಭವಿಷ್ಯ ನುಡಿದಿದ್ರಾ?
ಮಾಡಬಾರದ್ದನ್ನು ಮಾಡಿದರೆ ಅಗಬಾರದು ಆಗದೇ ಇರುತ್ತಾ? ಸತ್ಯ ಎಂದಿಗೂ ಕಹಿಯಾಗಿ ಇರುತ್ತೆ, ನಾನು ಸತ್ಯ ನುಡಿದರೆ ಅಪ್ರಿಯವಾಗಿರುತ್ತದೆ ಎಂದು ಹೇಳಿಕೆ ನೀಡುತ್ತಿದ್ದರೂ ಕೋಡಿಮಠದ ಶ್ರೀಗಳು ಭವಿಷ್ಯ ನುಡಿಯುವುದನ್ನು ನಿಲ್ಲಿಸಲಿಲ್ಲ.
ಪ್ರಪಂಚ ಭೂಪಟದ ಪುಟ್ಟ ದೇಶ, ಹಿಂದೂಗಳೇ ಬಹುಸಂಖ್ಯಾತರಾಗಿರುವ ನೇಪಾಳ ಕಂಡು ಕೇಳರಿಯದ ಭಯಂಕರ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿದೆ. ನೇಪಾಳ ಸರಕಾರದ ಅಧಿಕೃತ ಪ್ರಕಟಣೆಯ ಪ್ರಕಾರ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನ ದುರಂತ ಸಾವನ್ನಪ್ಪಿದ್ದಾರೆ. (ಅದು ಏನೂಂತ ಭವಿಷ್ಯ ಹೇಳ್ಬಿಟ್ರಿ ಕೋಡಿ ಶ್ರೀಗಳೇ)
ರಾಜಕೀಯ ಸ್ಥಿರತೆ, ಅಸ್ಥಿರತೆ, ಅತಿವೃಷ್ಟಿ, ಅನಾವೃಷ್ಟಿ ಬಗ್ಗೆ ತಾಳೇಗರಿ ಮೂಲಕ ಭವಿಷ್ಯ ನುಡಿಯುವ ಅರಸೀಕೆರೆ ಕೋಡಿಮಠದ ಶ್ರೀಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು, ನೇಪಾಳದ ಭೂತಾಯಿಯ ರುದ್ರನರ್ತನದ ಬಗ್ಗೆ ಭವಿಷ್ಯ ನುಡಿದಿದ್ರಾ?
ಭವಿಷ್ಯವನ್ನು ನಂಬುವುದು ಬಿಡುವುದು ಅವರವರ ವಿವೇಚನೆಗೆ ಬಿಟ್ಟ ವಿಚಾರವಾದರೂ, ಕೋಡಿಶ್ರೀಗಳು ನುಡಿದ ಭವಿಷ್ಯ ನಿಜವಾಗಿದ್ದ ಉದಾಹರಣೆಗಳೂ ನಮ್ಮ ಮುಂದಿವೆ. ಒಗಟಿನ ರೂಪದಲ್ಲಿ ತಾನು ಹೇಳಿದ್ದ ಭವಿಷ್ಯ ನಿಜವಾಯಿತೆಂದು ಅವರೂ ಸಮರ್ಥಿಸಿಕೊಂಡಿದ್ದೂ ಇದೆ.
ಈ ವರ್ಷದ ಆದಿಯಲ್ಲಿ ಲೋಕಕ್ಕೆ ಕಂಟಕ ಕಾದಿದೆ ಎಂದು ಕೋಡಿಶ್ರೀಗಳು ಭವಿಷ್ಯ ನುಡಿದಿದ್ದರೂ, ನೇಪಾಳದ ಬಗ್ಗೆ ವಿಶೇಷವಾಗಿ ತನ್ನ ತಾಳೇಗೆರೆ ಭವಿಷ್ಯದಲ್ಲಿ ಪ್ರಸ್ತಾವಿಸಿರಲಿಲ್ಲ. ಮುಂದೆ ಓದಿ..
ವರ್ಷದ ಮೊದಲ ಭವಿಷ್ಯ: ಲೋಕಕ್ಕೆ ಕಾದಿದೆ ಕಂಟಕ
ಬೆಳಗಾವಿ ಜಿಲ್ಲೆಯ ಹಿರೇಬಾಗೆವಾಡಿಯಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಶ್ರೀಗಳು, ಮುಂಬರುವ ದಿನಗಳಲ್ಲಿ ಲೋಕ ತುಂಬಾ ಕಂಟಕವನ್ನು ಎದುರಿಸಬೇಕಾಗುತ್ತದೆ ಎಂದು ಭವಿಷ್ಯ ನುಡಿದಿದ್ದರು.
ಸಮಾಜ ದುರಂಹಕಾರದಿಂದ ಕೂಡಿದೆ
ಸಮಾಜ ಇಂದು ಹಣದ ಅಹಂಕಾರದಿಂದ ಕೂಡಿದೆ. ಯುದ್ದ, ಕಲಹ, ಕಾಯಿಲೆಗಳು ಹೆಚ್ಚಾಗಿ ಕಂಡುಬರಲಿವೆ. ಅತ್ಯಾಚಾರ ಮತ್ತು ಸುಲಿಗೆಗಳು ಸಮಾಜವನ್ನು ಇನ್ನಿಲ್ಲದಂತೆ ಕಾಡಲಿದೆ ಎಂದು ಕಾಲಜ್ಞಾನಿ ಕೋಡಿಶ್ರೀಗಳು ಆ ಧಾರ್ಮಿಕ ಕಾರ್ಯಕ್ರಮದಲ್ಲಿ ಹೇಳಿದ್ದರು.
ಕೇದಾರನಾಥ ಜಲಪ್ರಳಯ
ಉತ್ತರಾಖಂಡ ಭಾಗದಲ್ಲಿ ನೈಸರ್ಗಿಕ ವಿಕೋಪ ಸಂಭವಿಸಲಿದೆ. ಹಣದ ಮೇಲಿನ ವ್ಯಾಮೋಹ, ಹಣಕ್ಕಾಗಿ ವಾಮದಾರಿ ಹಿಡಿಯುವುದರಿಂದ ಸಾವಿರಾರು ಜನ ಜೀವ ಕಳೆದುಕೊಳ್ಳಲಿದ್ದಾರೆ ಎಂದು ಕೇದಾರನಾಥ ಜಲಪ್ರಳಯದ ದುರಂತ ಸಂಭವಿಸಿದ ನಂತರ ಕೋಡಿ ಶ್ರೀಗಳು, ತಾನು ಅಂದೇ ಭವಿಷ್ಯ ನುಡಿದಿದ್ದೆ ಎಂದು ಹೇಳಿದ್ದೂ ಉಂಟು.
ನೇಪಾಳದ ಬಗ್ಗೆ ಎಲ್ಲೂ ಹೇಳಿಲ್ಲ
ಕೋಡಿಶ್ರೀಗಳು ಏನು ಭವಿಷ್ಯ ನುಡಿದರು ಎಂದು ತಿಳಿದುಕೊಳ್ಳುವ ಕುತೂಹಲಿಗರ ಪಟ್ಟಿ ಸಿಕ್ಕಾಪಟ್ಟೆ ಜಾಸ್ತಿ ಇರುವುದರಿಂದ ನೇಪಾಳ ಪ್ರಕೃತಿ ವಿಕೋಪದ ಬಗ್ಗೆ ಶ್ರೀಗಳು ಭವಿಷ್ಯ ನುಡಿದಿದ್ದರಾ ಎನ್ನುವ ಪ್ರಶ್ನೆ ಬರುವುದು ಸಹಜ. ಆದರೆ ಶ್ರೀಗಳು ವಿಶೇಷವಾಗಿ ನೇಪಾಳದ ಬಗ್ಗೆ ಭವಿಷ್ಯ ನುಡಿದಿದ್ದು ಎಲ್ಲೂ ವರದಿಯಾಗಿಲ್ಲ.
ಮೋದಿ ಸರಕಾರದ ಬಗ್ಗೆ
ನಡೆವ ಹಾದಿ ಮೂರು ಭಾಗವಾದೀತು. ಮುದುಕನ ಕೋಲ ಮೇಲೆ ಕಾಗೆ ಕುಂತೀತು, ಮುತ್ತಿನ ಗಿಣಿ ಮುದುಕಾಗಿ ಮುತ್ತಾದೀತು. ಹಂತಕನ ಸುದ್ದಿ ಹರಡೀತು. ಅಂತರದಲ್ಲಿಯೇ ಹಾರೀತು, ಅಸ್ಥಿರ ಸರಕಾರ ಖಾಯಂ ಆದೀತು ಎಂದು ಒಗಟಿನ ಮೂಲಕ ಕೋಡಿಶ್ರೀಗಳು ಫಲಿತಾಂಶಕ್ಕೆ ಎರಡು ದಿನದ ಮುನ್ನ ಭವಿಷ್ಯ ನುಡಿದಿದ್ದರು. ಆದರೆ ಸದ್ಯಕ್ಕೆ ಮೋದಿ ಸರಕಾರ ಗಟ್ಟಿಮುಟ್ಟಾಗಿದೆ.
ರಾಗ ಬದಲಿಸಿದ್ದ ಶ್ರೀಗಳು
ನನ್ನ ಒಗಟನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ, ನಾನು ಹೇಳಿದ್ದು ನಾನು ಭವಿಷ್ಯ ರೂಪಿಸುವವನೇ ಹೊರತು, ಭವಿಷ್ಯ ಹೇಳುವವನಲ್ಲ. ನರೇಂದ್ರ ಮೋದಿ ಅವರು ಪ್ರಧಾನಿಯಾಗುತ್ತಾರೆ ಎಂದು ತಾವು ಹೇಳಿದ್ದ ಭವಿಷ್ಯ ನೂರಕ್ಕೆ ನೂರರಷ್ಟು ನಿಜವಾಗಿದೆ ಎಂದು ಶ್ರೀಗಳು ಮೋದಿ ಸರಕಾರ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದ ಮರುದಿನ ಹೇಳಿದ್ದರು.
ಗಡಿ ಸಮಸ್ಯೆ ಗಂಭೀರ
ಭಾರತ ಮತ್ತು ಪಾಕ್ ಗಡಿ ಸಮಸ್ಯೆ ಗಂಭೀರ ಸ್ವರೂಪ ಪಡೆಯುತ್ತದೆ ಎನ್ನುವ ಭವಿಷ್ಯ ನಿಜವಾಗಿತ್ತು. ಪಾಕ್ ಪಡೆಗಳು ಗಡಿ ಉಲ್ಲಂಘನೆ, ನಮ್ಮ ಯೋಧರ ಮೇಲಿನ ದಾಳಿಯನ್ನು ತೀವ್ರವಾಗಿ ನಡೆಸಿತ್ತು.