ಕ್ರೈಮ್ ಸ್ಟೋರೀಸ್: ಇಂಡಿಯಾ ಡಿಟೆಕ್ಟೀವ್ಸ್ ಮೊದಲ ಕಂತಿಗೆ ಬ್ರೇಕ್
ಬೆಂಗಳೂರು, ಅಕ್ಟೋಬರ್ 04: ಕರ್ನಾಟಕ ಪೊಲೀಸರ ತನಿಖಾ ಶೈಲಿ ಹಾಗೂ ಇಲ್ಲಿನ ಕ್ರೈಂ ಕತೆಗಳನ್ನು ಹೇಳುವ 'ಕ್ರೈಮ್ ಸ್ಟೋರೀಸ್: ಇಂಡಿಯಾ ಡಿಟೆಕ್ಟೀವ್ಸ್' ವೆಬ್ ಸರಣಿಗೆ ಬ್ರೇಕ್ ಬಿದ್ದಿದೆ. ಈ ಸರಣಿಯ ಮೊದಲ ಕಂತು ಪ್ರಸಾರ ಮಾಡದಂತೆ ಜನಪ್ರಿಯ ಒಟಿಟಿ ವೇದಿಕೆ ನೆಟ್ಫ್ಲಿಕ್ಸ್ಗೆ ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದೆ.
ಪೊಲೀಸ್ ತನಿಖೆ, ಅಪರಾಧಿಗಳ ಹೇಳಿಕೆ, ಘಟನಾ ಸ್ಥಳದ ವಿವರಗಳುಳ್ಳ ಮೊದಲ ಕಂತಿನಲ್ಲಿ ಪ್ರಸಾರವಾಗಿರುವ ಟೆಕ್ಕಿ ಅಮೃತಾ ಕೇಸ್ ಈಗ ವಿವಾದ ಕೇಂದ್ರ ಬಿಂದುವಾಗಿದೆ. ಅರ್ಜಿದಾರರಿಗೆ ಕಿರುಕುಳ ನೀಡುವುದಲ್ಲದೆ ಪೂರ್ವಾಗ್ರಹ ಉಂಟು ಮಾಡುವುದರಿಂದ ವೆಬ್ ಸರಣಿಯ ಮುಂಚೂಣಿ ಕಂತು ಎ ಮರ್ಡರ್ಡ್ ಮದರ್ ಪ್ರಸಾರ ಮಾಡಬಾರದು ಎಂದು ನ್ಯಾ. ಬಿ ಎಂ ಶ್ಯಾಮಪ್ರಸಾದ್ ಆದೇಶಿಸಿದ್ದಾರೆ.
ನಿರ್ಮಲಾ ಚಂದ್ರಶೇಖರ್ ಹತ್ಯೆಯ ಆರೋಪಿಗಳಲ್ಲೊಬ್ಬರಾದ ಬೆಂಗಳೂರಿನ 28 ವರ್ಷದ ಶ್ರೀಧರ್ ರಾವ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಮೃತ ಮಹಿಳೆಯ ಪುತ್ರಿ ಅಮೃತಾ ಚಂದ್ರಶೇಖರ್ ಪ್ರಕರಣದ ಇನ್ನೊಬ್ಬ ಆರೋಪಿ. ತನ್ನ ತಾಯಿಯನ್ನು ಕೊಂದು ಮತ್ತು ಸಹೋದರನನ್ನು ಕೊಲ್ಲಲು ಯತ್ನಿಸಿದ ಅಮೃತ ಅವರು ಅರ್ಜಿದಾರ(ಶ್ರೀಧರ್ ) ಜೊತೆಗೆ ಅಂಡಮಾನ್ ಮತ್ತು ನಿಕೋಬಾರ್ಗೆ ಓಡಿಹೋದಳು, ಅಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾರೆ ಎಂದು ತೋರಿಸಲಾಗಿದೆ.
ಕ್ರಿಮಿನಲ್ ವಿಚಾರಣೆ ಎದುರಿಸುತ್ತಿರುವಾಗ ಅರ್ಜಿದಾರರ ವಿವರಗಳನ್ನು ಬಹಿರಂಗ ಪಡಿಸಿರುವುದು, ವೈಯಕ್ತಿಕ ವಿವರಗಳನ್ನು ಸಾರ್ವಜನಿಕ ವೇದಿಕೆಯಲ್ಲಿ ಪ್ರಸ್ತುತಪಡಿಸಿರುವುದು ಸರಿಯಲ್ಲ ಎಂದು ಅರ್ಜಿಯಲ್ಲಿ ಕೋರಲಾಗಿದೆ. ಈ ವಾದವನ್ನು ಪುರಸ್ಕರಿಸಿದ ಹೈಕೋರ್ಟ್, ಮೊದಲ ಕಂತು ಒಟಿಟಿ ವೇದಿಕೆಯಲ್ಲಿರಬಾರದು ಎಂದು ನೆಟ್ ಫ್ಲಿಕ್ಸ್ ಸಂಸ್ಥೆಗೆ ಸೂಚಿಸಿದೆ. ಕೋರ್ಟ್ ಆದೇಶದಂತೆ ಶ್ರೀಧರ್ ರಾವ್ ಅವರು ಸದರಿ ವೆಬ್ ಸರಣಿಯ ಮೊದಲ ಕಂತು ಪ್ರಸಾರ, ಟೆಲಿ ಕಾಸ್ಟ್, ಸ್ಟ್ರೀಮಿಂಗ್ ವಿರುದ್ಧ ತಡೆ ತಂದಿದ್ದಾರೆ.
ಏನಿದು ಟೆಕ್ಕಿ ಅಮೃತಾ ಕೇಸ್?: ಮಾರತ್ತಹಳ್ಳಿಯಲ್ಲಿರುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿ ಅಮೃತಾ ಚಂದ್ರಶೇಖರ್, 2020ರ ಫೆಬ್ರವರಿ 2ರಂದು ತಾಯಿ ನಿರ್ಮಲಾರನ್ನು ಹತ್ಯೆ ಮಾಡಿ, ಸಹೋದರ ಹರೀಶ್ ಹತ್ಯೆಗೆ ಯತ್ನಿಸಿದ್ದಳು. ಅಮೃತಾ ಪರಾರಿಯಾಗಲು ಆಕೆಯ ಪ್ರಿಯಕರ ಸಹಾಯ ಮಾಡಿದ್ದಾನೆ. ಆತನೇ ಬಂದು ಅಮೃತಾಳನ್ನು ಕರೆದುಕೊಂಡು ಹೋಗಿದ್ದಾನೆ ಎನ್ನಲಾಗಿತ್ತು. ಬೆಂಗಳೂರಿನ ಕೆ. ಆರ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಈ ಘಟನೆ ತೀವ್ರ ಕುತೂಹಲ ಕೆರಳಿಸಿತ್ತು. ಕೆಲ ದಿನಗಳ ಬಳಿಕ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿದ್ದ ಅಮೃತಾ ಹಾಗೂ ಶ್ರೀಧರ್ ರಾವ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.
Recommended Video
ಸುಮಾರು 15 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದೆ, ಸಾಲಗಾರರು ಭಾನುವಾರ ಮನೆಗೆ ಬರುತ್ತಾರೆ. ಆದ್ದರಿಂದ, ಅವಮಾನವಾಗಿತ್ತು. ನಾನು ಆತ್ಮಹತ್ಯೆ ಮಾಡಿಕೊಂಡರೆ, ತಾಯಿ ಹಾಗೂ ಸೋದರನಿಗೆ ನೋವು, ಸಾಲಗಾರರ ಕಾಟ ತಪ್ಪುವುದಿಲ್ಲ, ನನಗೆ ಬೇರೆ ದಾರಿ ಕಾಣದೆ ಇಬ್ಬರನ್ನು ಹತ್ಯೆ ಮಾಡಲು ಯತ್ನಿಸಿದೆ, ತಾಯಿ ಮೃತಪಟ್ಟರು ಎಂದು ಅಮೃತಾ ಪೊಲೀಸರ ಮುಂದೆ ಹೇಳಿರುವ ದೃಶ್ಯ ವೆಬ್ ಸರಣಿಯಲ್ಲಿ ಬಂದಿದೆ. ಶ್ರೀಧರ್ ರಾವ್ ಎಂಬಾತನಿಗೆ ದುಡ್ಡು ನೀಡಿರುವುದು ಏಕೆ? ಎಂಬುದು ಪ್ರಶ್ನೆಯಾಗಿ ಉಳಿದಿದ್ದು, ಇಬ್ಬರ ನಡುವೆ ಉತ್ತಮ ಗೆಳೆತನವಿತ್ತು. ಕೊಲೆ ಬಗ್ಗೆ ನನಗೆ ಏನು ತಿಳಿದಿರಲಿಲ್ಲ, ಅಂಡಮಾನ್ ಬಳಿ ಪೊಲೀಸರ ಕೈಗೆ ಸಿಕ್ಕಿಬಿದ್ದಾಗಲೇ ನನಗೆ ತಿಳಿದಿದ್ದು ಎಂದು ಶ್ರೀಧರ್ ತನ್ನ ಹೇಳಿಕೆಯನ್ನು ದಾಖಲಿಸುವ ದೃಶ್ಯ ಕೂಡಾ ವೆಬ್ ಸರಣಿಯಲ್ಲಿದೆ.