ಮಾಲ್ಗುಡಿ ಡೇಸ್ ಕನ್ನಡದಲ್ಲಿ ಡಬ್ ಆಗ್ಬೇಕು ಏಕೆ? ಏನಿದು ಅಭಿಯಾನ?
#MalgudiDaysInKannada ಹ್ಯಾಶ್ ಟ್ಯಾಗ್ ಬಳಸಿ ಕನ್ನಡ ಹಾಗೂ ಕನ್ನಡ ಸಿನಿಮಾ, ಸಿರಿಯಲ್ ಪ್ರೇಮಿಗಳು, ಸಮಾನ ಮನಸ್ಕರು ನಡೆಸಿದ ಟ್ವಿಟ್ಟರ್ ಅಭಿಯಾನ ಯಶಸ್ವಿಯಾಗಿದೆ. ಟ್ವಿಟ್ಟರ್ ನಲ್ಲಿ ಈ ರೀತಿ ಅಭಿಯಾನ ಮಾಡಿದರೆ, ಕನ್ನಡಕ್ಕೆ ಈ ಸೀರಿಯಲ್ ತರಲು ಸಾಧ್ಯವೇ? ಶಂಕರ್ ನಾಗ್ ನಿರ್ದೇಶನದ ಆರ್ ಕೆ ನಾರಾಯಣ್ ಅವರ ಮಹೋನ್ನತ ಕೃತಿಯನ್ನು ಕನ್ನಡದಲ್ಲಿ ಇಂದಿನ ಪೀಳಿಗೆ ನೋಡಲು ಸಾಧ್ಯವೇ? ಎಂಬ ಪ್ರಶ್ನೆಗಳು ಎದ್ದಿತ್ತು. ಇದಕ್ಕೆ ಉತ್ತರ ರೂಪದಲ್ಲಿ ಲೇಖನ ಇಲ್ಲಿದೆ.
ಎಂಬತ್ತರ ದಶಕದಲ್ಲಿ ಆಗಿನ್ನು ದೇಶದ ಇತರ ಭಾಷೆಗಳಲ್ಲಿ ದೂರದರ್ಶನ ತನ್ನ ಕಾರ್ಯಕ್ರಮ ಶುರು ಮಾಡಿರಲಿಲ್ಲ. ದೂರದರ್ಶನದ ಭಾಷೆ ಅಲ್ಪಸ್ವಲ್ಪ ಇಂಗ್ಲೀಷ್ ಬಿಟ್ಟರೆ ಹಿಂದಿ ಮಾತ್ರ ಆಗಿತ್ತು. 1986ರಲ್ಲಿ ದೂರದರ್ಶನ, ದೇಶದ ಬೇರೆ ಬೇರೆ ಖಾಸಗಿ ನಿರ್ಮಾಪಕರಿಗೆ, ನಿರ್ದೇಶಕರಿಗೆ ಸೀರಿಯಲ್ ಮಾಡಿ ತರಲು ಅವಕಾಶ ಕೊಟ್ಟಾಗ, ಕನ್ನಡದ ಕನಸಿನ ಹುಡುಗ ಶಂಕರ್ ನಾಗರಕಟ್ಟೆ ಯವರ ಕಸೂತಿಯಿಂದ ಹುಟ್ಟಿದ್ದೇ ಮಾಲ್ಗುಡಿ ಡೇಸ್!
'ಮಾಲ್ಗುಡಿ ಡೇಸ್' ಕನ್ನಡಕ್ಕೆ ಬರುವುದು ಬಿಡುವುದು ಕನ್ನಡ ವಾಹಿನಿಗಳ ಕೈಯಲ್ಲಿದೆ.!
ಮುಂಬಯಿಯ ಒಂದಿಷ್ಟು ರಂಗಕಲಾವಿದರು ಬಿಟ್ಟರೆ, ಅದಾಗಲೇ 60ಕ್ಕೂ ಹೆಚ್ಚು ಚಿತ್ರ, ನಾಟಕ ಮಾಡಿದ್ದರಿಂದ ಶಂಕರ್ ರವರ ಸಂಪೂರ್ಣ ನಂಟು ಕರ್ನಾಟಕ, ಬೆಂಗಳೂರು, ಕನ್ನಡ ಚಿತ್ರರಂಗವೇ ಆಗಿ ಹೋಗಿತ್ತು.
ಹಾಗಾಗಿ ಶೂಟಿಂಗ್ ಗಾಗಿ ಬೆಂಗಳೂರಿನಿಂದ 350 ಕಿ.ಮೀ ದೂರದಲ್ಲಿರುವ ಆಗುಂಬೆಗೆ ಹೋಗಿದ್ದು ಹೊರತುಪಡಿಸಿ ನಟರಾಗಲಿ, ತಂತ್ರಜ್ಞರು, ಹಿನ್ನೆಲೆ ಸಂಗೀತ, ರೇಖಾಚಿತ್ರಗಳಿಗಾಗಿ ಶಂಕರ್ ಬೆಂಗಳೂರು ಬಿಟ್ಟು ಆಚೆ ಹೋಗಲಿಲ್ಲ. ಕಡಿಮೆ ಸಮಯದಲ್ಲಿ ಹೆಚ್ಚು ಮಾಡಬೇಕೆಂಬ ತುಡಿತವೋ, ಅಥವಾ ನಮ್ಮಲ್ಲೇ ಎಲ್ಲವೂ ಇವೆ, ನಾವೇಕೆ ಬೇರೆಯವರ ಮೊರೆಹೋಗಬೇಕು ಎಂಬ ಆತ್ಮವಿಶ್ವಾಸವೋ.!
ಅಪರೂಪದ ಚಿತ್ರಕರ್ಮಿ ಮಿ. ಪರ್ಫೆಕ್ಟ್ ಶಂಕರ್
ಹಾಗಾಗಿ ಇಂದು ಕೂಡ ಮಾಲ್ಗುಡಿ ಡೇಸ್ ನೀವು ನೋಡಿದಾಗ ನಮ್ಮ ಪಶ್ಚಿಮಘಟ್ಟದಲ್ಲಿ, ಕನ್ನಡಿಗರೇ ಆಡಿ ತೋರಿಸಿದ ಹಿಂದಿ ಅವತರಣಿಕೆಯ ದೃಶ್ಯಕಾವ್ಯ ಎನಿಸುವಷ್ಟು ಕನ್ನಡಕ್ಕೆ ಆಪ್ತ ಎಂದನ್ನಿಸದೆ ಇರದು. ಆಸುಪಾಸಿನ, ಕಂಡುಕೇಳಿದಂತಹ ಕತೆಗಳು, ನವಿರಾದ ಹಾಸ್ಯ, ವಿಡಂಬನೆ, ಅಚ್ಚುಕಟ್ಟಾದ ನಿರ್ದೇಶನ, ಸ್ವಾಮಿ, ಇಡಿ ದೇಶಕ್ಕಿದ್ದ ಒಂದೇ ಚಾನೆಲ್..
ಇವೆಲ್ಲವೂಗಳಿಂದ ಇಂದಿಗೂ ಭಾರತದ ಟಿವಿ ವಾಹಿನಿಯಲ್ಲಿ ಬಂದ ಅತೀ ಯಶಸ್ಸಿನ ಟೆಲಿಸರಣಿಗಳಲ್ಲಿ ಮಾಲ್ಗುಡಿ ಡೇಸ್ ಮುಂಚೂಣಿಯಲ್ಲಿ ಬರುತ್ತದೆ. ಅದೇ ಕಾರಣಕ್ಕಾಗಿ ಭಾರತದ 6 ಸೇರಿದಂತೆ ಪ್ರಪಂಚದ ಇತರ 5ಕ್ಕೂ ಭಾಷೆಗಳಲ್ಲಿ ಡಬ್ ಆಗಿ ಮಕ್ಕಳಿಗೆ ಖುಷಿಕೊಡುವ, ದೊಡ್ಡವರಿಗೆ ನೀತಿಭೋಧನೆಯ ಪಾಠ ಎನಿಸುವ, 25 ನಿಮಿಷದ ಚಿಕ್ಕ-ಚೊಕ್ಕ ಕತೆಗಳಾಗಿ ಎಲ್ಲ ಕಾಲಕ್ಕೂ ಸೈ ಎನಿಸಿಕೊಂಡಿದೆ.
ದುರಂತವೋ, ವಿಪರ್ಯಾಸವೋ ದೀಪದ ಕೆಳಗೆ ಕತ್ತಲೆ ಎಂಬಂತೆ, ಕನ್ನಡದ ಮಕ್ಕಳಿಗೆ ಇದೊಂದು ತನ್ನ ಮನೆಯವರೇ, ನಮ್ಮನ್ನು ಬಿಟ್ಟು ನೆರೆಹೊರೆಯವರ ಮನೆಗೆ ಹೋಗಿ ಕುಣಿದು ನಕ್ಕಿಸುವಾಗ, ಕಿಟಕಿಯಲ್ಲಿ ಅಷ್ಟೋ, ಇಷ್ಟೋ ಕಂಡು ತೃಪ್ತಿಪಡಬೇಕಾದ ಸ್ಥಿತಿ ಅಂದೂ ಇತ್ತು..ಇಂದೂ ಇದೆ!
'ಶಂಕರಣ್ಣ'ನ ಬಗ್ಗೆ ನೀವು ಕೇಳರಿಯದ ಸಂಗತಿಗಳು
ತಮಿಳು, ತೆಲುಗು, ಒಡಿಶಾದಲ್ಲಿ ಬಂದಾಗ ಕನ್ನಡದಲ್ಲೇಕೆ ಬರಲಿಲ್ಲ ಎಂಬುದಕ್ಕಿಂತ ಇವತ್ತೂ ಕೂಡ ಯಾಕೆ ಬರುತ್ತಿಲ್ಲ? ಯಾರು ತಡೆ ಹಿಡಿಯುತ್ತಿದ್ದಾರೆ? ಈ ತೆರನಾದ ಭಾಷೆಯ ಹರವನ್ನೇ ಕುಂಠಿಸುವ ಕೆಲಸ ಯಾರ ಸ್ವಾರ್ಥಕ್ಕಾಗಿ ನಡೆಯುತ್ತಿದೆ? ಎಂದು ಪ್ರಶ್ನಿಸಿ ಮಾಲ್ಗುಡಿ ಡೇಸ್ ಕನ್ನಡದಲ್ಲಿ ಬರುವಂತೆ ಮಾಡುವುದು ಶಂಕರಣ್ಣನ ಕತೆ ಕೇಳಿ ಕಣ್ಣು ಮಂಜು ಮಾಡಿಕೊಳ್ಳುವ ನಮ್ಮೆಲ್ಲರ ಮೇಲಿದೆ.
ಆರ್ ಕೆ ನಾರಾಯಣ್ ಮನೆ ಇನ್ಮುಂದೆ ನಮ್ಮೆಲ್ಲರ ಆಸ್ತಿ
ನನ್ನ ಹೆಸರು, ಹಣ ಎಲ್ಲಾ ಕನ್ನಡಿಗರೇ ಕೊಟ್ಟಿದ್ದು, ಅವರಿಗಾಗಿ ಎಷ್ಟು ಮಾಡಿದರೂ ಕಮ್ಮಿ ಎಂದು ಸ್ವಂತ ಹಣದಲ್ಲಿ ಪ್ಯಾರಿಸ್,ಲಂಡನ್ ತಿರುಗಿ ಮೇಟ್ರೋ ಮಾರ್ಗದ ಬಗ್ಗೆ ಅರಿತು, ಬೆಂಗಳೂರಿನ ಜಿಯೊಲಾಜಿಕಲ್ ನೀಲನಕ್ಷೆ ಮಾಡಿಸಿದ್ದ, ಕರ್ನಾಟಕದ ನಗರಗಳಲ್ಲಿ ಹೆಲಿಪ್ಯಾಡ್ ಮಾಡಿ, ಎಮರ್ಜೆನ್ಸಿ ಮೆಡಿಕಲ್ ಟೂರಿಸಂ ಮಾಡಬೇಕು ಎಂದು ಹಾತೊರೆದಿದ್ದ.
ತನ್ನ ಮಗಳು ಹೋಗುತ್ತಿದ್ದ ಸಿಂಗಸಂದ್ರದ ಸರ್ಕಾರಿ ಶಾಲೆಯಲ್ಲಿ ಸ್ವಂತ ದುಡ್ಡಿನಿಂದ ಬೆಂಚು ಕೊಡಿಸಿ, ನಾನು ರಾಜಕೀಯಕ್ಕೆ ಬಂದು ಕರ್ನಾಟಕದ ಎಲ್ಲಾ ಮಕ್ಕಳನ್ನು ನೆಲದ ಮೇಲಿಂದ ಎಬ್ಬಿಸಿ ಬೆಂಚ್ ಮೇಲೆ ಕೂರಿಸಬೇಕೆಂಬ ಮಹದಾಸೆ ಹೊಂದಿದ್ದ ಆ ಪಾದರಸದ ವ್ಯಕ್ತಿ, ಇಂದು ಅದೇ ನಾಡಿನ ಮಕ್ಕಳಿಂದ ಕನ್ನಡದಲ್ಲಿ ಡಬ್ ಆಗಿ ಸಿಗಬೇಕಾದ ಸ್ಪೈಡರ್ ಮಾನ್, ಡಿಸ್ಕವರಿ, ನ್ಯಾಷನಲ್ ಜಿಯೊಗ್ರಫಿಕ್ ಕಾರ್ಯಕ್ರಮಗಳನ್ನು ತಮ್ಮ ರಿಮೇಕ್ ರೈಟ್ಸ್ ಗಾಗಿ ಕಸಿಯುತ್ತಿರುವವರನ್ನು ಯಾವ ರೀತಿ ನೋಡುತ್ತಾರೋ ಗೊತ್ತಿಲ್ಲ..
ಆದರೆ ನ್ಯಾಯಲಯವೂ ಅವರನ್ನು ತರಾಟೆಗೆ ತೆಗೆದುಕೊಂಡ ಮೇಲೂ ನಾವು ಪ್ರಶ್ನಿಸದೇ ಹೋದರೆ, ನಮ್ಮನ್ನು ಕ್ಷಮಿಸಲಾರರು! ಮಾಲ್ಗುಡಿ ಡೇಸ್ ಮಾತ್ರವಲ್ಲ ಕನ್ನಡದ ಮಕ್ಕಳಿಗೆ, ಕನ್ನಡಿಗರಿಗೆ ಎಲ್ಲವೂ ಸಿಗಲಿ. ಎಲ್ಲವೂ ಬರಲಿ.