ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ: ಹೈಕೋರ್ಟ್ ಪಿಐಎಲ್ ವಜಾಗೊಳಿಸಿದ್ದೇಕೆ?
ಬೆಂಗಳೂರು ಏ.1: 'ನಡೆದಾಡುವ ದೇವರು' ಎಂದೇ ಖ್ಯಾತಿ ಗಳಿಸಿದ್ದ ಕೋಟ್ಯಂತರ ಮಕ್ಕಳಿಗೆ ಅಕ್ಷರ ಹಾಗೂ ಅನ್ನ ದಾಸೋಹಕ್ಕೆ ಕಾರಣವಾದ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತರತ್ನ ಕೋರಿ ಸಲ್ಲಿಸಿದ್ದ ಪಿಐಎಲ್ ಅನ್ನು ಹೈಕೋರ್ಟ್ ವಜಾಗೊಳಿಸಿದೆ.
ರೆಹಾನ್ ಖಾನ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾ. ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ವಿಭಾಗೀಯಪೀಠ ವಿಚಾರಣೆ ನಡೆಸಿತು.
Breaking: ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ನೀಡುವಂತೆ ನಿರ್ದೇಶನ ನೀಡಲು ಸಾಧ್ಯವಿಲ್ಲ; ಕರ್ನಾಟಕ HC
ವಾದ ಆಲಿಸಿದ ಬಳಿಕ ನ್ಯಾಯಪೀಠ, ಹೈಕೋರ್ಟ್ ಭಾರತರತ್ನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಲು ಸಾಧ್ಯವಿಲ್ಲ. ದೇಶದ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿಗಳಲ್ಲಿ ಒಂದಾದ ಭಾರತ ರತ್ನವನ್ನು ಯಾವ ವ್ಯಕ್ತಿಗೆ ಪ್ರಧಾನ ಮಾಡಬೇಕು ಎನ್ನುವ ಬಗ್ಗೆ ರಾಷ್ಟ್ರಪತಿ ಗಳು ಸರ್ಕಾರದೊಂದಿಗೆ ಚರ್ಚಿಸಿ ನಿರ್ಧರಿಸುತ್ತಾರೆ. ನ್ಯಾಯಾಲಯ ಇಂತಹವರಿಗೆ ಪ್ರಶಸ್ತಿ ನೀಡುವಂತೆ ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯಪಟ್ಟು ಪಿಐಎಲ್ ವಜಾಗೊಳಿಸಿದೆ.
ಅರ್ಜಿದಾರರ ಪರ ವಾದಿಸಿದ ವಕೀಲ ಮೊಹಮ್ಮದ್ ತಾಹೀರ್, ಗ್ರಾಮೀಣ ಪ್ರದೇಶದಲ್ಲಿ ನೂರಾರು ಶಾಲೆಗಳನ್ನು ತೆರದು ಜ್ಞಾನ ದಾಸೋಹ ನಡೆಸುವುದರ ಜೊತೆಗೆ ಕೋಟ್ಯಂತರ ಮಕ್ಕಳಿಗೆ ಅನ್ನ ದಾಸೋಹ ಮಾಡುವ ಮೂಲಕ ಸಿದ್ಧಗಂಗಾ ಶ್ರೀಗಳು ಸ್ವಾರ್ಥ ರಹಿತ ಸೇವೆ ಮಾಡಿದ್ದಾರೆ. ಅವರಿಗೆ ಭಾರತ ರತ್ನ ನೀಡಲು ರಾಷ್ಟ್ರಪತಿಗೆ ಶಿಫಾರಸು ಮಾಡುವಂತೆ ಅರ್ಜಿದಾರರು 2021ರ ಅ.12ರಂದು ಪ್ರಧಾನಮಂತ್ರಿಗಳ ಕಚೇರಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ಅದನ್ನು ಇನ್ನೂ ಪರಿಗಣಿಸಿಲ್ಲ ಎಂದರು.
ಹಾಗಾಗಿ ನ್ಯಾಯಾಲಯ ಪ್ರಧಾನಮಂತ್ರಿ ಅವರಿಗೆ ಪ್ರತಿಷ್ಠಿತ ಭಾರತ ರತ್ನ ಗೌರವಕ್ಕೆ ಸಿದ್ಧಗಂಗಾ ಶ್ರೀಗಳ ಹೆಸರನ್ನು ಪರಿಗಣಿಸುವಂತೆ ಸೂಚನೆ ನೀಡಬೇಕು ಎಂದು ನ್ಯಾಯಪೀಠವನ್ನು ಕೋರಿದರು.
ನಿರ್ದೇಶನ ನೀಡಲಾಗದು: ಆದರೆ ವಾದವನ್ನು ಆಲಿಸಿದ ನ್ಯಾಯಪೀಠ, ಕೋರ್ಟ್ ಆ ರೀತಿ ಪ್ರಶಸ್ತಿಯನ್ನು ಇಂತಹುದೇ ವ್ಯಕ್ತಿಗೆ ನೀಡಿ ಎಂದು ನಿರ್ದೇಶನ ನೀಡಲಾಗದು. ಇದು ಸರ್ಕಾರಕ್ಕೆ ಬಿಟ್ಟ ವಿಚಾರ, ಕಲೆ, ವಿಜ್ಞಾನ, ವೈದ್ಯಕೀಯ ಸೇರಿದಂತೆ ಸಮಾಜದಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಗುರುತಿಸಿ ಸರ್ಕಾರವೇ ಅರ್ಹರನ್ನು ಪ್ರಶಸ್ತಿಗೆ ಆಯ್ಕೆ ಮಾಡುತ್ತದೆ. ಇದರಲ್ಲಿ ನ್ಯಾಯಾಲಯಗಳು ಯಾವುದೇ ರೀತಿಯ ನಿರ್ದೇಶನಗಳನ್ನು ನೀಡಲಾಗದು ಎಂದು ಹೇಳಿತು.
ನೇರವಾಗಿ ಮನವಿ ಸಲ್ಲಿಸಿ: ವಿಚಾರಣೆ ವೇಳೆ ಸಿಜೆ, ಮಾಧ್ಯಮಗಳಲ್ಲಿ ಓದಿದೆ, ಗೃಹ ಸಚಿವರು ಬೆಂಗಳೂರಿನಲ್ಲಿಯೇ ಇದ್ದಾರೆ, ನ್ಯಾಯಾಲಯಕ್ಕೆ ಬರುವ ಬದಲು ಅರ್ಜಿದಾರರು ನೇರ ಅವರಿಗೆ ಶ್ರೀಗಳಿಗೆ ಭಾರತ ರತ್ನ ಕೊಡಿಸುವಂತೆ ಮನವಿ ಸಲ್ಲಿಸಬಹುದಿತ್ತಲ್ಲಾ ಎಂದು ವಕೀಲರನ್ನು ಕೇಳಿದರು.
ಅದಕ್ಕೆ ಉತ್ತರಿಸಿದ ವಕೀಲರು, ಗೃಹ ಸಚಿವರಿಗೆ ಯಾವುದೇ ಅಧಿಕಾರವಿಲ್ಲ, ಕೇವಲ ಪ್ರಧಾನಮಂತ್ರಿ ಮಾತ್ರ ಭಾರತ ರತ್ನ ನೀಡಲು ರಾಷ್ಟ್ರಪತಿಗೆ ಹೆಸರು ಶಿಫಾರಸು ಮಾಡಬಹುದು. ಆ ಬಗ್ಗೆ ಮಾರ್ಗಸೂಚಿ ಅತ್ಯಂತ ಸ್ಪಷ್ಟವಾಗಿದೆ ಎಂದರು.
ಹಲವು ವರ್ಷಗಳ ಬೇಡಿಕೆ: ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಬೇಕೆಂಬ ಬೇಡಿಕೆ ಹಲವು ವರ್ಷಗಳಿಂದಲೂ ಇದೆ. ಭಕ್ತರು ಹಾಗೂ ಮಠಾಧೀಶರು ಭಾರತ ರತ್ನಕ್ಕಾಗಿ ಹಕ್ಕೊತ್ತಾಯ ಮಂಡಿಸುತ್ತಲೇ ಇದ್ದಾರೆ. ಆದರೆ ಕೇಂದ್ರ ಸರ್ಕಾರ ಆ ಕುರಿತು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.