ಹಿಂಬಾಗಿಲು ಮೂಲಕ ವಿಧಾನಸೌಧ ಪ್ರವೇಶಿಸಲು ಒಪ್ಪಿದರೇ ಕರ್ನಾಟಕ ಚುನಾವಣಾ ಚಾಣಕ್ಯ
ಬೆಂಗಳೂರು, ಮೇ. 17: "ನಾನು ಜನರಿಂದ ಗೆದ್ದು ಬಂದೇ ವಿಧಾನ ಸೌಧ ಪ್ರವೇಶ ಮಾಡ್ತೀನಿ" ಎಂದು ಉಪ ಚುನಾವಣೆ ಕಣದಲ್ಲಿ ಸ್ಪರ್ಧಿಸಲು ಹಿಂದೇಟು ಹಾಕಿದ್ದ ಕರ್ನಾಟಕ ಬಿಜೆಪಿ ಚುನಾವಣಾ ಚಾಣಕ್ಯ ವಿಜಯೇಂದ್ರ ಈ ಭಾರಿ ವಿಧಾನ ಪರಿಷತ್ ಸದಸ್ಯನಾಗಲು ತೀರ್ಮಾನಿಸಿದ್ದು ಯಾಕೆ ? ಹೀಗೊಂದು ಚರ್ಚೆ ಇದೀಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿದೆ.
ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಆದ ಬಳಿಕ ಸೂಪರ್ ಸಿಎಂ ಎಂದೇ ವಿಜಯೇಂದ್ರ ಗುರುತಿಸಿಕೊಂಡಿದ್ದರು. ಸರ್ಕಾರದಲ್ಲಿ ವಿಜಯೇಂದ್ರ ಹಸ್ತಕ್ಷೇಪ ಜಾಸ್ತಿಯಾಗಿದೆ ಎಂದು ಹೈಕಮಾಂಡ್ ಗೆ ದೂರುಗಳು ಸಲ್ಲಿಕೆಯಾಗಿದ್ದವು. ಕಾಲಾಂತರದಲ್ಲಿ ಯಡಿಯೂರಪ್ಪ ಅವರು ಸಿಎಂ ಖುರ್ಚಿಯಿಂದ ಇಳಿಯುವ ವೇಳೆಗೆ ವಿಜಯೇಂದ್ರ ಬಿಜೆಪಿ ರಾಜ್ಯ ಉಪಾಧ್ಯಕ್ಷರನ್ನಾಗಿ ಪಕ್ಷ ಆಯ್ಕೆ ಮಾಡಿತ್ತು. ಈ ಮೂಲಕ ಬಿಎಸ್ ವೈ ಅವರ ಅಸಮಾಧಾನ ಶಮನ ಮಾಡಿತ್ತು.
ಡಿಕೆಶಿಗೆ ಕೇಕ್ ತಿನ್ನಿಸುವಷ್ಟು ಸೌಜನ್ಯ ಪ್ರಿಯಾಂಕಾ ಗಾಂಧಿಗೆ ಇಲ್ಲವೇ? ಕಾಲೆಳೆದ ಬಿಜೆಪಿ
ವಿಜಯೇಂದ್ರ ಬಿಜೆಪಿ ಉಪಾಧ್ಯಕ್ಷರಾದ ಬಳಿಕ ಶಿರಾ ವಿಧಾನ ಸಭಾ ಕ್ಷೇತ್ರದ ಉಪ ಚುಣಾವಣೆ ಉಸ್ತುವಾರಿಯನ್ನು ವಹಿಸಲಾಗಿತ್ತು. ಡಾ.ರಾಜೇಶ್ ಗೌಡ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿತ್ತು. ದಶಕಗಳಿಂದ ಜೆಡಿಎಸ್ ಪಕ್ಷ ಜಯ ಗಳಿಸುತ್ತಿದ್ದ ಶಿರಾ ವಿಧಾನ ಸಭಾ ಕ್ಷೇತ್ರದಲ್ಲಿ ರಾಜಕೀಯ ಗಂಧ ಗಾಳಿ ಗೊತ್ತಿಲ್ಲದ ಡಾ. ರಾಜೇಶ್ ಗೌಡ ಅವರನ್ನು ಕಣಕ್ಕೆ ಇಳಿಸಿ ಪಕ್ಷಕ್ಕೆ ಜಯ ತಂದು ಕೊಡುವಲ್ಲಿ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಪ್ರಮುಖ ಪಾತ್ರ ವಹಿಸಿದ್ದರು. ಕರ್ನಾಟಕದಲ್ಲಿ ಚುನಾವಣಾ ಚಾಣಕ್ಯ ವಿಜಯೇಂದ್ರ ಅಂತಲೇ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು.
ಈ ವೇಳೆ ವಿಜಯೇಂದ್ರ ಅವರೇ ಶಿರಾದಿಂದ ಕಣಕ್ಕೆ ಇಳಿದು ರಾಜಕೀಯ ಪ್ರವೇಶ ಮಾಡುತ್ತಾರಾ ಎಂಬ ವಿಚಾರ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿತ್ತು. ಬಸವರಾಜ ಬೊಮ್ಮಾಯಿ ಅವರು ನೂತನ ಸಿಎಂ ಆದ ವೇಳೆ ಸಚಿವರಾಗಿ ವಿಜಯೇಂದ್ರ ಪ್ರಮಾಣ ವಚನ ಸ್ವೀಕರಿಸುತ್ತಾರೆ. ವಿಜಯೇಂದ್ರ ಅವರನ್ನು ವಿಧಾನ ಪರಿಷತ್ ಗೆ ಅಯ್ಕೆ ಮಾಡಲಾಗುತ್ತದೆ ಎಂದು ಬಿಜೆಪಿ ಪಾಳಯದಲ್ಲಿ ಗುಸು ಗುಸು ಶುರುವಾಗಿತ್ತು. ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದ ವಿಜಯೇಂದ್ರ ನಾನು ಜನರಿಂದ ಆಯ್ಕೆಯಾಗುವ ಮೂಲಕ ಜನ ನಾಯಕನಾಗುತ್ತೇನೆ ವಿನಃ, ವಿಧಾನ ಪರಿಷತ್ ನಿಂದ ಆಯ್ಕೆಯಾಗಿ ಹಿಂಬಾಗಿಲ ಮೂಲಕ ಪ್ರವೇಶ ಪಡೆಯುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದರು.
ಜೆಡಿಎಸ್ ಒಡನಾಟ ಅಂತ್ಯ; ಬಸವರಾಜ ಹೊರಟ್ಟಿ ಮುಂದಿನ ದಾರಿ?
ಸಿಎಂ ಉದಾಸಿ ಹಾಗೂ ಎಂ.ಸಿ.ಮನುಗುಳಿ ಅಕಾಲಿಕ ನಿಧನದ ಬಳಿಕ ತೆರವಾದ ಹಾನಗಲ್ ಹಾಗೂ ಸಿಂದಗಿ ವಿಧಾನ ಸಭೆ ಉಪ ಚುನಾವಣೆ ಉಸ್ತುವಾರಿ ಪಟ್ಟಿಯಲ್ಲಿ ಬಿಜೆಪಿ ಹೈಕಮಾಂಡ್ ವಿಜಯೇಂದ್ರ ಅವರ ಹೆಸರನ್ನು ಕೈ ಬಿಟ್ಟಿತ್ತು. ಪರಿಷ್ಕೃತ ಪಟ್ಟಿಯಲ್ಲಿ ಹಾನಗಲ್ ಉಸ್ತುವಾರಿಯನ್ನು 13 ಮಂದಿಗೆ ನೀಡಲಾಗಿತ್ತು. ಅದರಲ್ಲಿ ವಿಜಯೇಂದ್ರ ಅವರ ಹೆಸರನ್ನು ಸೇರ್ಪಡೆ ಮಾಡಲಾಗಿತ್ತು. ಆದ್ರೆ, ಕಾಂಗ್ರೆಸ್ ಅಭ್ಯರ್ಥಿ ಜಯ ಗಳಿಸಿ ಬಿಜೆಪಿ ಸೋಲನುಭವಿಸಿತ್ತು. ವಿಜಯೇಂದ್ರ ಅವರಿಗೆ ಮೊದಲ ಆದ್ಯತೆ ನೀಡಲಿಲ್ಲ ಎಂಬ ಕಾರಣಕ್ಕೆ ಹೈಕಮಾಂಡ್ ನಿರ್ಧಾರಕ್ಕೆ ಒತ್ತು ನೀಡದೇ ಮುನಿಸಿಕೊಂಡಿದ್ದರು. ಹಾನಗಲ್ ಉಪ ಚುನಾವಣೆ ಪ್ರಚಾರಕ್ಕೂ ಹೆಚ್ಚು ಪ್ರಾಮುಖ್ಯತೆ ನೀಡಿರಲಿಲ್ಲ. ಹೈಕಮಾಂಡ್ ಮೇಲೆ ಮುನಿಸಿಕೊಂಡಿದ್ದರು.
ವರ್ಚಸ್ಸು ಕಡಿಮೆ: ಬಸವರಾಜ ಬೊಮ್ಮಾಯಿ ಸಿಎಂ ಆದ ಬಳಿಕ ವಿಜಯೇಂದ್ರ ಅವರು ವಿಧಾನಸೌಧದಿಂದ ಸಾಕಷ್ಟು ಅಂತರ ಕಾಯ್ದುಕೊಂಡಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕುವುದಾಗಿ ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ. ಈಗಗಲೇ ಯಡಿಯೂರಪ್ಪ ಅವರ ಪುತ್ರ ರಾಘವೇಂದ್ರ ಲೋಕಸಭಾ ಸದಸ್ಯರಾಗಿದ್ದಾರೆ. ಅವರ ಇನ್ನೊಬ್ಬ ಪುತ್ರನಿಗೂ ವಿಧಾನಸಭೆ ಟಿಕೆಟ್ ನೀಡುವುದು ಕುಟುಂಬ ರಾಜಕಾರಣಕ್ಕೆ ಆದ್ಯತೆ ನೀಡಿದಂತಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಮುಂದಿನ ಚುನಾವಣೆಯ ವೇಳೆ ಬಿಜೆಪಿ ಹೈಕಮಾಂಡ್ ಯಾವ ತೀರ್ಮಾನ ತೆಗೆದುಕೊಳ್ಳುತ್ತೋ ಗೊತ್ತಿಲ್ಲ. ಈ ಎಲ್ಲಾ ಬೆಳವಣಿಗೆ ಸೂಕ್ಷ್ಮವಾಗಿ ಗಮನಿಸಿದ ಯಡಿಯೂರಪ್ಪ ಅವರು ವಿಜಯೇಂದ್ರ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡುವಂತೆ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಪ್ರಸ್ತಾಪ ಇಟ್ಟಿದ್ದರು. ವಿಜಯೇಂದ್ರ ಅವರ ಹೆಸರು ಹೈಕಮಾಂಡ್ ಕೈ ತಲುಪಿದೆ. ಹೈಕಮಾಂಡ್ ಹಸಿರು ನಿಶಾನೆ ತೋರಿದ್ರೆ ವಿಜಯೇಂದ್ರ ಹಿಂಬಾಗಿಲು ಮೂಲಕ ವಿಧಾನಸೌಧ ಪ್ರವೇಶಿಸುವುದು ಖಾಯಂ. ಈ ಮೂಲಕ ಸಚಿವರಾದರೂ ಅಚ್ಚರಿಯೇನಿಲ್ಲ.
ನಾನು ಜನರಿಂದಲೇ ಆಯ್ಕೆಯಾಗಿ ಜನ ನಾಯಕನಾಗುತ್ತೇನೆ ಎಂದಿದ್ದ ವಿಜಯೇಂದ್ರ ಅವರು ಬಿಜೆಪಿ ಶಾಸಕರ ಕೋಟಾದಡಿ ವಿಧಾನ ಪರಿಷತ್ಗೆ ಅಯ್ಕೆ ಯಾಗಲು ಸಮ್ಮತಿಸಿದ್ರೆ. ಪಕ್ಷದಲ್ಲಿ ಬದಲಾದ ಪರಿಸ್ಥಿತಿ ಅವಲೋಕಿಸಿ ತನ್ನ ರಾಜಕೀಯ ಭವಿಷ್ಯ ಕಟ್ಟಿಕೊಳ್ಳಲು ಪರಿಷತ್ಗೆ ಆಯ್ಕೆಯಾಗುತ್ತಾರಾ ಕಾದು ನೋಡಬೇಕು.
(ಒನ್ಇಂಡಿಯಾ ಸುದ್ದಿ)