619 ಕೋಟಿ ಒಡೆಯ ಡಿಕೆಶಿ; 8 ಕೋಟಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದು ಯಾಕೆ?
Recommended Video
ಬೆಂಗಳೂರು, ಸೆಪ್ಟೆಂಬರ್ 04 : ರಿಯಲ್ ಎಸ್ಟೇಟ್, ಸಾರಿಗೆ ಕ್ಷೇತ್ರ, ಕಲ್ಲು ಗಣಿಗಾರಿಕೆ, ಶಿಕ್ಷಣ ಹೀಗೆ ವಿವಿಧ ಉದ್ಯಮದಲ್ಲಿ ತೊಡಗಿಕೊಂಡಿರುವ ಕನಕಪುರ ಕ್ಷೇತ್ರದ ಶಾಸಕ ಡಿ. ಕೆ. ಶಿವಕುಮಾರ್ ಬಂಧನವಾಗಿದೆ. 619 ಕೋಟಿ ರೂ. ಆಸ್ತಿಯ ಒಡೆಯನಿಗೆ 8.59 ಕೋಟಿ ರೂ. ಹಣ ಕಂಟಕವಾಗಿದೆ.
ಕರ್ನಾಟಕ ಕಾಂಗ್ರೆಸ್ನ ಟ್ರಬಲ್ ಶೂಟರ್ ಎಂದೇ ಕರೆಸಿಕೊಳ್ಳುವ ಡಿ. ಕೆ. ಶಿವಕುಮಾರ್ಗೆ ಎರಡು ವರ್ಷಗಳಿಂದ ತಲೆನೋವಾಗಿದ್ದ ಪ್ರಕರಣವಿದು. ಅಕ್ರಮ ಡಿನೋಟಿಫಿಕೇಶನ್ ಬಿಟ್ಟರೆ ದೊಡ್ಡ ಪ್ರಕರಣಗಳು ಅವರ ವಿರುದ್ಧ ದಾಖಲಾಗಿಲ್ಲ.
ಬಂಧನ ನಂತರ ಡಿಕೆ ಶಿವಕುಮಾರ್ ಮುಂದಿನ ಆಯ್ಕೆಗಳೇನು?
2017ರ ಆಗಸ್ಟ್ 2 ರಿಂದ 5ನೇ ತಾರೀಕಿನ ತನಕ ನಡೆದ ಆದಾಯ ತೆರಿಗೆ ಇಲಾಖೆ ದಾಳಿ 8.59 ಕೋಟಿ ರೂ.ಗಳ ಪ್ರಕರಣ ದಾಖಲಾಗುವಂತೆ ಮಾಡಿತು. ಇದೇ ಪ್ರಕರಣದಲ್ಲಿ ಡಿ. ಕೆ. ಶಿವಕುಮಾರ್ ನಾಲ್ಕು ದಿನಗಳ ವಿಚಾರಣೆ ಎದುರಿಸಿ ಬಂಧನಕ್ಕೆ ಒಳಗಾಗಿದ್ದಾರೆ.
ಡಿ.ಕೆ. ಶಿವಕುಮಾರ್ ಬಂಧನ : ಸಿದ್ದರಾಮಯ್ಯ ಹೇಳಿದ್ದೇನು?
ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ ಸಿಕ್ಕ 8.59 ಕೋಟಿ ರೂ. ಹಣಕ್ಕೆ ಸಂಬಂಧಿಸಿದಂತೆ ಐಟಿ ಇಲಾಖೆ ಒಟ್ಟು 4 ದೂರು ದಾಖಲು ಮಾಡಿತ್ತು. ಈ ದೂರಿನ ಆಧಾರದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಡಿ. ಕೆ. ಶಿವಕುಮಾರ್ ವಿರುದ್ಧ ಪ್ರಕರಣ ದಾಖಲಿಸಿತ್ತು. ಇದೇ ಪ್ರಕರಣದಲ್ಲಿ ಈಗ ಅವರನ್ನು ಬಂಧಿಸಲಾಗಿದೆ.
ಆದಾಯ ತೆರಿಗೆ ಇಲಾಖೆ ದಾಳಿ ಮೂಲ
2017ರ ಆಗಸ್ಟ್ 2 ರಿಂದ 5ರ ತನಕ ಡಿ. ಕೆ. ಶಿವಕುಮಾರ್ ಮತ್ತು ಸಂಬಂಧಿಕರಿಗೆ ಸೇರಿದ ಬೆಂಗಳೂರು, ಕನಕಪುರ, ದೆಹಲಿ, ಮೈಸೂರು, ರಾಮನಗರ, ಹಾಸನ ಸೇರಿ ಒಟ್ಟು 60 ಕಡೆ ಮನೆ, ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆದಿತ್ತು. ಈಗ ಡಿ. ಕೆ. ಶಿವಕುಮಾರ್ ಬಂಧನವಾಗಲು ಇದೇ ಮೂಲ ಕಾರಣವಾಗಿದೆ.
8.59 ಕೋಟಿ ನಗದು ಪತ್ತೆ
ಐಟಿ ದಾಳಿ ಸಂದರ್ಭದಲ್ಲಿ ಡಿ. ಕೆ. ಶಿವಕುಮಾರ್ ಮತ್ತು ಅವರ ಆಪ್ತರಾದ ಸಚಿನ್ ನಾರಾಯಣ್, ಸುನಿಲ್ ಕುಮಾರ್ ಶರ್ಮಾ, ದೆಹಲಿ ಕರ್ನಾಟಕ ಭವನದ ಸಿಬ್ಬಂದಿ ಆಂಜನೇಯ ಹಾಗೂ ದೆಹಲಿಯ ನಿವಾಸಿ ರಾಜೇಂದ್ರಗೆ ಸೇರಿದ ದೆಹಲಿಯ ಫ್ಲ್ಯಾಟ್ಗಳ ಮೇಲೆ ದಾಳಿ ಮಾಡಲಾಗಿತ್ತು. ಆಗ ದಾಖಲೆ ಇಲ್ಲದ 8.59 ಕೋಟಿ ರೂ. ಹಣ ಪತ್ತೆಯಾಗಿತ್ತು. ಶಿವಕುಮಾರ್ ಜೊತೆ ವ್ಯವಹಾರದ ಪಾಲುದಾರಿಗೆ ಹೊಂದಿರುವ ಎಲ್ಲರೂ ಹಣದ ಬಗ್ಗೆ ವಿಭಿನ್ನ ಹೇಳಿಕೆ ನೀಡಿದ್ದರು. ಹಣ ಡಿ. ಕೆ. ಶಿವಕುಮಾರ್ಗೆ ಸೇರಿದ್ದು ಎಂದು ಹೇಳಿಕೆ ಕೊಟ್ಟಿದ್ದರು.
ಅಕ್ರಮ ಹಣ ವರ್ಗಾವಣೆ?
ಐಟಿ ದಾಳಿ ಸಂದರ್ಭದಲ್ಲಿ ಡೈರಿ ಸಿಕ್ಕಿತ್ತು. ಈ ಡೈರಿಯಲ್ಲಿ ಕೆಜಿ ಎಂಬ ಕೋಡ್ ವರ್ಡ್ ಪತ್ತೆಯಾಗಿತ್ತು. ದೆಹಲಿಯಲ್ಲಿ ಸಿಕ್ಕ ಹಣವನ್ನು ಅಕ್ರಮ ಹಣ ವರ್ಗಾವಣೆ ಮೂಲಕ ತರಲಾಗಿದೆ ಎಂಬುದು ಆರೋಪ. ಡಿ. ಕೆ. ಶಿವಕುಮಾರ್ ಸಹ ಈ ಹಣಕ್ಕೆ ಸೂಕ್ತ ದಾಖಲೆಗಳನ್ನು ಸಲ್ಲಿಸಲು ವಿಫಲರಾಗಿದ್ದಾರೆ. ಆದ್ದರಿಂದ, ಜಾರಿ ನಿರ್ದೇಶನಾಲಯ ಅವರಿಗೆ ಸಮನ್ಸ್ ನೀಡಿ ವಿಚಾರಣೆಗೆ ಕರೆದಿತ್ತು. ವಿಚಾರಣೆಯನ್ನು 4 ದಿನ ನಡೆಸಿ ಬಂಧಿಸಲಾಗಿದೆ.
619 ಕೋಟಿ ಆಸ್ತಿ ಒಡೆಯ
2018ರ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವಾಗ ಡಿ. ಕೆ. ಶಿವಕುಮಾರ್ 619 ಆಸ್ತಿ ತಮ್ಮ ಬಳಿ ಇದೆ ಎಂದು ಘೋಷಿಸಿಕೊಂಡಿದ್ದರು. ಆದರೆ, ಐಟಿ ಇಲಾಖೆ ದಾಳಿ ಬಳಿಕ 2015-16, 2016-17 ಮತ್ತು 2017-18ರ ಆದಾಯ ತೆರಿಗೆ ಘೋಷಣೆ ಪರಿಶೀಲಿಸಿ ಡಿ. ಕೆ. ಶಿವಕುಮಾರ್ ತೆರಿಗೆ ವಂಚಿಸಿದ್ದಾರೆ ಎಂದು 3 ಪ್ರತ್ಯೇಕ ಪ್ರಕರಣ ದಾಖಲಿಸಿತ್ತು. ಈ ಪ್ರಕರಣದ ಅನ್ವಯ ಇಡಿ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲು ಮಾಡಿ ಡಿ. ಕೆ. ಶಿವಕುಮಾರ್ರನ್ನು ವಿಚಾರಣೆ ನಡೆಸಿತ್ತು.
ರಾಜಕೀಯ ದ್ವೇಷದ ಪ್ರಕರಣ
ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ಸದಸ್ಯರ ಆಯ್ಕೆ ನಡೆಯುವಾಗ ಹಿರಿಯ ಕಾಂಗ್ರೆಸ್ ಮುಖಂಡ ಅಹಮದ್ ಪಟೇಲ್ ಗೆಲ್ಲದಂತೆ ನರೇಂದ್ರ ಮೋದಿ ಮತ್ತು ಅಮಿತ್ ಶಾ ತಂತ್ರ ಮಾಡಿದ್ದರು. ಆಗ ಕಾಂಗ್ರೆಸ್ ಶಾಸಕರಿಗೆ ಆಮಿಷವೊಡ್ಡಿ ಸೆಳೆಯಲು ಪ್ರಯತ್ನ ನಡೆಸಲಾಗಿತ್ತು. ಡಿ. ಕೆ. ಶಿವಕುಮಾರ್ ಆಗ ಶಾಸಕರನ್ನು ಬೆಂಗಳೂರು ಹೊರವಲಯದ ಈಗಲ್ಟ್ನ್ ರೆಸಾರ್ಟ್ಗೆ ಕರೆದುಕೊಂಡು ಬಂದು ಅವರನ್ನು ರಕ್ಷಿಸಿದ್ದರು. ಇದೇ ರಾಜಕೀಯ ದ್ವೇಷದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂಬುದು ಕಾಂಗ್ರೆಸ್ ಆರೋಪವಾಗಿದೆ.