ಕೆಎಂಎಫ್ ಅಧ್ಯಕ್ಷಗಿರಿ: ಒಂದು ಕಡೆ ಜೆಡಿಎಸ್ ಕಣ್ಣು, ಇನ್ನೊಂದೆಡೆ ಕಾಂಗ್ರೆಸ್
ಬೆಂಗಳೂರು, ಜೂನ್ 25: ದೇಶದ ಎರಡನೇ ಅತಿದೊಡ್ಡ ಹಾಲು ಒಕ್ಕೂಟ ಕೆಎಂಎಫ್ (ಕರ್ನಾಟಕ ಮಿಲ್ಕ್ ಫೆಡರೇಶನ್) ಅಧ್ಯಕ್ಷ ಹುದ್ದೆಯ ಮೇಲೆ, ಜೆಡಿಎಸ್ ಜೊತೆ ಕಾಂಗ್ರೆಸ್ ಕೂಡಾ ಟವೆಲ್ ಹಾಕಿರುವುದು, ಸಮ್ಮಿಶ್ರ ಸರಕಾರದಲ್ಲಿ ಇನ್ನೊಂದು ಹಂತದ ಮೇಲಾಟಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ.
ಲೋಕೋಪಯೋಗಿ ಸಚಿವ ಮತ್ತು ಈ ಹಿಂದೆ ಕೂಡಾ ಕೆಎಂಎಫ್ ಅಧ್ಯಕ್ಷ ಹುದ್ದೆಯನ್ನು ನಿಭಾಯಿಸಿದ್ದ ಎಚ್ ಡಿ ರೇವಣ್ಣ, ಅಧ್ಯಕ್ಷ ಹುದ್ದೆಗೇರುವುದು ಬಹುತೇಕ ಖಚಿತ ಎನ್ನುವಷ್ಟರಲ್ಲಿ ಹಗರಿಬೊಮ್ಮನಹಳ್ಳಿ ಕಾಂಗ್ರೆಸ್ ಶಾಸಕ ಭೀಮಾ ನಾಯ್ಕ ಆ ಹುದ್ದೆಯನ್ನು ಬಯಸಿದ್ದಾರೆ.
ರಾಜಧಾನಿ ದೆಹಲಿಗೂ ಲಗ್ಗೆ ಇಟ್ಟ ನಂದಿನಿ, ಎಷ್ಟು ಲೀಟರ್ ಪೂರೈಕೆ?
ಅಸಲಿಗೆ, ಭೀಮಾ ನಾಯ್ಕಗೆ ಕೆಎಂಎಫ್ ಅಧ್ಯಕ್ಷಗಿರಿಯ ಆಸೆ ತೋರಿಸಿದ್ದೇ ಕಾಂಗ್ರೆಸ್. ಇವರು ಬಿಜೆಪಿ ಸೇರಬಹುದು ಎನ್ನುವ ಸುದ್ದಿ ಹರಿದಾಡುತ್ತಿದ್ದಾಗ, ಅವರಿಗೆ ಕಾಂಗ್ರೆಸ್ ಆ ಹುದ್ದೆಯ ಆಮಿಷವೊಡ್ಡಿತ್ತು ಎನ್ನುವ ಸುದ್ದಿಯಿದೆ.
ಈಗಾಗಲೇ, ಅಧ್ಯಕ್ಷ ಹುದ್ದೆ ಬಯಸಿ ಭೀಮಾ ನಾಯ್ಕ , ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿಯಾಗಿದ್ದಾರೆ. ಆದರೆ, ಮುಖ್ಯಮಂತ್ರಿಗಳಿಂದ ಯಾವುದೇ ಖಚಿತ ಭರವಸೆ ಸಿಗಲಿಲ್ಲ ಎನ್ನಲಾಗುತ್ತಿದೆ.
ರೇವಣ್ಣ ಅವರಿಗೆ ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತಿರುವುದರಿಂದ ಆ ಹುದ್ದೆಯನ್ನು ಅವರು ಬಯಸಿದ್ದರು. ಒಂಬತ್ತು ನಿರ್ದೇಶಕರು ಇರುವ ಕೆಎಂಎಫ್ ನಲ್ಲಿ ಜೆಡಿಎಸ್ ಬೆಂಬಲಿತರ ಸಂಖ್ಯೆ ಮೂರು.
10 ವರ್ಷದ ನಂತರ ಕೆಎಂಎಫ್ ಅಧ್ಯಕ್ಷ ಗಾದಿ ಮೇಲೆ ಎಚ್ ಡಿ ರೇವಣ್ಣ ಕಣ್ಣು
ನಿರ್ದೇಶಕ ಮಂಡಳಿಯಲ್ಲಿ ಕಾಂಗ್ರೆಸ್ ಪ್ರಾಬಲ್ಯ ಹೆಚ್ಚಿರುವುದರಿಂದ, ಆ ಹುದ್ದೆ ನಮಗೇ ಬೇಕೆನ್ನುವುದು ಕಾಂಗ್ರೆಸ್ ವಾದ. ಕಾಂಗ್ರೆಸ್ ಬೆಂಬಲಿತ ನಿರ್ದೇಶಕರ ಸಂಖ್ಯೆ ಹೆಚ್ಚಿದ್ದರೂ, ಅವರನ್ನು ನಿಯಂತ್ರಿಸುತ್ತಿರುವುದು ರೇವಣ್ಣ.
ಲಾಭದಾಯಕ ಹುದ್ದೆಗಳಲ್ಲಿ ಒಂದಾಗಿರುವ ಕೆಎಂಎಫ್ ಅಧ್ಯಕ್ಷಗಿರಿಯ ವಿಚಾರ, ಮೈತ್ರಿ ಪಕ್ಷಗಳ ನಡುವೆ ಸಂಘರ್ಷಕ್ಕೆ ಕಾರಣವಾಗಲಿದೆಯಾ, ಅಥವಾ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತಾರಾ ಕಾದು ನೋಡಬೇಕಿದೆ.