ಬಿಎಸ್ವೈ ಪಕ್ಷ ಬಿಟ್ಟರೂ ಸಾಯದ ಕೆಜೆಪಿ, ಬೆಂಗಳೂರು ಕಚೇರಿ ಉದ್ಘಾಟನೆ
ಬೆಂಗಳೂರು, ಡಿಸೆಂಬರ್ 1: ಇಂದು ಬೆಳಗ್ಗೆ ಕೆಜೆಪಿ ಪಕ್ಷದ ಬೆಂಗಳೂರು ಕೇಂದ್ರ ಕಚೇರಿ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ನಾಗರಬಾವಿ ಪಾಪರೆಡ್ಡಿ ಪಾಳ್ಯದಲ್ಲಿ ಪದ್ಮನಾಭ ಪ್ರಸನ್ನ ಕುಮಾರ್ ಪಕ್ಷದ ಕಚೇರಿ ಉದ್ಘಾಟಿಸಿರು.
ಈ ಸಂದರ್ಭ ಅವರು ಚುನಾವಣಾ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದ ಅವರು, ಕೆಜೆಪಿ ಮತ್ತು ಬಿಜೆಪಿ ವಿಲೀನಗಳ ಊಹಾಪೋಹಗಳಿಗೆ ತೆರೆ ಎಳೆದರು. ರಾಜ್ಯಾಧ್ಯಕ್ಷರಾದ ಪದ್ಮನಾಭ ಪ್ರಸನ್ನ ಕುಮಾರ್ ರವರು ಬ್ರಹ್ಮೇಂದ್ರನ್ ರವರನ್ನು ರಾಜ್ಯದ ಕೆಜೆಪಿ ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಪ್ರಸನ್ನ, "ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಹೇಳಿದರು. ಯುವಕರಿಗಾಗಿ ಯುವಕರಿಗೋಸ್ಕರ ಪಕ್ಷ ಕಟ್ಟಲಾಗಿದೆ. ಯಡಿಯೂರಪ್ಪ ಬಂದ್ರು, ಹೋದ್ರು; ಎಲ್ಲರಿಗೂ ಇದು ಗೊತ್ತಿದೆ. ಈಗಿರುವ ಯಾವ ಪಕ್ಷವೂ ಅಭಿವೃದ್ಧಿಯತ್ತ ಸಾಗುತ್ತಿಲ್ಲ. ನಾಳೆಯಿಂದ ರಾಜ್ಯ ಪ್ರವಾಸ ಮಾಡಿ ಜನರ ಬಳಿ ಹೋಗುತ್ತೇವೆ," ಎಂದು ಮಾಹಿತಿ ನೀಡಿದರು.
"ದೊರೆಸ್ವಾಮಿಯವರ ನೇತೃತ್ವದಲ್ಲಿ ಪ್ರಣಾಳಿಕೆಯನ್ನು ಸಿದ್ದಪಡಿಸಲಾಗಿದೆ. ಯುವಕರಿಗೆ ಉದ್ಯೋಗ, ಮಹಿಳೆಯರಿಗೆ ಸುರಕ್ಷತೆ ಕಲ್ಪಿಸುವತ್ತ ದೃಷ್ಟಿ ಹರಿಸಿದ್ದೇವೆ," ಎಂದು ಹೇಳಿದ ಪ್ರಸನ್ನ ಕುಮಾರ್, "ಕೆಜೆಪಿ ಬಿಜೆಪಿಯೊಂದಿಗೆ ವಿಲೀನ ಆಗಿಲ್ಲ. ನಮ್ಮ ಪಕ್ಷದಿಂದ 224 ಕ್ಷೇತ್ರದಲ್ಲೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತೇವೆ. 150 ಕ್ಷೇತ್ರಗಳಲ್ಲಿ ಸತತ ಪರಿಶ್ರಮದೊಂದಿಗೆ ಜಯಭೇರಿ ಬಾರಿಸಲಿದ್ದೇವೆ," ಎಂದರು.
"ಹಿರೆಕೇರೂರಿನಲ್ಲಿ ನಮ್ಮ ಪಕ್ಷ ಗೆದ್ದೇ ಗೆಲ್ಲುತ್ತದೆ. ಯಡಿಯೂರಪ್ಪ ನನ್ನ ಮಧ್ಯೆ ಯಾವುದೇ ವೈಮನಸ್ಸು ಇಲ್ಲ. ಅವರು ನನ್ನ ತಂದೆ ಸಮಾನ. ನಾನು ಈ ಸ್ಥಾನದಲ್ಲಿರಲು ಅವರೇ ಕಾರಣ," ಎಂದು ಪ್ರಸನ್ನ ಕುಮಾರ್ ಸ್ಪಷ್ಟಪಡಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷರಾದ ಪದ್ಮನಾಭ್ ಪ್ರಸನ್ನ ಕುಮಾರ್, ಉಪಾಧ್ಯಕ್ಷ ಸಂತೋಷ್ಕುಮಾರ್, ರಾಜ್ಯಕಾರ್ಯಾಧ್ಯಕ್ಷ ಶ್ರೀ ಬ್ರಹ್ಮೇಂದ್ರನ್ ಭಾಗಿಯಾಗಿದ್ದರು ಉಪಸ್ಥಿತರಿದ್ದರು.