ಯಡಿಯೂರಪ್ಪಗೆ ಎಸ್ಪಿ ಸೈಕಲ್ ತುಳಿಯುವ ಯೋಗವಿದೆ
ಬೆಂಗಳೂರು, ನ.18: ಮೋದಿ ಬೆಂಗಳೂರು ಸಮಾವೇಶದ ವೇಳೆಗೆ ತಾವು ಬಿಜೆಪಿ ಸೇರುವ ವಿಷಯ ಇತ್ಯರ್ಥವಾಗಬಹುದು ಎಂದು ಕಾದುಕುಳಿತಿದ್ದ ಕರ್ನಾಟಕ ಜನತಾ ಪಕ್ಷದ ನಾಯಕ ಬಿಎಸ್ ಯಡಿಯೂರಪ್ಪಗೆ ರಾಜ್ಯ ಬಿಜೆಪಿ ನಾಯಕರು ನಿರಾಶೆಮೂಡಿಸಿದ್ದು, ಯಡಿಯೂರಪ್ಪ ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ನಿರ್ಣಾಯಕ ಹೆಜ್ಜೆ ಹಾಕಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಯಡಿಯೂರಪ್ಪ ಅವರ ಚಿತ್ತ ತೃತೀಯ ರಂಗದತ್ತ ಹರಿದಿದ್ದು, ಸಮಾಜವಾದಿ ಪಕ್ಷ ಸೇರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ಸಮಾಜವಾದಿ ಪಕ್ಷ ತನ್ಮೂಲಕ ತೃತೀಯ ರಂಗಕ್ಕೆ ನೀರೆರೆಯುವ ಪ್ರಯತ್ನಗಳು ಬಿರುಸಾಗಿ ನಡೆದಿದೆ. ಇದೇ ಹಾದಿಯಲ್ಲಿ ಯಡಿಯೂರಪ್ಪ ಎಸ್ಪಿ ಸೈಕಲ್ ಏರುವ ಲಕ್ಷಣಗಳು ಗೋಚರಿಸುತ್ತಿವೆ.
ಈ ಸಂಬಂಧ ಮಾತನಾಡಿರುವ ಸಮಾಜವಾದಿ ಪಕ್ಷದ ಏಕಮೇವ ಶಾಸಕ ಸಿಪಿ ಯೋಗೀಶ್ವರ್ ಅವರು ಯಡಿಯೂರಪ್ಪ ಅವರನ್ನು ತೃತೀಯ ರಂಗಕ್ಕೆ ಕರೆತರುವ ಮಾತುಕತೆ ನಡೆದಿದೆ. ಕೆಜೆಪಿ ಕೆಲ ಮುಖಂಡರು ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ. ಆದಷ್ಟು ಬೇಗ ನಮ್ಮ ವರಿಷ್ಠರು ಯಡಿಯೂರಪ್ಪ ಅವರನ್ನು ಸಂಪರ್ಕಿಸಲಿದ್ದಾರೆ. ಇದೇ ವೇಳೆ ಶ್ರೀರಾಮುಲು ಅವರ ಬಿಎಸ್ಸಾರ್ ಕಾಂಗ್ರೆಸ್ ಪಕ್ಷವು ಎಸ್ಪಿ ಜತೆ ವಿಲೀನವೋ/ಮೈತ್ರಿಯೋ ಈ ವಾರ ನಿರ್ಧಾರವಾಗಲಿದೆ ಎಂದು ವಿಜಯವಾಣಿ ಪತ್ರಿಕೆಗೆ ಯೋಗೀಶ್ವರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಸಮಾಜವಾದಿ ಪಕ್ಷವು ಕೆಜೆಪಿ, ಬಿಎಸ್ಆರ್ ಕಾಂಗ್ರೆಸ್, ಜೆಡಿಎಸ್ ಹಾಗೂ ಎಡ ಪಕ್ಷಗಳು ಸೇರಿಕೊಂಡು ತೃತೀಯ ರಂಗವನ್ನು ಬಲಪಡಿಸಿ, ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕೆಂದು ಕಾರ್ಯತಂತ್ರ ರೂಪಿಸುತ್ತಿದೆ. ಆ ನಿಟ್ಟಿನಲ್ಲಿ ಎಲ್ಲ ಪಕ್ಷಗಳ ಜತೆಯೂ ಮಾತುಕತೆ ನಡೆದಿದೆ ಎಂದು ಯೋಗೀಶ್ವರ್ ಸ್ಪಷ್ಟಪಡಿಸಿದ್ದಾರೆ.