KIAL ನಲ್ಲಿ ಆರ್ಟಿಪಿಸಿಆರ್ ಪರೀಕ್ಷೆಗೆ 3200 ರೂ. ಸುಲಿಗೆ!
ಬೆಂಗಳೂರು, ನ. 12: ಬೆಂಗಳೂರಿನಿಂದ ದೆಹಲಿಗೆ ವಿಮಾನದಲ್ಲಿ ಪ್ರಯಾಣಿಸಿದರೆ ತಗಲುವ ವೆಚ್ಚ ಕೇವಲ 2500 ರೂ.! ಅದೇ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕಾದ RTPCR ಪರೀಕ್ಷೆಗಾಗಿ ವಿಧಿಸುವ ಶುಲ್ಕ3200 ರೂಪಾಯಿ! ಅರ್ಟಿಪಿಸಿಆರ್ ಪರೀಕ್ಷೆ ಹೆಸರಿನಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಂದ ಹಗಲು ದರೋಡೆ ಮಾಡಲಾಗುತ್ತಿದೆ.
ಕರ್ನಾಟಕದಿಂದ ಹೊರ ದೇಶಗಳಿಗೆ ವಿಮಾನ ಯಾನದಲ್ಲಿ ಪ್ರಮಾಣ ಮಾಡುವರಿಗೆ RTPCR ಟೆಸ್ಟ್ ಮಾಡುವ ಹೆಸರಿನಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಸುಲಿಗೆಗೆ ನಿಂತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಿರುವ, ಖಾಸಗಿಯಾಗಿ ಕೇವಲ 250 ರೂಪಾಯಿಗೆ ಸಿಗುವ ಅರ್ಟಿಪಿಸಿಆರ್ ಪರೀಕ್ಷೆಗೆ ಒಬ್ಬರಿಂದ 3200 ರೂ. ಶುಲ್ಕವನ್ನು ಸುಲಿಗೆ ಮಾಡಲಾಗುತ್ತಿದೆ. ಅಂತಾರಾಷ್ಟ್ರೀಯ ಪ್ರಯಾಣ ಮಾಡುವ ಪ್ರಯಾಣಿಕರು ಕಡ್ಡಾಯವಾಗಿ ಪ್ಲೈಟ್ ಹತ್ತುವ ಆರು ತಾಸು ಮೊದಲು ವಿಮಾನ ನಿಲ್ದಾಣದ ಆವರಣದಲ್ಲಿಯೇ ಆರ್ಟಿಪಿಸಿಆರ್ ಪರೀಕ್ಷೆಗೆ ಒಳಪಟ್ಟು ವರದಿ ತೆಗೆದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ ಯಾವ ಮಾನದಂಡದ ಮೇಲೆ ಈ ಪರಿಯ ಶುಲ್ಕ ವಿಧಿಸುತ್ತಿದೆ ಎಂಬುದು ಪ್ರಯಾಣಿಕರ ಪ್ರಶ್ನೆಯಾಗಿದೆ .
ಪ್ರಯಾಣಿಕರಿಂದ ಹಿಡಿ ಶಾಪ
ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಮಾಡುವ ಆರ್ಟಿಪಿಸಿಅರ್ ವರದಿಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾನ್ಯತೆ ಇಲ್ಲ. ಅದೇ ವಿಮಾನ ನಿಲ್ದಾಣದಲ್ಲಿ 3200 ರೂಪಾಯಿ ಕೊಟ್ಟು ಪರೀಕ್ಷೆ ಮಾಡಿಸಿಕೊಂಡರೆ ಮಾತ್ರ ಮಾನ್ಯತೆ ! ಎಂಥಹ ವಿಪರ್ಯಾಸ? ಬೇರಡೆ ಪರೀಕ್ಷೆಗೆ ಒಳಪಟ್ಟರೆ ದುಬೈ ಸೇರಿದಂತೆ ಹೊರ ದೇಶಗಳಲ್ಲಿ ಮಾನ್ಯತೆ ಮಾಡುವುದಿಲ್ಲವಂತೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 200 ರೂ. ಮೊತ್ತದ ಆರ್ಟಿಪಿಸಿಅರ್ ಟೆಸ್ಟ್ಗೆ 3200 ರೂ. ಕೊಟ್ಟು ಮಾಡಿಸಿದ ಪರೀಕ್ಷೆಗೆ ಮಾತ್ರ ಮಾನ್ಯತೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕೊರೊನಾ ನೆಪದಲ್ಲಿ ಮಾಡುತ್ತಿರುವ ಸುಲಿಗೆಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಹುತೇಕರಿಗೆ ವಿಮಾನ ನಿಲ್ದಾಣದಲ್ಲಿ ಆರ್ಟಿಪಿಸಿಆರ್ ಕಡ್ಡಾಯ ಪರೀಕ್ಷೆಗೆ ಒಳಪಡಬೇಕೆಂಬ ಅರಿವೂ ಇಲ್ಲದೇ ದುಬಾರಿ ಹಣ ಕೊಟ್ಟು ಪರೀಕ್ಷೆಗೆ ಒಳಗಾಗುತ್ತಿದ್ದಾರೆ.
ತಾಸುಗಟ್ಟಲೆ ಕಾಯಬೇಕು
ಕೊರೊನಾ ಭೀತಿ ಕಡಿಮೆಯಾಗುತ್ತಿದ್ದಂತೆ ಬೆಂಗಳೂರು ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಪ್ರಸಕ್ತ ಸಾಲಿನ ಏಪ್ರಿಲ್ನಿಂದ ಸೆಪ್ಟೆಂಬರ್ ಅಂತ್ಯದವರೆಗೂ 55 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಕಳೆದ 2020 ನೇ ಸಾಲಿನ ಇದೇ ಅವಧಿಗೆ ಹೋಲಿಸಿದರೆ 24 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದು, ಶೇ. 131 ಪಟ್ಟು ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಇದನ್ನು ಅರಿತ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇದೀಗ ಆರ್ಟಿಪಿಸಿಅರ್ ಪರೀಕ್ಷೆಯನ್ನು ಕಡ್ಡಾಯವಾಗಿ ವಿಮಾನ ನಿಲ್ದಾಣದಲ್ಲಿ ಮಾಡಿಸಿ, ವರದಿ ಸಮೇತ ಹೋಗುವ ಷರತ್ತು ವಿಧಿಸಿದೆ. ಪ್ರತಿ ಟೆಸ್ಟ್ ಗೆ 3200 ರೂ. ಶುಲ್ಕ ನಿಗದಿ ಮಾಡಿ ಹಗಲು ದರೋಡೆ ಮಾಡುತ್ತಿದೆ. ವಿದೇಶಗಳಿಗೆ ಪ್ರಯಾಣಿಸುವ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕುತ್ತಿದೆ. ಈ ಪರೀಕ್ಷೆಗೆ ಒಳಗಾಗಲು ಪ್ರಯಾಣಿಕರು ಎರಡರಿಂದ ಮೂರು ತಾಸು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ವಿಧಿಯಿಲ್ಲದ ಷರತ್ತನ್ನು ಪಾಲಿಸಲು ಅನಿವಾರ್ಯವಾಗಿ ಪ್ರಯಾಣಿಕರು ದುಬಾರಿ ವೆಚ್ಚ ಮಾಡಬೇಕಾದ ಅನಿವಾರ್ಯತೆ ಸಿಕ್ಕಿ ಬಿದ್ದಿದ್ದಾರೆ.
ಖಚಿತ ಮಾಹಿತಿ ಪಡೆದ ಒನ್ಇಂಡಿಯಾ ಕನ್ನಡ
ದುಬೈಗೆ ತೆರಳುವ ಪ್ರಯಾಣಿಕ ಸೋಗಿನಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಾಧಿಕಾರವನ್ನು ಸಂಪರ್ಕಿಸಿ ಈ ಸಂಬಂಧ ಒನ್ಇಂಡಿಯಾ ಕನ್ನಡ ಖಚಿತ ಮಾಹಿತಿ ಪಡೆಯಿತು. ಕರೆ ಮಾಡಿ ವಿಚಾರಿಸಿದಾಗ, ವಿಮಾನ ನಿಲ್ದಾಣ ಪ್ರಾಧಿಕಾರದ ಸಿಬ್ಬಂದಿ "ನೀವು ದುಬೈಗೆ ಹೋಗಬೇಕಾದರೆ ವಿಮಾನ ಹತ್ತುವ 48 ತಾಸಿನ ಒಳಗೆ ಪಡೆದಿರುವ ಆರ್ಟಿಪಿಸಿಆರ್ ಪರೀಕ್ಷೆ ನೆಗಟಿವ್ ವರದಿ ಇರಬೇಕು. ಇದರ ಜತೆಗೆ ವಿಮಾನ ಹತ್ತುವ ಆರು ತಾಸು ಮೊದಲೇ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಡ್ಡಾಯವಾಗಿ ಆರ್ಟಿಪಿಸಿಅರ್ ಪರೀಕ್ಷೆಗೆ ಒಳಪಡಬೇಕಾಗುತ್ತದೆ. ಒಂದು ಪರೀಕ್ಷೆಗೆ 3200 ರೂ. ಶುಲ್ಕ ವಿಧಿಸಲಾಗುತ್ತಿದ್ದು, ಕಡ್ಡಾಯವಾಗಿ ಪಡೆಯಲೇಬೇಕು'' ಎಂದು ಹೇಳಿದರು. ಇನ್ನು ಆರ್ಟಿಪಿಸಿಆರ್ ವರದಿ ಪಡೆಯಲು ಎರಡರಿಂದ ಮೂರು ತಾಸು ಸಾಲಿನಲ್ಲಿ ನಿಂತು ವರದಿ ಪಡೆಯಬೇಕಾಗಿರುವುದನ್ನು ನಿಲ್ದಾಣದ ಮೂಲಗಳು ಖಚಿತಪಡಿಸಿವೆ.
ಖಾಸಗಿಯಲ್ಲಿ 600 ರೂ.
ಬೆಂಗಳೂರಿನ ಅಗ್ರಗಣ್ಯ ಖಾಸಗಿ ಆಸ್ಪತ್ರೆಗಳಲ್ಲಿಯೂ ಸಹ ಕನಿಷ್ಠ 300 ರಿಂದ 600 ರೂ.ಗೆ ಆರ್ಟಿಪಿಸಿಆರ್ ಪರೀಕ್ಷೆ ನಡೆಸಲಾಗುತ್ತಿದೆ. ಆದರೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 3200 ರೂ. ಶುಲ್ಕ ವಿಧಿಸಲಾಗುತ್ತಿದೆ. ಯಾವ ಮಾನದಂಡ ಇಟ್ಟುಕೊಂಡು ಆರ್ಟಿಪಿಸಿರ್ ಪರೀಕ್ಷಾ ಶುಲ್ಕ ನಿಗದಿ ಮಾಡಲಾಗಿದೆಯೋ ಗೊತ್ತಿಲ್ಲ! ವಿಮಾನ ನಿಲ್ದಾಣ ಎಂದ ಕೂಡಲೇ ಈ ಪರಿಯ ಶುಲ್ಕ ವಿಧಿಸಿ ಸುಲಿಗೆ ಮಾಡಲು ಅಧಿಕಾರ ಕೊಟ್ಟವರು ಯಾರು ? ಶುಲ್ಕವಲ್ಲ ಅದು ಅಕ್ಷರಶಃ ಸುಲಿಗೆ ಎಂದು ಗೊತ್ತಿದ್ದರೂ ಅದನ್ನು ಪ್ರಶ್ನೆ ಮಾಡುವರೂ ಇಲ್ಲದಂತಾಗಿದೆ. ಕೊರೊನಾ ಹೆಸರಿನಲ್ಲಿ ಅಂತಾಷ್ಟ್ರೀಯ ಪ್ರಯಾಣಿಕರಿಂದ ಕೋಟಿ ಕೋಟಿ ರೂ. ಸುಲಿಗೆ ಮಾಡಲಾಗುತ್ತಿದೆ.
ಆರೋಗ್ಯ ಸಚಿವರಿಗೆ ಅರಿವಿಲ್ಲ
ರಾಜ್ಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿದೆ. ಅದಕ್ಕೆ ಒಬ್ಬ ಯುವ ಸಚಿವರೂ ಇದ್ದಾರೆ. ಹಾಡಹಗಲೇ ಪ್ರಯಾಣಿಕರಿಂದ ಆರ್ಟಿಪಿಆರ್ ಪರೀಕ್ಷೆಗೆ 3200 ರೂ. ವಸೂಲಿ ಮಾಡುತ್ತಿರುವ ವಿಚಾರದ ಬಗ್ಗೆ ತಿಳಿದುಕೊಳ್ಳಲು ಆಗದು. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಆರೋಗ್ಯ ಇಲಾಖೆ ಅಲ್ಲೊಂದು ಆರ್ಟಿಪಿಸಿಅರ್ ಪರೀಕ್ಷಾ ಕೇಂದ್ರ ತೆರೆಯಲು ತುಂಬಾ ಕಷ್ಟದ ಕೆಲಸವೇ? ಆರೋಗ್ಯ ಸಚಿವರು ಪ್ರಯಾಣಿಕರ ಕಾಳಜಿ ವಹಿಸಿದ್ದಲ್ಲಿ ಸಾರ್ವಜನಿಕರ ಅದೆಷ್ಟೋ ಕೋಟಿ ಹಣ ಖಾಸಗಿ ಲ್ಯಾಬ್ ಪಾಲಾಗುವುದನ್ನು ತಪ್ಪಿಸಬಹುದಿತ್ತು. ವಿಮಾನಯಾನ ಮಾಡುವರು ಶ್ರೀಮಂತರು ಕಟ್ಟಲಿ ಬಿಡಿ ಎಂಬ ಮನೋಭಾವನೆ ರೂಢಿಸಿಕೊಂಡಿರಬೇಕು. ಹೀಗಾಗಿ ತಿಂಗಳುಗಳಿಂದ ಆರ್ಟಿಪಿಸಿಅರ್ ಹೆಸರಿನಲ್ಲಿ ಸುಲಿಗೆ ನಡೆಯುತ್ತಲೇ ಇದೆ. ಹೇಳುವರು ಇಲ್ಲ, ಕೇಳುವರು ಗತಿಯಿಲ್ಲ.
Recommended Video