ಅತ್ತ, ಡಿಕೆಶಿ ಜೈಲುಪಾಲು: ಇತ್ತ, ಸಿದ್ದರಾಮಯ್ಯ ವಿರುದ್ದ ಸ್ವಪಕ್ಷೀಯರ 'ಚಕ್ರವ್ಯೂಹ'
Recommended Video
ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದ ಆರಂಭದಿಂದ ಅಂತ್ಯದವರೆಗೂ, ಸರಕಾರಕ್ಕೆ ಸಿದ್ದರಾಮಯ್ಯ ಮುಗ್ಗಲಮುಳ್ಳಾಗಿದ್ದರು ಎಂದು ದೇವೇಗೌಡ ಆದಿಯಾಗಿ ಜೆಡಿಎಸ್ ಪಕ್ಷದ ನಾಯಕರು ಈಗಾಗಲೇ ಬಹಿರಂಗವಾಗಿ ಹೇಳಿದ್ದಾಗಿದೆ. "ಸರ್ಕಾರ ಬೀಳಿಸಲು ಸಿದ್ದರಾಮಯ್ಯ ಅವರೇ ತಿಳಿಸಿದ್ದು ಎಂದು ಅವರ ಆಪ್ತರೇ ಹೇಳಿದ್ದಾರೆ" ಎಂದು ದೇವೇಗೌಡರು ಹೇಳಿದ್ದರು.
ಎಚ್ಡಿಕೆ ಸರಕಾರ ಪತನಗೊಂಡ ನಂತರ, ವಿರೋಧ ಪಕ್ಷದ ನಾಯಕ ಯಾರಾಗಬೇಕು ಎನ್ನುವ ವಿಚಾರದಲ್ಲಿ ಕಾಂಗ್ರೆಸ್ ನಲ್ಲಿ ರಾಜಕೀಯ ಮೇಲಾಟವೇ ನಡೆದಿತ್ತು. ವಿರೋಧ ಪಕ್ಷದ ನಾಯಕನಾಗಿ, ರಾಜ್ಯ ಸುತ್ತಾಡಿ, ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದು, ಮತ್ತೆ ತಾನು ಮುಖ್ಯಮಂತ್ರಿಯಾಗಬೇಕು ಎನ್ನುವ ರಾಜಕೀಯ ಮಹತ್ವಾಕಾಂಕ್ಷೆಯನ್ನು ಸಿದ್ದರಾಮಯ್ಯ ಇಟ್ಟುಕೊಂಡಿದ್ದಾರೆ ಎನ್ನುವ ಮಾತು ಕಾಂಗ್ರೆಸ್ ಪಡಶಾಲೆಯಲ್ಲಿ ಚಾಲ್ತಿಯಲ್ಲಿತ್ತು.
ನನ್ನನ್ನು ಸೋಲಿಸಿದ್ದು ಜನ, ಯಾವ ನಾಯಕರೂ ಅಲ್ಲ: ಸಿದ್ದರಾಮಯ್ಯ
ಶಾಸಕಾಂಗ ಪಕ್ಷದ ನಾಯಕನೇ ವಿರೋಧ ಪಕ್ಷದ ನಾಯಕನಾಗುವ ವಾಡಿಕೆ ಹಿಂದಿನಿಂದಲೂ ಇದ್ದಿದ್ದರಿಂದ, ಆ ಹುದ್ದೆ ತನಗೆ ನಿರಾಯಾಸವಾಗಿ ಲಭಿಸಬಹುದು ಎನ್ನುವ ಸಿದ್ದರಾಮಯ್ಯನವರ ಲೆಕ್ಕಾಚಾರ, ಹೈಕಮಾಂಡ್ ವಲಯದಲ್ಲಿ ಉಲ್ಟಾ ಹೊಡೆಯಲು ಆರಂಭವಾಯಿತು. ಆಗ, ಸಿದ್ದರಾಮಯ್ಯ, ತಮ್ಮ ಪರಮಾಪ್ತರ ಹೆಸರನ್ನು ಮುನ್ನಲೆಗೆ ತರಲಾರಂಭಿಸಿದರು. ಅವರೇ, ಮಾಜಿ ಸ್ಫೀಕರ್, ಶ್ರೀನಿವಾಸಪುರ ಶಾಸಕ ರಮೇಶ್ ಕುಮಾರ್.
ಅನರ್ಹ ಶಾಸಕರ ಸದ್ದು ಜಾಸ್ತಿಯಾದರೆ, 'ಸದ್ದಡಗಿಸಲು' ಬಿಜೆಪಿಯ ಪ್ಲಾನ್- ಬಿ ರೆಡಿ!
ಇದೆಲ್ಲಾ, ಬೆಳವಣಿಗೆ ನಡೆದದ್ದು, ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅವರಿಗೆ 'ಟ್ರಬಲ್' ಆರಂಭವಾಗುವುದಕ್ಕೆ ಮುನ್ನ, ಅರ್ಥಾತ್ ಜೈಲಿಗೆ ಹೋಗುವ ಮುನ್ನ. ಡಿಕೆಶಿ, ಜೈಲು ಪಾಲಾಗುತ್ತಿದ್ದಂತೆಯೇ, ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಮತ್ತೆ ಲಾಬಿ ಆರಂಭವಾಗಿದೆ. ಪಕ್ಷದ ಹಿರಿಯರು, ಸಿದ್ದರಾಮಯ್ಯ ವಿರುದ್ದ, 'ಚಕ್ರವ್ಯೂಹ' ಹಣೆಯಲಾರಂಭಿಸಿದ್ದಾರೆ ಎನ್ನುವ ಮಾತು ಸದ್ಯ ಚಾಲ್ತಿಯಲ್ಲಿದೆ.
ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ.ಎಚ್. ಮುನಿಯಪ್ಪ
ಸಿದ್ದರಾಮಯ್ಯನವರಿಗೆ ಯಾವುದೇ ಕಾರಣಕ್ಕೂ ಆ ಸ್ಥಾನ ನೀಡಬಾರದೆಂದು ಪಕ್ಷದ ನಿಯತ್ತಿನ ಇಬ್ಬರು ಹಿರಿಯ ಮುಖಂಡರು, ಹೈಕಮಾಂಡ್ ಲೆವೆಲ್ ನಲ್ಲಿ ತಮ್ಮ ರಾಜಕೀಯ ಪ್ರಭಾವವನ್ನೆಲ್ಲಾ ಬೀರುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಅವರೇ, ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ.ಎಚ್. ಮುನಿಯಪ್ಪ.
ಸೋನಿಯಾ ಮೇಡಂ ಅವರನ್ನು ಭೇಟಿಯಾಗಿದ್ದ ಮುನಿಯಪ್ಪ
ಇವರಿಬ್ಬರಿಗೂ, ಸಿದ್ದರಾಮಯ್ಯನವರ ಮೇಲೆ, ಅಷ್ಟಕಷ್ಟೇ ಎನ್ನುವುದು ಕಾಂಗ್ರೆಸ್ಸಿನ ಸಾಮಾನ್ಯ ಕಾರ್ಯಕರ್ತನಿಗೂ ಗೊತ್ತಿರುವ ವಿಚಾರ. ಇತ್ತೀಚೆಗೆ, ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆಯಾಗಿರುವ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದ ಮುನಿಯಪ್ಪ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿ ಬಂದಿದ್ದರು.
ರಮೇಶ್ ಕುಮಾರ್ ಮತ್ತು ಮುನಿಯಪ್ಪಗೆ ಇರುವ ರಾಜಕೀಯ ದುಷ್ಮನಿ ಅಂತಿಂದಲ್ಲ
ಕೆ ಎಚ್ ಮುನಿಯಪ್ಪ ಮತ್ತು ರಮೇಶ್ ಕುಮಾರ್ ಅವರಿಗೂ ಇರುವ ರಾಜಕೀಯ ದುಷ್ಮನಿ ಅಂತಿಂದಲ್ಲ. "ತಾನು, ಲೋಕಸಭಾ ಚುನಾವಣೆಯಲ್ಲಿ ಸೋಲಲು ನಮ್ಮವರೇ ಕಾರಣ" ಎಂದು ಹಲವು ಬಾರಿ ಹೇಳಿರುವ ಮುನಿಯಪ್ಪ ಅವರಿಗೆ, ರಮೇಶ್ ಕುಮಾರ್ ಅವರು ಸಿದ್ದರಾಮಯ್ಯನವರ ಆಪ್ತ ಎನ್ನುವ ಕಾರಣಕ್ಕಾಗಿ ಸಿಟ್ಟಿದೆ.
ಎಚ್.ಕೆ.ಪಾಟೀಲ್ ಅವರಿಗೆ ವಿರೋಧ ಪಕ್ಷದ ನಾಯಕನ ಸ್ಥಾನ ನೀಡಬೇಕು
ಹಾಗಾಗಿ, ಸಿದ್ದರಾಮಯ್ಯ ಹೊರತಾಗಿ ಬೇರೆ ಯಾರಾದರೂ, ವಿರೋಧ ಪಕ್ಷದ ನಾಯಕರಾದರೆ ಇವರಿಗೆ ಓಕೆ. ಇತ್ತ, ಖರ್ಗೆ ಸಾಹೇಬ್ರಿಗೆ, ಎಚ್.ಕೆ.ಪಾಟೀಲ್ ಅವರಿಗೆ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ನೀಡಬೇಕು ಎನ್ನುವ ತವಕ. ಪಾಟೀಲರು, ಪಕ್ಷಾತೀತವಾಗಿ ಎಲ್ಲರೂ ಒಪ್ಪುವ ನಾಯಕ.
ಕಾಂಗ್ರೆಸ್ ಪಾಲಿಗೆ ವರ್ಚಸ್ವೀ, ಮಾಸ್ ನಾಯಕ ಸಿದ್ದರಾಮಯ್ಯ
ಹಾಗಾಗಿ, ಸಿದ್ದರಾಮಯ್ಯ ಈಗಾಗಲೇ, ಐದು ವರ್ಷ ಮುಖ್ಯಮಂತ್ರಿ ಆಗಿದ್ದಾರೆ, ಸಿಎಲ್ಪಿ ನಾಯಕರೂ ಆಗಿದ್ದಾರೆ. ಪಕ್ಷದಲ್ಲಿ ಎಲ್ಲರಿಗೂ ಅಧಿಕಾರ ಸಿಗಲಿ ಎನ್ನುವುದು ಖರ್ಗೆ ಮತ್ತು ಮುನಿಯಪ್ಪನವರ ವಾದ. ಆದರೆ, ರಾಜ್ಯ ಕಾಂಗ್ರೆಸ್ ಪಾಲಿಗೆ ವರ್ಚಸ್ವೀ ಅಥವಾ ಮಾಸ್ ನಾಯಕನಾಗಿ ಇರುವುದೆಂದರೆ ಅದು ಸಿದ್ದರಾಮಯ್ಯ. ಇವರನ್ನು ಮೂಲೆಗುಂಪು ಮಾಡಲು, ಸೋನಿಯಾ ಸಿದ್ದರಿದ್ದರಿದ್ದಾರೆಯೇ ಎನ್ನುವುದನ್ನು ಖರ್ಗೆ ಮತ್ತು ಮುನಿಯಪ್ಪ ಅರಿಯಬೇಕಾಗಿದೆ.