ಸಿಎಂ ಆಗಲಾರೆ, ಕೆಪಿಸಿಸಿ ಅಧ್ಯಕ್ಷನಾಗುವೆ: ಮುನಿಯಪ್ಪ
ಬೆಂಗಳೂರು, ಜೂನ್ 03: ಸ್ಟಿಂಗ್ ಆಪರೇಷನ್ ಸುದ್ದಿಯ ನಡುವೆ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಹಾಗೂ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಿದ್ದರಾಮಯ್ಯ ಅವರು ನಡೆಸಿದ ಸಭೆ ಗೌಣವಾಗಿಬಿಟ್ಟಿದೆ. ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ ಹೆಣೆಯಲು ಕೆಪಿಸಿಸಿ ಅಧ್ಯಕ್ಷರಾಗಿ ಸಂಸದ ಕೆಎಚ್ ಮುನಿಯಪ್ಪ ಅವರನ್ನು ನೇಮಿಸುವ ಸಾಧ್ಯತೆ ಬಹುತೇಕ ಖಚಿತವಾಗಿದೆ.
ಕೇಂದ್ರ ಮಾಜಿ ಸಚಿವ ಹಾಗೂ ಕೋಲಾರದ ಸಂಸದ ಕೆ.ಎಚ್.ಮುನಿಯಪ್ಪ ಅವರು ಗುರುವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಈ ಬಗ್ಗೆ ಮಾತುಕತೆ ನಡೆಸಿದರು. ['ನಾನು ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಆಕಾಂಕ್ಷಿಯಲ್ಲ']
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ನಾನು ಸಿಎಂ ಸ್ಥಾನ ಬಯಸಿಲ್ಲ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಮಾತ್ರ ಹೌದು. ದಲಿತರು ಮುಖ್ಯಮಂತ್ರಿಗಳಾಗಬೇಕು ಎಂಬ ಕೂಗು ಬಂದಿದ್ದು ನಿಜ, ಆದರೆ 2018ರ ತನಕ ಈ ಬಗ್ಗೆ ಮಾತುಕತೆ ಬೇಡ. ಚುನಾವಣೆ ನಂತರ ಮಾತನಾಡೋಣ. ಒಂದು ವೇಳೆ ಪಕ್ಷ ಅಧಿಕಾರಕ್ಕೆ ಬಂದರೆ ದಲಿತ ಮುಖ್ಯಮಂತ್ರಿ ಅವಕಾಶ ಸಿಗಲಿದೆ.[ಇರೋ 1 ಸ್ಥಾನಕ್ಕೆ ಅದೆಷ್ಟು ಜನ ಟವಲ್ ಹಾಕ್ತಾರೋ!]
ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ ಜವಾಬ್ದಾರಿ ನಿಭಾಯಿಸುವ ಅನುಭವವಿದೆ ಎಂದು ಸೋನಿಯಾಗಾಂಧಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಈ ವಿಚಾರದಲ್ಲಿ ಎಐಸಿಸಿ ಹೈಕಮಾಂಡ್ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ.
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ಗಾಂಧಿ ಸೂಕ್ತ ವ್ಯಕ್ತಿಯಾಗಿದ್ದಾರೆ. ಐದು ರಾಜ್ಯಗಳ ಚುನಾವಣೆ ಫಲಿತಾಂಶದಿಂದ ಹಿನ್ನಡೆಯಾಗಿರುವುದು ನಿಜ. ಮುಂಬರುವ ಚುನಾವಣೆಗೆ ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕಾಗಿದೆ ಎಂದರು.
ಲಿಂಗಾಯಿತ ಸಮುದಾಯ, ಉತ್ತರ ಕರ್ನಾಟಕದ ಭಾಗದ ಮುಖಂಡ ಮತ್ತು ರಾಜ್ಯ ಮಾಹಿತಿ ತಂತ್ರಜ್ಞಾನ ಸಚಿವ ಎಸ್ ಆರ್ ಪಾಟೀಲ್, ಇಂಧನ ಸಚಿವ ಡಿಕೆ ಶಿವಕುಮಾರ ಹೆಸರು ಕೂಡಾ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬಂದಿತ್ತು.