ಕೆಎಚ್.ಮುನಿಯಪ್ಪ ಪುತ್ರಿಗೆ ಸಚಿವ ಸ್ಥಾನ ಕೈತಪ್ಪಲು ಸಿದ್ದರಾಮಯ್ಯ ಪುತ್ರ ಕಾರಣ!
ಕೋಲಾರ, ಜೂನ್ 06: ಪರಿಶಿಷ್ಟ ಜಾತಿ, ಮಹಿಳೆ ಎರಡೂ ಅರ್ಹತೆ ಇದ್ದು ಜೊತೆಗೆ ಹೈಕಮಾಂಡ್ಗೆ ಹತ್ತಿರವಿರುವ ಅಪ್ಪನ ಬೆಂಬಲವಿದ್ದರೂ ಕೂಡ ಕೆಜಿಎಫ್ ಕಾಂಗ್ರೆಸ್ ಶಾಸಕಿ ರೂಪಾ ಶಶಿಧರ್ಗೆ ಸಚಿವ ಸ್ಥಾನ ಕೈತಪ್ಪಿದೆ.
ಕೆ.ಎಚ್.ಮುನಿಯಪ್ಪ ಅವರ ಮಗಳು ರೂಪಾ ಶಶಿಧರ್ ಅವರು ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಕಂಡಿದ್ದರು ಅಲ್ಲದೆ ಸಚಿವ ಸ್ಥಾನಕ್ಕೂ ತಂದೆಯ ಮೂಲಕ ಲಾಭಿ ಮಾಡಿಸಿದ್ದರು.
ಸಂಪುಟ ವಿಸ್ತರಣೆ Live : ಪ್ರಮಾಣ ವಚನ ಸಮಾರಂಭ ಆರಂಭ
ಪರಿಶಿಷ್ಟ ಜಾತಿ, ಮಹಿಳೆ ಎರಡೂ ಕೋಟಾದಲ್ಲಿ ಖಾತೆಗೆ ಅರ್ಜಿ ಗುಜರಾಯಿಸಿದ್ದ ಅವರಿಗೆ ಸಚಿವ ಸ್ಥಾನ ಪಕ್ಕಾ ಎಂದೇ ಎಣಿಸಲಾಗಿತ್ತು. ನಿನ್ನೆ ಸಂಜೆ ಕೂಡ ಕೋಲಾರದಲ್ಲಿ ರೂಪಾ ಶಶಿಧರ್ ಬೆಂಬಲಿಗರು ಪಟಾಕಿ ಹೊಡೆದು ಸಂಭ್ರಮಿಸಿದ್ದರು ಆದರೆ ಈಗ ಎಲ್ಲಾ ಉಲ್ಟಾ ಆಗಿದೆ ರೂಪಾ ಅವರಿಗೆ ಸಚಿವೆ ಸ್ಥಾನ ಕೈತಪ್ಪಿದೆ.
ಆದರೆ ರೂಪಾ ಅವರಿಗೆ ಸಚಿವ ಸ್ಥಾನ ಕೈತಪ್ಪಲು ಪರೋಕ್ಷ ಕಾರಣ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ!. ಹೌದು, ಕೆ.ಎಚ್.ಮುನಿಯಪ್ಪ ಪುತ್ರಿ ರೂಪಾ ಶಶಿಧರ್ಗೆ ಸ್ಥಾನ ನೀಡಿದರೆ ಸಿದ್ದರಾಮಯ್ಯ ಅವರು ತಮ್ಮ ಪುತ್ರನಿಗೂ ಸ್ಥಾನ ನೀಡುವಂತೆ ಪಟ್ಟು ಹಿಡಿಯುವ ಸಾಧ್ಯತೆ ಇದ್ದ ಕಾರಣ ರೂಪಾಗೆ ಸ್ಥಾನ ನಿರಾಕರಿಸಲಾಗಿದೆ ಎನ್ನಲಾಗಿದೆ.
ಸಚಿವ ಸ್ಥಾನ ಗಿಟ್ಟಿಸಿಕೊಂಡವರ ಫೈನಲ್ ಲಿಸ್ಟ್ ಇಲ್ಲಿದೆ ನೋಡಿ
ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಆದರೆ ಅವರು ಈ ಮುಂಚೆಯೂ ಗೆದ್ದು ಸಚಿವ ಸ್ಥಾನದಲ್ಲಿ ಸೇವೆ ಸಲ್ಲಿಸಿದ್ದರು ಹಾಗಾಗಿ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಆದರೆ ಮೊದಲ ಬಾರಿ ಗೆದ್ದಿರುವ ರೂಪಾ ಶಶಿಧರ್ ಹಾಗೂ ಯತೀಂದ್ರಗೆ ನಿರಾಕರಿಸಲಾಗಿದೆ.
ಅಲ್ಲದೆ ಕೊಲಾರದ ಮುಳಬಾಗಿಲಿನಿಂದ ಗೆದ್ದಿರುವ ಪಕ್ಷೇತರ ಅಭ್ಯರ್ಥಿಗೆ ಸಚಿವ ಸ್ಥಾನ ನೀಡಬೇಕಾಗಬೇಕಾದ ಅನಿವಾರ್ಯತೆ ಇರುವ ಕಾರಣ ಒಂದು ಜಿಲ್ಲೆಗೆ ಎರಡು ಸಚಿವ ಸ್ಥಾನ ಬೇಡವೆಂಬ ಅಂಶವನ್ನೂ ಪರಿಗಣಿಸಿ ಈ ನಿರ್ಣಯ ಕೈಗೊಂಡಿರುವ ಸಾಧ್ಯತೆ ಇದೆ.