ಹೈಕೋರ್ಟ್ನಲ್ಲಿ ಮೊದಲೇ ಕೇವಿಯಟ್ ಸಲ್ಲಿಸಿತ್ತು ಕೆಜಿಎಫ್ ತಂಡ
ಬೆಂಗಳೂರು, ಡಿಸೆಂಬರ್ 20: ಒಂದು ದೊಡ್ಡ ಸಿನಿಮಾವೆಂದಾಗ ಅದರ ಬಿಡುಗಡೆಗೆ ಅಡ್ಡಿ ಆತಂಕಗಳು ಬರುವುದು ಸಹಜ ಎಂದು ಕೆಜಿಎಫ್ ತಂಡ ಮೊದಲೇ ಊಹಿಸಿತ್ತು. ಹೀಗಾಗಿ ಕಾನೂನು ಸಮಸ್ಯೆಗಳು ಬರಬಾರದು ಎಂದು ಅದಕ್ಕೆ ಮುನ್ನೆಚ್ಚರಿಕೆಯನ್ನೂ ವಹಿಸಿತ್ತು.
ಕೆಜಿಎಫ್ ಚಿತ್ರದ ಚಿತ್ರೀಕರಣ ಆರಂಭವಾಗಿ ಎರಡು ವರ್ಷಗಳಿಗೂ ಹೆಚ್ಚು ಸಮಯವಾಗಿದೆ. ಶೀರ್ಷಿಕೆ ಆಗಲೇ ಬಹಿರಂಗವಾಗಿದ್ದರೂ ಅದರ ಶೀರ್ಷಿಕೆಯಿಂದ ಕೆಜಿಎಫ್ಗೆ ಕೆಟ್ಟ ಹೆಸರು ಬರುತ್ತದೆ ಎಂದು ಇತ್ತೀಚೆಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ.
ಕೋರ್ಟ್ ಆದೇಶದ ಚಿಂತೆಯಿಲ್ಲ: 'ಸಿನಿಮಾ ನೋಡಿ ಬನ್ನಿ' ಎಂದು ಯಶ್ ಆಹ್ವಾನ
ಇನ್ನೊಂದೆಡೆ ರೌಡಿ ತಂಗಂ ಕಥೆಯನ್ನು ಆಧರಿಸಿ ಸಿನಿಮಾ ಮಾಡಲಾಗಿದೆ. ಇದು ಹಕ್ಕು ಸ್ವಾಮ್ಯದ ಉಲ್ಲಂಘನೆ ಎಂದು ಆರೋಪಿಸಿ ನಿರ್ಮಾಪಕ ವೆಂಕಟೇಶ್ ಎಂಬುವವರು ಸಿಟಿ ಸಿವಿಲ್ ಕೋರ್ಟ್ನಿಂದ ಮಧ್ಯಂತರ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಹೀಗಾಗಿ ಬಹುನಿರೀಕ್ಷಿತ ಕೆಜಿಎಫ್ ಬಿಡುಗಡೆಗೆ ಕಾನೂನಿನ ಅಡ್ಡಿಯಾಗಿದೆ. ಆದರೆ, ಕೋರ್ಟ್ ಆದೇಶ ತಮ್ಮ ಕೈ ಸೇರದ ಕಾರಣ ಸಿನಿಮಾ ಬಿಡುಗಡೆ ಮಾಡಿಯೇ ಸಿದ್ಧ ಎಂದು ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿದ್ದಾರೆ.
'ಕೆಜಿಎಫ್' ರಿಲೀಸ್ ಮಾಡಲು ನಿರ್ಮಾಪಕರ ಮುಂದಿರುವ ಆಯ್ಕೆಗಳೇನು?
ಇಂತಹ ಸಂಕಷ್ಟಗಳು ಮೊದಲೇ ಬರಬಹುದು ಎಂದು ಚಿತ್ರತಂಡ ಮೊದಲೇ ಊಹಿಸಿತ್ತು.
ಕೇವಿಯಟ್ ಸಲ್ಲಿಸಿದ್ದರು
ದೊಡ್ಡ ಬಜೆಟ್ನ ಸಿನಿಮಾವೊಂದು ತೆರೆಗೆ ಬರುವ ಸಂದರ್ಭದಲ್ಲಿ ಕಾನೂನಿನ ಹೋರಾಟದ ಸಂಕಷ್ಟಕ್ಕೆ ಸಿಲುಕುವ ಸಾಕಷ್ಟು ಉದಾಹರಣೆಗಳನ್ನು ಕಂಡಿದ್ದ ಕೆಜಿಎಫ್ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಕ್ರಿಯೇಷನ್ಸ್ನ ವಕೀಲರು, ಚಿತ್ರ ಬಿಡುಗಡೆಗೆ ಯಾವುದೇ ಕಾನೂನಿನ ಅಡ್ಡಿ ಬರಬಾರದು ಎಂಬ ಮುನ್ನೆಚ್ಚರಿಕೆ ವಹಿಸಿ ಹೈಕೋರ್ಟ್ನಲ್ಲಿ ಕೇವಿಯೆಟ್ ಸಲ್ಲಿಸಿದ್ದರು.
ಈ ಸಂಗತಿಯನ್ನು ಸ್ವತಃ ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿಕೊಂಡಿದ್ದಾರೆ.
ಗಮನಕ್ಕೆ ಬಂದಿರಲಿಲ್ಲ
ಚಿತ್ರದ ಕಥೆಯ ಹಕ್ಕನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸುತ್ತಿರುವ ದೂರುದಾರರು ಸೇರಿದಂತೆ ಯಾರೂ ಇದುವರೆಗೂ ತಮ್ಮನ್ನು ಸಂಪರ್ಕಿಸಿರಲಿಲ್ಲ. ಅವರು ಚಿತ್ರ ಬಿಡುಗಡೆಗೆ ತಡೆ ನೀಡುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿರುವುದೂ ತಮಗೆ ಗೊತ್ತಿರಲಿಲ್ಲ ಎಂದು ವಿಜಯ್ ಕಿರಗಂದೂರು ಹೇಳಿದ್ದಾರೆ.
ಅಭಿಮಾನಿಗಳಿಗೆ ಖುಷಿ ಸುದ್ದಿ: ನಾಳೆ ಕೆಜಿಎಫ್ ಬಿಡುಗಡೆ ಆಗುತ್ತದೆ
ಕೇವಿಯಟ್ನಿಂದ ಲಾಭವಾಗುತ್ತದೆಯೇ?
ಈಗ ಸಿನಿಮಾ ಬಿಡುಗಡೆಗೆ ತಡೆಯಾಜ್ಞೆ ನೀಡಿರುವುದು ಸಿಟಿ ಸಿವಿಲ್ ನ್ಯಾಯಾಲಯ. ದೂರುದಾರರ ದೂರು ಮಾನ್ಯವಾಗದಂತೆ ತಡೆಯಲು ಕೇವಿಯಟ್ ಸಲ್ಲಿಸಲಾಗುತ್ತದೆ. ಅದನ್ನು ತೀರ್ಪು ನೀಡುವ ನ್ಯಾಯಾಲಯದಲ್ಲಿಯೇ ಸಲ್ಲಿಸಬೇಕು. ಕೆಜಿಎಫ್ ಚಿತ್ರತಂಡ ಕೇವಿಯಟ್ ಸಲ್ಲಿಸಿದ್ದು ಹೈಕೋರ್ಟ್ನಲ್ಲಿ. ಹೀಗಾಗಿ ಸಿಟಿ ಸಿವಿಲ್ ಕೋರ್ಟ್ನ ಆದೇಶವೇ ಜಾರಿಗೆ ಬರುತ್ತದೆಯೇ ಹೊರತು, ಚಿತ್ರತಂಡ ಸಲ್ಲಿಸಿದ್ದ ಕೇವಿಯಟ್ ಪ್ರಯೋಜನಕ್ಕೆ ಬರುವುದಿಲ್ಲ ಎನ್ನುತ್ತಾರೆ ಕಾನೂನು ತಜ್ಞರು. ಕೇವಿಯಟ್ ದೂರುದಾರರು ಅರ್ಜಿ ಸಲ್ಲಿಸಿದರೆ ಅದನ್ನು ತಮ್ಮ ಗಮನಕ್ಕೆ ತರುವಂತೆ ಪ್ರತಿವಾದಿಗಳು ನ್ಯಾಯಾಲಯಕ್ಕೆ ಮಾಡುವ ಮನವಿಯಾಗಿದೆ.
ನ್ಯಾಯಾಂಗ ನಿಂದನೆಯಾಗುತ್ತದೆಯೇ?
ಸಿಟಿ ಸಿವಿಲ್ ನ್ಯಾಯಾಲಯದ ಆದೇಶವನ್ನು ಪಾಲಿಸದೆ ಇದ್ದರೆ ಚಿತ್ರತಂಡ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸಬೇಕಾಗುತ್ತದೆ. ಆದರೆ, ನ್ಯಾಯಾಲಯದ ಆದೇಶ ಕೈ ತಲುಪುವವರೆಗೂ ಚಿತ್ರ ಪ್ರದರ್ಶನ ಮುಂದುವರಿಸಬಹುದು. ಬಳಿಕ ನ್ಯಾಯಾಂಗ ನಿಂದನೆಗೆ ದಂಡ ಪಾವತಿಸುವ ಬಗ್ಗೆ ಯೋಚಿಸಬಹುದು ಎನ್ನುವುದು ಚಿತ್ರತಂಡ ಲೆಕ್ಕಾಚಾರ ಎನ್ನಲಾಗಿದೆ. ಅಲ್ಲದೆ, ಕೆಳ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್ಗೆ ಮನವಿ ಸಲ್ಲಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗಿದೆ.
ಬ್ಲ್ಯಾಕ್ ಮೇಲ್ ತಂತ್ರ
'ನಾನೂ ತಮಿಳು ಸಿನಿಮಾ 'ಲಿಂಗಾ' ಬಿಡುಗಡೆ ಸಂದರ್ಭದಲ್ಲಿ ಇಂತಹ ಸಮಸ್ಯೆ ಎದುರಿಸಿದ್ದೆ. ಕೋರ್ಟ್ನಲ್ಲಿ ಸಂಜೆ ವೇಳೆಗೆ 10 ಕೋಟಿ ಠೇವಣಿ ಇರಿಸಿ ಸಿನಿಮಾ ಬಿಡುಗಡೆ ಮಾಡಿದ್ದೆ ಎಂದು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹೇಳಿದ್ದಾರೆ.
ಸಿನಿಮಾ ಬಿಡುಗಡೆಯಾಗುವ ಕೊನೆಯ ಹಂತದಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆ ತರುವುದು ಬ್ಲ್ಯಾಕ್ ಮೇಲ್ ತಂತ್ರವಾಗಿದೆ ಎಂದು ಅವರು ಹೇಳಿದ್ದಾರೆ.
ಈ ರೀತಿಯ ಸಿನಿಮಾವನ್ನು ಎಲ್ಲ ನಿರ್ಮಾಪಕರಿಗೂ ಮಾಡಲು ಸಾಧ್ಯವಿಲ್ಲ. ದೂರು ಸಲ್ಲಿಸಿರುವ ನಿರ್ಮಾಪಕರು ಕಥೆ ಬಗ್ಗೆ ಸಮಸ್ಯೆ ಅಥವಾ ಗೊಂದಲವಿದ್ದರೆ ಚಿತ್ರತಂಡವನ್ನು ಸಂಪರ್ಕಿಸಿ ಮಾತನಾಡಬೇಕಿತ್ತು. ಆದರೆ, ಆ ರೀತಿಯ ಮನೋಭಾವ ಎಲ್ಲರಲ್ಲಿಯೂ ಇರುವುದಿಲ್ಲ. ಕನ್ನಡ ಚಿತ್ರ ಎಂಬ ಪ್ರೀತಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.