ಭಾರತ್ ಜೋಡೊ ಯಾತ್ರೆ ವಿಡಿಯೊದಲ್ಲಿ ಕೆಜಿಎಫ್ ಚಿತ್ರದ ಸಂಗೀತ ಬಳಕೆ: ರಾಹುಲ್ಗೆ ಕರ್ನಾಟಕ ಹೈಕೋರ್ಟ್ ನೋಟಿಸ್
ಬೆಂಗಳೂರು, ನವೆಂಬರ್ 03: ಕಾಂಗ್ರೆಸ್ನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಕೆಜಿಎಫ್-2 ಚಿತ್ರದ ಸಂಗೀತ ಬಳಸಿದ್ದಕ್ಕಾಗಿ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಇಬ್ಬರು ಪ್ರಮುಖ ನಾಯಕರಿಗೆ ಕರ್ನಾಟಕ ಹೈಕೋರ್ಟ್ ನೋಟಿಸ್ ನೀಡಿದೆ.
ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಜೈರಾಮ್ ರಮೇಶ್ ಮತ್ತು ಸುಪ್ರಿಯಾ ಶ್ರೀನೇಟ್ ಅವರಿಗೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ನೋಟಿಸ್ ಜಾರಿ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಪ್ರಸನ್ನ. ಬಿ. ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್. ಎಸ್. ಕಿಣಗಿ ಅವರಿದ್ದ ವಿಭಾಗೀಯ ಪೀಠವು ಪಕ್ಷದ ಸಂವಹನ, ಪ್ರಚಾರ ಮತ್ತು ಮಾಧ್ಯಮದ ಉಸ್ತುವಾರಿಗಳಾದ ಜೈರಾಮ್ ರಮೇಶ್, ಸಾಮಾಜಿಕ ಮಾಧ್ಯಮಗಳ ಮುಖ್ಯಸ್ಥರಾದ ಸುಪ್ರಿಯಾ ಶ್ರೀನೇಟ್ ಹಾಗೂ ರಾಹುಲ್ ಗಾಂಧಿ ಅವರಿಗೆ ನೋಟಿಸ್ ಜಾರಿ ಮಾಡಿದೆ. ಮುಂದಿನ ವಿಚಾರಣೆಯನ್ನು 2023ರ ಜನವರಿಯಲ್ಲಿ ನಡೆಸುವುದಾಗಿ ಪೀಠವು ಹೇಳಿದೆ.
ವಿವಾದಕ್ಕೆ ಕಾರಣವೇನು?
ಹಕ್ಕು ಸ್ವಾಮ್ಯ ಉಲ್ಲಂಘಿಸಿ ಬಳಸಿಕೊಂಡಿದ್ದ ಕೆಜಿಎಫ್ ಚಾಪ್ಟರ್ 2 ಚಿತ್ರದ ಸಂಗೀತವನ್ನು ಭಾರತ್ ಜೊಡೊ ಯಾತ್ರೆಯ ವಿಡಿಯೊಗಳಿಗೆ ಬಳಸಿಕೊಳ್ಳಲಾಗಿತ್ತು. ಈ ಸಂಬಂಧ ಎಮ್ಆರ್ಟಿ ಸಂಗೀತ ಸಂಸ್ಥೆಯು ನ್ಯಾಯಲಕ್ಕೆ ದೂರು ನೀಡಿತ್ತು.
ಈ ದೂರಿನ ಕುರಿತು ವಿಚಾರಿಸಿದ್ದ ನಗರದ ವಾಣಿಜ್ಯ ನ್ಯಾಯಾಲಯ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್(ಐಎಸ್ಸಿ) ಹಾಗೂ ಭಾರತ್ ಜೋಡೊ ಯಾತ್ರೆಗೆ ಸಂಬಂಧಿಸಿದ ಸಾಮಾಜಿಕ ಮಾಧ್ಯಮಗಳ ಅಧಿಕೃತ ಖಾತೆಯನ್ನು ತೆರವುಗೊಳಿಸುವಂತೆ ನವೆಂಬರ್ 7ರಂದು ಕೋರ್ಟ್ ಆದೇಶಿಸಿತ್ತು.
ಇದನ್ನು ಪ್ರಶ್ನಿಸಿ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಕಾಂಗ್ರೆಸ್, ಕೆಜಿಎಫ್ ಚಿತ್ರದ ಸಂಗೀತ ಹೊಂದಿರುವ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಿಂದ ತೆಗೆದುಹಾಕುವುದಾಗಿ ತಿಳಿಸಿತ್ತು. ಆದರೆ, ಇದುವರೆಗೂ ಕಾಂಗ್ರೆಸ್ನ ಸಾಮಾಜಿಕ ಮಾಧ್ಯಮಗಳ ಖಾತೆಯಲ್ಲಿ ಈ ವಿಡಿಯೊಗಳು ಕಾಣಸಿಗುತ್ತಿವೆ. ಆದ್ದರಿಂದ, ಕರ್ನಾಟಕ ಹೈಕೋರ್ಟ್ ಕಾಂಗ್ರೆಸ್ ನಾಯಕರಿಗೆ ನೋಟಿಸ್ ಜಾರಿ ಮಾಡಿದೆ.
ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಿತ್ರ
ಕೆಜಿಎಫ್ ಚಿತ್ರವು ಒಂದು ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇದು ಕನ್ನಡ ಚಿತ್ರರಂಗದ ಮಟ್ಟಿಗೆ ಅತ್ಯಂತ ಯಶಸ್ವಿ ಚಿತ್ರವೂ ಆಗಿದೆ. ರಾಕಿಂಗ್ ಸ್ಟಾರ್ ಯಶ್ ನಟನೆಯ ಚಿತ್ರವು, ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದೆ ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ನಟಿ ಶ್ರೀನಿಧಿ ಶೆಟ್ಟಿ ಯಶ್ಗೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಹೊಂಬಾಳೆ ಸಂಸ್ಥೆಯ ನಿರ್ಮಾಣದಲ್ಲಿ ತಯಾರಾದ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ. ರವಿ ಬಸ್ರೂರ್ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಚಿತ್ರದ ಸಂಗೀತ ಹಾಗೂ ಹಾಡುಗಳು ಭಾರತದಾದ್ಯಂತ ಪ್ರಸಿದ್ಧಿ ಪಡೆದಿವೆ. ಕೆಜೆಎಫ್ ಚಿತ್ರವು ಸುಮಾರು 1,200 ಕೋಟಿ ರೂಪಾಯಿ ಗಳಿಸಿದೆ ಎಂದು ಅಂದಾಜಿಸಲಾಗಿದೆ.
ರಾಹುಲ್ ನೇತೃತ್ವದ ಭಾರತ್ ಜೋಡೊ ಯಾತ್ರೆಗೆ ಜನ ಬೆಂಬಲ
ತಮಿಳು ನಾಡಿನ ಕನ್ಯಾಕುಮಾರಿಯಿಂದ ಕಾಶ್ಮೀರದ ಶ್ರೀನಗರದ ವರೆಗೂ ಭಾರತ್ ಜೋಡೊ ಯಾತ್ರೆ ಸಾಗಲಿದೆ. ಸುಮಾರು 3500 ಕಿಮೀ ಸಾಗಲಿರುವ ಯಾತ್ರೆ ಈಗಾಗಲೇ ಜನ ಬೆಂಬಲ ದೊರಕಿದೆ. ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ಮಧ್ಯ ಪ್ರದೇಶದಲ್ಲಿ ಯಾತ್ರೆ ಕ್ರಮಿಸಿದೆ. ಇದರಲ್ಲಿ ಲಕ್ಷಾಂತರ ಜನರು ಪಾಲ್ಗೊಂಡಿದ್ದಾರೆ. ಡಿಸೆಂಬರ್ 4 ರಂದು ಭಾರತ್ ಜೋಡೊ ಯಾತ್ರೆಯು ರಾಜಸ್ಥಾನವನ್ನು ಪ್ರವೇಶಿಸಲಿದೆ.
ಯಾತ್ರೆಯ ಮೂಲಕ ಮತ್ತೆ ಪುಟಿದೇಳಲಿದೆಯೇ ಕಾಂಗ್ರೆಸ್
ಭಾರತ್ ಜೋಡೊ ಯಾತ್ರೆಯು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ರಾಜಕೀಯವಾಗಿ ಮರುಹುಟ್ಟು ನೀಡಲಿದೆ ಎಂದು ವಿಶ್ಲೇಷಿಸಲಾಗಿದೆ. ಪ್ರಧಾನಿ ಮೋದಿ ಅವರ ವರ್ಚಸ್ಸು ಹಾಗೂ ಬಿಜೆಪಿಗೆ ಸಿಕ್ಕಿರುವ ಜನ ಬೆಂಬಲದ ಮುಂದೆ ಕಾಂಗ್ರೆಸ್ ಮಂಕಾಗಿದೆ. ಆದರೆ, ಈ ಸುದೀರ್ಘ ಯಾತ್ರೆಯ ಮೂಲಕ ಕಾಂಗ್ರೆಸ್ ಮತ್ತೆ ಪುಟಿದೇಳಲಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.