ಅತೃಪ್ತ ಶಾಸಕರು vs ಸ್ಪೀಕರ್: ಸುಪ್ರೀಂ ತೀರ್ಪಿನ ಒಟ್ಟು ಸಾರ
ಬೆಂಗಳೂರು: ಜುಲೈ 17: ಅತೃಪ್ತ ಶಾಸಕರು ರಾಜೀನಾಮೆ ಅಂಗೀಕಾರದ ವಿಚಾರವಾಗಿ ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯ ಮಧ್ಯಂತರ ತೀರ್ಪು ಇಂದು ಹೊರಬಿದ್ದಿದೆ.
ಸುಪ್ರೀಂಕೋರ್ಟ್ ತೀರ್ಪು ಬಹಳ ಸಮತೋಲನೆಯಿಂದ ಕೂಡಿದ್ದು, ತೀರ್ಪು ಘೋಷಣೆಗೂ ಮುನ್ನವೇ ಸಾಂವಿಧಾನದ ಸಮತೋಲನ ಕಾಯ್ದುಕೊಳ್ಳುವ ಗುರಿಯನ್ನು ಸುಪ್ರೀಂಕೋರ್ಟ್ ಹೊಂದಿರುವುದಾಗಿ ರಂಜನ್ ಗೋಗೊಯ್ ಅವರು ಹೇಳಿಯೇ ತೀರ್ಪು ನೀಡಿದ್ದಾರೆ.
ಸುಪ್ರೀಂ ಆದೇಶ LIVE: ಸ್ಪೀಕರ್ಗೆ ಸೂಚನೆ ಇಲ್ಲ, ಅತೃಪ್ತರಿಗೆ ವಿಪ್ ಇಲ್ಲ
ಇಂದಿನ ಮಧ್ಯಂತರ ತೀರ್ಪಿನ ಮೂಲಕ ಅತೃಪ್ತ ಶಾಸಕರಿಗೆ ನಿರಾಳ ನೀಡಿರುವ ಸುಪ್ರೀಂಕೋರ್ಟ್ ಜೊತೆಗೆ ಸ್ಪೀಕರ್ ಅವರ ಅಧಿಕಾರವನ್ನು ಎತ್ತಿ ಹಿಡಿದಿದೆ. ಆ ಮೂಲಕ ರಾಜೀನಾಮೆ ಅಂಗೀಕಾರದ ನಿರ್ಣಯವನ್ನು ಸ್ಪೀಕರ್ ಅವರಿಗೇ ಬಿಟ್ಟಿದೆ.
ಅತೃಪ್ತರ ಮೇಲೆ ಒತ್ತಡ ಹೇರುವಂತಿಲ್ಲ
ಸುಪ್ರೀಂಕೋರ್ಟ್ನ ತೀರ್ಪಿನ ಅನ್ವಯ ಅತೃಪ್ತ ಶಾಸಕರು, ನಾಳೆ ನಡೆಯುವ ವಿಶ್ವಾಸಮತ ಯಾಚನೆಯಲ್ಲಿ ಭಾಗವಹಿಸಲು ಅವರಿಗೆ ಒತ್ತಾಯ ಹೇರುವಂತಿಲ್ಲ, ಅರ್ಥಾತ್ ಅವರ ಮೇಲೆ ಪಕ್ಷ ನೀಡುವ ವಿಪ್ ಅನ್ವಯವಾಗುವುದಿಲ್ಲ. ಅವರು ನಾಳೆ ಸದನಕ್ಕೆ ಬರಲು ಹಾಗೂ ಬರದೇ ಇರಲು ಸಂಪೂರ್ಣ ಸ್ವತಂತ್ರರು.
ಸುಪ್ರೀಂಕೋರ್ಟ್ನಲ್ಲಿ ಅತೃಪ್ತ ಶಾಸಕರ ಅರ್ಜಿ ವಿಚಾರಣೆ: ಯಾರ ವಾದ ಏನು?
ಸ್ಪೀಕರ್ ಅಧಿಕಾರದಲ್ಲಿ ಹಸ್ತಕ್ಷೇಪವಿಲ್ಲ
ರಾಜೀನಾಮೆ ಅಥವಾ ಅನರ್ಹತೆಯ ಬಗ್ಗೆ ಇಂತಿಷ್ಟೆ ಕಾಲಮಿತಿಯೊಳಗೆ ನಿರ್ಧಾರ ಕೈಗೊಳ್ಳಿರೆಂದು ಸ್ಪೀಕರ್ಗೆ ಸೂಚಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಆ ಮೂಲಕ ಸ್ಪೀಕರ್ ಅವರ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲವೆಂದು ಸುಪ್ರೀಂಕೋರ್ಟ್ ಹೇಳಿದೆ.
ಸರ್ಕಾರದ ಭವಿಷ್ಯ ನಿರ್ಧಾರ, ಸ್ಪೀಕರ್ ರಮೇಶ್ ಮುಂದಿರುವ 7 ಆಯ್ಕೆಗಳು
ಇದು ಕೇವಲ ಮಧ್ಯಂತರ ತೀರ್ಪು
ಇಂದು ನೀಡಿದ ತೀರ್ಪು ಮಧ್ಯಂತರ ತೀರ್ಪಾಗಿದ್ದು, ಈ ವಿಷಯದ ಬಗ್ಗೆ ವಿಸ್ತೃತ ವಿಚಾರಣೆ, ಮಂಥನದ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ದೊಡ್ಡ ಮಟ್ಟದ ಕಾನೂನಿನ ತೊಡಕುಗಳಿಗೆ ಸೀಮಿತ ಕಾಲಮಿತಿಯಲ್ಲಿ ಉತ್ತರ ಹುಡುಕಿಕೊಳ್ಳುವುದು ಕಷ್ಟ ಎಂದು ಹೇಳಿದೆ.
ಅತೃಪ್ತ ಶಾಸಕರು ನಿರಾಳ
ಸುಪ್ರೀಂಕೋರ್ಟ್ನ ಇಂದಿನ ತೀರ್ಪು ಅತೃಪ್ತರಿಗೆ ಹೆಚ್ಚಿನ ನಿರಾಳತೆ ತಂದಿದೆ ಎಂದು ವಿಶ್ಲೇಷಿಸಬಹುದಾಗಿದೆ. ಅತೃಪ್ತರಿಗೆ ವಿಪ್ ಭಯ ಇಲ್ಲದೇ ಆಗಿದೆ. ಆದರೆ ಅನರ್ಹತೆಯ ಭೀತಿಯಿಂದ ಅತೃಪ್ತ ಶಾಸಕರು ಇನ್ನೂ ಹೊರಬಂದಿಲ್ಲ. ಸ್ಪೀಕರ್ ಅವರಿಗೆ ಶಾಸಕರನ್ನು ಅನರ್ಹರನ್ನಾಗಿಸುವ ಅಧಿಕಾರ ಈಗಲೂ ಇದೆ, ಆದರೆ ಅದಕ್ಕೆ ಸ್ಪೀಕರ್ ಅವರಿಗೆ ಸ್ಪಷ್ಟ ಕಾರಣಗಳಿಲ್ಲ.