ಶಬರಿಮಲೆ ಪ್ರವಾಸ ಕಠಿಣ: ಸ್ವಾಮಿಯೇ ಅಯ್ಯಪ್ಪ
ಬೆಂಗಳೂರು, ಮಾ 13: ಇದೇ ಎಪ್ರಿಲ್ ಒಂದರಿಂದ ಜಾರಿಗೆ ಬರುವಂತೆ ಹೊರ ರಾಜ್ಯದ ಪ್ರವಾಸಿ ವಾಹನಗಳ ಮೇಲೆ ಕೇರಳ ಸರಕಾರ ಭಾರೀ ಪ್ರಮಾಣದಲ್ಲಿ ತೆರಿಗೆ ದರ ಏರಿಕೆ ಮಾಡಿರುವುದರಿಂದ ಕೇರಳ ಪ್ರವಾಸ, ಅದರಲ್ಲೂ ಪ್ರಮುಖವಾಗಿ ಶಬರಿಮಲೆ ಯಾತ್ರೆ ದುಬಾರಿ ಆಗಲಿದೆ.
ರಾಜ್ಯದಿಂದ ಸಾಕಷ್ಟು ಮಂದಿ ಪ್ರವಾಸಿಗರು ಮತ್ತು ಯಾತ್ರಾರ್ಥಿಗಳು ಕೇರಳಕ್ಕೆ ಪ್ರವಾಸ ಮಾಡುತ್ತಾರೆ. ದಿನವೊಂದಕ್ಕೆ ಸುಮಾರು 6500 ಸಾವಿರ ವಿವಿಧ ರೀತಿಯ ಪ್ರವಾಸಿ ವಾಹನಗಳು ಕೇರಳಕ್ಕೆ ತೆರಳುತ್ತವೆ.
ಇನ್ನು ಶಬರಿಮಲೆ ಯಾತ್ರೆಯ ವೇಳೆ ಕೇರಳಕ್ಕೆ ತೆರಳುವ ವಾಹನಗಳ ಸಂಖ್ಯೆ ಹೆಚ್ಚುಕಮ್ಮಿ ದುಪ್ಪಟ್ಟಾಗುತ್ತದೆ. ಇದರ ಜೊತೆ ತಮಿಳುನಾಡು ಗಡಿ ದಾಟಿ ಕೇರಳಕ್ಕೆ ಪ್ರಯಾಣ ಮಾಡಬೇಕಾಗಿರುವುದರಿಂದ ಪ್ರವಾಸಿಗರು ಎರಡೂ ರಾಜ್ಯದ ತೆರಿಗೆ ಭರಿಸ ಬೇಕಾಗುತ್ತದೆ.
ಕೇರಳದ ಯಾತ್ರಾ ಸ್ಥಳಗಳಾದ ಶಬರಿಮಲೆ, ಗುರುವಾಯೂರು, ತಿರುವನಂತಪುರ ಮತ್ತು ಪ್ರವಾಸಿ ಸ್ಥಳಗಳಾದ ತೇಕಡಿ, ಅಲೆಪ್ಪಿ, ಮುನ್ನಾರ್ ಮುಂತಾದ ಸ್ಥಳಗಳಿಗೆ ಭೇಟಿ ನೀಡುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಹೆಚ್ಚುತ್ತಿರುವುದರಿಂದ ಇದರ ಲಾಭವನ್ನು ಪಡೆಯಲು ಕೇರಳ ಸರಕಾರ ಮುಂದಾಗಿದೆ.
ಮೂರು ತಿಂಗಳ ಅವಧಿಗೆ ಚಾಲ್ತಿಯಲ್ಲಿರುವಂತೆ (ಈ ಸಮಯದಲ್ಲಿ ಇಂತಿಷ್ಟೇ ಬಾರಿ ಕೇರಳ ಪ್ರವಾಸ ಮಾಡಬೇಕೆನ್ನುವ ನಿರ್ಭಂದವಿಲ್ಲ) ಪಾವತಿಸ ಬೇಕಾದ ತೆರಿಗೆ ಮೊತ್ತವನ್ನು ಕೇರಳ ಸರಕಾರ ಹೆಚ್ಚು ಕಮ್ಮಿ ಡಬಲ್ ಮಾಡಿದೆ.