ಅಗ್ರಹಾರ ಕೃಷ್ಣಮೂರ್ತಿ ವಿರುದ್ಧ ಸಾಹಿತ್ಯ ಅಕಾಡೆಮಿ ನಂಜು, ಕಂಬಾರರಿಗೆ ಪತ್ರ
ಬೆಂಗಳೂರು, ಸೆ. 18: ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಾದೇಶಿಕ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುವ ಅಗ್ರಹಾರ ಕೃಷ್ಣಮೂರ್ತಿ ಅವರ ವಿರುದ್ಧ ಅಕಾಡೆಮಿ ದ್ವೇಷಕಾರುತ್ತಿದ್ದು, ನಿವೃತ್ತ ಸೌಲಭ್ಯ ಸಿಗದ ಪರದಾಡಿದ್ದ ಅಗ್ರಹಾರ ಕೃಷ್ಣಮೂರ್ತಿ ವಿರುದ್ಧ ದ್ವಿಸದಸ್ಯ ಪೀಠಕ್ಕೆ ಅಕಾಡೆಮಿ ಮೇಲ್ಮನವಿ ಸಲ್ಲಿಸಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯದ ಸಾಹಿತಿಗಳು, ಚಿಂತಕರು ಪತ್ರಿಕಾ ಪ್ರಕಟಣೆ ಹೊರಡಿಸಿ, ಕಂಬಾರರಿಗೆ ಪತ್ರ ಬರೆದಿದ್ದಾರೆ.
ಅಗ್ರಹಾರ ಕೃಷ್ಣಮೂರ್ತಿಗಳ ಅಧಿಕಾರ ಅವಧಿಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಈ ದಾಳಿ ನಡೆಸಿದ್ದರು. ನಿವೃತ್ತಿ ಸಂದರ್ಭದಲ್ಲಿ ಅವರ ಮೇಲೆ ಕೆಲ ಆರೋಪಗಳನ್ನು ಹೊರೆಸಿ ನಿವೃತ್ತಿ ಸೌಲಭ್ಯಗಳನ್ನು ತಡೆ ಹಿಡಿಯಲಾಗಿತ್ತು.
'ಅಗ್ರಹಾರ ಕೃಷ್ಣಮೂರ್ತಿ ಚಾರಿತ್ರ್ಯವಧೆಯನ್ನು ನಿಲ್ಲಿಸಿ'
ಅಕಾಡೆಮಿ ಆರೋಪಗಳನ್ನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟಿನಲ್ಲಿ ಅಗ್ರಹಾರ ಕೃಷ್ಣಮೂರ್ತಿ ರಿಟ್ ಅರ್ಜಿ ಸಲ್ಲಿಸಿದ್ದರು. ಸುಮಾರು ಏಳು ವರ್ಷಗಳ ನಂತರ ನ್ಯಾಯಾಂಗ ಹೋರಾಟದಲ್ಲಿ ಕೃಷ್ಣಮೂರ್ತಿಗೆ ನ್ಯಾಯ ಸಿಕ್ಕಿತ್ತು. ಆರೋಪದಿಂದ ಮುಕ್ತರಾಗಿದ್ದ ಕೃಷ್ಣಮೂರ್ತಿ ಅವರ ಮೇಲೆಹೊರಿಸಿದ್ದ ಆರೋಪಗಳ ವಿಚಾರವಾಗಿ ಏಳು ವರ್ಷಗಳ ಕಾಲ ಮಾನಸಿಕವಾಗಿ ಬಹಳ ನೋವು ಅನುಭವಿಸಿದ್ದರು. ತತ್ಸಂಬಂಧ ಅವರ ದೈಹಿಕ ಆರೋಗ್ಯವೂ ಕೆಟ್ಟು ಜರ್ಜರಿತರಾದರು.
ನಿವೃತ್ತಿಯ ಸೌಲಭ್ಯಗಳು ಬಾರದೆ ಆರ್ಥಿಕವಾಗಿಯೂ ಸಂಕಷ್ಟ ಅನುಭವಿಸಿದರು. ಸಾಹಿತ್ಯ ಅಕಾಡೆಮಿಯ ಉನ್ನತ ಹುದ್ದೆಯಲ್ಲಿದ್ದಅಗ್ರಹಾರ ಕೃಷ್ಣಮೂರ್ತಿ ಅವರ ಮೇಲಿದ್ದ ಆರೋಪದ ಕಾರಣ ನಿವೃತ್ತಿಯ ನಂತರ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸ್ವಾಯತ್ತ ಸಂಸ್ಥೆಗಳಿಗೆ ತಮ್ಮಸೇವೆ ಮುಂದುವರೆಸಲು ನೇಮಕಗೊಳ್ಳಬಹುದಾದ ಬಹುದೊಡ್ಡ ಅವಕಾಶಗಳಿಂದಲೂವಂಚಿತರಾದರು.
ಇಷ್ಟೆಲ್ಲಾ ನೋವುಂಡು ಇದೀಗ ನ್ಯಾಯ ಸಿಕ್ಕಿದ ಸಂಭ್ರಮವೂ ಅವರ ಪಾಲಿಗೆ ಇಲ್ಲವಾಗುವ ಸೂಚನೆಗಳನ್ನು ಕೇಂದ್ರ ಸಾಹಿತ್ಯಅಕಾಡೆಮಿ ರವಾನಿಸಿದೆ. ಉಚ್ಚನ್ಯಾಯಾಲಯದ ತೀರ್ಪಿನಂತೆ ಕೇಂದ್ರಸಾಹಿತ್ಯ ಅಕಾಡೆಮಿಯು ಅವರ ನಿವೃತ್ತಿಸೌಲಭ್ಯಗಳನ್ನುನೀಡದೆ ಮತ್ತೆ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿರುವುದು ವಿಷಾದನೀಯ.
ಜ್ಞಾನಪೀಠಪ್ರಶಸ್ತಿಪುರಸ್ಕೃತರು, ಹಿರಿಯರೂ, ಕನ್ನಡಿಗರೇಆದ ಡಾ.ಚಂದ್ರಶೇಖರ ಕಂಬಾರ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿರುವುದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ಸಂಗತಿ. ಇಂಥ ಮಹನೀಯರು ಸದರಿ ಅಕಾಡೆಮಿಯ ಅಧ್ಯಕ್ಷರಾಗಿದ್ದು ಮೇಲ್ಮನವಿ ಸಲ್ಲಿಸಿರುವುದರಿಂದ ಮತ್ತೊಬ್ಬ ಸಾಧಕರೂ, ಹಿರಿಯರೂ ಆಗಿರುವ ಅಗ್ರಹಾರ ಕೃಷ್ಣಮೂರ್ತಿಯವರಿಗೆ ತುಂಬಾ ನೋವು ಹಾಗೂ ಅನಾನುಕೂಲಗಳನ್ನು ಉಂಟು ಮಾಡಿದೆ.
ಆದ್ದರಿಂದ ಸನ್ಮಾನ್ಯ ಕಂಬಾರರು ಹಾಗೂ ಅವರ ಸದಸ್ಯವರ್ಗ ಮೇಲ್ಮನವಿ ಸಲ್ಲಿಸಿರುವ ವಿಷಯದ ಬಗ್ಗೆ ಮಾನವೀಯತೆಯ ಹಿನ್ನೆಲೆಯಲ್ಲಿ ಸತ್ಯಸಂಗತಿಗಳ ಮುನ್ನೆಲೆಯಲ್ಲಿ ಸದರಿ ಮೇಲ್ಮನವಿಯನ್ನು ಹಿಂಪಡೆದು ಅಗ್ರಹಾರ ಕೃಷ್ಣಮೂರ್ತಿಯವರಿಗೆ ಸಲ್ಲಬೇಕಾದ ಎಲ್ಲಾ ಸೌಲಭ್ಯಗಳನ್ನು ಕೊಡಬೇಕೆಂದು ನಾವುಗಳು ಈ ಮೂಲ ಕಕಳಕಳಿಯಿಂದ ವಿನಂತಿಸುತ್ತೇವೆ.
ಇಲ್ಲವಾದಲ್ಲಿ ಕರ್ನಾಟಕ ರಾಜ್ಯದ ಸಾಹಿತಿಗಳು ಮತ್ತು ಚಿಂತಕರು ತಾತ್ವಿಕ ಆಕ್ರೋಶ ಹಾಗೂ ಶಾಂತಿಯುತ ಪ್ರತಿಭಟನೆ ಮಾಡಬೇಕಾಗುತ್ತದೆ.
ಕಂಬಾರರು ಈ ವಿಷಯವನ್ನು ಮರುಪರಿಶೀಲಿಸಿ ಸರಿಯಾದ ನಿರ್ಣಯ ತೆಗೆದುಕೊಳ್ಳುತ್ತಾರೆಂಬ ನಂಬಿಕೆ ಮತ್ತು ಭರವಸೆ ನಮಗಿದೆ ಎಂದು ಸಾಹಿತಿಗಳಾದ ಜಿ.ಕೆ ಗೋವಿಂದರಾವ್, ಡಾ. ವಿಜಯಮ್ಮ, ಪ್ರೊ. ಎಚ್ ಎಸ್ ಶಿವಪ್ರಕಾಶ್, ದೇವನೂರು ಮಹಾದೇವ, ಎಸ್ ಜಿ ಸಿದ್ದರಾಮಯ್ಯ, ಕಾಳೇಗೌಡ ನಾಗಾವರ, ಪ್ರೊ. ರಾಜೇಂದ್ರ ಚನ್ನಿ, ಡಾ. ಎಲ್ ಹನುಮಂತಯ್ಯ, ಕುಂ. ವೀರಭದ್ರಪ್ಪ, ಅರವಿಂದ ಮಾಲಗತ್ತಿ, ಸಿ ಬಸವಲಿಂಗಯ್ಯ, ಎಲ್ ಎನ್ ಮುಕುಂದರಾಜ್, ಡಾ. ಎಚ್ ಆರ್ ಸ್ವಾಮಿ, ಕೋಟಿಗಾನಹಳ್ಳಿ ರಾಮಯ್ಯ, ಕೆ ಷರೀಫಾ, ಡಿ ಉಮಾಪತಿ, ಎಂಎನ್ ಆಶಾದೇವಿ, ಆರ್. ಜಿ ನಾಗರಾಜ್, ಸುರೇಶ್ ಆನಗಳ್ಳಿ, ಕವಿತಾ ಲಂಕೇಶ್, ಕೆ ನೀಲಾ, ದು. ಸರಸ್ವತಿ, ಬಸವರಾಜು ಮುಂತಾದವರು ಮನವಿ ಮಾಡಿಕೊಂಡಿದ್ದಾರೆ.