ಕನ್ನಡದಲ್ಲಿಯೇ ಕರಪತ್ರ ಮುದ್ರಿಸುವಂತೆ ಚುನಾವಣಾ ಆಯೋಗಕ್ಕೆ ಪತ್ರ
ಬೆಂಗಳೂರು, ಮಾರ್ಚ್ 27: ವಿದ್ಯುನ್ಮಾನ ಮತಯಂತ್ರ ಬಳಕೆ ಬಗ್ಗೆ ಅರಿವು ಮೂಡಿಸಲು ಬಳಸುತ್ತಿರುವ ಕರಪತ್ರಗಳನ್ನು ಕನ್ನಡದಲ್ಲಿಯೇ ಮುದ್ರಿಸಬೇಕು ವಿತರಿಸುವಂತೆ ಚುನಾವಣಾ ಆಯೋಗಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮನವಿ ಮಾಡಿದೆ.
ಈಗಾಗಲೇ ಪ್ರಾರಂಭವಾಗಿರುವ ಚುನಾವಣಾ ಮತಯಂತ್ರ ಕುರಿತು ಅರಿವು ಅಭಿಯಾನದಲ್ಲಿ ಉಪಯೋಗಿಸಲಾಗುತ್ತಿರುವ ಕರಪತ್ರದಲ್ಲಿ ಮಾಹಿತಿಗಳನ್ನು ಇಂಗ್ಲಿಷ್ನಲ್ಲಿ ನೀಡಲಾಗುತ್ತಿದೆ. ಚುನಾವಣೆ ಪ್ರಕ್ರಿಯೆಯಲ್ಲಿ ತೊಡಗುವ ನೌಕರರಿಗೆ ನೀಡುತ್ತಿರುವ ಕರಪತ್ರಗಳು ಕೂಡ ಇಂಗ್ಲಿಷ್ನಲ್ಲೇ ಇವೆ ಎಂಬ ದೂರುಗಳು ಬಂದಿವೆ ಎಂದು ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ. ಸಿದ್ಧರಾಮಯ್ಯ ಹೇಳಿದ್ದಾರೆ.
ನೂತನ ರಾಜ್ಯಸಭಾ ಸದಸ್ಯರು ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕಾರಕ್ಕೆ ಆಗ್ರಹ
ಕನ್ನಡ ಭಾಷೆಯಲ್ಲೇ ಎಲ್ಲ ಮಾಹಿತಿಗಳ ಲಭ್ಯವಾಗುವಂತೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅವರು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಈಗಾಗಲೇ ರಾಜ್ಯವನ್ನು ಕನ್ನಡಮಯ ಮಾಡುವ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪಣ ತೊಟ್ಟಿದೆ. ಕೆಲವು ದಿನಗಳ ಹಿಂದೆ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವವರು ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕರಿಸಬೇಕು ಎಂದು ಪತ್ರ ಬರೆದಿದ್ದರು.