ಚುನಾವಣೆಗೆ ಸ್ಪರ್ಧೆ : ಅಂಬರೀಶ್ ಜೊತೆ ವೇಣುಗೋಪಾಲ್ ಮಾತುಕತೆ!
Recommended Video
ಬೆಂಗಳೂರು, ಏಪ್ರಿಲ್ 06 : ಮಾಜಿ ಸಚಿವ, ಮಂಡ್ಯ ಕ್ಷೇತ್ರದ ಶಾಸಕ ಅಂಬರೀಶ್ ಬಗ್ಗೆ ಕರ್ನಾಟಕ ಕಾಂಗ್ರೆಸ್ ನಾಯಕರು ತಲೆ ಕೆಡಿಸಿಕೊಂಡಿದ್ದಾರೆ. ಅಂಬರೀಶ್ ಅವರು 2018ರ ಚುನಾವಣೆಗೆ ಸ್ಪರ್ಧಿಸುವ ಕುರಿತು ಇನ್ನೂ ಯಾವುದೇ ನಿರ್ಧಾರವನ್ನು ಪ್ರಕಟಿಸಿಲ್ಲ. ಆದ್ದರಿಂದ, ರಾಜ್ಯ ನಾಯಕರು ಹೈ ಕಮಾಂಡ್ ಮೊರೆ ಹೋಗಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅಂಬರೀಶ್ ಅವರ ಜೊತೆ ಮಾತುಕತೆ ನಡೆಸಿದ್ದಾರೆ. ಚುನಾವಣೆಗೆ ಸ್ಪರ್ಧಿಸುವ ಕುರಿತು ಭಾನುವಾರದೊಳಗೆ ಅಂತಿಮ ನಿರ್ಧಾರವನ್ನು ತಿಳಿಸಬೇಕು ಎಂದು ಅಂಬರೀಶ್ ಅವರಿಗೆ ಖಡಕ್ ಸೂಚನೆ ನೀಡಿದ್ದಾರೆ.
ಅಂಬರೀಶ್ ಈ ಬಾರಿಯ ಚುನಾವಣೆಗೆ ಸ್ಪರ್ಧಿಸುವುದಿಲ್ಲವೇ?
ಅಂಬರೀಶ್ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಯಾವ ಕಾಂಗ್ರೆಸ್ ನಾಯಕರ ಸಂಪರ್ಕಕ್ಕೂ ಸಿಗುತ್ತಿಲ್ಲ. ಮತ್ತೊಂದು ಕಡೆ ಚುನಾವಣೆಗೆ ಸ್ಪರ್ಧಿಸುವ ಕುರಿತು ಯಾವುದೇ ತೀರ್ಮಾನವನ್ನು ಪ್ರಕಟಿಸಿಲ್ಲ. ಆದ್ದರಿಂದ, ಕಾಂಗ್ರೆಸ್ ನಾಯಕರು ಕಾದು ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಚುನಾವಣಾ ಅಖಾಡಕ್ಕೆ ರಮ್ಯಾ ತಾಯಿ ರಂಜಿತಾ?
ಮಂಡ್ಯದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಯಾರನ್ನು ಕಣಕ್ಕಿಳಿಸಬಹುದು? ಎಂದು ವರದಿ ತಯಾರಿಸುವಂತೆ ಕೆ.ಸಿ.ವೇಣುಗೋಪಾಲ್ ಪಕ್ಷದ ನಾಯಕರಿಗೆ ಸೂಚನೆ ನೀಡಿದ್ದಾರೆ. ಒಂದು ವೇಳೆ ಅಂಬರೀಶ್ ಸ್ಪರ್ಧಿಸದಿದ್ದಲ್ಲಿ ಅವರ ಆಪ್ತರಿಗೆ ಟಿಕೆಟ್ ನೀಡುವುದಿಲ್ಲ ಎಂಬ ನಿಲುವನ್ನು ಕಾಂಗ್ರೆಸ್ ಹೊಂದಿದೆ..
ಅಂಬರೀಶ್ ಮೌನ ಪಕ್ಷದ ಪಾಲಿಗೆ ಬಿಸಿ ತುಪ್ಪ
2018ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳಿಂದ ಕಾಂಗ್ರೆಸ್ ಪಕ್ಷ ಟಿಕೆಟ್ಗೆ ಅರ್ಜಿ ಆಹ್ವಾನಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರ್ಜಿ ಹಾಕಿದ್ದಾರೆ. ಆದರೆ, ಅಂಬರೀಶ್ ಮೌನವಾಗಿದ್ದಾರೆ. ಅಲ್ಲದೇ ಯಾವ ನಾಯಕರ ಕೈಗೂ ಅವರು ಸಿಕ್ಕಿರಲಿಲ್ಲ.
ಅಂಬರೀಶ್ ಅವರು ಈ ಬಾರಿಯ ಚುನಾವಣೆಗೆ ಸ್ಪರ್ಧಿಸುವರೋ? ಇಲ್ಲವೋ? ಎಂಬುದು ಇನ್ನೂ ಅಂತಿಮಗೊಂಡಿಲ್ಲ. ಆದ್ದರಿಂದ, ರಾಜ್ಯ ನಾಯಕರು ಕೆ.ಸಿ.ವೇಣುಗೋಪಾಲ್ ಅವರಿಗೆ ಈ ಕುರಿತು ಮಾಹಿತಿ ನೀಡಿದ್ದರು.
ಕೆ.ಸಿ.ವೇಣುಗೋಪಾಲ್ ಅವರು ಅಂಬರೀಶ್ ಅವರಿಗೆ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ. ನಿರ್ಧಾರವನ್ನು ತಿಳಿಸಲು ಅಂಬರೀಶ್ ಅವರಿಗರೆ ಏಪ್ರಿಲ್ 8ರ ತನಕ ಸಮಯ ನೀಡಿದ್ದಾರೆ. ಮತ್ತೊಂದು ಕಡೆ ಮಂಡ್ಯದಿಂದ ಯಾರು ಅಭ್ಯರ್ಥಿಯಾಗಬಹುದು? ಎಂದು ವರದಿ ತಯಾರು ಮಾಡಲು ಸೂಚನೆ ನೀಡಿದ್ದಾರೆ.
ನಿರ್ಧಾರವನ್ನು ನನಗೇ ತಿಳಿಸಿ
ಏಪ್ರಿಲ್ 9ರಂದು ಕೇಂದ್ರ ಚುನಾವಣಾ ಸಮಿತಿಯ ಸಭೆ ಇದೆ. ಅದಕ್ಕೂ ಮೊದಲು ತಮ್ಮ ನಿರ್ಧಾರವನ್ನು ತಿಳಿಸಿ ಎಂದು ವೇಣುಗೋಪಾಲ್ ಅಂಬರೀಶ್ ಅವರಿಗೆ ಸೂಚನೆ ನೀಡಿದ್ದಾರೆ. 'ನಾನು ಬೆಂಗಳೂರಿನಲ್ಲಿಯೇ ಇರುವೆ. ನೀವು ನಿಮ್ಮ ನಿರ್ಧಾರವನ್ನು ನನಗೆ ತಿಳಿಸಬೇಕು' ಎಂದು ವೇಣುಗೋಪಾಲ್ ಅವರು ಸೂಚನೆ ಕೊಟ್ಟಿದ್ದಾರೆ.
ಕೆ.ಸಿ.ವೇಣುಗೋಪಾಲ್ ಅವರು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರ ಜೊತೆ ಈ ಅಂಬರೀಶ್ ಅವರ ಕುರಿತು ಚರ್ಚೆ ನಡೆಸಿದ್ದಾರೆ. ಮಂಡ್ಯ ಜಿಲ್ಲಾ ಕಾಂಗ್ರೆಸ್ ನಾಯಕರ ಅಭಿಪ್ರಾಯವನ್ನು ಸಂಗ್ರಹಣೆ ಮಾಡುವಂತೆ ಸೂಚನೆ ನೀಡಿದ್ದಾರೆ. ಅಂಬರೀಶ್ ಅವರಿಗೆ ಟಿಕೆಟ್ ಸಿಗಲಿದೇಯೇ? ಕಾದು ನೋಡಬೇಕು.
ಮಂಡ್ಯದ ಬೆಂಬಲಿಗರ ಸಭೆ
ಮಾರ್ಚ್ 31ರಂದು ಅಂಬರೀಶ್ ಅವರು ಮಂಡ್ಯದಿಂದ ಆಗಮಿಸಿದ್ದ ಅಭಿಮಾನಿಗಳ ಜೊತೆ ಸಭೆ ನಡೆಸಿದ್ದರು. 'ನಾನು ಸಿಂಗಪುರಕ್ಕೆ ಹೋಗಿ ಬಂದ ಮೇಲೆ ಹಿಂದಿನ ಶಕ್ತಿ ಉಳಿದಿಲ್ಲ. ಆದರೆ, ಏಪ್ರಿಲ್ 2ರಂದು ಎಲ್ಲರ ಜೊತೆ ಚರ್ಚಿಸಿ ತೀರ್ಮಾನ ಪ್ರಕಟಿಸುವೆ' ಎಂದು ಹೇಳಿದ್ದರು. ಆದರೆ, ಏಪ್ರಿಲ್ 2ರಂದು ಯಾವುದೇ ನಿರ್ಧಾರವನ್ನು ಅವರು ಘೋಷಣೆ ಮಾಡಿಲ್ಲ.
ಅಂಬರೀಶ್ ಅವರು ಮಂಡ್ಯ ಕ್ಷೇತ್ರದ ಟಿಕೆಟ್ ಬೇಕು ಎಂದು ಕೆಪಿಸಿಸಿಗೆ ಅರ್ಜಿ ಸಲ್ಲಿಸಿಲ್ಲ. ಪಕ್ಷದ ನಾಯಕರ ಸಂಪರ್ಕಕ್ಕೂ ಸಿಗುತ್ತಿಲ್ಲ. ಆದ್ದರಿಂದ, ಅವರು ಚುನಾವಣೆಗೆ ಸ್ಪರ್ಧಿಸಲಿದ್ದಾರೆಯೇ? ಇಲ್ಲವೇ? ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
‘ಟಿಕೆಟ್ ಕೊಟ್ಟರೆ ಸ್ಪರ್ಧಿಸುವೆ'
ಚುನಾವಣೆ ದಿನಾಂಕ ಘೋಷಣೆಗೂ ಮುನ್ನ ಮಂಡ್ಯದಿಂದ ಮಾಜಿ ಸಂಸದೆ ರಮ್ಯಾ ಅವರು ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಅಂಬರೀಶ್ ಅವರು 'ರಮ್ಯಾ ಸ್ಪರ್ಧೆ ಮಾಡಿದರೆ ಸ್ವಾಗತ ಮಾಡುತ್ತೇನೆ' ಎಂದು ಹೇಳಿದ್ದರು.
'ಪಕ್ಷದ ಹೈಕಮಾಂಡ್ ಟಿಕೆಟ್ ಕೊಟ್ಟರೆ ನಾನಯ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ' ಎಂದು ಹೇಳಿದ್ದರು. ಆದರೆ, ಅವರು ಈಗ ಮೌನಕ್ಕೆ ಶರಣಾಗಿರುವುದು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆದರೆ, ಅಂಬರೀಶ್ ಅವರು ಮಾತ್ರ ಯಾವುದಕ್ಕೂ ಉತ್ತರ ನೀಡುತ್ತಿಲ್ಲ.
ರಾಹುಲ್ ಮಂಡ್ಯಕ್ಕೆ ಬಂದಿದ್ದರು
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಳೆದ ವಾರ ಮಂಡ್ಯಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅಂಬರೀಶ್ ಅವರು ರಾಹುಲ್ ಗಾಂಧಿ ಕಾರ್ಯಕ್ರಮಗಳಿಂದ ದೂರವುಳಿದಿದ್ದರು.
ಚುನಾವಣೆ ದಿನಾಂಕ ಘೋಷಣೆಗೂ ಮೊದಲು ಅಂಬರೀಶ್ ಜೆಡಿಸ್ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಸ್ವತಃ ಅಂಬರೀಶ್ ಈ ಸುದ್ದಿಗಳನ್ನು ತಳ್ಳಿ ಹಾಕಿದ್ದರು.
ಈಗ ಏಪ್ರಿಲ್ 8ರೊಳಗೆ ಅಂಬರೀಶ್ ಅಂತಿಮ ತೀರ್ಮಾನವನ್ನು ಕೈಗೊಳ್ಳಲಿದ್ದಾರೆಯೇ? ಅವರು ಪುನಃ ಚುನಾವಣೆಗೆ ಸ್ಪರ್ಧಿಸಲಿದ್ದಾರೆ? ಎಂದು ಕಾದು ನೋಡಬೇಕಿದೆ.