ರಾಜ್ಯ ಕಾಂಗ್ರೆಸ್ಗೆ ಆಘಾತ ನೀಡಿದ ರಾಜ್ಯಸಭಾ ಸದಸ್ಯ
ಬೆಂಗಳೂರು, ಅಕ್ಟೋಬರ್ 16: ಲೋಕಸಭೆ ಚುನಾವಣೆಯ ಸೋಲಿನ ಬಳಿಕ ರಾಜ್ಯದಲ್ಲಿ ಪಕ್ಷವನ್ನು ಬಲಗೊಳಿಸಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸರ್ಕಾರ ರಚಿಸಬೇಕೆಂಬ ಗುರಿ ಹೊಂದಿರುವ ಕಾಂಗ್ರೆಸ್ಗೆ ಆಘಾತ ಎದುರಾಗಿದೆ. ರಾಜ್ಯಸಭೆಯಲ್ಲಿನ ಕಾಂಗ್ರೆಸ್ನ ಮತ್ತೊಂದು ಶಕ್ತಿ ಪಕ್ಷದಿಂದ ಹೊರನಡೆದಿದೆ.
ರಾಜ್ಯಸಭೆ ಸದಸ್ಯ ಕೆಸಿ ರಾಮಮೂರ್ತಿ ಅವರು ರಾಜ್ಯಸಭಾ ಸದಸ್ಯತ್ವ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ. ಅದರ ಜತೆಗೆ ಅವರು ಕಾಂಗ್ರೆಸ್ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ. ತಮ್ಮ ಸಂಸದ ಸ್ಥಾನದ ರಾಜೀನಾಮೆ ಪತ್ರವನ್ನು ಅವರು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಸಲ್ಲಿಸಿದ್ದಾರೆ.
ಚುನಾವಣೆಗೂ ಮುನ್ನ ಶಿವಸೇನೆಗೆ ಭಾರೀ ಆಘಾತ, ರಾಜೀನಾಮೆ ನೀಡಿದ 26 ಮುಖಂಡರು!
ಮಾಜಿ ಐಪಿಎಸ್ ಅಧಿಕಾರಿಯಾಗಿರುವ ಕೆಸಿ ರಾಮಮೂರ್ತಿ ಅವರು 2016ರಲ್ಲಿ ರಾಜ್ಯಸಭೆಗೆ ಕಾಂಗ್ರೆಸ್ ಸದಸ್ಯರಾಗಿ ರಾಜ್ಯದಿಂದ ಆಯ್ಕೆಯಾಗಿದ್ದರು. ರಾಜೀನಾಮೆಗೂ ಮುನ್ನ ಅವರು ಬಿಜೆಪಿಯ ಕೆಲವು ಮುಖಂಡರನ್ನು ಭೇಟಿ ಮಾಡಿದ್ದರು. ಅವರು ಕಮಲದ ಪಾಳೆಯಕ್ಕೆ ಜಿಗಿಯಲಿದ್ದು, ಹೀಗಾಗಿಯೇ ರಾಜ್ಯಸಭೆ ಸದಸ್ಯ ಸ್ಥಾನದ ಜತೆಗೆ ಕಾಂಗ್ರೆಸ್ಗೆ ಕೂಡ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ.
ಕೇಂದ್ರ ಸಮಿತಿಯಲ್ಲಿ ಸ್ಥಾನ
ಕೇಂದ್ರದಲ್ಲಿನ ಎನ್ಡಿಎ ಸರ್ಕಾರ ಸೆ.14ರಂದು ಸಂಸದೀಯ ಸಮಿತಿಗಳನ್ನು ಪುನಾರಚನೆ ಮಾಡಿತ್ತು. ಆಗ ಕೆ.ಸಿ. ರಾಮಮೂರ್ತಿ ಅವರನ್ನು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಹಾಗೂ ಕಾನೂನು ಮತ್ತು ನ್ಯಾಯ ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗಿತ್ತು. ಅದಾಗಿ ಒಂದು ತಿಂಗಳಿನಲ್ಲಿಯೇ ಅವರು ರಾಜೀನಾಮೆ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಗೆ ಆಘಾತ: ಪಕ್ಷಕ್ಕೆ ರಾಜೀನಾಮೆ ನೀಡಿದ ಊರ್ಮಿಳಾ ಮಾತೋಂಡ್ಕರ್
ಜೆಡಿಎಸ್ ಶಾಸಕರ ಅಡ್ಡಮತದಾನದಿಂದ ಗೆಲುವು
2016ರ ಜೂನ್ 11ರಂದು ಕರ್ನಾಟಕದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಕಾಂಗ್ರೆಸ್ನಿಂದ ಆಸ್ಕರ್ ಫರ್ನಾಂಡಿಸ್ ಮತ್ತು ಜೈರಾಂ ರಮೇಶ್ ಅವರೊಂದಿಗೆ ಮೂರನೇ ಅಭ್ಯರ್ಥಿಯಾಗಿ ಕೆಸಿ ರಾಮಮೂರ್ತಿ ಸ್ಪರ್ಧಿಸಿದ್ದರು. ಜೆಡಿಎಸ್ನ ಎಂಟು ಶಾಸಕರು ಅಡ್ಡ ಮತದಾನ ನಡೆಸಿದ್ದರಿಂದ 52 ಮತಗಳನ್ನು ಪಡೆದು ಅತಿ ಹೆಚ್ಚು ಮತಗಳೊಂದಿಗೆ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಆಸ್ಕರ್ ಫರ್ನಾಂಡಿಸ್ ಮತ್ತು ಜೈರಾಂ ರಮೇಶ್ ತಲಾ 46 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು.
ಭೂಕಬಳಿಕೆ ಆರೋಪ
ಐಪಿಎಸ್ ಅಧಿಕಾರಿಯಾಗಿದ್ದ ರಾಮಮೂರ್ತಿ ಅವರು ಪೊಲೀಸ್ ಮಹಾನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ರಾಜಕಾರಣಕ್ಕೆ ಬರುವ ಸಲುವಾಗಿ 2007ರಲ್ಲಿ ಅವರು ಪೊಲೀಸ್ ಇಲಾಖೆಯಿಂದ ನಿವೃತ್ತಿ ಪಡೆದಿದ್ದರು. ರಾಮಮೂರ್ತಿ ಅವರು ಸಿಎಂಆರ್ ಜನಾರ್ದನ ಟ್ರಸ್ಟ್ನ ಅಧ್ಯಕ್ಷರಾಗಿದ್ದಾರೆ. 2006ರಲ್ಲಿ ಐಜಿಪಿ ಹುದ್ದೆಯಲ್ಲಿದ್ದ ರಾಮಮೂರ್ತಿ ಅವರು ದೊಡ್ಡಗುಬ್ಬಿ ಸಮೀಪದ ಅಥಿನಾ ಟೌನ್ಶಿಪ್ನಲ್ಲಿ ಅನಿವಾಸಿ ಭಾರತೀಯರ ನಿವೇಶನಗಳನ್ನು ಕಬಳಿಸಿದ್ದಾರೆ ಎಂದು 2013ರಲ್ಲಿ ದೂರು ದಾಖಲಾಗಿತ್ತು.
ಬಿಜೆಪಿ ಸೇರುವ ಬಗ್ಗೆ ಶೀಘ್ರ ತೀರ್ಮಾನ
ಕಾಂಗ್ರೆಸ್ ಪಕ್ಷದಲ್ಲಿ ನಿಂತ ನೀರಾಗಿದ್ದೆ. ಯಾರನ್ನೋ ವಿರೋಧಿಸಲು ಅಥವಾ ಬೆಂಬಲಿಸಲು ನಾನು ರಾಜೀನಾಮೆ ನೀಡಿಲ್ಲ. ಅಭಿವೃದ್ಧಿ ಕಾರ್ಯದಲ್ಲಿ ಕೈಜೋಡಿಸುವ ಸಲುವಾಗಿ ರಾಜೀನಾಮೆ ನೀಡಿದ್ದೇನೆ. ರಾಷ್ಟ್ರ ಅಥವಾ ರಾಜ್ಯ ರಾಜಕಾರಣದಲ್ಲಿ ಸಕ್ರಿಯನಾಗಿರುತ್ತೇನೆ. ಯಾವ ಪಕ್ಷದೊಂದಿಗೆ ಸಕ್ರಿಯವಾಗಿ ಇರುತ್ತೇನೆ ಎಂದು ಮುಂದೆ ಹೇಳುತ್ತೇನೆ. ಕಾಂಗ್ರೆಸ್ ಮತ್ತು ಅದರ ನಾಯಕರ ಬಗ್ಗೆ ಮಾತನಾಡುವುದಿಲ್ಲ. ಬಿಜೆಪಿ ಸೇರುವ ಬಗ್ಗೆ ಶೀಘ್ರದಲ್ಲಿಯೇ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಅವರು ರಾಜೀನಾಮೆ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ.