ಕಾಶೀಮಠಕ್ಕೆ ಮೋಸ ಮಾಡಿದ್ದ ಮಾಜಿ ಸ್ವಾಮೀಜಿ 'ಚೋಟು' ಕೊನೆಗೂ ಬಂಧನ
ಕಾಶೀಮಠಕ್ಕೆ ನಂಬಿಕೆ ದ್ರೋಹದ ಕೆಲಸ ಮಾಡಿದ್ದ, ಮಠದ ಪದಚ್ಯುತ ಸ್ವಾಮೀಜಿ ರಾಘವೇಂದ್ರ ತೀರ್ಥ ಯಾನೆ ಶಿವಾನಂದ ಪೈಯನ್ನು ಬೆಂಗಳೂರು ಹೊರವಲಯದಲ್ಲಿ ಸೋಮವಾರ (ಮಾ 6) ಬಂಧಿಸಲಾಗಿದೆ.
ತಿರುಪತಿ, ಮಾ 6: ಅಸಂಖ್ಯಾತ ಭಕ್ತರನ್ನು ಹೊಂದಿರುವ ಶ್ರೀಕಾಶೀಮಠಕ್ಕೆ ನಂಬಿಕೆ ದ್ರೋಹದ ಕೆಲಸ ಮಾಡಿದ್ದ, ಮಠದ ಪದಚ್ಯುತ ಸ್ವಾಮೀಜಿ ರಾಘವೇಂದ್ರ ತೀರ್ಥ ಯಾನೆ ಶಿವಾನಂದ ಪೈಯನ್ನು ಬೆಂಗಳೂರು ಹೊರವಲಯದಲ್ಲಿ ಸೋಮವಾರ (ಮಾ 6) ಬಂಧಿಸಲಾಗಿದೆ.
ಮಠಕ್ಕೆ ಸೇರಿದ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ವಸ್ತುಗಳನ್ನು ಅಪಹರಿಸಿ ಶಿವಾನಂದ ಪೈ ಕಳೆದ ಹಲವಾರು ವರ್ಷಗಳಿಂದ ತಲೆಮರೆಸಿಕೊಂಡಿದ್ದ.
ತಿರುಪತಿ ಮತ್ತು ಕಡಪ ನ್ಯಾಯಾಲಯ ಶ್ರೀ ಸಂಸ್ಥಾನದ ಕೋಟ್ಯಾಂತರ ಬೆಲೆಬಾಳುವ ಚಿನ್ನಾಭರಣ ಹಾಗೂ ಇತರ ಸ್ವತ್ತುಗಳನ್ನು ಸಂಸ್ಥಾನಕ್ಕೆ ಹಿಂತಿರುಗಿಸುವಂತೆ ಶಿವಾನಂದ ಪೈಗೆ ಆದೇಶ ನೀಡಿತ್ತು.
ನ್ಯಾಯಾಲಯದ ಆದೇಶಕ್ಕೆ ಬೆಲೆ ನೀಡದೇ ಶಿವಾನಂದ ಪೈ ತಲೆಮರೆಸಿಕೊಂಡಿದ್ದರಿಂದ, ಕೇರಳ ಪೋಲಿಸರು ಕೂಡಾ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವಂತೆ ಮನವಿ ಸಲ್ಲಿಸಿದ್ದರು.
ಶಿವಾನಂದ ಪೈ ವಿರುದ್ದ ಕರ್ನಾಟಕ ಸೇರಿದಂತೆ ಮೂರು ರಾಜ್ಯಗಳಲ್ಲಿ ಕೇಸು ದಾಖಲಾಗಿತ್ತು. ಕೊನೆಗೂ, ಆಂಧ್ರದ ಸಿಐಡಿ ಪೋಲೀಸರು ಸೋಮವಾರ ರಾಘವೇಂದ್ರ ತೀರ್ಥ ಯಾನೆ ಶಿವಾನಂದ ಪೈ ಯಾನೆ 'ಚೋಟು' ವನ್ನು ಬೆಂಗಳೂರು ಹೊರವಲಯದ ಹೊಸೂರಿನಲ್ಲಿ ಪತ್ತೆ ಹಚ್ಚಿ ತಿರುಪತಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ತಿರುಪತಿ ನ್ಯಾಯಲಯವು ಮಾರ್ಚ 20ರ ವರೆಗೆ ಈತನಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ. ಕಾಶೀಮಠ ಸಂಸ್ಥಾನಕ್ಕೆ ಸೇರಿದ 500 ವರ್ಷಗಳಿಗೂ ಹಳೆಯದಾದ ಅತ್ಯಮೂಲ್ಯ ವಸ್ತುಗಳನ್ನು ಉಚ್ಚಾಟಿತ ಯತಿ ಮಠಕ್ಕೆ ಮರಳಿಸಿರಲಿಲ್ಲ ಎನ್ನುವ ಗುರುತರ ಆರೋಪ ಈತನ ಮೇಲಿದೆ.
ಮಠದ ಉಚ್ಚಾಟಿತ ಯತಿ ಕೇರಳದ ವಯನಾಡಿನ ಆಶ್ರಮವೊಂದರಲ್ಲಿ ಆಶ್ರಯ ಪಡೆದಿದ್ದ ಎನ್ನುವ ಮಾಹಿತಿ ಈ ಹಿಂದೆ ಆಂಧ್ರ ಪೊಲೀಸರಿಗೆ ಲಭ್ಯವಾಗಿತ್ತು. ಆದರೆ ಆಂಧ್ರ ಮತ್ತು ಕೇರಳ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದರೂ ಶಿವಾನಂದ ಪೈ ಸೆರೆ ಹಿಡಿಯುವಲ್ಲಿ ಪೊಲೀಸರು ವಿಫಲರಾಗಿದ್ದರು.
ಇದಾದ ನಂತರ ಸಿಬಿಐ ಈತನ ವಿರುದ್ದ ' ರೆಡ್ ಕಾರ್ನರ್' ನೋಟಿಸ್ ಹೊರಡಿಸಿ, ಮಾಹಿತಿ ನೀಡಿದವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿತ್ತು. (ಚಿತ್ರ: ಮಂಜು ನೀರೇಶ್ವಾಲ್ಯ)