ಪಾವೂರು ಚರ್ಚಿನಲ್ಲಿ ತುಳುಗೆ ಮಣೆ; ಬೆಂಗಳೂರಿನಲ್ಲಿ?
ಮಂಗಳೂರು/ ಬೆಂಗಳೂರು, ಅ.23: ಕರಾವಳಿಗೂ ಕ್ರೈಸ್ತರಿಗೂ ನಿಜಕ್ಕೂ ಅವಿನಾಭಾವ ಸಂಬಂಧವಿದೆ. ಕಾಸರಗೋಡು ಸಮೀಪದ ಪಾವೂರಿನಲ್ಲಿ ಶತಮಾನದಷ್ಟು ಹಳೆಯದಾದ ಹೋಲಿ ಕ್ರಾಸ್ ಚರ್ಚ್ ಇದೆ. ಪ್ರಾದೇಶಿಕ ಸೊಗಡಿಗೆ ಒತ್ತು ನೀಡುವ ಇಲ್ಲಿನ ಕರಾವಳಿ ಕ್ರೈಸ್ತರು ತುಳು ಭಾಷೆಯಲ್ಲಿ ಮಾತ್ರವೇ ಪೂಜಾ ವಿಧಿಗಳನ್ನು ನಡೆಸುತ್ತಾ ಬಂದಿದ್ದಾರೆ.
ಕೆಲವೊಂದು ಸಂದರ್ಭಗಳಲ್ಲಿ ಸಣ್ಣ ಪುಟ್ಟ ಕಾರ್ಯಕ್ರಮಗಳಲ್ಲಿ ಮಕ್ಕಳಿಗೆ ಹಾಗೂ ತುಳುವೇತರರಿಗೆ ಅರ್ಥವಾಗುವ ನಿಟ್ಟಿನಲ್ಲಿ ಕನ್ನಡದಲ್ಲಿ ಪೂಜೆಯ ಹೊರತಾಗಿ ಉಳಿದಂತೆ ವರ್ಷವಿಡೀ, ವಾರದ ಪೂಜೆ, ಸಭೆ, ಸಮಾರಂಭ, ಮದುವೆ, ಸಾವು, ತಿಂಗಳ ಪೂಜೆ, ವರ್ಷದ ಪೂಜೆ, ಬಲಿ ಪೂಜೆ ಎಲ್ಲವೂ ಪಾವೂರು ಚರ್ಚಿನಲ್ಲಿ ತುಳುವಿನಲ್ಲೇ ನಡೆಯುತ್ತಿದೆ ಎನ್ನುತ್ತಾರೆ ಧರ್ಮ ಕೇಂದ್ರದ ಗುರುಗಳಾದ ಫಾ. ಅಲೋಶಿಯಸ್ ಸಂತಿಯಾಗೊ.
ಸ್ಥಳೀಯರ ಮಾತೃ ಭಾಷೆಯಲ್ಲೇ ಪೂಜೆ ವಿಧಿ ವಿಧಾನಗಳನ್ನು ಮಾಡುವ ಮೂಲಕ ಅವರ ಕಷ್ಟ ಸುಖಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯ. ಅದಕ್ಕಾಗಿಯೇ, ಈ ಕೇಂದ್ರಕ್ಕೆ ಧರ್ಮಗುರುವಾಗಿ ಬರುವ ಮೊದಲು ತುಳುವಿನ ಬಗ್ಗೆ ಅಲ್ಪ ಸ್ವಲ್ಪ ಜ್ಞಾನ ಹೊಂದಿದ್ದ ನನಗೆ ತುಳು ಕಲಿಯಲು ಪ್ರೇರಣೆ ನೀಡಿತು ಎನ್ನುವುದು ಅವರ ಮಾತು.
ಇಲ್ಲಿಯ ಜನರ ಜತೆ ಬೆರೆತು ಅವರನ್ನು ಅರಿತು, ಭಾಷೆಯನ್ನು ಕಲಿತು ತುಳುವಿನಲ್ಲೇ ಪೂಜೆ ಪುನಸ್ಕಾರಗಳ ಕುರಿತು ಪುಸ್ತಕಗಳನ್ನು ಬರೆದಿರುವ ಹಿಂದಿನ ಧರ್ಮಗುರುಗಳ ಶ್ರಮ, ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಆದರೆ ವಿಷಯ ಅದಲ್ಲ.
ಕಾಗುಣಿತಗಳು ಇಲ್ಲೆಲ್ಲೂ ಕಾಣಿಸೋಲ್ಲ: ನಮ್ ರಾಜಧಾನಿ ಬೆಂಗಳೂರು ಇದೆಯಲ್ಲಾ. ಅಲ್ಲಿನ ಚರ್ಚುಗಳಿಗೆ ಹೋಹಿ ನೋಡಬೇಕು. ಥೇಮ್ಸ್ ನದಿ ದಡೆಯ ನಗರಕ್ಕೆ ಹೋಗಿಬಂದಂತಾಗುತ್ತದೆ. ಇಲ್ಲಿ ಇಂಗ್ಲೀಷು ಜೋರು. ಜತೆಗೆ ತಮಿಳು ಮತ್ತು ಮಲಯಾಳಂ ಕಾರುಬಾರು. ಆದರೆ ವಿಷಯ ಅದಲ್ಲ. ನಮ್ಮ ಕನ್ನಡ ಅಲ್ಲೆಲ್ಲಾದರೂ ಇದೆಯಾ ಅಂತ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ನೋಡಿದರೆ? ಉಹುಂ, ಕಾಗುಣಿತಗಳು ಅಲ್ಲೆಲ್ಲೂ ಕಾಣಿಸೋಲ್ಲ.
ಅತ್ತ ದೂರದ ಕರಾವಳಿಯಲ್ಲಿ ಕ್ರೈಸ್ತರು ಪ್ರಾದೇಶಿಕ ಸೊಗಡನ್ನು ಉಳಿಸಿಕೊಂಡು ತುಳು ಭಾಷೆಯಲ್ಲಿ ಮಾತ್ರವೇ ಪೂಜಾ ವಿಧಿ ನಡೆಸುತ್ತಾರೆ ಮತ್ತು ಅದರಿಂದ ಸ್ಥಳೀಯರ ಕಷ್ಟ ಸುಖಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯ ಎಂಬುದು ಧರ್ಮಗುರು ಫಾ. ಅಲೋಶಿಯಸ್ ಸಂತಿಯಾಗೊ ಅವರ ನಡೆನುಡಿಯಾಗಿರುವಾಗ ರಾಜಧಾನಿಯಲ್ಲಿ ಇದೇನಿದು?
ಬೆಂಗಳೂರಿನ ಸಕಲ ಸವಲತ್ತುಗಳನ್ನೂ ಅನುಭವಿಸುತ್ತಿರುವ ಇಲ್ಲಿನ ಚರ್ಚುಗಳು ಸ್ಥಳೀಯರಿಗೆ ನೆರವಾಗುವುದಿರಲಿ ಕನ್ನಡಕ್ಕೆ ಕನಿಷ್ಠ ಅರ್ಹ ಸ್ಥಾನವೂ ಕಲ್ಪಿಸದಿರುವುದು ದುರ್ದೈವ ಅನ್ನೋಣವಾ?