ಬಿಜೆಪಿ ನಾಯಕರಿಬ್ಬರನ್ನು ಬಿಟ್ಟು 6 ಜನರನ್ನು ಹಿಡಿದ ಕಾರವಾರ ಪೊಲೀಸರು
ಕಾರವಾರ, ಅಕ್ಟೋಬರ್ 13: ಭಟ್ಕಳದ ಪುರಸಭೆ ಮಳಿಗೆ ಹರಾಜು ಸಂದರ್ಭದಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಬಿಜೆಪಿ ಮುಖಂಡರಾದ ಗೋವಿಂದ ನಾಯ್ಕ ಹಾಗೂ ಕೃಷ್ಣ ನಾಯ್ಕ ಆಸರಕೇರಿ ಅವರನ್ನು ಇಂದು (ಅ.13) ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಆದರೆ ಇವರಿಬ್ಬರನ್ನು ಬಿಟ್ಟು ಮತ್ತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜಾಮೀನಿನ ಮೇಲೆ ಬಿಡುಗಡೆಯಾದ ಗೋವಿಂದ ಹಾಗೂ ಕೃಷ್ಣ ಅವರನ್ನು ಕರೆದುಕೊಂಡು ಹೋಗಲು ಬಂದಿದ್ದ ಭಟ್ಕಳದ ರಾಘು ನಾಯ್ಕ, ಶಿವರಾಜ ನಾಯ್ಕ, ಕುಮಾರ ನಾಯ್ಕ, ಶ್ರೀನಿವಾಸ ನಾಯ್ಕ, ಉದಯ ನಾಯ್ಕ, ರಾಜೇಶ ಎನ್ನುವವರನ್ನು ಪೊಲೀಸರು ಜಿಲ್ಲಾ ಕಾರಾಗೃಹದ ಮುಂಭಾಗದಲ್ಲೇ ಬಂಧಿಸಿದ್ದಾರೆ.
ಭಟ್ಕಳದ ಪುರಸಭೆಯ ಗಲಭೆಯಲ್ಲಿ ಇವರು ಪಾಲ್ಗೊಂಡಿದ್ದು, ಬಳಿಕ ತಲೆಮರೆಸಿಕೊಂಡಿದ್ದರು ಎನ್ನಲಾಗಿದೆ. ಶುಕ್ರವಾರ ಬಿಡುಗಡೆಯಾದವರನ್ನು ಭಟ್ಕಳಕ್ಕೆ ಕರೆದೊಯ್ಯಲು ಇವರೆಲ್ಲಾ ಕಾರವಾರಕ್ಕೆ ಆಗಮಿಸಿದ್ದರು. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡ ಪೊಲೀಸರು ಈ ಆರು ಜನರನ್ನು ಬಂಧಿಸಿದ್ದಾರೆ.
ಘಟನೆಯ ಹಿನ್ನೆಲೆ:
ಕಳೆದ ಸೆಪ್ಟೆಂಬರ್ 14ರಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪುರಸಭೆ ವ್ಯಾಪ್ತಿಯ ವ್ಯಾಪಾರ ಮಳಿಗೆ ತೆರವು ಮಾಡಲು ಅಧಿಕಾರಿಗಳು ಮುಂದಾದಾಗ ಅಂಗಡಿ ವ್ಯಾಪಾರಿ ರಾಮಚಂದ್ರ ನಾಯ್ಕ ಎಂಬಾತ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಇದರಿಂದಾಗಿ ಭಟ್ಕಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.
ಅದೇ ಸಂದರ್ಭದಲ್ಲಿ ಭಟ್ಕಳ ಪುರಸಭೆಯ ಮಳಿಗೆಯ ಮೇಲೆ ಕಲ್ಲು ತೂರಾಟ ಮಾಡಿ, ಗಲಭೆ ಎಬ್ಬಿಸಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಬಿಜೆಪಿ ಮುಖಂಡ ಗೋವಿಂದ ನಾಯ್ಕ ಹಾಗೂ ಕೃಷ್ಣಾ ಆರಸಕೇರಿ ಸೇರಿದಂತೆ ಇನ್ನಿತರರ ಮೇಲೆ ದೂರು ದಾಖಲಿಸಿದ್ದರು.
ಬಂಧಿತರು ಭಟ್ಕಳ ಜೆಎಂಎಫ್ಸಿ ನ್ಯಾಯಾಲಯಕ್ಕೆ ಜಾಮೀನಿಗಾಗಿ ಸಲ್ಲಿಸಿದ ಅರ್ಜಿಯನ್ನು ಕೋರ್ಟ್ ತಿರಸ್ಕಾರ ಮಾಡಿತ್ತು. ಬಳಿಕ ಬಂಧಿತರು ಕಾರವಾರದ ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು.
ಬಂಧಿತರ ಪರ ನ್ಯಾಯವಾದಿ ನಾಗರಾಜ ನಾಯಕ ವಾದ ಮಾಡಿ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಈ ಹಿನ್ನಲೆಯಲ್ಲಿ ಇಂದು ಆರೋಪಿಗಳು ಬಿಡುಗಡೆಯಾಗಿದ್ದರು.