ಫಲಿಸಿದ ಪ್ರತಿಭಟನೆ, ಕರ್ನಾಟಕ ವಿವಿ ಪರೀಕ್ಷೆ ಮುಂದೂಡಿಕೆ
ಕಾರವಾರ, ಅಕ್ಟೋಬರ್ 16: ಕರ್ನಾಟಕ ವಿಶ್ವವಿದ್ಯಾಲಯದ ಬಿಎಸ್ ಸಿ ಪರೀಕ್ಷೆಯ ದಿನಾಂಕವನ್ನು ಮುಂದೂಡಲಾಗಿದೆ. ನವೆಂಬರ್ 4ಕ್ಕೆ ಪ್ರಾರಂಭವಾಗಬೇಕಿದ್ದ ಬಿಎಸ್ ಸಿ ಪರೀಕ್ಷೆಗಳನ್ನು ನವೆಂಬರ್ 11ಕ್ಕೆ ಮುಂದೂಡಲಾಗಿದೆ.
ಬಿಎಸ್ ಸಿ ಪರೀಕ್ಷೆಯ ದಿನಾಂಕವನ್ನು ಮುಂದೂಡುವಂತೆ ಕಾರವಾರ- ಅಂಕೋಲಾದ ಶಾಸಕ ಸತೀಶ ಸೈಲ್ ತಮ್ಮ ಕ್ಷೇತ್ರದ ವಿದ್ಯಾರ್ಥಿಗಳನ್ನು ಧಾರವಾಡಕ್ಕೆ ಕರೆದೊಯ್ದು, ಕರ್ನಾಟಕ ವಿಶ್ವವಿದ್ಯಾಲಯದ ಉಪ ಕುಲಪತಿಯ ಕಚೇರಿ ಎದುರು ಪ್ರತಿಭಟನೆ ನಡೆಸುವ ಮೂಲಕ ಪರೀಕ್ಷೆಯ ದಿನಾಂಕವನ್ನು ಮುಂದೂಡುವಲ್ಲಿ ಯಶಸ್ವಿಯಾಗಿದ್ದಾರೆ.
ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದ ಎಲ್ಲ ಪರೀಕ್ಷೆಗಳನ್ನು ನವೆಂಬರ್ ಅಂತ್ಯದೊಳಗೆ ಏಕಕಾಲದಲ್ಲಿ ಪೂರ್ಣಗೊಳಿಸುವಂತೆ ಇತ್ತೀಚಿಗೆ ಸರ್ಕಾರ ಸುತ್ತೋಲೆಯೊಂದನ್ನು ಹೊರಡಿಸಿ ಆದೇಶಿಸಿತ್ತು.
ಆದರೆ, ಎಲ್ಲ ಕಾಲೇಜುಗಳಲ್ಲಿ ಶೇ 75ರಷ್ಟು ಬೋಧನಾ ಕಾರ್ಯವು ಅತಿಥಿ ಉಪನ್ಯಾಸಕರಿಂದಲೇ ಆಗಬೇಕಿದ್ದು, ಈ ಬಾರಿ ಅವರ ನೇಮಕಾತಿಯಲ್ಲಿಯ 2 ತಿಂಗಳು ವಿಳಂಬವಾಗಿತ್ತು.
ಹೀಗಾಗಿ ಯಾವುದೇ ಪೂರ್ವ ತಯಾರಿ ಇಲ್ಲದೇ ಪಠ್ಯಕ್ರಮಗಳನ್ನು ಪೂರ್ಣಗೊಳಿಸದೇ ಪರೀಕ್ಷಾ ದಿನಾಂಕ ಘೋಷಣೆ ಮಾಡಿರುವುದು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟು ಮಾಡಿತ್ತು.
ಇದರ ವಿರುದ್ಧ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆಗಳನ್ನು ಮಾಡಿದ್ದರು. ಕಾರವಾರ- ಅಂಕೋಲಾದ ವಿದ್ಯಾರ್ಥಿಗಳು ಕೂಡ ಪರೀಕ್ಷೆ ಮುಂದೂಡಲು ಒತ್ತಾಯಿಸುವಂತೆ ಮನವಿ ಮಾಡಿದ್ದರು.
ಹೀಗಾಗಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಇಲ್ಲಿನ ಶಾಸಕ ಸತೀಶ ಸೈಲ್, ಉಪಕುಲಪತಿ ಪ್ರಮೋದ ಘಾಯಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಪರೀಕ್ಷೆ ಮುಂದೂಡುವಂತೆ ಒತ್ತಾಯಿಸಿದ್ದರು. ಅದರ ಫಲಶ್ರುತಿಯಾಗಿ ಬಿಎ, ಬಿಬಿಎ, ಬಿಕಾಂ ವಿದ್ಯಾರ್ಥಿಗಳ ಪರೀಕ್ಷೆಗಳನ್ನು ಮುಂದೂಡಲಾಗಿತ್ತು.
ಆದರೆ ಬಿಎಸ್ ಸಿ ವಿದ್ಯಾರ್ಥಿಗಳ ನಿಗದಿತ ಥಿಯರಿ ಪರೀಕ್ಷೆಗಳ ದಿನಾಂಕ ಹಾಗೆಯೇ ಮುಂದುವರಿದಿದ್ದರಿಂದ ಬಿಎಸ್ ಸಿ ವಿದ್ಯಾರ್ಥಿಗಳು ಗೊಂದಲದ ಪರಿಸ್ಥಿತಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದರು.
ಈ ಬಗ್ಗೆ ಕಾರವಾರ- ಅಂಕೋಲಾ ಕಾಲೇಜುಗಳ ಆಡಳಿತಾಧಿಕಾರಿಗಳನ್ನು ಸಂಪರ್ಕಿಸಿ, ಪಠ್ಯಕ್ರಮಗಳು ಪೂರ್ಣಗೊಂಡಿರದ ಕುರಿತು ಅವರಿಂದ ಲಿಖಿತ ರೂಪದಲ್ಲಿ ಪಡೆದುಕೊಂಡ ಶಾಸಕ ಸೈಲ್, ಸುಮಾರು 200 ವಿದ್ಯಾರ್ಥಿಗಳನ್ನು ಧಾರವಾಡಕ್ಕೆ ಕರೆದೊಯ್ದು ಪ್ರತಿಭಟನೆ ನಡೆಸಿದ್ದಾರೆ.
ಇದಕ್ಕೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಕೂಡ ಸ್ಥಳಕ್ಕೆ ಆಗಮಿಸಿ, ಸಮಸ್ಯೆ ಬಗೆಹರಿಸಲು ಸಹಕರಿಸಿದ್ದಾರೆ. ಬಳಿಕ ಈ ಬಗ್ಗೆ ಚರ್ಚಿಸಿ, ನವೆಂಬರ್ 4ಕ್ಕೆ ಪ್ರಾರಂಭವಾಗಬೇಕಿದ್ದ ಬಿಎಸ್ ಸಿ ಪರೀಕ್ಷೆಗಳನ್ನು ನವೆಂಬರ್ 11ಕ್ಕೆ ಮುಂದೂಡಲಾಗಿದೆ.
ಪ್ರತಿ ವಿಷಯದ ಪರೀಕ್ಷೆಯ ನಡುವೆ ಒಂದು ದಿನದ ಅಂತರವಿರುವಂತೆ ವೇಳಾಪಟ್ಟಿ ತಯಾರಿಸಲು ನಿರ್ಧರಿಸಲಾಗಿದೆ. ಈ ಕುರಿತು ಸೂಕ್ತ ಆದೇಶ ಹೊರಡಿಸುಂತೆ ಸಂಬಂಧಿತ ಅಧಿಕಾರಿಗಳಿಗೆ ಉಪಕುಲಪತಿ ಸ್ಥಳದಲ್ಲಿಯೇ ಆದೇಶಿಸಿದ್ದಾರೆ. ಇದಕ್ಕೆ ಸಹಕರಿಸಿದ ಶಾಸಕ ಸತೀಶ್ ಸೈಲ್ ಅವರಿಗೆ ವಿದ್ಯಾರ್ಥಿಗಳು ಧನ್ಯವಾದ ಅರ್ಪಿಸಿದರು.