ಗೋಕರ್ಣ: ಹೊಸೂರು ಟೆಕ್ಕಿ ಗೆಳೆಯರು ಸಮುದ್ರಪಾಲು
ಉತ್ತರ ಕನ್ನಡದ ಪುರಾಣ ಪ್ರಸಿದ್ಧ ದೇವಾಲಯ ಗೋಕರ್ಣ. ಅಲ್ಲಿಗೆ ಹೊಸೂರಿನಿಂದ ಬಂದಿದ್ದ ಒಟ್ಟು 13 ಗೆಳೆಯರ ಗುಂಪು ಮಧ್ಯಾಹ್ನ ದೇವರ ದರ್ಶನವಾದ ಬಳಿಕ ಸಮುದ್ರ ತೀರದಲ್ಲಿ ಈಜಲು ಹೋಗಿದೆ. ಇವರ ಪೈಕಿ 5 ಮಂದಿ ಈಜಾಟಕ್ಕೆ ಮುಂದಾಗಿದ್ದಾರೆ. ಆದರೆ ಭಾರಿ ಗಾತ್ರದ ತೆರೆಗೆ ಸಿಲುಕಿ ಆಯ ತಪ್ಪಿದ್ದಾರೆ. ತೀರದಿಂದ ತುಂಬಾ ದೂರ ಸೆಳೆಯಲ್ಪಟ್ಟು, ಕಾಣೆಯಾಗಿದ್ದಾರೆ.
ನೀರಲ್ಲಿ ಕಾಣೆಯಾದ ಮೂವರ ಪೈಕಿ ಭಾಸ್ಕರನ್ ಶವ ಘಟನೆ ನಂತರ ಕೆಲ ತಾಸುಗಳಲ್ಲೇ ಪತ್ತೆಯಾಗಿದೆ. ಅವರ ಸಂಗಡ ಕಣ್ಮರೆಯಾದ ಟೆಕ್ಕಿ ಚಂದ್ರಶೇಖರನ್, ಮತ್ತು ಬಿಇ ವಿದ್ಯಾರ್ಥಿ ಹರಿಹರನ್ ಅವರ ಶವಗಳು ಪತ್ತೆಯಾಗಿಲ್ಲ.
ಉಳಿದಿಬ್ಬರನ್ನು ಸ್ಪೀಡ್ ಬೋಟ್ ಸಹಾಯದಿಂದ ಸಮುದ್ರದಿಂದ ಹೊರತೆಗೆಯಲಾಗಿದೆ. ಸಾವಿನ ದವಡೆಯಿಂದ ಬಚಾವಾದ ಹರೀಶ್ ಕುಮಾರಗೆ ತಕ್ಷಣ ಚಿಕಿತ್ಸೆ ನೀಡಲಾಗಿ, ಚೇತರಿಸಿಕೊಂಡಿದ್ದಾನೆ. ಆದರೆ ಮತ್ತೊಬ್ಬ ಗೆಳೆಯ ಶ್ರೀನಿವಾಸನ ಸ್ಥಿತಿ ಚಿಂತಾಜನಕವಾಗಿದ್ದು, ಮಣಿಪಾಲ ಆಸ್ಪತ್ರೆಗೆ ದಾಅಖಲಿಸಲಾಗಿದೆ.
ಇವರೆಲ್ಲಾ ತಮಿಳುನಾಡಿನ ಹೊಸೂರು ಬಳಿಯ ಮುತ್ತಳ್ಳಿ ಗ್ರಾಮದ ಗೆಳೆಯರು. ಶನಿವಾರ ಕೊಲ್ಲೂರಿನಿಂದ ಗೋಕರ್ಣಕ್ಕೆ ಬಂದು ದೇವರ ದರ್ಶನದ ನಂತರ ಮಧ್ಯಾಹ್ನ ನೀರಿಗಿಳಿದಿದ್ದರು.