ಕರುಣಾನಿಧಿ ನಿಧನ ಸುದ್ದಿಯನ್ನು ಕನ್ನಡ ದಿನಪತ್ರಿಕೆಗಳು ಹೀಗೆ ಕಂಡಿವೆ
ಬೆಂಗಳೂರು, ಆಗಸ್ಟ್ 08: ದೇಶದ ಮುತ್ಸದಿ ರಾಜಕಾರಣಿಗಳಲ್ಲಿ ಒಬ್ಬರಾದ ಕರುಣಾನಿಧಿ ಅವರು ನಿನ್ನೆ ಸಂಜೆ ಚೆನ್ನೈನ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ.
ದೇಶದ ಪ್ರಮುಖ ರಾಜಕಾರಣಿಗಳು ಅವರ ಸಾವಿಗೆ ಸಂತಾಪ ಸೂಚಿಸಿದೆ. ರಾಜ್ಯದಲ್ಲೂ ಸಹ ಶೋಕಾಚರಣೆ ಆಚರಿಸಲಾಗುತ್ತಿದೆ.
ಎಂ ಕರುಣಾನಿಧಿ ಐದು ದಶಕಗಳ ರಾಜಕೀಯ ಬದುಕಿನ ಹಿನ್ನೋಟ
ಕಲೆ, ಸಾಹಿತ್ಯ, ಕಠು ವಿಚಾರವಾದಿತನ, ಹೋರಾಟ, ರಾಜಕೀಯ ಪಟ್ಟುಗಳನ್ನು ರಕ್ತಗತ ಮಾಡಿಕೊಂಡಿದ್ದ ಕರುಣಾನಿಧಿ ಅವರು ಸತತ 80 ವರ್ಷಗಳ ಕಾಲ ರಾಜಕೀಯವನ್ನೇ ಉಸಿರಾಡಿದವರು.
ಕವಿ ಹೃದಯ, ಬಂಡಾಯದ ಮನಸ್ಸಿನ 'ಕಲೈನಾರ್' ಕರುಣಾನಿಧಿ
ಅವರ ಸಾವು ದೇಶದಾದ್ಯಂತ ಎಲ್ಲ ಟಿವಿ, ಚಾನೆಲ್ಗಳಲ್ಲಿ, ಪತ್ರಿಗಳಲ್ಲಿ ಸುದ್ದಿಯಾಗುತ್ತಿದೆ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಕರುಣಾನಿಧಿ ನಿಧನದ ಸುದ್ದಿಯನ್ನು ಹೇಗೆ ನೋಡಿದೆ ಎಂಬುದರ ಪಕ್ಷಿನೋಟ ಇಲ್ಲಿದೆ.
ಪ್ರಜಾವಾಣಿ ಹೀಗೆ ಹೇಳಿದೆ
ಪ್ರಜಾವಾಣಿ ಪತ್ರಿಕೆಯು 'ಮುಳುಗಿದ ದ್ರಾವಿಡಸೂರ್ಯ' ಎಂಬ ತಲೆ ಬರಹ ನೀಡಿ, ಕರುಣಾನಿಧಿ ಅವರ ಜೀವನದ ಪ್ರಮುಖ ಘಟ್ಟಗಳನ್ನು ಪಾಯಿಂಟ್ಸ್ಗಳಲ್ಲಿ ವಿವರಿಸಿದೆ. ಜೊತೆಗೆ ವಿಶೇಷ ಲೇಖನವನ್ನು ಪ್ರಕಟಿಸಿದೆ. ಜೊತೆಗೆ 7ನೇ ಪುಟ ಪೂರಾ ಕರುಣಾನಿಧಿ ಅವರ ಸುದ್ದಿಗೆ ಮೀಸಲಿಟ್ಟಿದೆ.
ವಿಜಯವಾಣಿಯ ಬಣ್ಣದ ಆಟ
ವಿಜಯವಾಣಿ ಪತ್ರಿಕೆ ಸಹ ಕರುಣಾನಿಧಿ ದ್ರಾವಿಡ ನಾಯಕ ಎಂಬ ಅಂಶವನ್ನೇ ಮುಂದೆ ಮಾಡಿ ಹೆಡ್ಲೈನ್ ನೀಡಿದೆ. 'ದ್ರಾವಿಡನಿಧಿ ವಿಧಿವಶ' ಎಂಬ ತಲೆ ಬರವನ್ನು ವಿಜಯವಾಣಿ ನೀಡಿದೆ. 'ನಿಧಿ' ಪದಕ್ಕೆ ಬಣ್ಣ ಬಳಿದು ವಿಶೇಷ ಅರ್ಥ ಸ್ಪುರಿಸುವಂತೆ ಮಾಡಲಾಗಿದೆ. 'ಅಮ್ಮನ ಬಳಿಕ ತಮಿಳರಿಗೆ ಅಯ್ಯ ವಿಯೋಗ, ಕಳಚಿತು ದ್ರಾವಿಡ ಚಳವಳಿ ಕೊಂಡಿ' ಎಂಬ ಶಾರ್ಟ್ ಹೆಡ್ಲೈನ್ಗಳೂ ಇವೆ.
'ದ್ರಾವಿಡ ಸೂರ್ಯಾಸ್ತ' ವಿಜಯಕರ್ನಾಟಕ
ವಿಜಯಕರ್ನಾಟಕ ಪತ್ರಿಕೆಯು ಕರುಣಾನಿಧಿಯ ಚಿತ್ರದೊಂದಿಗೆ 'ದ್ರಾವಿಡ ಸೂರ್ಯಾಸ್ತ' ಎಂಬ ತಲೆ ಬರಹ ನೀಡಿದೆ. ಅವರ ಸಾವಿನ ಸುದ್ದಿಯ ಜೊತೆಗೆ, ಸಮಾಧಿ ಸ್ಥಳ ವಿವಾದದ ಸುದ್ದಿಯನ್ನು ಮುಖಪುಟದಲ್ಲಿ ನೀಡಿ, ಉಳಿದ ಸುದ್ದಿಗಳನ್ನು 5,10 ನೇ ಪುಟದಲ್ಲಿ ವಿವರವಾಗಿ ಮುದ್ರಿಸಿದೆ.
ವಾರ್ತಾಭಾರತಿಯ ತಲೆಬರಹ
'ಅಸ್ತಮಿಸಿದ ದ್ರಾವಿಡ ಸೂರ್ಯ' ಎಂಬ ಎಂಟು ಕಾಲಂಗಳ ತಲೆ ಬರವನ್ನು ವಾರ್ತಾಭಾರತಿ ನೀಡಿದೆ. ದ್ರಾವಿಡ ಚಳವಳಿ ಹರಿಕಾರ, ಡಿಎಂಕೆ ವರಿಷ್ಠ ಕರುಣಾನಿಧಿ ನಿಧನ ಎಂಬ ಸ್ಮಾಲ್ ಹೆಡ್ಲೈನ್ ಸಹ ಇದೆ. ಮೊದಲ ಪುಟದ ಅರ್ಧ ಪುಟ ಕರುಣಾನಿಧಿ ಸುದ್ದಿಗೆಂದು ಮೀಸಲಿಡಲಾಗಿದೆ. 9ನೇ ಪುಟದಲ್ಲಿ ಸಹ ಕರುಣಾನಿಧಿ ನಿಧನಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಮುದ್ರಿಸಲಾಗಿದೆ.
'ದ್ರಾವಿಡ ನಿಧಿ' ಉದಯವಾಣಿ
ಉದಯವಾಣಿ ಪತ್ರಿಕೆಯು 'ದ್ರಾವಿಡನಿಧಿ ಅಸ್ತಂಗತ' ಎಂಬ ತಲೆ ಬರಹ ನೀಡಿದೆ. ವಿಜಯವಾಣಿಯಂತೆ ಇದು ಸಹ 'ನಿಧಿ' ಪದಕ್ಕೆ ಬಣ್ಣ ತುಂಬಿ ದ್ವಿಅರ್ಥ ಸ್ಪುರಿಸವಂತೆ ಮಾಡಿದೆ. ಸಬ್ ಹೆಡ್ಲೈನ್ಗಳ ಮೂಲಕ ಸಾವಿನ ಸಂಪೂರ್ಣ ಸುದ್ದಿಯನ್ನು ನೀಡಲಾಗಿದೆ. 12,13 ನೇ ಪುಟದಲ್ಲಿ ವಿಸ್ತೃತ ವರದಿಯನ್ನು ನೀಡಲಾಗಿದೆ.
ಕನ್ನಡ ಪ್ರಭ ತಲೆ ಬರಹ
ಕರುಣಾನಿಧಿ ಅವರ ದೊಡ್ಡ ಚಿತ್ರ ಮುದ್ರಿಸಿ 'ಕರುಣಾಸ್ತಮಾನ' ಎಂಬ ಒಂದು ಪದದ ಆಕರ್ಷಕ ತಲೆಬರಹವನ್ನು ಕನ್ನಡ ಪ್ರಭ ನೀಡಿದೆ. 'ದ್ರಾವಿಡ ಮೇರು ನಾಯಕನ ಯುಗಾಂತ್ಯ' ಎಂಬ ಸೆಕೆಂಡ್ ಹೆಡ್ಲೈನ್ ಸಹ ನೀಡಿ, ವಿಸ್ತೃತ ವರದಿಯನ್ನು ನೀಡಿದೆ. 8 ಮತ್ತು 9 ನೇ ಪುಟದಲ್ಲಿ ಕರುಣಾನಿಧಿ ಅವರ ಹಲವು ಚಿತ್ರಗಳು ಹಾಗೂ ಸುದ್ದಿಗಳನ್ನು ಪತ್ರಿಕೆ ನೀಡಿದೆ.
ವಿಶ್ವವಾಣಿಯ ಆಕರ್ಷಕ ಚಿತ್ರ
'ಹುದುಗಿದ ದ್ರಾವಿಡ ನಿಧಿ' ಎಂಬ ತಲೆ ಬರಹವನ್ನು ವಿಶ್ವವಾಣಿ ಮುಖಪುಟದಲ್ಲಿ ನೀಡಿದೆ. ಮೊದಲ ಪುಟದಲ್ಲಿ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಅವರ ಪ್ರತಿಕ್ರಿಯೆಗಳನ್ನು ನೀಡಿದೆ. 8 ನೇ ಪುಟವನ್ನು ಸಂಪೂರ್ಣ ಕರುಣಾನಿಧಿ ಅವರ ಸುದ್ದಿಗಾಗಿಯೇ ಮೀಸಲಿಡಲಾಗಿದೆ. ಕರುಣಾನಿಧಿ ಅವರ ಅಪರೂಪದ ಚಿತ್ರಗಳನ್ನು ಮುದ್ರಿಸಿದೆ. ಅವರ ಕುಟುಂಬದ ಮಾಹಿತಿಯನ್ನು ನೀಡಿದೆ.
ಸಂಯುಕ್ತ ಕರ್ನಾಟಕದಲ್ಲಿ ಹೆಚ್ಚಿನ ಪ್ರಶಾಸ್ತ್ಯ ಇಲ್ಲ
ಸಂಯುಕ್ತ ಕರ್ನಾಟಕ ದಿನಪತ್ರಕೆ ಕರುಣಾನಿಧಿ ನಿಧನ ಸುದ್ದಿಗೆ ದ್ವಿತೀಯ ಪ್ರಾಶಸ್ತ್ಯ ನೀಡಲಾಗಿದೆ. ಸಿಂಗಲ್ ಕಾಲಂ ಫೊಟೊದೊಂದಿಗೆ 'ದ್ರಾವಿಡ ಚಳವಳಿಯಲ್ಲಿ ಕರುಣಾನಿಧಿ ಲೀನ' ಎಂಬ ಎರಡು ಸಾಲಿನ ತಲೆ ಬರಹದೊಂದಿಗೆ ಸುದ್ದಿ ಪ್ರಕಟಿಸಿದ್ದಾರೆ. ಆರನೇ ಪುಟದಲ್ಲಿ ಸಹ ಸಣ್ಣದಾಗಿ ನುಡಿನಮನ ಸಲ್ಲಿಸಲಾಗಿದೆ. ಇದೊಂದು ದಿನಪತ್ರಿಕೆಯಲ್ಲಿ ಮಾತ್ರವೇ ಕರುಣಾನಿಧಿ ಸಾವಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿಲ್ಲ.
ಕರುಣಾನಿಧಿ ಇನ್ನಿಲ್ಲ ಹೊಸದಿಗಂತ
'ಕರುಣಾನಿಧಿ ಇನ್ನಿಲ್ಲ' ಎಂಬ ತಲೆಬರಹವನ್ನು ಹೊಸದಿಗಂತ ಪತ್ರಿಕೆ ನೀಡಿದೆ. ಅದರ ಜೊತೆ ಮರೆಯಾಯಿತು ತಮಿಳುನಾಡಿನ ಅಪೂರ್ವ ನಿಧಿ ಎಂಬ ಶಾರ್ಟ್ ಹೆಡ್ಲೈನ್ ಸಹ ಇದೆ. ಸಣ್ಣ ಕರುಣಾನಿಧಿ ಚಿತ್ರವನ್ನು ಮುಖಪುಟದಲ್ಲಿ ನೀಡಿ, ಹೆಚ್ಚಿನ ಸುದ್ದಿ ಮತ್ತು ಚಿತ್ರಗಳನ್ನು 10ನೇ ಪುಟದಲ್ಲಿ ನೀಡಲಾಗಿದೆ.