ರಾಜಶ್ರೀಯನ್ನು ವರಿಸಿದ ಡಿವಿಎಸ್ ಮಗ ಕಾರ್ತಿಕ್ ಗೌಡ
ಕುಶಾಲನಗರ, ಅಕ್ಟೋಬರ್ 30 : ಕೇಂದ್ರ ಕಾನೂನು ಸಚಿವ ಡಿ.ವಿ ಸದಾನಂದ ಗೌಡರ ಮಗ ಕಾರ್ತಿಕ್ ಗೌಡ ಅವರು ಉದ್ಯಮಿ ಕೂಡಕಂಡಿ ನಾಣಯ್ಯ ಅವರ ಪುತ್ರಿ ರಾಜಶ್ರೀ(ಸ್ವಾತಿ)ಯೊಂದಿಗೆ ಸಪ್ತಪದಿ ತುಳಿಯುವ ಮೂಲಕ ಶುಕ್ರವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಕುಶಾಲನಗರದ ರೈತ ಸಹಕಾರ ಭವನದ ಅಲಂಕೃತ ಭವ್ಯ ಮಂಟಪದಲ್ಲಿ ಶುಕ್ರವಾರ ಬೆಳಿಗ್ಗೆ 11.20 ಗಂಟೆಗೆ ಸಲ್ಲುವ ಧನುರ್ ಲಗ್ನದ ಶುಭ ಘಳಿಗೆಯಲ್ಲಿ ಕಾರ್ತಿಕ್ ಗೌಡ ಅವರು ರಾಜಶ್ರೀಗೆ ಮಾಂಗಲ್ಯಧಾರಣೆ ಮಾಡಿದರು. ರಾಜ್ಯಪಾಲ ವಜುಭಾಯಿ ವಾಲಾ, ಕೇಂದ್ರ ಸಚಿವೆ ಮೇನಕಾ ಗಾಂಧಿ, ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಸೇರಿದಂತೆ ಸಾವಿರಾರು ಗಣ್ಯಾತಿಗಣ್ಯರು ಈ ಕ್ಷಣಕ್ಕೆ ಸಾಕ್ಷಿಯಾದರು.
ವಿವಾಹ ಮಹೋತ್ಸವಕ್ಕೆ ರಾಜ್ಯ ಹಾಗೂ ರಾಷ್ಟ್ರದ ವಿವಿಧೆಡೆಗಳಿಂದ 10 ಸಾವಿರಕ್ಕೂ ಅಧಿಕ ಅತಿಥಿಗಳು ಹಾಗೂ ಸದಾನಂದ ಗೌಡ ಮತ್ತು ಡಾಟಿ ಕುಟುಂಬ ವರ್ಗ ಮತ್ತು ಕೂಡಕಂಡಿ ನಾಣಯ್ಯ ಮತ್ತು ಸುಧಾ ನಾಣಯ್ಯ ಅವರ ಅಪಾರ ಬಂಧು-ಬಾಂಧವರು ಆಗಮಿಸಿದ್ದರು. ಕೊಡವ ಸಮುದಾಯದ ಸಂಪ್ರದಾಯದಂತೆ ಶಾಸ್ತ್ರಬದ್ಧವಾಗಿ ವಿವಾಹ ಕಾರ್ಯ ನೆರವೇರಿತು. ಸಸ್ಯಾಹಾರ ಮತ್ತು ಮಾಂಸಾಹಾರ ಭೋಜನದ ವ್ಯವಸ್ಥೆಯನ್ನು ಪ್ರತ್ಯೇಕವಾಗಿ ಮಾಡಲಾಗಿತ್ತು. [ಕುಶಾಲನಗರದಲ್ಲಿ ಕಾರ್ತಿಕ್ ಗೌಡರ ದಿಬ್ಬಣ]
ಧಾರಾ ಮುಹೂರ್ತದಲ್ಲಿ ವಾಲಾ
ಬೆಳಿಗ್ಗೆ 11ಕ್ಕೆ ನಡೆದ ಧಾರಾಮುಹೂರ್ತದಲ್ಲಿ ಸಾಂಪ್ರದಾಯಿಕ ಉಡುಗೆ ತೊಡುಗೆ ಧರಿಸಿ ಆಗಮಿಸಿದ ವಧು ವರರಿಗೆ ಅರ್ಚಕ ಸುಬ್ರಮಣ್ಯ ಅವರು ಮಂತ್ರಗಳನ್ನು ಪಠಿಸುವ ಮೂಲಕ ಸಮಯಕ್ಕೆ ಸರಿಯಾಗಿ ಗಟ್ಟಿಮೇಳದಲ್ಲಿ ಕಾರ್ತಿಕ್ ಮಾಂಗಲ್ಯ ಕಟ್ಟಿ ವಿವಾಹ ಬಂಧನಕ್ಕೊಳಪಟ್ಟರು. ಈ ಶುಭ ಸಂದರ್ಭದಲ್ಲಿ ನೆರದಿದ್ದ ಜನರು ಅಕ್ಷತೆ ವಧುವರರ ಮೇಲೆ ಹಾಕಿ ಶುಭಹಾರೈಸಿ ಆಶೀರ್ವದಿಸಿದರು.
ನವದಂಪತಿಗಳಿಗೆ ಶುಭಹಾರೈಕೆ
ಅಲಂಕೃತ ಭವ್ಯ ವೇದಿಕೆಯಲ್ಲಿ ನಡೆದ ಆರತಕ್ಷತೆಯಲ್ಲಿ ಸಾವಿರಾರು ಜನರು ಸಾರದಿ ಸಾಲಿನಲ್ಲಿ ತೆರಳಿ ವಧುವರರಿಗೆ ಹೂಗೂಚ್ಛ ಹಾಗೂ ನೆನಪಿನ ಕಾಣಿಕೆ ನೀಡಿ ನವದಂಪತಿಗಳಿಗೆ ಶುಭಹಾರೈಸಿದರು.
ಅತಿಥಿಗಳ ನೂಕುನುಗ್ಗಲು
ಆರತಕ್ಷತೆ ನಡೆಯುತ್ತಿದ್ದ ಸಂದರ್ಭ ಏಕಕಾಲದಲ್ಲಿಯೆ ಹೆಚ್ಚಿನ ಗಣ್ಯರು ಆಗಮಿಸಿದ ಹಿನ್ನೆಲೆಯಲ್ಲಿ ವೇದಿಕೆಗೆ ತೆರಳುವ ಸಂದರ್ಭ ನೂಕುನುಗ್ಗಲು ಉಂಟಾಯಿತು. ಈ ಸಂದರ್ಭ ಭದ್ರತಾ ಸಿಬ್ಬಂದಿಗಳು ಹರಸಾಹಸಪಟ್ಟು ಸರದಿ ಸಾಲಿನಲ್ಲಿ ಕಳುಹಿಸಲು ಯಶಸ್ವಿಯಾದರು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದರಿಂದ ಪೋಟೋ ಮತ್ತು ವಿಡಿಯೋ ಕಾರ್ಯವನ್ನು ವ್ಯವಸ್ಥಿತವಾಗಿ ಮಾಡಲು ಸಾಧ್ಯವಾಗಲಿಲ್ಲ.
ಸಸ್ಯಾಹಾರ ಮತ್ತು ಮಾಂಸಾಹಾರ ಭೋಜನ
ವಿವಾಹ ಮಹೋತ್ಸವಕ್ಕೆ ಆಗಮಿಸಿದ್ದ ಸಾವಿರಾರು ಜನರಿಗೆ ವಿಶೇಷ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಸಸ್ಯಾಹಾರ ಮತ್ತು ಮಾಂಸಾಹಾರ ವ್ಯವಸ್ಥೆಯನ್ನು ಪ್ರತ್ಯೇಕವಾಗಿ ಮಾಡಲಾಗಿತ್ತು.
ಆಶೀರ್ವದಿಸಲು ಬಂದ ಗಣ್ಯಾತಿಗಣ್ಯರು : ವಿವಾಹ ಮಹೋತ್ಸವಕ್ಕೆ ರಾಜ್ಯದ ರಾಜ್ಯಪಾಲ ವಾಜುಭಾಯಿವಾಲಾ, ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಕೇಂದ್ರ ಸಚಿವೆ ಮೇನಕಗಾಂಧಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ, ಮೈಸೂರು-ಮಡಿಕೇರಿ ಸಂಸದ ಪ್ರತಾಪ್ ಸಿಂಹ, ನಳಿನ್ ಕುಮಾರ್ ಕಟೀಲ್, ಶ್ರೀರಾಮುಲು, ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ, ಮಾಜಿ ಸಚಿವರಾದ ಸುರೇಶ್ ಕುಮಾರ್, ಬಚ್ಚೇಗೌಡ, ಸಿ.ಟಿ.ರವಿ, ಕಟ್ಟಾ ಸುಬ್ರಮಣ್ಯನಾಯ್ಡು, ರಾಮಚಂದ್ರೇಗೌಡ, ವಿಜಯಶಂಕರ್, ಸೋಮಣ್ಣ, ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚುರಂಜನ್, ಎಂ.ಸಿ. ನಾಣಯ್ಯ, ಟಿ.ಜಾನ್, ಗೋ.ಮಧುಸೂದನ್, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮುಖಂಡರಾದ ಪ್ರಭಾಕರ್ ಭಟ್, ಅಬ್ದುಲ್ ಅಜೀಜ್, ಬಿ.ಎ.ಜೀವಿಜಯ, ಶ್ವಾಸಗುರು ಸೇರಿದಂತೆ ಅಪಾರ ಗಣ್ಯರು ಆಗಮಿಸಿ ನೂತನ ವಧುವರರಿಗೆ ಶುಭ ಹಾರೈಸಿದರು.