ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ ಹೆಗಡೆ ನಿಧನ: ಕೆರೆಮನೆ ಮೇಳದಿಂದ ಸಂತಾಪ
ಕಾರವಾರ, ಏಪ್ರಿಲ್ 18: ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ, ವಾಗ್ಮಿ, ಹಿರಿಯ ಯಕ್ಷಗಾನ ಕಲಾವಿದ ಪ್ರೊ. ಎಂ.ಎ.ಹೆಗಡೆ ದಂಟ್ಕಲ್ (73) ಭಾನುವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ಉಸಿರಾಟದ ತೊಂದರೆಯಿಂದ ವಿಧಿವಶರಾದರು.
ಎಂ.ಎ. ಹೆಗಡೆ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಶನಿವಾರ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.
ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ ಹೆಗಡೆ ಕೊರೊನಾಗೆ ಬಲಿ; ಸಿಎಂ ಸಂತಾಪ
ಕಾಲೇಜು ಉಪನ್ಯಾಸಕರಾಗಿದ್ದ ಅವರು ಖ್ಯಾತ ಯಕ್ಷಗಾನ ಅರ್ಥಧಾರಿಗಳಾಗಿದ್ದರು. ನಿವೃತ್ತಿಯ ನಂತರ ಯಕ್ಷಗಾನ ಪ್ರಸಂಗ ರಚನೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಕರ್ನಾಟಕ ಯಕ್ಷಗಾನ ಅಕಾಡೆಮಿಗೆ ಎರಡು ಅವಧಿಗೆ ನಿರಂತರವಾಗಿ ಅಧ್ಯಕ್ಷರಾಗಿದ್ದರು.
ತಮ್ಮ ಅವಧಿಯಲ್ಲಿ ಯಕ್ಷಗಾನ ಅಕಾಡೆಮಿಯ ಮೂಲಕ ಯಕ್ಷಗಾನ ಸಿಡಿ ತಯಾರಿಕೆ, ಪುಸ್ತಕಗಳ ಪ್ರಕಟಣೆ ಸೇರಿದಂತೆ ಹಲವು ಕಾರ್ಯವನ್ನು ಕೈಗೊಂಡಿದ್ದರು. ಹಿಂದಿನ ವರ್ಷ ಕೊರೊನಾ ಲಾಕ್ಡೌನ್ ಅವಧಿಯಲ್ಲಿ ವರ್ಚುವಲ್ ವೇದಿಕೆಯ ಮೂಲಕ "ಮಾತಿನ ಮಂಟಪ" ಕಾರ್ಯಕ್ರಮ ಆಯೋಜಿಸಿ 70 ಕ್ಕೂ ಅಧಿಕ ಕಲಾವಿದರನ್ನು ಸಂದರ್ಶಿಸಿದ್ದು ಗಮನಾರ್ಹ.
'ಕೆರೆಮನೆ ಶಂಭು ಹೆಗಡೆ', 'ಮರೆಯಲಾಗದ ಮಹಾಬಲ', 'ಕುಮಾರಿಲಭಟ್ಟ' ಸೇರಿದಂತೆ ಇಪ್ಪತ್ತಕ್ಕೂ ಅಧಿಕ ಕೃತಿಯನ್ನು ಎಂ.ಎ.ಹೆಗಡೆ ರಚಿಸಿದ್ದಾರೆ. ಇವರ ಯಕ್ಷಗಾನ ಸೇವೆಗಾಗಿ ಚಿಟ್ಟಾಣಿ ಪ್ರಶಸ್ತಿ, ಶೇಣಿ ಪುರಸ್ಕಾರ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳು ಸಂದಿವೆ.
ಕೆರೆಮನೆ
ಶಿವಾನಂದ
ಹೆಗಡೆ
ಸಂತಾಪ:
"ಯಕ್ಷಗಾನ
ಅಕಾಡೆಮಿ
ಅಧ್ಯಕ್ಷರು,
ಯಕ್ಷಗಾನ
ಕಲಾವಿದರು,
ವಿದ್ವಾಂಸರು
ಆದ
ಪ್ರೊ..
ಎಂ.
ಎ.
ಹೆಗಡೆ
ನಿಧನವಾರ್ತೆ
ಕೆರೆಮನೆ
ಕುಟುಂಬಕ್ಕೆ
ಇಡಗುಂಜಿ
ಮೇಳಕ್ಕೆ
ಮಾತ್ರವಲ್ಲ
ಕನ್ನಡ
ನಾಡಿಗೇ
ತುಂಬಲಾರದ
ನಷ್ಟವಾಗಿದೆ".
"ಶ್ರೀಯುತರು ನಮ್ಮ ಮಂಡಳಿಯ ಅತ್ಯಂತ ಆಪ್ತರು. ನಮ್ಮ ಮಂಡಳಿಯ ಕಲಾವಿದರೂ ಆಗಿದ್ದವರು. ಇವರ ನಿಧನ ವೈಯಕ್ತಿಕವಾಗಿ ನನಗೆ ಸಹಿಸಲಾಗದ ನೋವು" ಎಂದು ಖ್ಯಾತ ಯಕ್ಷಗಾನ ಕಲಾವಿದ, ಕೆರೆಮನೆ ಯಕ್ಷಗಾನ ಮೇಳದ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ಕಂಬನಿ ಮಿಡಿದಿದ್ದಾರೆ.
ರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಲು ಕಪಿಲ್ ಸಿಬಲ್ ಒತ್ತಾಯ
"ಕನ್ನಡ, ಸಂಸ್ಕೃತ, ಇಂಗ್ಲೀಷ್ ಈ ಮೂರೂ ಭಾಷೆಯಲ್ಲಿ ಅಸಾಮಾನ್ಯ ಪ್ರೌಢತೆಯುಳ್ಳ, ಯಕ್ಷಗಾನ ಕಲಾವಿದರೂ, ತಾಳಮದ್ದಳೆ ಅರ್ಥಧಾರಿ ಆಗಿದ್ದ ಅವರ ಆಕಸ್ಮಿಕ ನಿಧನಕ್ಕೆ ಶ್ರೀ ಇಡಗುಂಜಿ ಮೇಳದ ಸಮಗ್ರ ಕಲಾವಿದರ ಪರವಾಗಿ ಮೇಳದ ಅಭಿಮಾನಿಗಳ ಪರವಾಗಿ ಶೃದ್ಧಾಂಜಲಿ ಸಮರ್ಪಿಸುತ್ತೇನೆ".
"ಅಜ್ಜ ಕೆರೆಮನೆ ಶಿವರಾಮ ಹೆಗಡೆ, ತಂದೆ ಕೆರೆಮನೆ ಶಂಭು ಹೆಗಡೆ, ದೊಡ್ಡಪ್ಪ ಕೆರೆಮನೆ ಮಹಾಬಲ ಹೆಗಡೆಯವರ ಆದಿಯಾಗಿ ನೂರಾರು ಕಲಾವಿದರ ಒಡನಾಟ ಇದ್ದ, ಯಕ್ಷಗಾನದ ಶ್ರೇಯಸ್ಸಿಗೆ ಸದಾ ದುಡಿಯುತ್ತಿದ್ದ ಅವರ ಕೊಡುಗೆ ಅನನ್ಯ. ಇಷ್ಟು ಬೇಗ ಅವರ ನಿರ್ಗಮನ ಊಹಾತೀತ"ಎಂದು ಶಿವಾನಂದ ಹೆಗಡೆ ಸಂತಾಪ ಸೂಚಿಸಿದ್ದಾರೆ.
ನಮ್ಮ ಮಂಡಳಿಯ ಕಲಾವಿದರೊಟ್ಟಿಗೂ ಆತ್ಮೀಯ ಬಾಂಧವ್ಯವನ್ನು ಹೊಂದಿದ್ದ ಶ್ರೀಯುತರು ನನಗೆ ಸದಾ ಪ್ರೋತ್ಸಾಹ ಹಾಗೂ ಬೆಂಬಲವನ್ನು ನೀಡುತ್ತಾ ಬಂದಿದ್ದರು. ಇವರನ್ನು ಕಳೆದುಕೊಂಡು ಮನಸ್ಸು ಈಗ ಅನಾಥವಾಗಿದೆ.
Recommended Video
ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನ ಅವರ ಕುಟುಂಬದ ಎಲ್ಲರಿಗೂ ಹಾಗೂ ಅವರ ಅಭಿಮಾನಿಗಳು, ಬಂಧುಗಳಿಗೆಲ್ಲ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುವೆ ಎಂದು ಶಿವಾನಂದ ಹೆಗಡೆ ಕಂಬನಿ ಮಿಡಿದಿದ್ದಾರೆ.