ಬದಲಾದ ಗಾಳಿಯ ದಿಕ್ಕು, ಲಾಕೋಸ್ಟ್ ಮಿಡತೆ ಹಾವಳಿಯಿಂದ ಬಚಾವಾದ ರಾಜ್ಯ!
ತುಮಕೂರು,ಜೂನ್ 01: ಗಾಳಿಯ ದಿಕ್ಕು ಬದಲಾಗಿರುವುದರಿಂದ ನಮ್ಮ ರಾಜ್ಯಕ್ಕೆ ಲಾಕೋಸ್ಟ್ ಮಿಡತೆಯಿಂದ ಯಾವುದೇ ತೊಂದರೆಯಿಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ. ಗಾಳಿಯನ್ನು ಅವಲಂಬಿಸಿರುವ ಮಿಡತೆಗಳು ಕರ್ನಾಟಕ ರಾಜ್ಯಕ್ಕೆ ಬಂದಿಲ್ಲ ಹೇಳಿಕೆ ಕೊಟ್ಟಿದ್ದಾರೆ.
ಬೇರೆ ರಾಜ್ಯಗಳಲ್ಲಿ ಮಿಡತೆಯ ಹಾವಳಿಯಿಂದ ನಮ್ಮ ರಾಜ್ಯವನ್ನು ಪ್ರವೇಶಿಸುವ ಆತಂಕ ಕಾಡಿತ್ತು. ಅದಕ್ಕಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೃಷಿ ಇಲಾಖೆ ಕೈಗೊಂಡಿತ್ತು. ಆದರೆ ಇದೀಗ ಈಶಾನ್ಯ ಭಾರತದತ್ತ ಗಾಳಿಯ ದಿಕ್ಕು ಬದಲಾಗಿರುವುದರಿಂದ ಮಿಡತೆ ಹಾವಳಿಯಿಂದ ರಾಜ್ಯ ಬಚಾವಾಗಿದೆ ಎಂದು ಕೃಷಿಸಚಿವ ಪಾಟೀಲ್ ಅವರು ತುಮಕೂರಿನಲ್ಲಿ ಹೇಳಿದ್ದಾರೆ.
ಮಿಡತೆ ದಾಳಿ; "ತಿನ್ನೋ ಅನ್ನಕ್ಕೆ ಮಣ್ಣಾಕಿ" ಬೆಳೆ ಉಳಿಸಿಕೊಳ್ಳಬಹುದಂತೆ...!
ಸಧ್ಯಕ್ಕೆ ಮಿಡತೆ ಹಾವಳಿಯಿಂದ ರಾಜ್ಯದ ರೈತರಿಗೆ ಯಾವುದೇ ತೊಂದರೆಯಿಲ್ಲ. ರೈತರು ನಿಶ್ಚಿಂತರಾಗಿರಬೇಕು ಎಂದಿದ್ದಾರೆ. ಇನ್ನು ಬೆಂಗಳೂರಿನಲ್ಲಿ ನಡೆದ ಬಿಜೆಪಿ ಹಿರಿಯ ಶಾಸಕ ಸಭೆಯ ಬಗ್ಗೆ ಮಾತನಾಡಿ, ಸೌಹಾರ್ದತೆಯಿಂದ ಆಪ್ತರು ನೆಂಟರು ಆತಿಥ್ಯ ನೀಡಿದರೆ ಅದೇ ಸುದ್ದಿಯಾಗುತ್ತಿದೆ. ಬಿಜೆಪಿ ಸರ್ಕಾರ ಸುಭದ್ರವಾಗಿದೆ. ಯಾವುದೇ ರೀತಿಯಲ್ಲಿ ಭಿನ್ನಮತಗಳಿಲ್ಲ. ಕುಟುಂಬದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿರುವಂತೆ ಸರ್ಕಾರದಲ್ಲಿ ಸಣ್ಣಪುಟ್ಟ ಆಂತರಿಕ ಭಿನ್ನಾಭಿಪ್ರಾಯ ಇರುವುದು ಸಹಜವೇ. ಹಾಗಂದ ಮಾತ್ರಕ್ಕೆ ಅಸಮಾಧಾನವಾಗಲೀ ತೊಂದರೆಯಾಗಲಿ ಇದೆ ಎಂದಲ್ಲ. ನಾವೆಲ್ಲ ಬಂದ ಮೇಲೆ ಸರ್ಕಾರ ಸುಭದ್ರವಾಗಿದೆ. ಇನ್ನೂ ಮೂರುವರ್ಷ ಬಿಜೆಪಿ ಸರ್ಕಾರ ಸ್ಥಿರವಾಗಿರಲಿದೆ ಎಂದು ಬಿ.ಸಿ.ಪಾಟೀಲರು ಭವಿಷ್ಯ ನುಡಿದರು.
ಲಾಕ್ಡೌನ್ನಿಂದ ನಷ್ಟವನ್ನು ಅನುಭವಿಸಿದ ಹಣ್ಣು, ಹೂವು, ತರಕಾರಿ ಬೆಳೆದ ರೈತರಿಗೆ ಸರ್ಕಾರ ಪರಿಹಾರ ಘೋಷಿಸಿದೆ. ರೈತರಿಗೆ ಅನುಕೂಲ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ರೈತರು ಯಾವುದೇ ಕಾರಣಕ್ಕೂ ಯಾವುದೇ ವಿಚಾರಕ್ಕೂ ಆತಂಕಕ್ಕೊಳಗಾಗುವುದು ಬೇಡ. ಸರ್ಕಾರ ಮತ್ತು ಇಲಾಖೆ ರೈತರೊಂದಿಗೆ ಸದಾ ಇರುತ್ತದೆ ಎಂದು ತಿಳಿಸಿದರು.