ಕರಾವಳಿ ಜಿಲ್ಲೆಯ ಜೊತೆ, ಮೈಸೂರು, ಹಾಸನದಲ್ಲಿಯೂ ಮಳೆಯ ಎಚ್ಚರಿಕೆ
ಬೆಂಗಳೂರು, ಜೂನ್ 21: ಕರಾವಳಿ ಜಿಲ್ಲೆಗಳಲ್ಲಿ ಮಾಮೂಲಿನಂತೆ ಮಳೆ ಮುಂದುವರೆಯಲಿದ್ದು, ಶಿವಮೊಗ್ಗ, ಹಾಸನ, ಮೈಸೂರು ಜಿಲ್ಲೆಗಳಲ್ಲೂ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಳೆದ ಹಲವು ದಿನಗಳಿಂದಲೂ ಕರಾವಳಿ ಜಿಲ್ಲೆಗಳಲ್ಲಿ ಬೀಳುತ್ತಿರುವ ಮಳೆ ಇಂದೂ ಸಹ ಕಡಿಮೆ ಆಗುವ ಸೂಚನೆ ಇಲ್ಲ, ಇಂದೂ ಸಹ ಕರಾವಳಿಯಲ್ಲಿ ಭಾರಿ ಮಳೆಯಾಗಲಿದೆ.
ಕರಾವಳಿ ಜಿಲ್ಲೆ ಹೊರತುಪಡಿಸಿ, ಉತ್ತರ ಕರ್ನಾಟಕದಲ್ಲಿ ಮಳೆಯ ಸಾಧ್ಯತೆ ಇಲ್ಲ, ದಕ್ಷಿಣ ಕರ್ನಾಟಕದ ಹಾಸನ ಮತ್ತು ಮೈಸೂರು ಜಲ್ಲೆಗಳಲ್ಲಿ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ಗುಡುಗು-ಮಿಂಚಿನ ಸಹಿತ ಸಹ ಮಳೆಯಾಗಲಿದೆ. ಚಿಕ್ಕಮಗಳೂರಿನಲ್ಲೂ ಮಳೆಯ ಸಾಧ್ಯತೆ ಹೆಚ್ಚಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಬೆಂಗಳೂರು ನಗರದಲ್ಲಿ ಭಾಗಷಃ ಮೋಡ ಮುಸುಕಿದ ವಾತಾವರಣ ಇರಲಿದ್ದು, ಗುಡು-ಮಿಂಚು ಸಹಿತ ಅಲ್ಪ ಮಳೆಯಾಗುವ ಸಾಧ್ಯತೆ ಇದೆ.
ದೇಶದ ಹವಾಮಾನ ನೋಡುವುದಾದರೆ ಮುಂಗಾರು ಸ್ವಲ್ಪ ಬಿಡುವು ನೀಡಲಿದ್ದು, ಮತ್ತೆ ಜೂನ್ 24ರಿಂದ ಮತ್ತೆ ಚುರುಕುಗೊಳ್ಳಲಿದೆ. ಪೂರ್ವ ಭಾರತದಲ್ಲಿ ಶೀತ ಗಾಳಿ ಮುಂದುವರೆಯಲಿದೆ. ಅಲ್ಲಲ್ಲಿ ಮಳೆಯಾಗುವ ಸಾಧ್ಯತೆಯೂ ಇದೆ.
ಜೂನ್ 23-25 ರ ಮಧ್ಯದ ವೇಳೆಗೆ ಅಸ್ಸಾಂ, ಮಹಾರಾಷ್ಟ್ರ, ಛತ್ತೀಸ್ಘಡ್, ಒಡಿಸ್ಸಾ, ಜಾರ್ಖಂಡ್, ಬಿಹಾರ, ಮಧ್ಯಪ್ರದೇಶ ಗಳಲ್ಲಿ ಭಾರಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.