ಕರ್ನಾಟಕ ಹವಾಮಾನ ವರದಿ, ಬಹುತೇಕ ಜಿಲ್ಲೆಗಳಲ್ಲಿ ಕೊರೆಯುವ ಚಳಿ
ಬೆಂಗಳೂರು, ಡಿಸೆಂಬರ್ 22: ಕರ್ನಾಟಕದ ದಕ್ಷಿಣ ಒಳನಾಡಿನ ಕೆಲವೇ ಕೆಲವು ಜಿಲ್ಲೆಗಳಲ್ಲಿ ಮಳೆ ಬರುವ ಸಾಧ್ಯತೆ ಇದ್ದು, ಉಳಿದೆಡೆ ಚಳಿ ಮುಂದುವರೆದಿದೆ. ಬೀದರ್ನಲ್ಲಿ 6 ಡಿಗ್ರಿ ಸೆಲ್ಸಿಯಸ್ ಅತಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಉಳಿದೆಲ್ಲಾ ಕಡೆ ಒಣಹವೆ ಮುಂದುವರೆದಿದೆ. ಬೆಂಗಳೂರು, ಉತ್ತರ ಕನ್ನಡ ಸೇರಿದಂತೆ ಹಲವೆಡೆ ಚಳಿ ಗಾಳಿ ಬೀಸುತ್ತಿದೆ.
ರಾಜ್ಯದಲ್ಲಿ ಚಳಿಯ ಪ್ರಮಾಣ ದಿನೇದಿನೆ ಹೆಚ್ಚುತ್ತಿದೆ. ಮಹಾರಾಷ್ಟ್ರದಿಂದ ಗಾಳಿ ಬೀಸುತ್ತಿರುವುದರಿಂದ ರಾಜ್ಯದಲ್ಲಿ ಚಳಿ ಹೆಚ್ಚಾಗಿದೆ. ಬೀದರ್ನಲ್ಲಿ ಸೋಮವಾರ 26.4 ಡಿಗ್ರಿ ಗರಿಷ್ಠ ಹಾಗೂ 6.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿತ್ತು.
ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಡಿಸೆಂಬರ್ 24ರಿಂದ ಎರಡು ದಿನ ಮಳೆ
ಮೂರು ವರ್ಷದ ಬಳಿಕ ಬೀದರ್ನಲ್ಲಿ ಅತಿ ಹೆಚ್ಚು ಚಳಿ ಬಿದ್ದಿದೆ. ಈ ಚಳಿ ಕನಿಷ್ಠ ವಾಡಿಕೆ ಚಳಿಯಿಂದ ಶೇ.9.5ರಷ್ಟು ಅಧಿಕವಾಗಿದೆ. ಇನ್ನು 2020ರ ನವೆಂಬರ್ 10ರಂದು ಬೀದರ್ನಲ್ಲಿ 7.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಉತ್ತರ ಒಳನಾಡಿನಲ್ಲೇ ಹೆಚ್ಚು ಚಳಿ ದಾಖಲಾಗುತ್ತಿದ್ದು, ವಿಜಯಪುರದಲ್ಲಿ 10 ಡಿಗ್ರಿ ಸೆಲ್ಸಿಯಸ್, ಧಾರವಾಡ 11.8 ಡಿಗ್ರಿ ಸೆಲ್ಸಿಯಸ್, ದಾವಣಗೆರೆ 12.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಬೆಂಗಳೂರಿನಲ್ಲಿ 26 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 16 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.ಚಾಮರಾಜನಗರ, ಹಾಸನ, ಕೊಡಗು, ಮೈಸೂರಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ, ರಾಜ್ಯದೆಲ್ಲೆಡೆ ಶುಭ್ರ ಆಕಾಶವಿದೆ.
ಮಧ್ಯಭಾರತದಲ್ಲಿ ಮುಂದಿನ ಮೂರು ದಿನಗಳಲ್ಲಿ ಕನಿಷ್ಠ ಉಷ್ಣಾಂಶ ಮತ್ತಷ್ಟು ಕಡಿಮೆಯಾಗಲಿದೆ. ಹರ್ಯಾಣ, ಪಂಜಾಬ್, ದೆಹಲಿ, ಉತ್ತರ ಪ್ರದೇಶದಲ್ಲಿ ಶೀತಗಾಳಿಯಿದೆ.' ಜಮ್ಮು ಮತ್ತು ಕಾಶ್ಮೀರ, ಗಿಲ್ಗಿಟ್, ಬಲೂಚಿಸ್ತಾನ, ಮುಜಾಫರ್ಬಾದ್, ಕೇರಳ, ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ ಮಳೆಯಾಗಲಿದೆ.
ಕರ್ನಾಟಕದ 17 ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಮಳೆ
ದೆಹಲಿಯಲ್ಲಿ ಗಾಳಿಯ ಗುಣಮಟ್ಟ ತುಂಬಾ ಕಳಪೆಯಾಗಿದೆ, ಚಳಿಯೂ ಹೆಚ್ಚಾಗಿದೆ.ಉತ್ತರ ಪ್ರದೇಶ, ಒಡಿಶಾ, ಬರೇಲಿ, ಸುಲ್ತಾನ್ಪುರ, ಲುಧಿಯಾನಾದಲ್ಲಿ ಶೀತಗಾಳಿ ಹೆಚ್ಚಾಗಿದೆ.
Recommended Video