ಈ ಸಲ ರಂಜಾನ್ ಆಚರಣೆ ಹೇಗಿರಬೇಕು? ಸರ್ಕಾರದ ಸೂಚನೆಗಳು ಹೀಗಿವೆ
ಬೆಂಗಳೂರು, ಏ. 17: ಕೊರೊನಾ ವೈರಸ್ ಇಡೀ ದೇಶಕ್ಕೆ ಸಂಕಷ್ಟ ತಂದಿಟ್ಟಿದೆ. ಇದೇ ಸಂದರ್ಭದಲ್ಲಿ ದೆಹಲಿಯಲ್ಲಿ ನಡೆದ ಧಾರ್ಮಿಕ ಸಮ್ಮೇಳನವೊಂದರಲ್ಲಿ ಭಾಗವಹಿಸಿದ್ದ ಹಲವರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿತ್ತು. ಅದರಿಂದಾಗಿ ಒಂದು ಸಮುದಾಯವೇ ಆರೋಪಕ್ಕೆ ಗುರಿ ಆಗುವಂತಾಗಿತ್ತು.
ಕೊರೊನಾ ವೈರಸ್ ಗಿಂತ ಹೆಚ್ಚಿನ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ಕಾರ್ಯಕ್ರಮ ಹಾಗೂ ಅದರಲ್ಲಿ ಭಾಗವಹಿಸಿದ್ದವರ ಕುರಿತು ನಡೆದಿದ್ದವು. ಮಾಧ್ಯಮಗಳಲ್ಲಿಯೂ ಆ ಬಗ್ಗೆ ಬಹಳಷ್ಟು ಚರ್ಚೆಗಳು ನಡೆದಿದ್ದವು. ವೈರಸ್ ಹರಡಲೆಂದೆ ಧಾರ್ಮಿಕ ಕಾರ್ಯಕ್ರಮ ನಡೆದಿದೆ ಎನ್ನುವಷ್ಟರ ಮಟ್ಟಿಗೆ ಆರೋಪ-ಪ್ರತ್ಯಾರೋಪಗಳು ವಿನಿಮಯವಾಗಿದ್ದವು.
ಆರೋಪಗಳಿಗೆ ಬೆಂಬಲ ಕೊಡುವಂತೆ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆಲವರು ನಡೆದುಕೊಂಡಿದ್ದು ವರದಿಯಾಗಿತ್ತು. ಕೆಲವರು ಕೊರೊನಾ ಪರೀಕ್ಷೆಗೆ ಮುಂದಾಗದೇ ಸರ್ಕಾರಕ್ಕೆ ತಲೆನೋವಾಗಿದ್ದರು. ಇದು ಆಕ್ಷೇಪಕ್ಕೆ ಕಾರಣವಾಗಿತ್ತು. ಇದರಿಂದಾಗಿ ಸಮಾಜದಲ್ಲಿ ಶಾಂತಿ ಕದಡುವ ಆತಂಕ ಕೂಡ ಎದುರಾಗಿತ್ತು.
ಕೊನೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಧಾರ್ಮಿಕ ಭಾವನೆ ಕೆರಳಿಸದಂತೆ ಎಚ್ಚರಿಕೆ ಕೊಡುವ ಮೂಲಕ ಚರ್ಚೆಗೆ ಮುಕ್ತಾಯ ಹಾಡಿದ್ರು. ಈಗ ಈ ಸಲದ ರಮ್ಜಾನ್ ಆಚರಣೆ ಹೇಗಿರಬೇಕು ಎಂಬುದಕ್ಕೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಸೂಚನೆಗಳನ್ನು ಕೊಟ್ಟಿದೆ.
ಏಪ್ರಿಲ್ 25ರಿಂದ ರಂಜಾನ್ ಆರಂಭ
ಇದೇ ಏಪ್ರಿಲ್ 25 ರಿಂದ ರಂಜಾನ್ ಆಚರಣೆ ಆರಂಭವಾಗಲಿದೆ. ಆದರೆ ಕೊರೊನಾ ವೈರಸ್ ಹಾವಳಿ ಹಿನ್ನೆಲೆಯಲ್ಲಿ ಇಡೀ ದೇಶಾದ್ಯಂತ ಲಾಕ್ಡೌನ್ ಜಾರಿಯಲ್ಲಿದೆ. ಹೀಗಾಗಿ ಕೊರೊನಾ ಹರಡಲು ಅನುಕೂಲವಾಗದಂತೆ ರಂಜಾನ್ ಆಚರಣೆ ಮಾಡುವಂತೆ ಸರ್ಕಾರ ಮನವಿ ಮಾಡಿಕೊಂಡಿದೆ. ಇದೇ ಹಿನ್ನೆಲೆಯಲ್ಲಿ ಕಳೆದ ವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡರು, ಮುಸ್ಲಿಂ ಸಮುದಾಯದ ನಾಯಕರೊಂದಿಗೆ ಸಭೆ ನಡೆದಿತ್ತು. ಇದೀಗ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸರ್ಕಾರದ ಸೂಚನೆ ಪಾಲಿಸುವಂತೆ ಸಮುದಾಯಕ್ಕೆ ಮನವಿ ಮಾಡಿ ಕೊಂಡಿದೆ.
ಸಮೂಹ ಪ್ರಾರ್ಥನೆಗೆ ಅವಕಾಶವಿಲ್ಲ
ಕರ್ನಾಟಕ ವಕ್ಫ್ ಮಂಡಳಿ ಅಧ್ಯಕ್ಷ ಮೊಹಮ್ಮದ್ ಯೂಸುಫ್ ಸರ್ಕಾರದೊಂದಿಗೆ ಚರ್ಚಿಸಿದ ವಿಷಯಗಳನ್ನು ಮುಸ್ಲಿಂ ಸಮುದಾಯದವರಿಗೆ ತಿಳಿಸಿದ್ದಾರೆ. ಮುಖ್ಯವಾಗಿ ಕೊರೊನಾ ವೈರಸ್ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೂಚನೆಗಳನ್ನ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಿದ್ದಾರೆ. ಸಮೂಹ ಪ್ರಾರ್ಥನೆಗೆ ಯಾವುದೇ ಕಾರಣಕ್ಕೂ ಅವಕಾಶ ಇರುವುದಿಲ್ಲ. ರಮ್ಜಾನ್ ಸಂದರ್ಭದಲ್ಲಿ ಸಾಮೂಹಿಕವಾಗಿ ಮಾಡುವ ತರಾವ್ಹಿ ನಮಾಜ್ಗೆ ನೆರೆಹೊರೆಯವರನ್ನು ಕರೆಯುವಂತಿಲ್ಲ.
ದಿನನಿತ್ಯದ ವಸ್ತುಗಳ ಖರೀದಿ ಹಾಗೂ ಮಾರಾಟದ ವಿಚಾರದಲ್ಲಿ ಸರ್ಕಾರದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮನೆ ಅಥವಾ ಮೊಹಲ್ಲಾಗಳಲ್ಲಿ ತರಾವ್ಹಿ ನಮಾಜ್ನಲ್ಲಿ ಕುರ್ಆನ್ ಪೂರ್ಣಗೊಳಿಸುವಂತಹ ಯಾವುದೇ ಸಿದ್ಧತೆಗಳನ್ನು ಮಾಡಲೇಬಾರದು ಎಂದು ವಕ್ಫ್ ಮಂಡಳಿ ಸರ್ಕಾರದ ಸೂಚನೆ ಆಧರಿಸಿ ಮನವಿ ಮಾಡಿಕೊಂಡಿದೆ.
ಸೆಹರಿ ಹಾಗೂ ಇಫ್ತಾರ್ ಕೂಟ ಸಂಪೂರ್ಣ ನಿಷೇಧ
ಸೆಹರಿ ಹಾಗೂ ಇಫ್ತಾರ್ ಕೂಟವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಹೀಗಾಗಿ ಯಾರೂ ಕೂಡ ಇಫ್ತಾರ್ ಕೂಟವನ್ನು ಆಯೋಜನೆ ಮಾಡುವಂತಿಲ್ಲ. ಮಸೀದಿ ಆವರಣದಲ್ಲಿ ವಾಸವಿರುವ ಮಅಝ್ಝಿನ್ ಅಥವಾ ಇಮಾಮ್ ಅವರು ಈ ಹಿಂದಿನಂತೆ ಸೆಹರಿ (ಉಪವಾಸ ಪ್ರಾರಂಭಿಸುವ ಮುನ್ನ ಉಪಹಾರ ಸ್ವೀಕಾರ) ಸಮಯ ಹಾಗೂ ಇಫ್ತಾರ್ ಸಮಯ ಆರಂಭಗೊಳ್ಳುವ ಸೂಚನೆಗಳನ್ನು ಮಾತ್ರ ನೀಡಬಹುದಾಗಿದೆ.
ಝಕಾತ್ ಹಾಗೂ ಸದಖಾ ಮೂಲಕ ಸಂಬಂಧಿಕರು, ನೆರೆ ಹೊರೆಯವರು ಹಾಗೂ ನರವಿನ ಅಗತ್ಯ ಇರುವಂತಹರಿಗೆ ನೆರವು ನೀಡಬಹುದಾಗಿದೆ. ಜೊತೆಗೆ ಮಸೀದಿಗಳಿಗೆ ತೆರಳಿ ನಮಾಜ್ ಮಾಡದೇ ಮನೆಯಲ್ಲಿಯೆ ನಮಾಜ್ ನಿರ್ವಹಿಸಬೇಕು.
ಮಸೀದಿಗಳಲ್ಲಿ ಧ್ವನಿವರ್ಧಕ ಬಳಸುವಂತಿಲ್ಲ
ಲಾಕ್ಡೌನ್ ಮುಗಿಯುವವರೆಗೆ ಯಾವುದೇ ಕಾರಣಕ್ಕೂ ಧ್ವನಿವರ್ಧಕ ಬಳಸಿ ಜನರನ್ನು ಸೆಹರಿಗಾಗಿ ಎಚ್ಚರಗೊಳಿಸುವುದನ್ನು ಕೈಬಿಡಬೇಕು. ಆಝಾನ್ ನೀಡುವಾಗ ಅತ್ಯಂತ ಲಘು ಧ್ವನಿಯಲ್ಲಿ ನೀಡಬೇಕು.
ಈಗಾಗಲೇ ಅಮೀರೆ ಆರೀಅತ್ ಸೂಚಿಸಿರುವಂತೆ ಇಮಾಮ್, ನಾಯಬ್ ಎ ಇಮಾಮ್, ಮಅಝ್ಝಿನ್ ಹಾಗೂ ಖಾದಿಮ್ ಮಾತ್ರ ಮಸೀದಿಯಲ್ಲಿ ಐದು ಹೊತ್ತಿನ ನಮಾಜ್ ನಿರ್ವಹಿಸಬೇಕು. ಉಳಿದ ಯಾರಿಗೂ ಪ್ರವೇಶ ಇರುವುದಿಲ್ಲ. ಈ ಸಂದರ್ಭದಲ್ಲಿ ಯಾವುದೆ ಪ್ರವಚನವಿಲ್ಲದೆ ಕನಿಷ್ಠ ಅವಧಿಯಲ್ಲಿ ಮಸೀದಿಯಲ್ಲಿ ತರಾವ್ಹಿ ನಮಾಝ್ ನಿರ್ವಹಿಸಬೇಕು.
ಯುವಕರ ಚಟುವಟಿಕೆಗಳ ಬಗ್ಗೆ ಗಮನವಿರಲಿ
ನಮ್ಮ ದೇಶ ಹಾಗೂ ಸಮುದಾಯಕ್ಕೆ ಸಮಸ್ಯೆಯನ್ನುಂಟು ಮಾಡುವಂತಹ ಯಾವುದೇ ಬಗೆಯ ಚಟುವಟಿಕೆಗಳು ನಡೆಯದಂತೆ ಕುಟುಂಬದ ಹಿರಿಯರು ಜವಾಬ್ದಾರಿ ವಹಿಸಬೇಕೆಂದು ವಕ್ಫ್ ಮಂಡಳಿ ಸೂಚಿಸಿದೆ. ಸಮಸ್ಯೆಯನ್ನುಂಟು ಮಾಡುವಂತಹ ಯಾವುದೆ ಬಗೆಯ ಚಟುವಟಿಕೆಗಳನ್ನು ಮಕ್ಕಳು ಅಥವಾ ಯುವಕರು ಸೇರಿದಂತೆ ಯಾರೂ ಮಾಡದಂತೆ ಪೋಷಕರು, ಕುಟುಂಬದ ಜವಾಬ್ದಾರಿಯುತ ಸದಸ್ಯರು ಗಮನ ಹರಿಸಬೇಕು. ಬಹುಮುಖ್ಯವಾಗಿ ಉಪವಾಸ ವ್ರತ ಆಚರಿಸುವವರಿಗೆ ಹಂಚಲು ಮಸೀದಿ ಆವರಣದಲ್ಲಿ ಗಂಜಿಯನ್ನು ಸಿದ್ದಪಡಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ಕರ್ನಾಟಕ ವಕ್ಫ್ ಮಂಡಳಿ ಸೂಚಿಸಿದೆ.