ಹೈಕಮಾಂಡ್ ಅಂಗಣದಲ್ಲಿ ಡಿಕೆಶಿ, ಸಿದ್ದರಾಮಯ್ಯ ಮತ್ತೊಂದು ಸುತ್ತಿನ ಪ್ರತಿಷ್ಠೆಯ ಮೇಲಾಟ
ರಾಜ್ಯಸಭಾ ಮತ್ತು ವಿಧಾನ ಪರಿಷತ್ ಚುನಾವಣೆಯ ದಿನಾಂಕ ಘೋಷಣೆಯಾದ ನಂತರ ಅಭ್ಯರ್ಥಿಗಳ ಆಯ್ಕೆಯ ಕಸರತ್ತು ತೀವ್ರಗೊಳ್ಳಲಾರಂಭಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ದೆಹಲಿಯಿಂದ ಬುಲಾವ್ ಬಂದಿದೆ, ವರಿಷ್ಠರು ಮಾತುಕತೆ ನಡೆಸಿದ್ದಾರೆ.
ಇದೇ ರೀತಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ದೆಹಲಿಗೆ ಕರೆಸಿಕೊಂಡಿದೆ. ರಾಜ್ಯಸಭೆಗೆ ಕಾಂಗ್ರೆಸ್ ಅಭ್ಯರ್ಥಿ ಯಾರಾಗಬೇಕು ಎನ್ನುವ ವಿಚಾರದಲ್ಲಿ ಹೆಚ್ಚಿನ ಗೊಂದಲವಿಲ್ಲ.
'ಶೋಭಾ ಕರಂದ್ಲಾಜೆ, ಸ್ಮೃತಿ ಇರಾನಿಗೆ ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ'
ಆದರೆ, ಪರಿಷತ್ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಯ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ನಲ್ಲಿ ಒಗ್ಗಟ್ಟಿನ ಮಂತ್ರವಿಲ್ಲ. ಹಾಗಾಗಿ, ಈ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲು ರಾಜ್ಯದ ಇಬ್ಬರು ನಾಯಕರನ್ನು ಸೋನಿಯಾ ಗಾಂಧಿ ದೆಹಲಿಗೆ ಕರೆಸಿಕೊಂಡಿದ್ದಾರೆ.
ಯಾರನ್ನು ಅಭ್ಯರ್ಥಿಯನ್ನಾಗಿ ಘೋಷಿಸಬೇಕು ಎನ್ನುವ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ವಿಭಿನ್ನ ನಿಲುವು ತಳೆದಿರುವುದರಿಂದ, ಯಾರ ಮಾತಿಗೆ ಸೋನಿಯಾ ಗಾಂಧಿ ಹೆಚ್ಚಿನ ಮಹತ್ವನ್ನು ನೀಡಲಿದ್ದಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
'ಸಿದ್ದರಾಮಯ್ಯನವರ ಮಾತಿಗೆ ಥರಗುಟ್ಟಿ ಹೋದ ಬಿಜೆಪಿಯ ನಾಯಕರು'
ಜೈರಾಂ ರಮೇಶ್ ಅವರೇ ಮುಂದಿನ ಅಭ್ಯರ್ಥಿಯಾಗುವ ಸಾಧ್ಯತೆ
ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಿಂದ ಒಂದು ಸ್ಥಾನ ಗೆಲ್ಲಬಹುದಾಗಿದೆ. ಜೈರಾಂ ರಮೇಶ್ ಅವರೇ ಮುಂದಿನ ಅಭ್ಯರ್ಥಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಇವರ ಆಯ್ಕೆಯ ಬಗ್ಗೆ ರಾಜ್ಯದ ನಾಯಕರಲ್ಲಿ ಒಲವು ಇಲ್ಲದಿದ್ದರೂ, ಈ ಬಗ್ಗೆ ಸೋನಿಯಾ ಗಾಂಧಿಗೆ ಹೆಚ್ಚಿನ ಒತ್ತಡವನ್ನು ರಾಜ್ಯ ನಾಯಕರು ಹಾಕಲಾರರು ಎಂದು ಹೇಳಲಾಗುತ್ತಿದೆ. ಆದರೆ, ಪರಿಷತ್ ಚುನಾವಣೆಯ ವಿಚಾರದಲ್ಲಿ ಹಾಗಲ್ಲ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಈ ವಿಚಾರದಲ್ಲಿ ತಮ್ಮ ವಾದವನ್ನು ಮಂಡಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಎಸ್.ಆರ್.ಪಾಟೀಲ್ ಪರ ಡಿಕೆಶಿ ಬ್ಯಾಟ್ ಬೀಸುತ್ತಿದ್ದಾರೆ
ಜೂನ್ ಮೂರರಂದು ಚುನಾವಣೆ ನಡೆಯಲಿದ್ದು, ಮೇ 27 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ವಿಧಾನಸಭೆ ಸದಸ್ಯರಿಂದ ಆಯ್ಕೆಯಾಗುವ ವಿಧಾನ ಪರಿಷತ್ 7 ಸ್ಥಾನಗಳಿಗೆ ನಡೆಯಲಿದೆ. ಹಿರಿಯ ಕಾಂಗ್ರೆಸ್ ಮುಖಂಡ ಎಸ್.ಆರ್.ಪಾಟೀಲ್ ವಿಚಾರದಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ಪೈಪೋಟಿ ಏರ್ಪಟ್ಟಿದೆ ಎಂದು ಹೇಳಲಾಗುತ್ತಿದೆ. ಪಾಟೀಲ್ ಪರ ಡಿಕೆಶಿ ಬ್ಯಾಟ್ ಬೀಸುತ್ತಿದ್ದಾರೆ. ಆದರೆ, ಇದಕ್ಕೆ ಸಿದ್ದರಾಮಯ್ಯ ಬಣದ ವಿರೋಧ ವ್ಯಕ್ತವಾಗಿದೆ.
ಕರಾವಳಿ ಮೂಲದ ಮತ್ತು ಅವರ ಪರಮಾಪ್ತರೂ ಆಗಿರುವ ಐವಾನ್ ಡಿಸೋಜಾ
ಸಿದ್ದರಾಮಯ್ಯನವರ ಬಣ ಕರಾವಳಿ ಮೂಲದ ಮತ್ತು ಅವರ ಪರಮಾಪ್ತರೂ ಆಗಿರುವ ಐವಾನ್ ಡಿಸೋಜಾಗೆ ಟಿಕೆಟ್ ನೀಡಬೇಕೆನ್ನುವ ನಿಲುವನ್ನು ಹೊಂದಿದೆ. ಇವರಿಗೆ, ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿಯ ಮುಖ್ಯಸ್ಥರೂ ಆಗಿರುವ ಎಂ.ಬಿ.ಪಾಟೀಲ್ ಅವರ ಬೆಂಬಲವೂ ಇದೆ. ಹಾಗಾಗಿ, ಎಸ್.ಆರ್.ಪಾಟೀಲ್ ಮತ್ತು ಐವಾನ್ ಡಿಸೋಜಾ ವಿಚಾರದಲ್ಲಿ ಸೋನಿಯಾ ಗಾಂಧಿ ಯಾರ ಪರ ಒಲವನ್ನು ತೋರಲಿದ್ದಾರೆ ಎನ್ನುವುದು ಮುಖ್ಯವಾಗಿದೆ.
ಹೈಕಮಾಂಡ್ ಅಂಗಣದಲ್ಲಿ ಡಿಕೆಶಿ, ಸಿದ್ದರಾಮಯ್ಯ ಪ್ರತಿಷ್ಠೆಯ ಮೇಲಾಟ
ಎಸ್.ಆರ್.ಪಾಟೀಲ್ ಇತ್ತೀಚೆಗೆ ಪಕ್ಷದ ಯಾವ ನಾಯಕರನ್ನೂ ಕರೆಯದೆ ಉತ್ತರ ಕರ್ನಾಟಕ ಸ್ವಾಭಿಮಾನ ವೇದಿಕೆಯ ಹೆಸರಿನಲ್ಲಿ ಸಂಕಲ್ಪ ಯಾತ್ರೆಯ ಟ್ಯಾಕ್ಟರ್ ರ್ಯಾಲಿ ನಡೆಸಿದ್ದರು. ಸ್ಥಳೀಯ ಮತ್ತು ರಾಜ್ಯ ಮಟ್ಟದ ನಾಯಕರನ್ನು ಇದಕ್ಕೆ ಕರೆದಿರಲಿಲ್ಲ. ಸಿದ್ದರಾಮಯ್ಯನವರು ಈ ವಿಚಾರವನ್ನು ಸೋನಿಯಾ ಗಾಂಧಿ ಮುಂದೆ ತರುವ ಸಾಧ್ಯತೆಯಿದೆ. ಎಸ್.ಆರ್.ಪಾಟೀಲ್ ಅಥವಾ ಐವಾನ್ ಡಿಸೋಜಾ ಇದು ಹೆಸರು ಮಾತ್ರ. ಅಸಲಿಗೆ, ಇದು ಹೈಕಮಾಂಡ್ ನೆಲದಲ್ಲಿ ಸಿದ್ದರಾಮಯ್ಯನವರ ಅಥವಾ ಡಿ.ಕೆ.ಶಿವಕುಮಾರ್ ಮಾತಿಗೆ ಬೆಲೆಯೋ ಎನ್ನುವುದು ಇತ್ಯರ್ಥವಾಗಲಿದೆ ಎನ್ನುವುದು ರಾಜ್ಯ ಕಾಂಗ್ರೆಸ್ ವಲಯದ ವಾದ.