ರಾಜ್ಯದಲ್ಲಿ ಮದ್ಯ ಖರೀದಿಗೆ ಸಮಯ ವಿಸ್ತರಿಸಿದ ಸಿಎಂ ಯಡಿಯೂರಪ್ಪ
ಬೆಂಗಳೂರು, ಜೂನ್ 10: ಕೋವಿಡ್ ಸೋಂಕು ಪ್ರಕರಣಗಳು ಕಡಿಮೆ ಇರುವ ಪ್ರದೇಶಗಳಲ್ಲಿ ರಾಜ್ಯ ಸರ್ಕಾರ ಕಠಿಣ ನಿರ್ಬಂಧಗಳನ್ನು ಸಡಿಲಿಕೆ ಮಾಡಿದ್ದು, ಜೂನ್ 14ರಿಂದ ಹೊಸ ನಿಯಮ ಜಾರಿಗೆ ಬರಲಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
Recommended Video
ಅದೇ ರೀತಿ ಮದ್ಯದಂಗಡಿಗಳು ರಾಜ್ಯ ಬೊಕ್ಕಸದ ಪ್ರಮುಖ ಆದಾಯ ಮೂಲವಾಗಿದ್ದು, ಶಾಪ್ಗಳಲ್ಲಿ ಮದ್ಯವನ್ನು ಪಾರ್ಸೆಲ್ ಪಡೆಯಲು ಮಧ್ಯಾಹ್ನ 2ರವರೆಗೆ ಅವಕಾಶ ನೀಡಲಾಗಿದೆ.
ಕೋವಿಡ್ ನಿಯಂತ್ರಣಕ್ಕಾಗಿ ಜಾರಿಗೊಳಿಸಲಾಗಿದ್ದ ಲಾಕ್ಡೌನ್ ಸಂದರ್ಭದಲ್ಲಿ ಇಡೀ ರಾಜ್ಯದಲ್ಲಿ ಬೆಳಗ್ಗೆ 6ರಿಂದ 10 ಗಂಟೆವರೆಗೆ ಮಾತ್ರ ಮದ್ಯ ಖರೀದಿಗೆ ಅವಕಾಶ ಇತ್ತು. ಆದರೆ, ಈಗ ಸರ್ಕಾರ ಈ ಅವಧಿಯನ್ನು 2 ಗಂಟೆವರೆಗೆ ವಿಸ್ತರಣೆ ಮಾಡಿದೆ. ಜೂನ್ 14ರಿಂದ ಹೊಸ ಮಾರ್ಗಸೂಚಿಗಳು ಜಾರಿಗೆ ಬರಲಿದೆ.
ಪಾಸಿಟಿವಿಟಿ ರೇಟ್ ಹೆಚ್ಚಿರುವ ಮಂಡ್ಯ, ಮೈಸೂರು, ಹಾಸನ, ಶಿವಮೊಗ್ಗ, ಬೆಳಗಾವಿ, ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ದಾವಣಗೆರೆ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್ಡೌನ್ ಯಥಾಸ್ಥಿತಿ ಮುಂದುವರೆಯಲಿದ್ದು, ಈ ಜಿಲ್ಲೆಗಳಲ್ಲಿ ಈಗಿರುವ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಉಳಿದ ಎಲ್ಲಾ ಜಿಲ್ಲೆಗಳಲ್ಲಿ ಜೂನ್ 14ರಿಂದ ನಿರ್ಬಂಧ ಸಡಿಲಿಕೆ ಮಾಡುತ್ತೇವೆ ಎಂದು ಸಿಎಂ ಯಡಿಯೂರಪ್ಪ ಜೂನ್ 10ರ ಸುಕ್ರವಾರ ಸಂಜೆ ಘೋಷಿಸಿದರು.
ರಾಜ್ಯದಲ್ಲಿ ಕೆಎಸ್ಆರ್ಟಿಸಿ ಹಾಗೂ ಬೆಂಗಳೂರಿನಲ್ಲಿ ಬಿಎಂಟಿಸಿ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಇನ್ನು ನಿರ್ಮಾಣ ಚಟುವಟಿಕೆ ಆರಂಭಿಸಲು ಅನುಮತಿ ಇದ್ದು, ಸಿಮೆಂಟ್, ಸ್ಟೀಲ್ ಅಂಗಡಿ ತೆಗೆಯಲು ಅವಕಾಶ ನೀಡಲಾಗಿದೆ.
ಎಲ್ಲ ಕಾರ್ಖಾನೆ ಶೇ.50 ಸಿಬ್ಬಂದಿ ಹಾಜರಿಯೊಂದಿಗೆ ಕಾರ್ಯನಿರ್ವಹಣೇಗೆ ಅವಕಾಶ ಕೊಟ್ಟಿದ್ದು, ಗಾರ್ಮೆಂಟ್ಸ್ ಶೇ.30 ಹಾಜರಿಯೊಂದಿಗೆ ಕಾರ್ಯನಿರ್ವಹಣೆಗೆ ಅವಕಾಶ ನೀಡಲಾಗುವುದು ಎಂದು ಸಿಎಂ ಯಡಿಯೂರಪ್ಪ ಹೇಳಿದರು.
ಇವೆಲ್ಲದರ ಜೊತೆಗೆ ರಾಜ್ಯದಲ್ಲಿ ಮದ್ಯ ಪಾರ್ಸೆಲ್ ಪಡೆಯಲು ಮಧ್ಯಾಹ್ನ 2ರವರೆಗೆ ಅವಕಾಶ ನೀಡಲಾಗಿದ್ದು, ಬಾರ್ ಮತ್ತು ರೆಸ್ಟೋರೆಂಟ್, ವೈನ್ ಸ್ಟೋರ್, ಎಂಎಸ್ಐಎಲ್ಗಳಲ್ಲಿ ಮಧ್ಯಾಹ್ನ 2ರವರೆಗೆ ಪಾರ್ಸೆಲ್ ಪಡೆಯಬಹುದು ಎಂದು ಸಿಎಂ ಹೇಳಿದ್ದಾರೆ.