ಕರ್ನಾಟಕ ಅನ್ ಲಾಕ್ 4.0 ಮಾರ್ಗಸೂಚಿಯಲ್ಲಿ ಇರುವುದೇನು?
ಬೆಂಗಳೂರು, ಆಗಸ್ಟ್.31: ನೊವೆಲ್ ಕೊರೊನಾವೈರಸ್ ಸೋಂಕಿತರ ಸಂಖ್ಯೆ ಏರಿಕೆ ನಡುವೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರವು ಕರ್ನಾಟಕ ಅನ್ ಲಾಕ್ 4.0 ಮಾರ್ಗಸೂಚಿ ಬಿಡುಗಡೆ ಮಾಡಿದೆ. ಸಪ್ಟೆಂಬರ್.30ರವರೆಗೂ ಅನ್ ಲಾಕ್ 4.0 ಮಾರ್ಗಸೂಚಿ ಜಾರಿಯಲ್ಲಿರುತ್ತವೆ.
Recommended Video
ರಾಜ್ಯದಲ್ಲಿನ ಕಂಟೇನ್ಮೆಂಟ್ ಝೋನ್ ಗಳನ್ನು ಹೊರತುಪಡಿಸಿದಂತೆ ಉಳಿದ ಪ್ರದೇಶಗಳಲ್ಲಿ ಕೆಲವು ಚಟುವಟಿಕೆಗಳಿಗೆ ವಿಧಿಸಿದ್ದ ನಿರ್ಬಂಧವನ್ನು ಸಡಿಲಗೊಳಿಸಲಾಗಿದೆ. ಸಪ್ಟೆಂಬರ್.07ರಿಂದ ಬೆಂಗಳೂರಿನಲ್ಲಿ ಮೆಟ್ರೋ ರೈಲು ಸಂಚಾರವನ್ನು ಮೊದಲ ಹಂತದಲ್ಲಿ ಆರಂಭಿಸಲು ಅನುಮತಿ ನೀಡಲಾಗಿದೆ.
ಅನ್ ಲಾಕ್ ಮಾರ್ಗಸೂಚಿ 4.0; ಇನ್ನು ಮುಂದೆ ಲಾಕ್ ಡೌನ್ ಇಲ್ಲ
ರಾಜ್ಯದೊಳಗೆ ಮತ್ತು ರಾಜ್ಯದ ಹೊರಗೆ ಸಂಚರಿಸಲು ಮುಕ್ತ ಅವಕಾಶವನ್ನು ನೀಡಲಾಗಿದೆ. ಇದಕ್ಕೆ ಸರ್ಕಾರದಿಂದ ಯಾವುದೇ ಅನುಮತಿ ಪಡೆಯುವ ಅಗತ್ಯವಿರುವುದಿಲ್ಲ. ಆದರೆ ಶಾಲಾ-ಕಾಲೇಜು, ಸಿನಿಮಾ ಮಂದಿರ, ಈಜುಕೊಳ, ರಂಗಮಂದಿರ ಮತ್ತು ಪಾರ್ಕ್ ಗಳು ಎಂದಿನಂತೆ ಬಂದ್ ಆಗಿರಲಿವೆ. ಕಂಟೇನ್ಮೆಂಟ್ ಝೋನ್ ಗಳಲ್ಲಿ ಮೊದಲಿನಂತೆ ನಿರ್ಬಂಧಗಳು ಮುಂದುವರಿಯಲಿದೆ.
ಶಾಲಾ-ಕಾಲೇಜು ಬಂದ್ ಆಗಿದ್ದರೂ ಈ ಚಟುವಟಿಕೆಗೆ ಸಮ್ಮತಿ
ಕರ್ನಾಟಕದಲ್ಲಿ ಸಪ್ಟೆಂಬರ್.30ರವರೆಗೂ ಶಾಲಾ-ಕಾಲೇಜುಗಳು ಬಂದ್ ಆಗಲಿವೆ. ಕಂಟೇನ್ಮೆಂಟ್ ಝೋನ್ ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ಕೆಲವು ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ.
- ಆನ್ ಲೈನ್ ಮತ್ತು ದೂರಶಿಕ್ಷಣ ವ್ಯವಸ್ಥೆಗೆ ಅನುಮತಿ ನೀಡುವುದರ ಜೊತೆಗೆ ಪ್ರೋತ್ಸಾಹ ನೀಡಲಾಗುವುದು.
- ಸಪ್ಟೆಂಬರ್.20ರಿಂದ ಜಾರಿಗೆ ಬರುವಂತೆ ಕಂಟೇನ್ಮೆಂಟ್ ಹೊರಗಿನ ಪ್ರದೇಶಗಳಲ್ಲಿ ಆನ್ ಲೈನ್ ಬೋಧನೆಗಾಗಿ ಶೇ.50ರಷ್ಟು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಕರೆಯಲು ಅನುಮತಿ ನೀಡಲಾಗಿದೆ.
- 9 ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳು ಕಂಟೇನ್ಮೆಂಟ್ ಝೋನ್ ನಿಂದ ಹೊರಗಿರುವ ಶಾಲೆಗಳಿಗೆ ತಮ್ಮ ಸ್ವಇಚ್ಛೆಯಿಂದ ತೆರಳುವುದಕ್ಕೆ ಅವಕಾಶ ನೀಡಲಾಗಿದೆ. ಸಪ್ಟೆಂಬರ್.21ರಿಂದ ತಂದೆ-ತಾಯಿ ಲಿಖಿತ ಒಪ್ಪಿಗೆ ಮೇರೆಗೆ ಅನುಮತಿಸಬಹುದು.
ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕಾರ್ಯಗಳಿಗೆ ಅನುಮತಿ
ರಾಜ್ಯದಲ್ಲಿ ಸಾಮಾಜಿಕ, ಧಾರ್ಮಿಕ, ರಾಜಕೀಯ, ಕ್ರೀಡೆ, ಮನೋರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಗಳಿಗೆ ಸಪ್ಟೆಂಬರ್.21ರಿಂದ ಜಾರಿಗೆ ಬರುವಂತೆ ಅನುಮತಿ ನೀಡಲಾಗುತ್ತದೆ. ಆದರೆ ಈ ಕಾರ್ಯಕ್ರಮಗಳಲ್ಲಿ 100ಕ್ಕಿಂತ ಹೆಚ್ಚು ಜನರನ್ನು ಸೇರಿಸುವಂತಿಲ್ಲ ಎಂದು ನಿರ್ಬಂಧ ವಿಧಿಸಲಾಗಿದೆ. ಇದರ ಜೊತೆಗೆ ಸ್ಯಾನಿಟೈಸರ್ ಬಳಸುವುದು ಮತ್ತು ಮುಖಕ್ಕೆ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಅಂತ್ಯಸಂಸ್ಕಾರ ಕಾರ್ಯದಲ್ಲಿ 100 ಜನರಿಗೆ ಅನುಮತಿ
ಕೊರೊನಾವೈರಸ್ ಸೋಂಕಿನ ಭೀತಿ ಹಿನ್ನೆಲೆ ಮದುವೆ ಕಾರ್ಯದಲ್ಲಿ 50 ಹಾಗೂ ಅಂತ್ಯಸಂಸ್ಕಾರದಲ್ಲಿ 20 ಜನಕ್ಕಿಂತ ಹೆಚ್ಚು ಜನರು ಭಾಗಿಯಾಗಲು ಅನುಮತಿ ಇರಲಿಲ್ಲ. ಆದರೆ ಸಪ್ಟೆಂಬರ್.21ರಿಂದ ಜಾರಿಗೆ ಬರುವಂತೆ ಅತಿಥಿಗಳ ಸಂಖ್ಯೆಯನ್ನು 100ಕ್ಕೆ ಹೆಚ್ಚಿಸಲಾಗಿದೆ.
ಅಂತರ್ ರಾಜ್ಯ-ಅಂತಾರಾಜ್ಯ ಸಂಚಾರಕ್ಕೆ ಮುಕ್ತ ಅವಕಾಶ
ರಾಜ್ಯದೊಳಗೆ ಹಾಗೂ ರಾಜ್ಯದ ಹೊರಗೆ ವ್ಯಕ್ತಿಗಳ ಓಡಾಟಕ್ಕೆ ಹಾಗೂ ಸರಕುಗಳ ಸಾಗಣೆಗೆ ಯಾವುದೇ ನಿರ್ಬಂಧವಿರುವುದಿಲ್ಲ. ಇಂತಹ ಓಡಾಟಕ್ಕೆ ಯಾವುದೇ ಪ್ರತ್ಯೇಕ ಅನುಮತಿ, ಅನುಮೋದನೆ ಅಥವಾ ಇ-ಪರ್ಮಿಟ್ ಅಗತ್ಯವಿರುವುದಿಲ್ಲ. ಆದರೆ ಕರ್ನಾಟಕಕ್ಕೆ ಅನ್ಯ ರಾಜ್ಯಗಳಿಂದ ಆಗಮಿಸುವವರು ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿರುವ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು.