ಸರ್ಕಾರದ ವತಿಯಿಂದ ಕಾವೇರಿ ನದಿಯಲ್ಲಿ 1,000 ಕೊವಿಡ್-19 ಮೃತ ಅಸ್ಥಿ ವಿಸರ್ಜನೆ
ಬೆಂಗಳೂರು, ಜೂನ್ 2: ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟವರ ಚಿತಾಭಸ್ಮವನ್ನು ತೆಗೆದುಕೊಂಡು ಹೋಗುವದಕ್ಕೂ ಜನರು ಭಯ ಪಡುವಂತಾ ವಾತಾವರಣ ಸೃಷ್ಟಿಯಾಗಿದೆ. ಈ ಹಿನ್ನೆಲೆ ಬುಧವಾರ ಸ್ವತಃ ಕಂದಾಯ ಸಚಿವ ಆರ್ ಅಶೋಕ್ ಮೃತ ಅಸ್ಥಿ ವಿಸರ್ಜನೆ ಮಾಡಲಿದ್ದಾರೆ.
ಕೊವಿಡ್-19 ಸೋಂಕಿನಿಂದ ಮೃತಪಟ್ಟ 1,000 ಜನರ ಅಸ್ಥಿಯನ್ನು ಸರ್ಕಾರದ ವತಿಯಿಂದ ಅಸ್ಥಿ ವಿಸರ್ಜನೆ ಕಾರ್ಯ ನಡೆಸಲಾಗುತ್ತಿದೆ. ಬುಧವಾರ ಮಧ್ಯಾಹ್ನ 12 ಗಂಟೆ ವೇಳೆಗೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬೆಳವಾಡಿಯ ಅನ್ನಪೂರ್ಣೇಶ್ವರಿ ಹಾಗೂ ಕಾಶಿ ವಿಶ್ವನಾಥ ದೇವಸ್ಥಾನದ ಬಳಿ ಕಾವೇರಿ ನದಿಯಲ್ಲಿ ವಿಸರ್ಜನೆ ಮಾಡಲಾಗುತ್ತದೆ.
ಭಯ ಬಿಟ್ಟು ಓದಿ: ಸೋಂಕಿತರ ಮೃತದೇಹಗಳಿಂದ ಹರಡುತ್ತದೆಯೇ ಕೊರೊನಾವೈರಸ್!?
ಸಾಮಾನ್ಯವಾಗಿ ಮೃತರ ಅಂತ್ಯಸಂಸ್ಕಾರದ ನಂತರದಲ್ಲಿ ಅಸ್ಥಿಯನ್ನು ಹರಿಯುವ ನದಿಯಲ್ಲಿ ವಿಸರ್ಜಿಸಿದರೆ ಮೃತ ಆತ್ಮಕ್ಕೆ ಮುಕ್ತಿ ಸಿಗುತ್ತದೆ ಎಂಬ ನಂಬಿಕೆಯಿದೆ. ಹೀಗಾಗಿ ಸರ್ಕಾರದ ವತಿಯಿಂದಲೇ ಕಂದಾಯ ಸಚಿವ ಆರ್ ಅಶೋಕ್ ಅಸ್ಥಿ ವಿಸರ್ಜಿಸಲಿದ್ದಾರೆ.
Recommended Video
ಚಿತಾಭಸ್ಮ ತೆಗೆದುಕೊಂಡು ಹೋಗದ ಸಂಬಂಧಿಕರು:
ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟವರ ಚಿತಾಭಸ್ಮವನ್ನು ತೆಗೆದುಕೊಂಡು ಹೋಗುವುದಕ್ಕಾಗಿ ಸಂಬಂಧಿಕರಿಗೆ 15 ದಿನಗಳ ಕಾಲಾವಕಾಶವನ್ನು ನೀಡಲಾಗಿತ್ತು. ಸಾಮಾನ್ಯವಾಗಿ ಮೃತರ ಅಂತ್ಯಕ್ರಿಯೆ ನಡೆದ ದಿನ ಅಥವಾ ಮರುದಿನವೇ ಚಿತಾಭಸ್ಮವನ್ನು ತೆಗೆದುಕೊಂಡು ಹೋಗಿದ್ದಾರೆ. ಆದರೆ ಕೆಲವು ಪ್ರಕರಣಗಳಲ್ಲಿ ಸಂಬಂಧಿಕರು ಅಸ್ಥಿಯನ್ನು ತೆಗೆದುಕೊಂಡು ಹೋಗುವುದಕ್ಕೂ ಹಿಂದೇಟು ಹಾಕಿದ್ದರು. ಹೀಗಾಗಿ 1200 ಮೃತರ ಚಿತಾಭಸ್ಮವನ್ನು ಹಾಗೇ ಶೇಖರಿಸಿ ಇಡಲಾಗಿತ್ತು. ಬುಧವಾರ ಮೃತರ ಆತ್ಮಕ್ಕೆ ಮುಕ್ತಿ ದೊರಕಿಸುವ ಉದ್ದೇಶದಿಂದ ಸರ್ಕಾರವೇ ಅಸ್ಥಿ ವಿಸರ್ಜನೆಗೆ ಮುಂದಾಗಿದೆ.