ರೆಸಾರ್ಟ್ನಲ್ಲಿ ಸಿಕ್ಸರ್; ಸದನದಲ್ಲಿ ಡಕ್ ಔಟ್; ಗುಡ್ನೈಟ್ ಸ್ವೀಟ್ ಡ್ರೀಮ್ಸ್
ಬೆಂಗಳೂರು, ಜುಲೈ 19 : ಸದನದಲ್ಲೇ ನಿದ್ದೆಗೆ ಜಾರಿದ ಯಡಿಯೂರಪ್ಪ. ಟ್ರಾಕ್ ಪ್ಯಾಂಟ್ ತೊಟ್ಟು ವಾಕಿಂಗ್ ಮಾಡಿದ ಶಾಸಕರು. ಮೊಗಸಾಲೆಯಲ್ಲಿ ದಿಂಬಿಗೆ ತಲೆ ಕೊಟ್ಟ ಶೆಟ್ಟರ್. ಲುಂಗಿಯುಟ್ಟು ರಿಲಾಕ್ಸ್ ಮೂಡ್ನಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ.... ಕರ್ನಾಟಕದ ಬಿಜೆಪಿ ಶಾಸಕರಿಗೆ ಇಂದು ವಿಧಾನಸೌಧದಲ್ಲೇ ಗುಡ್ನೈಟ್ ಸ್ವೀಟ್ ಡ್ರೀಮ್ಸ್....!
ಕರ್ನಾಟಕ ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿದೆ ಎಂದು ಆರೋಪಿಸಿದ್ದ ಪ್ರತಿಪಕ್ಷ ಬಿಜೆಪಿ ಗುರುವಾರ ಸರ್ಕಾರ ಪತನವಾಗಲಿದೆ ಎಂಬ ನಿರೀಕ್ಷೆಯಲ್ಲಿಯೇ ವಿಧಾನಸೌಧಕ್ಕೆ ಕಾಲಿಟ್ಟಿದ್ದರು. ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ರಾಜೀನಾಮೆ ನೀಡಲಿದ್ದಾರೆ ಎಂಬ ಬಿಜೆಪಿ ಲೆಕ್ಕಾಚಾರ ಮಾತ್ರ ತಪ್ಪಾಯಿತು.
ಅಂದು ಸಿದ್ದರಾಮಯ್ಯ ವಿರುದ್ಧ, ಇಂದು ಸಿದ್ಧರಾಮಯ್ಯಗೇ ಬದ್ಧ!: ಜೆಡಿಎಸ್ ಸ್ಥಿತಿ
ಗುರುವಾರ ಬೆಳಗ್ಗೆ 11 ಗಂಟೆಗೆ ಆರಂಭವಾದ ಕರ್ನಾಟಕದ ವಿಧಾನಸಭೆಯ ಕಲಾಪ ಗದ್ದಲ, ಗಲಾಟೆ, ಆರೋಪ, ಪ್ರತ್ಯಾರೋಪ, ಕೂಗಾಟ, ಆಕ್ರೋಶಕ್ಕೆ ಸಾಕ್ಷಿಯಾಯಿತು. ವಿಶ್ವಾಸಮತಯಾಚನೆ ಚರ್ಚೆ ತಾರ್ಕಿಕ ಅಂತ್ಯಕ್ಕೆ ಬಾರದೇ ಕಲಾಪ ಶುಕ್ರವಾರಕ್ಕೆ ಮುಂದೂಡಲಾಯಿತು.
ತಪ್ಪಿದ ಬಿಜೆಪಿ ಲೆಕ್ಕಾಚಾರ ; 1 ದಿನ ಸರ್ಕಾರ ಉಳಿಸಿದ ಸಿದ್ದರಾಮಯ್ಯ!
ಇಂದೇ (ಗುರುವಾರ) ವಿಶ್ವಾಸಮತಯಾಚನೆ ಮುಗಿಸಬೇಕು ಎಂದು ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದರು. ಆದರೆ, ಡೆಪ್ಯೂಟಿ ಸ್ಪೀಕರ್ ಜೆ. ಕೆ. ಕೃಷ್ಣಾ ರೆಡ್ಡಿ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಿದರು. ಇದನ್ನು ಖಂಡಿಸಿ ಬಿಜೆಪಿ ನಾಯಕರು ಸದನದಲ್ಲಿ ಅಹೋರಾತ್ರಿ ಧರಣಿ ನಡೆಸಿದರು. ಅವುಗಳ ಚಿತ್ರಗಳು ಇಲ್ಲಿವೆ......
1:30ರೊಳಗೆ ಬಹುಮತ ಸಾಬೀತುಪಡಿಸಿ: ರಾಜ್ಯಪಾಲರಿಂದ ಖಡಕ್ ಸೂಚನೆ
ಸದನದಲ್ಲಿ ರಾಜಹುಲಿ ನಿದ್ದೆಗೆ
ರಾಜಾಹುಲಿಗೆ ಜೈ...ರಾಜಾಹುಲಿಗೆ ಜೈ ಎಂಬ ಜಯಘೋಷ ಯಡಿಯೂರಪ್ಪ ಸದನಕ್ಕೆ ಆಗಮಿಸುವಾಗ ವಿಧಾನಸೌಧ ಮೊಗಸಾಲೆಯಲ್ಲಿ ಗುರುವಾರ ಬೆಳಗ್ಗೆ ಕೇಳಿಸಿತ್ತು. ಸಂಜೆ ಕಲಾಪ ಮುಂದೂಡುತ್ತಿದ್ದಂತೆ ಸದನದಲ್ಲಿಯೇ ಯಡಿಯೂರಪ್ಪ ನಿದ್ರೆಗೆ ಜಾರಿದರು. ತಮ್ಮ ಸಫಾರಿ ಸೂಟ್ ಬಿಳಿ ಶರ್ಟ್ ಬಿಚ್ಚಿಟ್ಟು ಅವರು ನಿದ್ದೆಗೆ ಶರಣಾದರು.
ಯಡಿಯೂರಪ್ಪ ಆರೋಗ್ಯ ತಪಾಸಣೆ
76 ವರ್ಷದ ಯಡಿಯೂರಪ್ಪ ಎರಡು ದಿನ ಶಾಸಕರ ಜೊತೆ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದರು. ಗುರುವಾರ ರಾತ್ರಿ ಸದನದಲ್ಲಿ ಧರಣಿ ಆರಂಭವಾಗುತ್ತಿದ್ದಂತೆ ವೈದ್ಯರು ಬಂದು ಯಡಿಯೂರಪ್ಪ ಆರೋಗ್ಯ ತಪಾಸಣೆ ನಡೆಸಿದರು. ಬಳಿಕ ಶಾಸಕರ ಜೊತೆ ಭೋಜನ ಸವಿದು ಯಡಿಯೂರಪ್ಪ ವಿಶ್ರಾಂತಿ ಪಡೆದರು.
ಶಾಸಕರ ಜೊತೆ ಚರ್ಚೆ
ಶಾಸಕರಾದ ಬಸವರಾಜ ಬೊಮ್ಮಾಯಿ, ಸುನೀಲ್ ಕುಮಾರ್, ಗೋವಿಂದ ಕಾರಜೋಳ ಮುಂತಾದವರ ಜೊತೆ ವಿಧಾನಸೌಧದಲ್ಲಿ ಸಭೆ ನಡೆಸಿದ ಯಡಿಯೂರಪ್ಪ ಶುಕ್ರವಾರದ ಕಲಾಪದ ತಂತ್ರಗಳ ಬಗ್ಗೆ ಚರ್ಚೆ ನಡೆಸಿದರು.
ಕೈಕಟ್ಟಿ ಕೂತ ಶಾಸಕರು
ಶಾಸಕರಾದ ಸೋಮಶೇಖರ ರೆಡ್ಡಿ, ರಾಜೂಗೌಡ, ಸಿ.ಟಿ.ರವಿ, ಶ್ರೀರಾಮುಲು, ಪಿ.ರಾಜೀವ್ ಸದನದ ಬಾವಿಯಲ್ಲಿಯೇ ಕುಳಿತು ಸಮಾಲೋಚನೆ ನಡೆಸಿದರು. ಸೋಮಶೇಖರ ರೆಡ್ಡಿ ಕೈ ಕಟ್ಟಿ ಕುಳಿತು ಫೋಟೋಗೆ ಫೋಸ್ ನೀಡಿದರು.
ನಿದ್ರೆಗೆ ಜಾರಿದ ಶಾಸಕರು
ಸ್ಪೀಕರ್ ಕುರ್ಚಿ ಮುಂದಿನ ಸಾಲಿನಲ್ಲಿಯೇ ಹಲವು ಶಾಸಕರು ನಿದ್ರೆಗೆ ಜಾರಿದರು. ಅಧಿಕಾರಿಗಳು ಸದನಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಮಾರ್ಷಲ್ಗಳು ಸದನದಲ್ಲಿ ಧರಣಿ ನಡೆಸುತ್ತಿರುವ ಶಾಸಕರ ಭದ್ರತೆಗಾಗಿ ನಿಯೋಜನೆಗೊಂಡಿದ್ದಾರೆ.
ಕಾಗೇರಿ ರಿಲ್ಯಾಕ್ಸ್ ಮೂಡ್
ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ಶಿರಸಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಜಗದೀಶ್ ಶೆಟ್ಟರ್ ಯಡಿಯೂರಪ್ಪ ಜೊತೆ ವಿಧಾನಸೌಧದ ಮೊಗಸಾಲೆಯಲ್ಲಿ ಯಡಿಯೂರಪ್ಪ ಜೊತೆ ಮಾತುಕತೆ ನಡೆಸಿದರು.