ಚೌಕಾಶಿಗೆ ಇಳಿದರೇ ಕೋಡಿಹಳ್ಳಿ, ಸಾರಿಗೆ ನೌಕರರ ಮುಷ್ಕರ ಸದ್ಯದಲ್ಲೇ ಅಂತ್ಯ?
ಬೆಂಗಳೂರು, ಏಪ್ರಿಲ್ 20: ಸಾರಿಗೆ ನೌಕರ ಮುಷ್ಕರ ಹದಿನಾಲ್ಕನೇ ದಿನಕ್ಕೆ ಕಾಲಿಡುತ್ತಿರುವುದು ಒಂದು ಕಡೆಯಾದರೆ, ಕೆಲಸಕ್ಕೆ ಹಾಜರಾಗುತ್ತಿರುವವರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ.
ಕೆಲಸಕ್ಕೆ ಹಾಜರಾದರೆ ಮಾತ್ರ ಮಾತುಕತೆ ಎನ್ನುವ ತನ್ನ ಕಠಿಣ ನಿಲುವಿನಿಂದ ಹಿಂದಕ್ಕೆ ಸರಿಯದ ಸರಕಾರದ ವಿರುದ್ದ ಆರಂಭದಲ್ಲಿ ಸೆಡ್ಡು ಹೊಡೆದಿದ್ದ ಮುಖಂಡರುಗಳು ಸಚಿವರನ್ನು ಆಹ್ವಾನವಿಲ್ಲದೆಯೇ ಭೇಟಿಯಾಗುತ್ತಿದ್ದಾರೆ.
ರಿಬ್ಬನ್ ಕಟ್ ಮಾಡೋಕೆ ಬಂದ ಕೋಡಿಹಳ್ಳಿ ಸಾರಿಗೆ ನೌಕರರ ನಾಯಕನಾದ ರೋಚಕ ಸ್ಟೋರಿ
ಸಹದ್ಯೋಗಿಗಳ ಕೆಲಸದಿಂದ ವಜಾ, ಅಮಾನತು, ವರ್ಗಾವಣೆ ಕ್ರಮದಿಂದ ಸಂಸ್ಥೆಯ ನೌಕರರಿಗೆ ಭಯ ಆರಂಭವಾಗಿದ್ದು, ತಮ್ಮ ಮುಖಂಡರುಗಳ ಮಾತಿಗೆ ಸೊಪ್ಪು ಹಾಕದೇ ಕೆಲಸಕ್ಕೆ ಹಾಜರಾಗುತ್ತಿದ್ದಾರೆ.
ಹೊಸಪೇಟೆ; ಸಾರಿಗೆ ನೌಕರರ ಮುಷ್ಕರ, 3.94 ಕೋಟಿ ನಷ್ಟ
ಬಸ್ ಮೇಲೆ ಕಲ್ಲು ತೂರಾಟ ಮತ್ತು ಇದರಿಂದ ಇಬ್ಬರು ಸಂಸ್ಥೆಯ ನೌಕರರ ಸಾವಿನಿಂದ ನೌಕರರ ಮುಷ್ಕರಕ್ಕೆ ವ್ಯಾಪಕ ವಿರೋಧವೂ ಆರಂಭವಾಗಿತ್ತು. ಪ್ರಯಾಣಿಕರು ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ಶಾಪ ಹಾಕುತ್ತಿರುವ ವಿಡಿಯೋಗಳು ವೈರಲ್ ಆಗಿದ್ದವು. ಬೊಮ್ಮಾಯಿ ಭೇಟಿಯಾಗಿ ಸುಳ್ಳು ಹೇಳಿದರೇ ಕೋಡಿಹಳ್ಳಿ ಚಂದ್ರಶೇಖರ್..
ಬೊಮ್ಮಾಯಿ ಭೇಟಿಯಾದ ಕೋಡಿಹಳ್ಳಿ ಚಂದ್ರಶೇಖರ್
ಸೋಮವಾರದಂದು (ಏ 19) ಕೋಡಿಹಳ್ಳಿ ಚಂದ್ರಶೇಖರ್ ಅವರು ರಾಜ್ಯ ಗೃಹಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ವೇಳೆ, ಮೊದಲು ಕೆಲಸಕ್ಕೆ ಹಾಜರಾಗಿ, ನೀವು ಮುಷ್ಕರ ನಡೆಸುತ್ತಿರುವ ಸಮಯ ಸರಿಯಿಲ್ಲ. ಕೊರೊನಾ ಮಿತಿಮೀರಿ ಹೋಗುತ್ತಿರುವ ಸಂದರ್ಭದಲ್ಲಿ ಮುಷ್ಕರ ಬೇಡ ಎಂದು ಬೊಮ್ಮಾಯಿ, ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ಮನವಿ ಮಾಡಿದ್ದರು.
ಬೊಮ್ಮಾಯಿ ಮತ್ತು ಸವದಿ ಸ್ಪಷ್ಟನೆ
ಆದರೆ, ಬೊಮ್ಮಾಯಿ ಜೊತೆಗಿನ ಮಾತುಕತೆಯ ನಂತರ ನೌಕರರಿಗೆ ಶೇ.10ರಷ್ಟು ವೇತನ ಹೆಚ್ಚಾಗಲಿದೆ. ಆರನೇ ವೇತನ ಆಯೋಗದ ಶಿಫಾರಸಿನ ಬಗ್ಗೆ ಸಿಎಂ ಮತ್ತು ಸಾರಿಗೆ ಸಚಿವರ ಜೊತೆ ಮಾತುಕತೆ ನಡೆಸಿ, ಜಾರಿಗೊಳಿಸುವ ಬಗ್ಗೆ ಬೊಮ್ಮಾಯಿಯವರು ಭರವಸೆ ನೀಡಿದ್ದಾರೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಕರಪತ್ರವನ್ನು ಹಂಚಿದ್ದರು. ಈ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಬೊಮ್ಮಾಯಿ ಮತ್ತು ಸವದಿ ಸ್ಪಷ್ಟನೆಯನ್ನು ನೀಡಿ, "ಅಂತಹ ಯಾವ ಭರವಸೆಯನ್ನು ಸರಕಾರ ನೀಡಿಲ್ಲ"ಎಂದಿದ್ದಾರೆ.
ಕೆಲಸಕ್ಕೂ ತೊಂದರೆ ಮಾಡಿಕೊಳ್ಳಬೇಕಾದೀತು ಎನ್ನುವ ಭೀತಿ
ಸರಕಾರ ತಮ್ಮ ನಿಲುವಿನಿಂದ ಹಿಂದಕ್ಕೆ ಸರಿಯದೇ ಇರುವುದರಿಂದ ಜಗ್ಗಿದಂತೆ ಕಂಡು ಬಂದಿರುವ ನೌಕರರ ಸಂಘಟನೆಯ ಮುಖಂಡರು ಸಚಿವರುಗಳನ್ನು ತಾವೇ ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದಾರೆ. ಮುಖಂಡರ ಮಾತನ್ನು ಕೇಳಿದರೆ ಇರುವ ಕೆಲಸಕ್ಕೂ ತೊಂದರೆ ಮಾಡಿಕೊಳ್ಳಬೇಕಾದೀತು ಎನ್ನುವ ಭೀತಿ ನೌಕರರಿಗೆ ಕಾಡಲಾರಂಭಿಸಿರುವ ಸೂಚಕವಂತೆ ಹಾಜರಾತಿಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
Recommended Video
ಸಾರಿಗೆ ನೌಕರರ ಮುಷ್ಕರ ಸದ್ಯದಲ್ಲೇ ಅಂತ್ಯ?
ಇದಕ್ಕೆ ಪೂರಕ ಎನ್ನುವಂತೆ, ನೌಕರರ ಮುಷ್ಕರ ಸದ್ಯದಲ್ಲೇ ಮುಕ್ತಾಯಗೊಳ್ಳಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆರನೇ ವೇತನ ಆಯೋಗವೇ ಮುಖ್ಯ ಎನ್ನುತ್ತಿದ್ದ ಕೋಡಿಹಳ್ಳಿಯವರು, ಮೂರು ಆಯ್ಕೆಗಳಲ್ಲಿ ಒಂದನ್ನಾದರೂ ಈಡೇರಿಸಲಿ ಎನ್ನುವ ಚೌಕಾಶಿಗೆ ಇಳಿದಿದ್ದಾರೆ. ಸಚಿವರು ಸಿಎಂ ಜೊತೆ ಮಾತುಕತೆ ನಡೆಸುತ್ತೇನೆ ಎಂದಿದ್ದಾರೆ, ನೋಡೋಣ ಏನಾಗುತ್ತದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.