ಸಾರಿಗೆ ನೌಕರರ ಮುಷ್ಕರ ತಾತ್ಕಾಲಿಕವಾಗಿ ಅಂತ್ಯ : ಕೋಡಿಹಳ್ಳಿ ಚಂದ್ರಶೇಖರ್
ಬೆಂಗಳೂರು, ಏಪ್ರಿಲ್ 21: ಸಾರಿಗೆ ನೌಕರರ ಮುಷ್ಕರ ತಾತ್ಕಾಲಿಕವಾಗಿ ಅಂತ್ಯಗೊಳಿಸಲಾಗಿದೆ ಎಂದು ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು ಇಂದು ಘೋಷಿಸಿದ್ದಾರೆ. ಆದರೆ, ಇದು ತಾತ್ಕಾಲಿಕ ಮಾತ್ರ, ಬೇಡಿಕೆ ಈಡೇರುವ ತನಕ ಮುಷ್ಕರ ಮುಂದುವರೆಯಲಿದ್ದು, ಈ ಬಗ್ಗೆ ನಂತರ ತಿಳಿಸಲಾಗುವುದು ಎಂದಿದ್ದಾರೆ.
ಕಳೆದ 15ದಿನಗಳಿಂದ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮುಷ್ಕರ ನಡೆಸಿದ್ದ ನೌಕರರು, ಹೈಕೋರ್ಟ್ ಆದೇಶದಂತೆ ಮುಷ್ಕರ ಅಂತ್ಯಗೊಳಿಸಿದ್ದಾರೆ.
ಕೊರೊನಾ ಮಿತಿಮೀರಿ ಹೋಗುತ್ತಿರುವ ಸಂದರ್ಭದಲ್ಲಿ ಮುಷ್ಕರ ಬೇಡ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ಮನವಿ ಮಾಡಿದ್ದರು.
ಬೊಮ್ಮಾಯಿ ಜೊತೆಗಿನ ಮಾತುಕತೆಯ ನಂತರ ನೌಕರರಿಗೆ ಶೇ.10ರಷ್ಟು ವೇತನ ಹೆಚ್ಚಾಗಲಿದೆ. ಆರನೇ ವೇತನ ಆಯೋಗದ ಶಿಫಾರಸಿನ ಬಗ್ಗೆ ಸಿಎಂ ಮತ್ತು ಸಾರಿಗೆ ಸಚಿವರ ಜೊತೆ ಮಾತುಕತೆ ನಡೆಸಿ, ಜಾರಿಗೊಳಿಸುವ ಬಗ್ಗೆ ಬೊಮ್ಮಾಯಿಯವರು ಭರವಸೆ ನೀಡಿದ್ದಾರೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದರು.
ಚೌಕಾಶಿಗೆ ಇಳಿದರೇ ಕೋಡಿಹಳ್ಳಿ, ಸಾರಿಗೆ ನೌಕರರ ಮುಷ್ಕರ ಸದ್ಯದಲ್ಲೇ ಅಂತ್ಯ?
ಆದರೆ, "ಅಂಥ ಯಾವ ಭರವಸೆಯನ್ನು ಸರ್ಕಾರ ನೀಡಿಲ್ಲ"ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದ್ದರು. ಈ ಎಲ್ಲಾ ಗೊಂದಲಗಳ ನಡುವೆ ನಾಳೆಯಿಂದ ಸಾರಿಗೆ ನೌಕರರು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ನಂತರ ಮುಷ್ಕರ ಮತ್ತೊಮ್ಮೆ ಆರಂಭವಾಗುವ ಸಾಧ್ಯತೆಯಿದೆ.